ಎಲ್ಲಾ ಅತೃಪ್ತರು ಆಲ್ ಔಟ್: ಬಿಜೆಪಿಗೆ ಇದರಿಂದ ಅನುಕೂಲವೇ ಜಾಸ್ತಿ!
Recommended Video
ಅತೃಪ್ತ ಶಾಸಕರ ರಾಜೀನಾಮೆ ವಿಚಾರದಲ್ಲಿ, ಇಷ್ಟು ತುರ್ತಾಗಿ, ಅದೂ ಭಾನುವಾರ ಸ್ಪೀಕರ್ ರಮೇಶ್ ಕುಮಾರ್ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆಂದು ಯಾರೂ ಊಹಿಸಿರಲಿಕ್ಕಿಲ್ಲ. ನಿರೀಕ್ಷೆಯಂತೆ, ಬಿಜೆಪಿ, ಸ್ಪೀಕರ್ ನಿರ್ಧಾರವನ್ನು ದೂರಿದರೆ, ಕಾಂಗ್ರೆಸ್ ಸ್ವಾಗತಿಸಿದೆ.
ಅತೃಪ್ತ ಹದಿನಾಲ್ಕು ಶಾಸಕರನ್ನು ಒಂದೋ ಅನರ್ಹಗೊಳಿಸುತ್ತಾರೆ, ಇಲ್ಲವಾದರೆ, ಅವರ ರಾಜೀನಾಮೆಯನ್ನು ಆಂಗೀಕರಿಸುತ್ತಾರೆ ಎನ್ನುವುದು ತಿಳಿದಿದ್ದ ವಿಚಾರ. ಆದರೆ, ವಿಶ್ವಾಸಮತಕ್ಕೆ ಒಂದು ದಿನ ಮುನ್ನ, ಸ್ಪೀಕರ್ ಅವರ ನಿರ್ಧಾರ, ಬಿಜೆಪಿಗೆ ಲಾಭವಾಗಲಿದೆಯೋ ಅಥವಾ ಇಲ್ಲವೋ ಎನ್ನುವುದಿಲ್ಲಿ ಪ್ರಶ್ನೆ.
17 ಶಾಸಕರು ಅನರ್ಹ, ಸದನದ ಬಲಾಬಲ, ಬಿಎಸ್ವೈಗೆ ಶ್ರೀರಕ್ಷೆ!
ವಿಶ್ವಾಸಮತಯಾಚನೆಯನ್ನು ಯಡಿಯೂರಪ್ಪ ಸೋಮವಾರ (ಜುಲೈ 29) ಸದನದಲ್ಲಿ ಪಡೆಯಲಿದ್ದಾರೆ. ಹಾಗಾಗಿ, ಸ್ಪೀಕರ್ ತಮ್ಮ ನಿರ್ಧಾರವನ್ನು ಒಂದೆರಡು ದಿನ ಮುಂದಕ್ಕೆ ಹಾಕಿದರೂ, ಅಸೆಂಬ್ಲಿಯ ನಾಳೆಯ ಕಲಾಪಕ್ಕೆ ಯಾವುದೇ ಅಡ್ಡಿಯಾಗುತ್ತಿರಲಿಲ್ಲ.
ಕಾಂಗ್ರೆಸ್-ಜೆಡಿಎಸ್ಸಿನ ಒಟ್ಟು ಹದಿನೇಳು ಶಾಸಕರು ಅನರ್ಹಗೊಂಡಂತಾಗಿದೆ. ಹಾಗಾಗಿ, ಅಸೆಂಬ್ಲಿಯಲ್ಲಿ ಒಟ್ಟು ಸದಸ್ಯರ ಸಂಖ್ಯಾಬಲವೂ ಕಮ್ಮಿಯಾಗಿದೆ. ಇದರಿಂದ, ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಇನ್ನಷ್ಟು ಸುಲಭವಾದಂತಾಗಿದೆ ಎನ್ನುವುದೇ ಈಗಿನ ಲೆಕ್ಕಾಚಾರ.
