ಸಂವಿಧಾನ, ಅಸ್ಪೃಶ್ಯತೆ, ಮೀಸಲಾತಿ: ಸದನದಲ್ಲಿಂದು ಇದೇ ಚರ್ಚೆ!
''ಅಪ್ರತಿಮ ದೇಶಭಕ್ತರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು 'ಬ್ರಿಟೀಷ್ ಏಜೆಂಟ್' ಎಂದು ಕರೆದು ಪಾಪ ಮಾಡಿದ್ದೇವೆ. ಭಾರತ ಹೇಗೆ ತನ್ನ ಸ್ವಾತಂತ್ರ್ಯ ಕಳೆದುಕೊಂಡಿದೆ ಎಂಬುದನ್ನು ಅಂಬೇಡ್ಕರ್ ತಮ್ಮ ಕೃತಿಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ'' ಎಂದು ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕ ಎನ್.ಮಹೇಶ್ ಹೇಳಿದರು.
2020-21ನೇ ಸಾಲಿನ ಬಜೆಟ್ ಮಂಡನೆಯಾದ ಬಳಿಕ ವಿಧಾನ ಸಭೆಯಲ್ಲಿ ಸಂವಿಧಾನದ ಕುರಿತು ವಿಶೇಷ ಚರ್ಚೆ ನಡೆಯುತ್ತಿದೆ. ಈ ಚರ್ಚೆಯಲ್ಲಿ ಶಾಸಕ ಎನ್.ಮಹೇಶ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಶಾಸಕ ಶಿವಲಿಂಗೇಗೌಡ ಭಾಗವಹಿಸಿದರು.
ಸದನದಲ್ಲಿ ಕೊರೊನಾ: ಸರವಣ ಆರೋಗ್ಯ ತಪಾಸಣೆ ಆಗಲೇಬೇಕ್!
ಸಂವಿಧಾನ ಕುರಿತ ಚರ್ಚೆಯಲ್ಲಿ ಅಸ್ಪೃಶ್ಯತೆ, ಡಾ.ಬಿ.ಆರ್.ಅಂಬೇಡ್ಕರ್, ಮೀಸಲಾತಿ ಮತ್ತು ಚುನಾವಣೆ ವ್ಯವಸ್ಥೆ ಬಗ್ಗೆ ಹಲವು ನಾಯಕರು ಮಾತನಾಡಿದರು.
ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರ
''ಅಪ್ರತಿಮ ದೇಶಭಕ್ತರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು 'ಬ್ರಿಟೀಷ್ ಏಜೆಂಟ್' ಎಂದು ಕರೆದು ಪಾಪ ಮಾಡಿದ್ದೇವೆ. ಭಾರತ ಹೇಗೆ ತನ್ನ ಸ್ವಾತಂತ್ರ್ಯ ಕಳೆದುಕೊಂಡಿದೆ ಎಂಬುದನ್ನು ಅಂಬೇಡ್ಕರ್ ತಮ್ಮ ಕೃತಿಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ದೇಶದ ಶೇ.70 ರಷ್ಟು ಹಳ್ಳಿಗಳಲ್ಲಿ ಅಸ್ಪೃಶ್ಯತೆಯು ಪರೋಕ್ಷ ಮತ್ತು ಅಪರೋಕ್ಷವಾಗಿ ಜಾರಿಯಲ್ಲಿದೆ. ಸಂವಿಧಾನದ ಪರಿಚ್ಛೇದ 17 ರಲ್ಲಿ ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರ ಅಂತ ಉಲ್ಲೇಖವಿದೆ. ಆದ್ರೆ ಅಸ್ಪೃಶ್ಯತೆ ನಮ್ಮ ದೇಶದಲ್ಲಿ ಇನ್ನೂ ಆಚರಣೆಯಲ್ಲಿದೆ. ಪರಿಚ್ಛೇದದಡಿ ಅಸ್ಪೃಶ್ಯತೆ ಆಚರಣೆಯನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ನಾವು ಪ್ರಯತ್ನವನ್ನೇ ಮಾಡಿಲ್ಲ'' ಎಂದು ಸದನದ ಕಲಾಪದಲ್ಲಿ ಶಾಸಕ ಎನ್.ಮಹೇಶ್ ಹೇಳಿದರು.
