ಸೋಮವಾರದಿಂದ ಅಧಿವೇಶನ, ವಿಪಕ್ಷಗಳ ಕೈಯಲ್ಲಿವೆ ಭರ್ಜರಿ ಅಸ್ತ್ರ
ಬೆಂಗಳೂರು, ಜೂನ್ 4: ಸೋಮವಾರದಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ.
ಜೂನ್ 5 ರಿಂದ 16ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಮುಖ್ಯವಾಗಿ ಬರ, ರೈತರ ಆತ್ಮಹತ್ಯೆ, ಸಾಲ ಮನ್ನಾ ಮೊದಲಾದ ವಿಚಾರಗಳು ಚರ್ಚೆಗೆ ಬರಲಿವೆ. ಜತೆಗೆ ಬಜೆಟ್ನ ಮುಂದುವರೆದ ಅಧಿವೇಶನವಾಗಿರುವ ಕಾರಣ ಇಲಾಖಾವಾರು ಬೇಡಿಕೆಗಳ ಚರ್ಚೆಗೂ ಅಧಿವೇಶನದಲ್ಲಿ ಅವಕಾಶ ಸಿಗಲಿದೆ.[ಜೂನ್ 5ರಿಂದ 16, ಜಿಎಸ್ಟಿಗಾಗಿ ಮುಂದುವರಿದ ಬಜೆಟ್ ಅಧಿವೇಶನ]
ಈಗಾಗಲೇ ಬಿಜೆಪಿ ಬರ ಪ್ರವಾಸ ಮಾಡಿದ್ದು ಬರ ನಿರ್ವಹಣೆ ವಿಚಾರದಲ್ಲಿ ಸರಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ.
ಅವಿಶ್ವಾಸ ನಿರ್ಣಯ
ವಿಧಾನಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯದ ಪ್ರಸ್ತಾವನೆ ಸಲ್ಲಿಸಿದ್ದು ಅಧಿವೇಶನದಲ್ಲಿ ಇದು ಚರ್ಚೆಗೆ ಬರಲಿದೆ. ಹೀಗಾಗಿ ಶಂಕರಮೂರ್ತಿ ಸಭಾಪತಿ ಹುದ್ದೆಯ ಭವಿಷ್ಯ ಈ ಬಾರಿಯ ಅಧಿವೇಶನದಲ್ಲಿ ನಿರ್ಧಾರವಾಗಲಿದೆ.[ಜಿಎಸ್ ಟಿ ಪರಿಣಾಮ: ಚಿನ್ನದ ಮೇಲೆ ಶೇ. 3ರಷ್ಟು ತೆರಿಗೆ]
ವಿಪಕ್ಷಗಳ ಕೈಯಲ್ಲಿ ಅಸ್ತ್ರ!
ಈ ಅಧಿವೇಶನದಲ್ಲಿ ಸರಕಾರವನ್ನು ಹಣಿಯಲು ವಿಪಕ್ಷಗಳ ಕೈಯಲ್ಲಿ ಭರ್ಜರಿ ಅಸ್ತ್ರಗಳಿವೆ. ಪರ್ಜನ್ಯ ಯಾಗ, ಮೆಗ್ಗಾನ್ ಆಸ್ಪತ್ರೆಯ ದುರವಸ್ಥೆ, ಮರಳು ದಂಧೆ, ಅನುರಾಗ್ ತಿವಾರಿ ಸಾವಿನ ಪ್ರಕರಣದಲ್ಲಿ ಸರಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]
ಇದಲ್ಲದೆ ಗೋಹತ್ಯೆ ನಿಷೇಧ ವಿಚಾರವೂ ಸದನದಲ್ಲಿ ಬಿಸಿಬಿಸಿ ಚರ್ಚೆಗೆ ಬರುವ ಸಂಭವವಿದೆ. ಜೂನ್ 30ರ ಮೊದಲು ಜಿಎಸ್ಟಿ ವಿಧೇಯಕಕ್ಕೆ ಸದನ ಒಪ್ಪಿಗೆ ನೀಡಲೇಬೇಕಾಗಿರುವುದರಿಂದ ಅದೂ ಸದನದಲ್ಲಿ ಚರ್ಚೆಗೆ ಬರಲಿದೆ. ಇನ್ನು ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಏಕರೂಪ ಶಿಕ್ಷಣ ಕಾಯ್ದೆ ಸೇರಿದಂತೆ ಮಹತ್ವದ ವಿಧೇಯಕಗಳಿಗೆ ಸಂಬಂಧಿಸಿದ ಚರ್ಚೆ ಅಧಿವೇಶನದಲ್ಲಿ ನಡೆಯಲಿದೆ.