ಯಡಿಯೂರಪ್ಪಗೆ ಇದ್ದ ಕಡೆಯ ಅವಕಾಶ: ಕಣ್ಣೀರಿಟ್ಟ ಪ್ರತಾಪ್ ಸಿಂಹ
ಬೆಂಗಳೂರು, ಮೇ 19: 'ಯಡಿಯೂರಪ್ಪ ಅವರಿಗೆ ವಿಶ್ವಾಸಮತ ಸಾಬೀತುಪಡಿಸಿಕೊಳ್ಳುವ ಅವಕಾಶ ಸಿಗಬಹುದು. ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸವಿತ್ತು. ಆದರೆ, ಅದು ಹುಸಿಯಾಯಿತು' ಎಂದು ಸಂಸದ ಪ್ರತಾಪ್ ಸಿಂಹ ಕಣ್ಣೀರಿಟ್ಟರು.
ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ ಬಳಿಕ ಫೇಸ್ಬುಕ್ನಲ್ಲಿ ಲೈವ್ ವಿಡಿಯೊ ಹಂಚಿಕೊಂಡ ಪ್ರತಾಪ್ ಸಿಂಹ, ಆರಂಭದಿಂದಲೂ 16 ನಿಮಿಷ ಕಾಲ ಭಾವುಕರಾಗಿ ಮಾತನಾಡಿದರು.
ಮೋದಿ ಹಿಟ್ಲರ್, ಅಮಿತ್ ಶಾ ಗೂಬೆಲ್ಸ್: ಸಿದ್ದರಾಮಯ್ಯ ಕಿಡಿ
ರೈತರ ಬಗ್ಗೆ ನಿಜವಾಗಿಯೂ ಕಾಳಜಿಯುಳ್ಳ ನಾಯಕ ಎಂದರೆ ಯಡಿಯೂರಪ್ಪ. ಅವರು ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಅಧಿಕಾರ ಕೈತಪ್ಪಿತು ಎಂದು ಅವರಲ್ಲಿ ಬೇಸರವಿಲ್ಲ. ಆದರೆ, ತಾವು ರಾಜ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಟ್ಟಿಕೊಂಡಿದ್ದ ಕನಸು ಭಗ್ನಗೊಂಡಿತು ಎಂಬ ನೋವು ಅವರಲ್ಲಿದೆ ಎಂದು ಪ್ರತಾಪ್ ಸಿಂಹ ಗದ್ಗದಿತರಾದರು.
ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?
ಫೇಸ್ಬುಕ್ನಲ್ಲಿ ನೇರವಾಗಿ ಮಾತನಾಡಿದ ಪ್ರತಾಪ್ ಸಿಂಹ ಅವರ ನೋವಿನ ಮಾತುಗಳ ಕೆಲವು ಭಾಗಗಳು ಇಲ್ಲಿವೆ.
ಬೆಂಬಲಿಸುವ ಭರವಸೆ ಇತ್ತು
ವಿರೋಧ ಪಕ್ಷದಲ್ಲಿರುವ ಸೆನ್ಸಿಬಲ್ ಶಾಸಕರು ಜನಾದೇಶವನ್ನು ಅರ್ಥಮಾಡಿಕೊಂಡು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂಬ ಆಶಯ ಎಲ್ಲೋ ಒಂದು ಕಡೆ ಇತ್ತು. ನಮ್ಮ ಸರ್ಕಾರ ಉಳಿಯಬಹುದು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು ಎಂಬ ಹೋಪ್ ಇತ್ತು.
ವಾಜಪೇಯಿಯಂತೇ ತೂಕದ ಮಾತು
2014ರಲ್ಲಿ ಮೇ 16ರಂದು ನಾನು ಗೆದ್ದಾಗ ಎಷ್ಟು ಖುಷಿಯಾಗತ್ತೋ, ಇವತ್ತು ಅದಕ್ಕಿಂತ ಹೆಚ್ಚು ನೋವಾಗುತ್ತಿದೆ. ಕಣ್ಣೀರು ತಡೆಯಲಾಗುತ್ತಿಲ್ಲ. 1996ರಲ್ಲಿ ಕಾಲೇಜಲ್ಲಿ ಓದುವಾಗ ವಾಜಪೇಯಿ ಪ್ರಧಾನಿಯಾಗಿ 13 ದಿನಕ್ಕೆ ರಾಜೀನಾಮೆ ನೀಡಬೇಕಾದಾಗ ಅತ್ತಿದ್ದೆ. 22 ವರ್ಷಗಳ ನಂತರ ಮತ್ತೆ ಅಳು ಬರುತ್ತಿದೆ.