ಜಾತಿ ವ್ಯವಸ್ಥೆ ಇರೋವರೆಗೂ, ಮೀಸಲಾತಿ ಇರಲೇಬೇಕು!
''ದೇಶದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಯಾವಾಗ ಬರುತ್ತದೋ ಆಗ ಮೀಸಲಾತಿ ತೆಗೆಯಬಹುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಂದುಕೊಂಡಿದ್ದರು. ಆದರೆ, ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೋ, ಅಲ್ಲಿಯವರೆಗೂ ಮೀಸಲಾತಿ ಇರಲೇಬೇಕು'' ಎಂದು ಸದನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಸದನದಲ್ಲಿ ಮಾಧ್ಯಮ ನಿರ್ಬಂಧ: ಕರಗದ ಕಾಗೇರಿ ಮನ, ನಾಡಿನ ನಾಡಿ ಚಂದನ!
ಸಮಾನ ಅವಕಾಶ ಸಿಗಬೇಕು
''ಮೀಸಲಾತಿ ಬಡತನ ನಿವಾರಣೆ ಕಾರ್ಯಕ್ರಮವಲ್ಲ. ಸಮಾನ ಅವಕಾಶ ಎಲ್ಲಿಯವರೆಗೆ ಸಿಗುವುದಿಲ್ಲವೋ, ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಸಮಾನ ಅವಕಾಶ ಕೊಡುವ ಮನಃಸ್ಥಿತಿಯೂ ಬರಬೇಕು. ಕ್ರೀಮಿ ಲೇಯರ್ ಸಿದ್ದಾಂತ SC/STಗೆ ಅನ್ವಯಿಸುವುದಿಲ್ಲ. ಹಾಗಾಗಿ ನಾವು ಬದುಕಿಕೊಂಡೆವು. ಸುಪ್ರೀಂ ಕೋರ್ಟ್ ತೀರ್ಪು ಕ್ರೀಮಿಲೇಯರ್ ಗ್ರೂಪುಗಳಿಗೆ ಮೀಸಲು ಕೊಡುವಂತಿಲ್ಲ ಎಂದು ಹೇಳಿದೆ. ಆದರೆ ಅದು SC/ST ಗಳಿಗೆ ಅನ್ವಯಿಸುವುದಿಲ್ಲ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮುಂಬಡ್ತಿಯಲ್ಲೂ ಮೀಸಲಾತಿ ನಿಯಮ ಜಾರಿಗೊಳಿಸಿದ್ದರು. ಆದರೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗಿಲ್ಲ'' ಅಂತ ಶಾಸಕ ಎನ್.ಮಹೇಶ್ ಹೇಳಿದರು.
ತ್ರಿಕಾಲ ಜ್ಞಾನಿಗಳು
''ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ತ್ರಿಕಾಲ ಜ್ಞಾನಿಗಳು. ಅವರಿಗೆ ಹಿಂದೆ ಏನಾಯ್ತು, ಈಗ ಏನಾಗುತ್ತಿದೆ, ಮುಂದೇನಾಗುತ್ತದೆ ಎಂಬುದು ತಿಳಿದಿತ್ತು. ಅದೇ ಅವರ ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಹಾಗಾಗಿಯೇ ಸಂಘ ಪರಿವಾರದ ದತ್ತೋಪಂಥ ಹೆಗಡೆಯವರು ಡಾ.ಬಿ.ಆರ್.