ಸಂಘದ ಸಿದ್ದಾಂತ ಒಪ್ಪಿಕೊಳ್ಳದವರಿಗೆ ದೇಶದ್ರೋಹ ಪಟ್ಟ: ಗುಡುಗಿದ ಪ್ರಿಯಾಂಕ್
''ನಮ್ ಸಿದ್ಧಾಂತ ಒಪ್ಪದವರು ದೇಶದ್ರೋಹಿಗಳು ಅಂತ ಸಂಘ ಹೇಳ್ತಿದೆ. ಇವರೆಲ್ಲ ದೇಶಪ್ರೇಮಿಗಳಾ? ಇವರು ಸ್ವಾತಂತ್ರ್ಯ ಹೋರಾಟದ ವೇಳೆ ಎಲ್ಲಿದ್ರು? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ದೇಶಪ್ರೇಮದ ಬಗ್ಗೆ ಮಾತಾಡ್ತಾರೆ'' - ಹೀಗಂತ ಹೇಳ್ತಾ ಇಂದು ಸದನದಲ್ಲಿ ಗುಡುಗಿದವರು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ.
2020-21ನೇ ಸಾಲಿನ ಬಜೆಟ್ ಮಂಡನೆಯಾದ ಬಳಿಕ ವಿಧಾನ ಸಭೆಯಲ್ಲಿ ಇಂದು ಸಂವಿಧಾನದ ಕುರಿತು ವಿಶೇಷ ಚರ್ಚೆ ನಡೆಯುತ್ತಿದೆ. ಈ ವೇಳೆ ಚರ್ಚೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಜಾತಿ ವ್ಯವಸ್ಥೆ ಮತ್ತು ದೇಶ ಪ್ರೇಮದ ಕುರಿತು ಮಾತಿಗಿಳಿದರು.
ಸದನದಲ್ಲಿ ಮಾಧ್ಯಮಗಳಿಗೆ ಮುಕ್ತ ಅವಕಾಶ ನೀಡಿ: ಪ್ರಿಯಾಂಕ್ ಖರ್ಗೆ ಮನವಿ
ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುತ್ತಿರುವವರಿಗೆ ದೇಶದ್ರೋಹದ ಪಟ್ಟ ಕಟ್ಟುತ್ತಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ದಲಿತ ವಿದ್ಯಾರ್ಥಿಗಳು, ಮಾನವ ಹಕ್ಕು ಹೋರಾಟಗಾರರು ಮತ್ತು ಅಲ್ಪಸಂಖ್ಯಾತರ ಮೇಲೆ ದೇಶದ್ರೋಹಿ ಪಟ್ಟ ಕಟ್ಟುತ್ತಿರುವುದಕ್ಕೆ ಪ್ರಿಯಾಂಕ್ ಖರ್ಗೆ ಅಸಮಾಧಾನಗೊಂಡರು.
ಇವತ್ತು ಪ್ರಜಾಪ್ರಭುತ್ವ ಇದೆಯಾ.?
''ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ದು. ಇಂಥ ದೇಶದಲ್ಲಿ ಇವತ್ತು ಪ್ರಜಾಪ್ರಭುತ್ವ ಇದೆಯಾ ಅಂತ ಪ್ರಶ್ನೆ ಮಾಡ್ಕೋಬೇಕು. ನಮ್ಮ ಸಿದ್ಧಾಂತವೇ ಅಂತಿಮ, ನಮ್ಮ ಸಿದ್ಧಾಂತ ಒಪ್ಕೊಳ್ಳಿ, ಅದೇ ದೇಶಪ್ರೇಮ ಅಂತ ಸಂಘ ಇವತ್ತು ಒತ್ತಾಯಿಸ್ತಿದೆ. ನಮ್ ಸಿದ್ಧಾಂತ ಒಪ್ಪದವರು ದೇಶದ್ರೋಹಿಗಳು ಅಂತ ಸಂಘ ಹೇಳ್ತಿದೆ. ಇವರೆಲ್ಲ ದೇಶಪ್ರೇಮಿಗಳಾ? ಇವರು ಸ್ವಾತಂತ್ರ್ಯ ಹೋರಾಟದ ವೇಳೆ ಎಲ್ಲಿದ್ರು? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ದೇಶಪ್ರೇಮದ ಬಗ್ಗೆ ಮಾತಾಡ್ತಾರೆ'' ಎಂದು ಸಂವಿಧಾನದ ಕುರಿತ ಚರ್ಚೆ ವೇಳೆ ಶಾಸಕ ಪ್ರಿಯಾಂಕ್ ಖರ್ಗೆ ಗುಟುರು ಹಾಕಿದರು.
