ಇಂದಿನಿಂದ ಅಧಿವೇಶನ: ಬಿಎಸ್ವೈ ಸರಕಾರವನ್ನು ರುಬ್ಬಲು ವಿಪಕ್ಷಗಳ 'ಪಂಚಸೂತ್ರ' ರೆಡಿ
ಬೆಂಗಳೂರು, ಅ 10: ಮೂರು ದಿನಗಳ ಅಸೆಂಬ್ಲಿ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಸರಕಾರದ ಚಳಿ ಬಿಡಿಸಲು ವಿಪಕ್ಷಗಳು ಸಜ್ಜಾಗಿದ್ದು, ಅಧಿವೇಶನ ಕಾವೇರುವ ಸಾಧ್ಯತೆ ದಟ್ಟವಾಗಿದೆ.
ಬಜೆಟ್ ಸಂಬಂಧದ ಚರ್ಚೆಗೆ ಮಾತ್ರ ಅವಕಾಶ ನೀಡುವುದಾಗಿ ಸರಕಾರ ಹೇಳಿದ್ದರೂ, ವಿಪಕ್ಷಗಳು ಬಿಜೆಪಿಯನ್ನು ಹಣೆಯಲು ಹಲವು ವಿಚಾರಗಳನ್ನು ಎಳೆದು ತರಲು ಸಜ್ಜಾಗಿವೆ.
ಅಧಿವೇಶನಕ್ಕೆ ಮಾಧ್ಯಮ ನಿಷೇಧ; ಆದೇಶದಲ್ಲಿ ಏನಿದೆ?
ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಹಾಗಾಗಿ, ಸದನದಲ್ಲಿ ಟಗರು ಸದ್ದು ಜೋರಾಗುವ ಸಾಧ್ಯತೆಯಿಲ್ಲದಿಲ್ಲ. ಬುಧವಾರ (ಅ 9) ಬಿಜೆಪಿ, ಶಾಸಕಾಂಗ ಸಭೆಯನ್ನು ಕರೆದು, ಸದನದಲ್ಲಿ ಹೇಗಿರಬೇಕು ಎನ್ನುವ ಮಾರ್ಗಸೂಚಿಯನ್ನು ನೀಡಿದೆ.
ವಿಧಾನಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಆಯ್ಕೆ
ಮೂರು ದಿನಗಳ ಚಳಿಗಾಲದ ಅಧಿವೇಶನಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಅವಧಿಯನ್ನು ವಿಸ್ತರಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ. ಈ ಅಧಿವೇಶನದಲ್ಲಿ ಈ ಐದು ವಿಚಾರಗಳನ್ನು ಇಟ್ಟುಕೊಂಡು, ವಿಪಕ್ಷಗಳು, ಯಡಿಯೂರಪ್ಪ ಸರಕಾರದ ವಿರುದ್ದ ಮುಗಿಬೀಳುವ ಸಾಧ್ಯತೆಯಿದೆ.
ಬರಪರಿಹಾರ ವಿಳಂಬ
ಕಂಡು ಕೇಳರಿಯದ ಪ್ರವಾಹದಿಂದ ಕಂಗಾಲಾಗಿರುವ ಸಂತ್ರಸ್ತರಿಗೆ ಕೇಂದ್ರ ಸರಕಾರ ಪರಿಹಾರ ಬಿಡುಗಡೆ ವಿಳಂಬ ವಿಚಾರವನ್ನು ವಿಪಕ್ಷಗಳು ಎತ್ತಲಿವೆ. 1,200 ಕೋಟಿ ರೂಪಾಯಿ ಪರಿಹಾರ ಯಾವ ಮೂಲೆಗೆ ಸಾಕಾಗಲಿದೆ ಎಂದು ಬಿಎಸ್ವೈ ಸರಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ನಡುವೆ, ಕೇಂದ್ರದಿಂದ ಪರಿಹಾರ ಬಂದಿರುವುದು, ಕುಮಾರಸ್ವಾಮಿ ಅವಧಿಯಲ್ಲಾದ ನಷ್ಟಕ್ಕೆ ಎಂದು ದೇವೇಗೌಡ್ರು ಹೇಳಿರುವ ವಿಚಾರ ಕೂಡಾ ಚರ್ಚೆಗೆ ಬರಬಹುದು.
