ವಿಶ್ವಾಸಮತಯಾಚನೆ ಮಾಡುವುದಾಗಿ ಸಿಎಂ ಘೋಷಣೆ : ಮುಂದೇನು?
Recommended Video
ಬೆಂಗಳೂರು, ಜುಲೈ 12 : ಅಚ್ಚರಿಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ವಿಶ್ವಾಸಮತಯಾಚನೆ ಮಾಡುವುದಾಗಿ ವಿಧಾನಸಭೆಯಲ್ಲಿ ಘೋಷಣೆ ಮಾಡಿದರು. ಇದರಿಂದಾಗಿ ಪ್ರತಿಪಕ್ಷ ಬಿಜೆಪಿ ಮಾಡಿದ ತಂತ್ರಗಳು ವಿಫಲವಾಗಿವೆ.
ಶುಕ್ರವಾರ ಮುಂಗಾರು ಅಧಿವೇಶನದ ಮೊದಲ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕಲಾಪ ಉದ್ದೇಶಿಸಿ ಮಾತನಾಡಿದರು. 'ನಾನು ಸ್ವಯಂ ಪ್ರೇರಣೆಯಿಂದ ಬಹುಮತ ಸಾಬೀತು ಪಡಿಸಲು ಇಚ್ಚಿಸುತ್ತೇನೆ. ಹೀಗಾಗಿ ಸಭಾಧ್ಯಕ್ಷರು ಇದಕ್ಕೆ ಒಂದು ಸಮಯವನ್ನು ನಿಗದಿಪಡಿಸಬೇಕು' ಎಂದು ಮನವಿ ಮಾಡಿದರು.
ರೆಬೆಲ್ ಶಾಸಕರಿಗೆ ಸಂಕಷ್ಟ, ಅನರ್ಹಗೊಳಿಸುವಂತೆ ಕೋರಿ ಸುಪ್ರೀಂಗೆ ಅರ್ಜಿ
ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರತಿಪಕ್ಷ, ಆಡಳಿತ ಪಕ್ಷದ ಸದಸ್ಯರ ಸಭೆ ನಡೆಸಿ ವಿಶ್ವಾಸಮತಯಾಚನೆಗೆ ಸಮಯವನ್ನು ನಿಗದಿಮಾಡಲಿದ್ದಾರೆ. ಸೋಮವಾರವೇ ಸಮಯ ನಿಗದಿ ಮಾಡಬೇಕು ಎಂದು ಕಾಂಗ್ರೆಸ್-ಜೆಡಿಎಸ್ ಸ್ಪೀಕರ್ ಅವರಿಗೆ ಮನವಿ ಮಾಡಿದೆ.
ವಿಶ್ವಾಸಮತಯಾಚನೆ : ರೆಸಾರ್ಟ್ಗೆ ಕಾಂಗ್ರೆಸ್, ಬಿಜೆಪಿ ಶಾಸಕರು!
ಕಾಂಗ್ರೆಸ್ನ 13, ಜೆಡಿಎಸ್ ಪಕ್ಷದ 3 ಶಾಸಕರು ರಾಜೀನಾಮೆ ನೀಡಿದ್ದಾರೆ. ವಿಶ್ವಾಸಮತಯಾಚನೆ ದಿನ ಸದನದಲ್ಲಿ ಕಡ್ಡಾಯವಾಗಿ ಹಾಜರಿದ್ದು, ಸರ್ಕಾರದ ಪರವಾಗಿ ಮತ ಹಾಕಲು ವಿಪ್ ಜಾರಿಗೊಳಿಸಲಾಗುತ್ತದೆ. ವಿಶ್ವಾಸಮತಯಾಚನೆ ಎಂದು ನಡೆಯಲಿದೆ? ಎಂಬುದು ಸದ್ಯದ ಪ್ರಶ್ನೆಯಾಗಿದೆ...
ಸುಪ್ರೀಂಕೋರ್ಟ್ ಆದೇಶ : ಮೈತ್ರಿ ಸರ್ಕಾರ, ಅತೃಪ್ತ ಶಾಸಕರು ಸೇಫ್
ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದೇನು?
'ರಾಜ್ಯದಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡುವ ಮೂಲಕ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಈ ಸ್ಥಾನವನ್ನು ದುರುಪಯೋಗ ಪಡಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಸದನದ ಬೆಂಬಲ ಇದ್ದಾಗ ಮಾತ್ರ ನಾನು ಈ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯ. ಹೀಗಾಗಿ ನಾನು ಸ್ವಯಂ ಪ್ರೇರಣೆಯಿಂದ ಬಹುಮತ ಸಾಬೀತು ಪಡಿಸಲು ಇಚ್ಚಿಸುತ್ತೇನೆ. ಹೀಗಾಗಿ ಸಭಾಧ್ಯಕ್ಷರು ಇದಕ್ಕೆ ಒಂದು ಸಮಯವನ್ನು ನಿಗದಿಪಡಿಸಬೇಕು' ಎಂದು ಎಚ್.ಡಿ.ಕುಮಾರಸ್ವಾಮಿ ಸದನದಲ್ಲಿ ಶುಕ್ರವಾರ ಹೇಳಿದರು.
14 ದಿನದ ಕಾಲಾವಕಾಶ
ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತಯಾಚನೆ ಮಾಡುವುದಾಗಿ ಹೇಳಿದ್ದಾರೆ. ಇಂದಿನಿಂದ 14 ದಿನಗಳ ಕಾಲ ಅವರಿಗೆ ಕಾಲಾವಕಾಶವಿದೆ. ಸ್ಪೀಕರ್ 14 ದಿನದಲ್ಲಿ ಯಾವ ದಿನಾಂಕವನ್ನು ಬೇಕಾದರೂ ನಿಗದಿ ಮಾಡಬಹುದಾಗಿದೆ. ನಿಗದಿ ಮಾಡಿದ ದಿನ ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಯಲಿದೆ.
ಮನವೊಲಿಕೆಗೆ ಸಮಯ ಸಿಕ್ಕಿದೆ
ರಾಜೀನಾಮೆ ನೀಡಿರುವ ಶಾಸಕರ ವಿಚಾರದಲ್ಲಿ ಜುಲೈ 16ರ ಮಂಗಳವಾರದ ತನಕ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದೆ. ಅಲ್ಲಿಯ ತನಕ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಹೇಳಿದೆ. ಇದರಿಂದಾಗಿ ಅತೃಪ್ತ ಶಾಸಕರ ಮನವೊಲಿಕೆಗೆ ಮೈತ್ರಿ ಸರ್ಕಾರಕ್ಕೆ ಸಮಯ ಸಿಕ್ಕಂತೆ ಆಗಿದೆ.
ಅತೃಪ್ತ ಶಾಸಕರಿಗೆ ವಿಪ್ ಜಾರಿಯಾಗಲ್ಲ
ವಿಧಾನಸೌಧದಲ್ಲಿ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿ, 'ಶಾಸಕರ ರಾಜೀನಾಮೆ, ಅನರ್ಹತೆ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳದಂತೆ ಕೋರ್ಟ್ ಸೂಚನೆ ನೀಡಿದೆ. ಪಕ್ಷಗಳು ಈಗ ವಿಪ್ ಜಾರಿಗೊಳಿಸಿದರೂ ಅತೃಪ್ತ ಶಾಸಕರಿಗೆ ಅದು ಅನ್ವಯವಾಗುವುದಿಲ್ಲ. ಮಂಗಳವಾರದ ಸುಪ್ರೀಂಕೋರ್ಟ್ ಆದೇಶದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು.