ಅಕಟಕಟಾ.. ಇದೇನು ವೈರಲ್ ಆಗಿರುವ ರಮೇಶ್ ಕುಮಾರ್ ವಿಡಿಯೋ!
Recommended Video
ಈ ಹಿಂದೆ ಸಿದ್ದರಾಮಯ್ಯನವರ ಸರಕಾರದಲ್ಲಿ ಮೂಢನಂಬಿಕೆ ಕಾಯ್ದೆ ಜಾರಿಗೆ ತರುವ ಸಂಬಂಧ ಪ್ರಸ್ತಾವನೆ ಬಂದಾಗ, ಸರಕಾರದ ಪರವಾಗಿ ನಿಂತವರು ಹಾಲೀ ಸ್ಪೀಕರ್, ನೇರನುಡಿಯ ರಮೇಶ್ ಕುಮಾರ್. ಆದರೆ, ಈಗ ವಿಡಿಯೋ ಒಂದು ಹರಿದಾಡುತ್ತಿದ್ದು ಅಂದಿನ ರಮೇಶ್ ಕುಮಾರ್ ಇವರೇನಾ ಎಂದು ಹುಬ್ಬೇರುವಂತೆ ಮಾಡಿದೆ.
ವಿಡಿಯೋದಲ್ಲಿ ಬಾಲಸ್ವಾಮೀಜಿಗೆ ಪಾದಪೂಜೆ ಸಲ್ಲಿಸಿ ಸ್ಪೀಕರ್ ರಮೇಶ್ ಕುಮಾರ್ ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿದ್ದಾರೆ. ಈ ವಿಡಿಯೋ ಚುನಾವಣಾಪೂರ್ವದ್ದೋ ಅಥವಾ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಆಗಿರುವ ವಿದ್ಯಮಾನವೋ ಎಂದು ತಿಳಿದು ಬಂದಿಲ್ಲ.
ಚಿಕ್ಕಮಗಳೂರು ಜಿಲ್ಲೆ ಗೌರಿಗುಡ್ಡದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಈ ಪೂಜಾ ಕೈಂಕರ್ಯದ ವಿಡಿಯೋ ಸದ್ಯ, ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ವಿಡಿಯೋಗೆ ಸಂಬಂಧಿಸಿದಂತೆ ರಮೇಶ್ ಕುಮಾರ್ ಇದುವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ರಮೇಶ್ ಕುಮಾರ್ ಪೂಜೆ ಸಲ್ಲಿಸುತ್ತಿರುವ ಬಾಲಸ್ವಾಮೀಜಿಯ ಹೆಸರು ವಿನಯ್ ಗುರೂಜಿ ಎಂದು ಹೇಳಲಾಗುತ್ತಿದ್ದು, ಸ್ವಾಮೀಜಿಯನ್ನು ರಮೇಶ್ ಕುಮಾರ್ ಸೋಫಾದಲ್ಲಿ ಕುಳ್ಳಿರಿಸಿ ತುಳಸಿ ಮಾಲೆಯನ್ನು ಹಾಕಿ, ಪೂಜೆಯನ್ನು ಸಲ್ಲಿಸುತ್ತಿದ್ದಾರೆ.
ವಿಡಿಯೋದಲ್ಲಿರುವ ಪ್ರಕಾರ, ನೆಲದ ಮೇಲೆ ಕುಳಿತು ಬಾಲಸ್ವಾಮೀಜಿಗೆ ಪೂಜೆ ಸಲ್ಲಿಸಿ, ನಂತರ ಎದ್ದು ನಿಂತು ತಟ್ಟೆಯಲ್ಲಿ ಎರಡು ದೀಪವನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಪೂಜೆ ಮುಗಿದ ನಂತರ, ಬಾಲಸ್ವಾಮೀಜಿ ರಮೇಶ್ ಕುಮಾರ್ ಅವರಿಗೆ ನಾಣ್ಯವನ್ನು ನೀಡುತ್ತಾರೆ.
ಬಾಲಸ್ವಾಮೀಜಿ ಕೊಟ್ಟ ನಾಣ್ಯವನ್ನು ಕಣ್ಣಿಗೆ ಒತ್ತಿಕೊಂಡು ಜೇಬಿನಲ್ಲಿ ಇಟ್ಟುಕೊಳ್ಳುವ ರಮೇಶ್ ಕುಮಾರ್, ಮೂರು ಬಾರಿ ಸ್ವಾಮೀಜಿಗೆ ನಮಸ್ಕರಿಸುತ್ತಾರೆ. ಈ ಸಂದರ್ಭದಲ್ಲಿ ಸ್ವಾಮೀಜಿ, ರಮೇಶ್ ಕುಮಾರ್ ಅವರಿಗೆ ಕೆಲವು ಮಾತನ್ನು ಹೇಳುತ್ತಾರೆ, ಆದರೆ ಅಸ್ಪಷ್ಟತೆಯಿಂದ ಕೂಡಿದೆ. ರಮೇಶ್ ಕುಮಾರ್ ಅವರ ಜೊತೆ ಇನ್ನಿಬ್ಬರು ವ್ಯಕ್ತಿಯರಿದ್ದು, ಅವರೂ ಬಾಲಸ್ವಾಮೀಜಿಗೆ ಪೂಜೆ ಸಲ್ಲಿಸುತ್ತಾರೆ.