ರಮೇಶ್ ಕುಮಾರ್ ಪತ್ರಿಕಾಗೋಷ್ಠಿ
ಧನವಿಧೇಯಕ ಮಸೂದೆಯನ್ನು ಆಂಗೀಕರಿಸುವಂತೆ ನೋಡಿಕೊಳ್ಳುವುದು ಮತ್ತು ಯಡಿಯೂರಪ್ಪನವರ ವಿಶ್ವಾಸಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ನನ್ನ ಆದ್ಯ ಕರ್ತವ್ಯ. ಮೂವರನ್ನು ಅನರ್ಹಗೊಳಿಸಿದಾಗ, ಇನ್ನೆರಡ್ಮೂರು ದಿನಗಳಲ್ಲಿ ಬಾಕಿಯವರದ್ದೂ ವಿಲೇವಾರಿ ಮಾಡುತ್ತೇನೆ ಎಂದು ಹೇಳಿದ್ದೆ, ಅದರಂತೆ ನಡೆದುಕೊಂಡಿದ್ದೇನೆ ಎಂದು ರಮೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸದನದ ಒಟ್ಟು ಸದಸ್ಯರ ಬಲ ಸ್ಪೀಕರ್ ಸೇರಿ 207
ಒಟ್ಟು ಹದಿನೇಳು ಶಾಸಕರನ್ನುಅನರ್ಹಗೊಳಿಸುವ ಮೂಲಕ, ಸದನದ ಒಟ್ಟು ಸದಸ್ಯರ ಬಲ ಸ್ಪೀಕರ್ ಸೇರಿ 207. ಹಾಗಾಗಿ, ಬಹುಮತ ಸಾಬೀತು ಪಡಿಸಲು ಬೇಕಾಗಿರುವ ಸಂಖ್ಯೆ 104. ಬಿಜೆಪಿ ಈಗಾಗಲೇ ಈ ನಂಬರ್ ಅನ್ನು ಹೊಂದಿದೆ. ಇನ್ನು, ಬಿಎಸ್ಪಿಯ ಮಹೇಶ್ ಮತ್ತು ಬಂಡಾಯ ಕಾಂಗ್ರೆಸ್ ಶಾಸಕ ನಾಗೇಂದ್ರ ಗೈರಾದರೆ, ಬಿಜೆಪಿಗೆ ಇನ್ನಷ್ಟು ಗೆಲುವು ಸುಲಭವಾಗಲಿದೆ.
ಯಡಿಯೂರಪ್ಪ ಹೇಳಿಕೆಗೆ ಎಚ್ ಡಿ ದೇವೇಗೌಡರ ಸ್ವಾಗತ
ಮುಂಬೈನಲ್ಲಿರುವ ಅತೃಪ್ತರ ನಿರ್ಧಾರ, ಬಿಜೆಪಿಗೆ ಅತ್ಯಂತ ನಿರ್ಣಾಯಕ
ಸ್ಪೀಕರ್ ರಮೇಶ್ ಕುಮಾರ್ ತಮ್ಮ ನಿರ್ಧಾರವನ್ನು ಇಂದು ಪ್ರಕಟಿಸದೇ ಇದ್ದರೆ, ಮುಂಬೈನಲ್ಲಿರುವ ಅತೃಪ್ತರ ನಿರ್ಧಾರ, ಬಿಜೆಪಿಗೆ ಅತ್ಯಂತ ನಿರ್ಣಾಯಕವಾಗುತ್ತಿತ್ತು. ಇಬ್ಬರು, ಸಿದ್ದರಾಮಯ್ಯನವರ ಜೊತೆಗೆ ದೂರವಾಣಿ ಮೂಲಕ, ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ, ಬಿಜೆಪಿಯನ್ನು ಚಿಂತೆಗೀಡು ಮಾಡಿತ್ತು.
ಯಡಿಯೂರಪ್ಪ, ಆರ್ ಅಶೋಕ್ ಅವರನ್ನು ಮುಂಬೈಗೆ ಕಳುಹಿಸಿಕೊಟ್ಟಿದ್ದರು
ಇದನ್ನರಿತ ಯಡಿಯೂರಪ್ಪ, ಆರ್ ಅಶೋಕ್ ಅವರನ್ನು ಮುಂಬೈಗೆ ಕಳುಹಿಸಿಕೊಟ್ಟಿದ್ದರು ಎನ್ನುವ ಮಾಹಿತಿಯಿದೆ. ಸ್ಪೀಕರ್ ನಿರ್ಧಾರ ಪ್ರಕಟವಾದ ಬೆನ್ನಲ್ಲೇ, ಯಡಿಯೂರಪ್ಪನವರು ಅತ್ಟುಪ್ತರ ಜೊತೆಗೆ ಮಾತುಕತೆ ನಡೆಸಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ. ಸುಪ್ರೀಂಕೋರ್ಟ್ ಮೆಟ್ಟಲೇರುವುದಕ್ಕೆ ನಾವು ಸಹಾಯ ಮಾಡುತ್ತೇವೆ ಎಂದೂ ಹೇಳಿದ್ದಾರೆಂದು ವರದಿಯಾಗಿದೆ.
ವೈದ್ಯ ಹೇಳಿದ್ದೂ ಹಾಲುಅನ್ನ, ರೋಗಿ ಬಯಸಿದ್ದೂ ಅದನ್ನೇ
ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರ, ಬಿಜೆಪಿಯ ನಾಳಿನ ವಿಶ್ವಾಸಮತಕ್ಕೆ ಅನುಕೂಲವಾಗಿಯೇ ಹೊರಬಿದ್ದಿದೆ. ಯಾಕೆಂದರೆ, ಇನ್ನು ಅತೃಪ್ತರ ನಿಯತ್ತು ಯಾರ ಪರವಾಗಿ ಇರುತ್ತದೆ ಎನ್ನುವ ಭಯ ಬಿಜೆಪಿಗಿಲ್ಲ. ಹಾಗಾಗಿ, ಒಂದರ್ಧದಲ್ಲಿ ಸ್ಪೀಕರ್ ನಿರ್ಧಾರಕ್ಕೆ, ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸಿದ್ದೂ ಅದನ್ನೇ ಎನ್ನುವ ಗಾದೆಮತು ಅನ್ವಯವಾಗುತ್ತದೆ.