ಅಂಬೇಡ್ಕರ್ ರನ್ನು ಮಹನೀಯರು, ಪ್ರಾಥಸ್ಮರಣೀಯರು ಎಂದು ಉಲ್ಲೇಖಿಸಿದ್ದಾರೆ. ಈ ದೇಶದಲ್ಲಿ ಇಬ್ಬರು ಗಾಂಧಿಗಳಿಗೆ ಮಾತ್ರ ಪ್ರಾಮುಖ್ಯತೆ ಸಿಕ್ಕಿದೆ. ಒಬ್ಬರು ಮಹಾತ್ಮಾ ಗಾಂಧಿ ಇನ್ನೊಂದು ಈಗಿನ ಗಾಂಧಿ ಪರಿವಾರ. ಉಳಿದೆಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದೇ ಇಲ್ಲ. ಡಾ.ಅಂಬೇಡ್ಕರರು ಈ ದೇಶದ ಪ್ರಧಾನಿಯಾಗಬೇಕಿತ್ತು. ಅವರು ಬೌದ್ಧ ಧರ್ಮ ಸ್ವೀಕರಿಸಿದ್ರು. ಹಾಗಾಗಿಯೇ ಹಿಂದೂಗಳು ನೆಮ್ಮದಿಯಿಂದ ಇರುವಂತಾಯ್ತು. ಡಾ.ಅಂಬೇಡ್ಕರ್ ಬರೆದ ಸಂವಿಧಾನದ ಅಡಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಸಿಎಎ ಜಾರಿಗೆ ತಂದಿದ್ದಾರೆ. ಆದರೆ ಅದರ ವಿರುದ್ದ ವ್ಯವಸ್ಥಿತ ಪಿತೂರಿ ಮಾಡಿ ಸಂವಿಧಾನಕ್ಕೆ ಅಪಚಾರ ಮಾಡಲಾಗುತ್ತಿದೆ'' ಎಂದು ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಮಹಾಭಾರತ ಬರೆದವರು ಕೆಳಜಾತಿಯ ವಾಲ್ಮೀಕಿ: ಎಡವಟ್ಟು ಮಾಡಿದ ಯತ್ನಾಳ್!
ಭ್ರಷ್ಟಾಚಾರ ಬಿಟ್ಟು ಹೋದರು
''ಬ್ರಿಟೀಷರು ದೇಶ ಬಿಟ್ಟು ಹೋಗುವಾಗ ಕೇವಲ ಸ್ವಾತಂತ್ರ್ಯ ಕೊಟ್ಟು ಹೋಗಲಿಲ್ಲ. ಭಾರತೀಯರಿಗೆ ಕಲಿಸಬಾರದ್ದನ್ನೆಲ್ಲಾ ಕಲಿಸಿಹೋದ್ರು. ಭ್ರಷ್ಟಾಚಾರವನ್ನ ಬಿಟ್ಟು ಹೋದ್ರು. ಸುಸಂಸ್ಕೃತರು ನಮ್ಮ ಭಾರತೀಯರು, ಅರಳಿ ಮರ, ಗೋವುಗಳನ್ನ ದೇವರು ಅಂತ ಪೂಜೆ ಮಾಡ್ತಿದ್ದವರು ನಾವು'' ಅಂತ ಹೇಳಿದ ಶಾಸಕ ಶಿವಲಿಂಗೇಗೌಡ ಚುನಾವಣಾ ವ್ಯವಸ್ಥೆ ಬಗ್ಗೆ ಅಸಮಾಧಾನಗೊಂಡರು.
ಚುನಾವಣೆ ವ್ಯವಸ್ಥೆ ಬಗ್ಗೆ ಮಾತು
''ನಾವು ಜನರಿಗೆ ಏನೂ ಹಂಚದೇ, ಹಣ ಕೊಡದೆ ಚುನಾವಣೆ ಎದುರಿಸಿ ಗೆದ್ದು ಬಂದರೆ ಇಲ್ಲಿ ಭ್ರಷ್ಟರಾಗಲ್ಲ. ಆದರೆ ವ್ಯವಸ್ಥೆ ಆ ರೀತಿ ಇಲ್ಲ'' ಅಂತ ಶಿವಲಿಂಗೇಗೌಡ ಹೇಳುತ್ತಿದ್ದಂತೆಯೇ, ಮಧ್ಯ ಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, ''ನನ್ನ ಕ್ಷೇತ್ರದ ಗ್ರಾಮ ಪಂಚಾಯತ್ ಸದಸ್ಯರು ನನ್ನನ್ನು ಕೇಳ್ತಿದ್ದಾರೆ... ಶಾಸಕರು ಕೋಟಿ ಕೋಟಿಗೆ ಸೇಲ್ ಆಗ್ತಿರುವಾಗ ನಮಗೆ ಒಂದೆರಡು ಲಕ್ಷವೂ ರೇಟ್ ಇಲ್ವಾ? ನಾವು ಅಷ್ಟಕ್ಕೂ ಬೆಲೆ ಬಾಳಲ್ವಾ? ಅಂತ ಕೇಳ್ತಿದ್ದಾರೆ. ಶಾಸಕರ ಖರೀದಿಗೆ ನಮ್ಮ ರಾಜ್ಯ ಮಾದರಿಯಾಗಿದೆ. ಈ ವಿಚಾರ ಚರ್ಚೆ ಆಗಬೇಕು ಅಲ್ಲವೇ?'' ಎಂದು ಪ್ರಶ್ನಿಸಿದರು.