ಸದನದಲ್ಲಿ ಗದ್ದಲದ ವಾತಾವರಣ
ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ''ನೀವಿದ್ರಾ ಸ್ವಾತಂತ್ರ್ಯ ಹೋರಾಟದ ವೇಳೆ'' ಎಂದು ಪ್ರಿಯಾಂಕ್ ಖರ್ಗೆಗೆ ಸಿ.ಟಿ.ರವಿ ಪ್ರಶ್ನಿಸಿದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.
ಮಹಾಭಾರತ ಬರೆದವರು ಕೆಳಜಾತಿಯ ವಾಲ್ಮೀಕಿ: ಎಡವಟ್ಟು ಮಾಡಿದ ಯತ್ನಾಳ್!
ಆಕ್ರೋಶಗೊಂಡ ಪ್ರಿಯಾಂಕ್ ಖರ್ಗೆ
''ನಾನು ಏನ್ ಮಾತಾಡಬೇಕು, ಏನ್ ಮಾತಾಡಬಾರದು ಅಂತ ನೀವ್ ಹೇಳ್ಬೇಕಿಲ್ಲ. ಇವತ್ತು ನಾವು ಏನೂ ಮಾತಾಡೋ ಹಾಗೇ ಇಲ್ಲ. ಮಾತಾಡಿದರೆ ಅಸಹನೆ, ಅಡೆತಡೆ ಹಾಕ್ತಾರೆ. ಇದೇ ಪರಿಸ್ಥಿತಿ ಇವತ್ತು ದೇಶದಲ್ಲಿರೋದು. ಸದನದಲ್ಲೇ ವಾಕ್ ಸ್ವಾತಂತ್ರ್ಯ ಇಲ್ಲ'' ಎಂದು ಸಿ.ಟಿ.ರವಿ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶಗೊಂಡರು.
ಫ್ಯಾಶನ್ ಆಗ್ಬಿಟ್ಟಿದೆ
''ನಮ್ಮ ಅಭಿಪ್ರಾಯ, ನಿಲುವು ನೀವು ಒಪ್ಲಿಲ್ಲಾಂದ್ರೆ ನೀವು ದೇಶದ್ರೋಹಿ. ಇತ್ತೀಚೆಗೆ ದೇಶದಲ್ಲಿ ಹೀಗೆ ಹೇಳೋದು ಒಂದು ಫ್ಯಾಶನ್ ಆಗ್ಬಿಟ್ಟಿದೆ. ಇವರು ಹೇಳಿದ್ದೇ ಫೈನಲ್ಲಾ.? ಧರ್ಮ, ಜಾತಿಗಳ ಮಧ್ಯೆ ಒಡಕು ತರೋರು ದೇಶ ವಿರೋಧಿಗಳು ಅಂತ ಅಂಬೇಡ್ಕರ್ ಹೇಳಿದ್ದಾರೆ. ಜಾರ್ಖಂಡ್, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಸಾಕಷ್ಟು ದೇಶದ್ರೋಹ ಪ್ರಕರಣ ವರದಿ ಆಗಿದೆ. ಎಡ ಚಿಂತಕರು, ದಲಿತ್ ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು, ಆದಿವಾಸಿ ಹೋರಾಟಗಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಇವರೆಲ್ಲ ಪ್ರಶ್ನೆ ಮಾಡ್ತಾರೆ ಅಂತ ದೇಶದ್ರೋಹದ ಪಟ್ಟ ಕಟ್ಟಲಾಗಿದೆ'' ಎಂದು ಪ್ರಿಯಾಂಕ್ ಖರ್ಗೆ ಗುಡುಗಿದರು.
ರಾಜ್ಯದ ಬಿಜೆಪಿ ಸಂಸದರು ಪೇಪರ್ ಹುಲಿಗಳು: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಗೋಡ್ಸೆ ದೇಶ ಪ್ರೇಮಿಯಾದರೆ ಗಾಂಧಿ ಏನು.?
''ಗೋಡ್ಸೆ ದೇಶ ಪ್ರೇಮಿ ಎಂದು ಸಂಸತ್ತಿನಲ್ಲಿ ಸಂಸದರೊಬ್ಬರು ಹೇಳಿದ್ದರು. ಹಾಗಾದರೆ ಗಾಂಧಿ ಏನು? ನಮ್ಮ ಸಿದ್ಧಾಂತ ಒಪ್ಪಿಲ್ಲ ಅಂದರೆ ಅವರಿಗೆ ದೇಶದ್ರೊಹಿ, ದೇಶ ವಿರೋಧಿ ಪಟ್ಟ ಕಟ್ಟುತ್ತಾರೆ. ಇದು ಸರಿಯಲ್ಲ. ದೇಶದ್ರೋಹಿಗಳು ಯಾರು ಎಂಬುದು ಈಗ ಮಾಧ್ಯಮಗಳ ಪ್ರೈಂ ಟೈಮ್ ನಲ್ಲಿ ನಿರ್ಧಾರ ಆಗುತ್ತದೆ. ಯಾರೂ ದೇಶದ ಐಕ್ಯತೆ, ಸಮಾನತೆ ಇಷ್ಟ ಪಡಲ್ಲ... ಯಾರೂ ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ತರುತ್ತಾರೆ, ಧರ್ಮ ರಾಜಕಾರಣ ಮಾಡುತ್ತಾರೆ.. ಅವರು ದೇಶ ವಿರೋಧಿಗಳು ಎಂದು ಅಂಬೇಡ್ಕರ್ ಹೇಳಿದ್ದರು'' ಎಂದರು ಪ್ರಿಯಾಂಕ್ ಖರ್ಗೆ
ಪ್ರಶ್ನೆ ಮಾಡಿದರೆ...