ಫೋನ್ ಕದ್ದಾಲಿಕೆ ಪ್ರಕರಣ
ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವ ರಾಜ್ಯ ಸರಕಾರದ ವಿರುದ್ದ ವಿಪಕ್ಷಗಳು ಮುಗಿಬೀಳಲಿವೆ. ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದಿದ್ದ ನೀವು, ಈಗ ಮಾಡುತ್ತಿರುವುದೇನು ಎಂದು ಸಿಎಂ ವಿರುದ್ದ ವಿಪಕ್ಷಗಳು, ಅದರಲ್ಲೂ ಪ್ರಮುಖವಾಗಿ ಜೆಡಿಎಸ್ ಕೆಂಡಾಮಂಡಲವಾಗುವ ಸಾಧ್ಯತೆಯಿಲ್ಲದಿಲ್ಲ.
ಅಧಿವೇಶನಕ್ಕೆ ಒಂದೇ ದಿನ ಬಾಕಿ! ಸವಾಲು ಎದುರಿಸಲು ಕಾಗೇರಿ ಸಮರ್ಥರೇ?
ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಬಂಧಿಸಿರುವುದು
ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಬಂಧಿಸಿರುವುದು ಅಸೆಂಬ್ಲಿಯಲ್ಲಿ ಮಾರ್ದನಿಸಲಿದೆ. ಡಿಕೆಶಿ ವಿರುದ್ದದ ಇನ್ನೊಂದು ಪ್ರಕರಣವನ್ನು ಸಿಬಿಐಗೆ ವಹಿಸಿರುವ ರಾಜ್ಯ ಸರಕಾರದ ವಿರುದ್ದ, ವಿಪಕ್ಷಗಳು, ಸರಕಾರದ ವಿರುದ್ದ ತಿರುಗಿಬೀಳಲಿದೆ.
ವರ್ಗಾವಣೆ ದಂಧೆ
ವರ್ಗಾವಣೆ ದಂಧೆಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಲವು ಬಾರಿ ಆರೋಪಿಸಿದ್ದರು. ಈ ವಿಚಾರ, ಬಿಜೆಪಿ ವರಿಷ್ಠರ ತನಕವೂ ಹೋಗಿತ್ತು. ವಿಧಾನಸೌಧವನ್ನು ದಂಧೆಯ ಕೇಂದ್ರವನ್ನಾಗಿ ಮಾಡಲಾಗಿದೆ ಎಂದು ಎಚ್ಡಿಕೆ ಆರೋಪಿಸಿದ್ದರು. ಹಾಗಾಗಿ, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿಚಾರ ಕೂಡಾ ಅಸೆಂಬ್ಲಿಯಲ್ಲಿ ಧೂಳೆಬ್ಬಿಸುವ ಸಾಧ್ಯತೆಯಿಲ್ಲದಿಲ್ಲ.
ವಿಧಾನಸಭೆ ಅಧಿವೇಶನ; ಸರ್ಕಾರಕ್ಕೆ ಸಂಕಷ್ಟ ತರುವ ವಿಷಯಗಳು
ನೆರೆ ವೀಕ್ಷಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರಲೇ ಇಲ್ಲ
ನೆರೆ ವೀಕ್ಷಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರದ ವಿಚಾರವನ್ನು ಇಟ್ಟುಕೊಂಡು, ಸರಕಾರದ ವಿರುದ್ದ ಮುಗಿಬೀಳುವ ಸಾಧ್ಯತೆ ದಟ್ಟವಾಗಿದೆ. ಇಸ್ರೋ ಕೇಂದ್ರದಲ್ಲಿ ಚಂದ್ರಯಾನ ವೀಕ್ಷಿಸಲು ಬಂದ ಪ್ರಧಾನಿಗೆ ಪ್ರವಾಹ ಸಂತ್ರಸ್ತರ ನೆನಪೇ ಆಗಲಿಲ್ಲ ಎಂದು ಸರಕಾರವನ್ನು ವಿಪಕ್ಷಗಳು ರುಬ್ಬುವ ಸಾಧ್ಯತೆಯಿದೆ.