ಅಂಬೇಡ್ಕರ್, ವೀರ ಸಾವರ್ಕರ್ ಬಗ್ಗೆ ಮಾತು
''ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಏನೇನೋ ಮಾತನಾಡುತ್ತಾರೆ. ಎರಡೆರಡು ಬಾರಿ ಕಾಲಾಪಾನಿ ಶಿಕ್ಷೆ ಅನುಭವಿಸಿದವರು. ಆದರೆ ಸಾವರ್ಕರ್ ಹಿಂದೂ ಧರ್ಮದ ಅಭಿಮಾನಿಗಳಾಗಿದ್ದಿದ್ದು ಅಂಬೇಡ್ಕರ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಸಾವರ್ಕರ್ ಅವರ ಹಲವಾರು ವಿಚಾರಗಳನ್ನು ಅಂಬೇಡರ್ ಒಪ್ಪುತ್ತಿದ್ದರು'' ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಉದಾತ್ತ ನಾಯಕನಿಗೆ ಅಪಮಾನ
ಇದೇ ವೇಳೆ, ''ಇಂದು ಸಿಎಎ ಬಗ್ಗೆ ಆಗುತ್ತಿರುವ ಚರ್ಚೆಯ ಬಗ್ಗೆ ಅಂಬೇಡ್ಕರ್ ಮೊದಲೇ ನಿರೀಕ್ಷಿಸಿದ್ದರು. ಪಾಕಿಸ್ತಾನದಲ್ಲಿರುವ ದಲಿತರು ಯಾವುದಾದರೂ ರೀತಿಯಲ್ಲಿ ಭಾರತಕ್ಕೆ ಆಗಮಿಸುವಂತೆ ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೆ ಹಿಂದೂಗಳು ತಮ್ಮನ್ನು ನಿಕೃಷ್ಟವಾಗಿ ನೋಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಹೈದರಾಬಾದ್ ಮತ್ತಿತರ ಕಡೆಗಳಲ್ಲಿರುವ ಮುಸ್ಲೀಮರನ್ನು ದಲಿತರು ತಮ್ಮ ಸ್ನೇಹಿತರು ಎಂದು ಪರಿಗಣಿಸಿದರೆ ಆತ್ಮಗಾತುಕವಾಗುತ್ತದೆ ಎಂದು ಸ್ವತಃ ಅಂಬೇಡ್ಕರ್ ಹೇಳಿದ್ದರು. ಹಾಗಾಗಿಯೇ ನಾನು ಅಂಬೇಡ್ಕರ್ ಅವರನ್ನು ತ್ರಿಕಾಲ ಜ್ಞಾನಿ ಎಂದಿದ್ದು. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಬೇಕು. ಒಬ್ಬರಿಗೆ ಒಂದೇ ವಿವಾಹ, ಎರಡೇ ಮಕ್ಕಳು ಎಂಬ ನೀತಿ ಜಾರಿಗೆ ಬರಬೇಕು. ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಬಹಳ ವರ್ಷ ಸಂಸತ್ ನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಿರಲಿಲ್ಲ. ಇಂಥ ಉದಾತ್ತ ನಾಯಕನಿಗೆ ಮಾಡಿದ ಅಪಮಾನಗಳಿವು'' ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.