''ಜಾರ್ಖಂಡ್ ನಲ್ಲಿ 3000 ರೈತರ ಮೇಲೆ ದೇಶ ವಿರೋಧಿ ಕೇಸ್ ಹಾಕಲಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ, ಮಾನವ ಹಕ್ಕು ಹೋರಾಟಗಾರರು ಮತ್ತು ಅಲ್ಪಸಂಖ್ಯಾತರ ಮೇಲೆ ದೇಶದ್ರೋಹಿ ಪಟ್ಟ ಕಟ್ಟಲಾಗಿದೆ. ಸರ್ಕಾರದ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತದೆ. ಪ್ರಶ್ನೆ ಮಾಡಿದರೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತದೆ'' - ಪ್ರಿಯಾಂಕ್ ಖರ್ಗೆ
ಟ್ವಿಟ್ಟರ್ ನಲ್ಲಿ ಯಡಿಯೂರಪ್ಪರ ಕಾಲೆಳೆದ ಪ್ರಿಯಾಂಕ್ ಖರ್ಗೆ
ಪ್ರಜಾಪ್ರಭುತ್ವ ಇದೇ ಅನ್ನೋದೇ ಅನುಮಾನ
''ದೇಶದಲ್ಲಿ ಪ್ರಜಾಪ್ರಭುತ್ವ ಇದೆ ಅನ್ನೋದೇ ಅನುಮಾನ. ಕಾಶ್ಮೀರದಲ್ಲಿ ನಾಯಕರು ಹೌಸ್ ಅರೆಸ್ಟ್ ಆಗಿದ್ದಾರೆ. ಅಸ್ಸಾಮ್ ನಲ್ಲಿ ಹೊರಗಿನವರಿಗೆ ಪ್ರವೇಶ ಇಲ್ಲ. ಸರ್ಕಾರದ ವಿರುದ್ಧ ಸುದ್ದಿ ಬರೆದ ಪತ್ರಕರ್ತರ ಬಂಧನ ಆಗ್ತಿದೆ. ಸಂಸತ್, ವಿಧಾನಸಭೆಗಳಲ್ಲಿ ಮಾಧ್ಯಮಗಳನ್ನು ಬಹಿಷ್ಕರಿಸಲಾಗಿದೆ. ಇದು ಪ್ರಜಾಪ್ರಭುತ್ವನಾ? ಹೀಗಾದ್ರೆ ಪ್ರಜಾಪ್ರಭುತ್ವ ಉಳಿಯುತ್ತಾ.?'' ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಮೊದಲು ಅರ್ಥ ಮಾಡಿಕೊಳ್ಳಿ...
''ಇವತ್ತು ದೇಶದಲ್ಲಿ ಪ್ರಶ್ನೆ ಮಾಡಿದವರಿಗೆ ದೇಶದ್ರೋಹದ ಪಟ್ಟ ಸಿಗುತ್ತಿದೆ. ಇದಕ್ಕಾಗಿ ಸರ್ಕಾರಗಳು ಬಲ ಪ್ರಯೋಗಕ್ಕೆ ಮುಂದಾಗ್ತಿವೆ. ಇದೆಲ್ಲ ಅಸಾಂವಿಧಾನಿಕ ನಡೆಗಳು. ನಮ್ಮ ರಾಷ್ಟ್ರ ನಡೀತಿರೋದು ಸಂವಿಧಾನದಿಂದ. ಭಗವದ್ಗೀತೆ, ಕುರಾನ್ ನಿಂದ ದೇಶ ನಡೀತಿಲ್ಲ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ದಲಿತ ನಾಯಕರು ಅಲ್ಲ, ಎಲ್ಲ ಸಮುದಾಯಗಳ, ಇಡೀ ದೇಶದ ನಾಯಕರು'' ಅಂತ ಪ್ರಿಯಾಂಕ್ ಖರ್ಗೆ ಹೇಳಿದರು.