ವಾಜಪೇಯಿ 1996ರಲ್ಲಿ ಭಾವನಾತ್ಮಕವಾದ ಭಾಷಣ ಮಾಡಿದ್ದರು. ಆ ಭಾಷಣದಷ್ಟೇ ಅದ್ಭುತವಾದ ಭಾಷಣವನ್ನು ಯಡಿಯೂರಪ್ಪ ಮಾಡಿದರು. ಭಾಷಣದುದ್ದಕ್ಕೂ ನರೇಂದ್ರ ಮೋದಿ ಮತ್ತು ರೈತರನ್ನು ನೆನಪಿಸಿಕೊಂಡರು.
ಮೂರೇ ದಿನಕ್ಕೆ ಕುರ್ಚಿ ಬಿಟ್ಟು ಹೊಸ ದಾಖಲೆ ಬರೆದ ಯಡಿಯೂರಪ್ಪ
ಯಡಿಯೂರಪ್ಪ ಕೋಪಿಷ್ಠರಲ್ಲ
ಪಕ್ಷಕ್ಕೆ ಅಧಿಕಾರ ಹೋಯ್ತು ಎಂದು ಬೇಸರ ಆಗುತ್ತಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಯಡಿಯೂರಪ್ಪ ಅವರೊಂದಿಗೆ ಹತ್ತಿರದಿಂದ ನೋಡಿದ್ದೇನೆ. ತುಂಬಾ ಜನ ಯಡಿಯೂರಪ್ಪ ಕೋಪಿಷ್ಠ, ಬೇಗ ಸಿಟ್ಟು ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದಾರೆ. ಆದರೆ ಅವರ ಕೋಪದ ಹಿಂದೆಯೂ ಸಾತ್ವಿಕ ಕಾರಣ ಇರುತ್ತದೆ.
ಕನಸು ಕಾಣುವ ನಾಯಕ
ತುಂಬಾ ರಾಜಕಾರಣಿಗಳನ್ನು ನೋಡಿ ಮಾತನಾಡಿದ್ದೇನೆ. ಅವರ ಜತೆಗೆ ಪಾರ್ಟಿ ಮಾಡಿದ್ದೇನೆ. ಬೇರೆ ಬೇರೆ ದೇಶಗಳಿಗೆ ಹೋಗಿ ಬಂದಿದ್ದೇನೆ. ಆದರೆ ಸದಾ ಜನರ ಬಗ್ಗೆ ಯೋಚನೆ ಮಾತನಾಡುವವರು, ಒಳ್ಳೆಯ ಕೆಲಸ ಮಾಡಬೇಕು ಎಂಬ ಈ ಪರಿಯ ತುಡಿತ ಹೊಂದಿರುವ ನಾಯಕರನ್ನು ನೋಡಿರಲಿಲ್ಲ. ಅವರ ಬಳಿ ಮಾತನಾಡುವಾಗಲೆಲ್ಲವೂ ಕರ್ನಾಟಕದ ಬಗ್ಗೆ ಕನಸನ್ನು ಹಂಚಿಕೊಳ್ಳುತ್ತಿದ್ದರು.
ಮೋದಿ ಅವರು ಮಾತ್ರ ದಿನದ 24 ಗಂಟೆ ಈ ರೀತಿ ಯೋಚನೆ ಮಾಡುತ್ತಾರೆ. ಹೊಸ ವಿಚಾರ ಹೇಳುತ್ತಾರೆ. ಅವರ ಹೊರತು ಜನರ ಬಗ್ಗೆ ಯಾವಾಗಲೂ ಮಾತನಾಡುವ ವ್ಯಕ್ತಿಯನ್ನು ನೋಡಿದ್ದೆಂದರೆ ಅದು ಯಡಿಯೂರಪ್ಪ.
ಒಳ್ಳೆಯತನದ ದುರುಪಯೋಗ
ಪತ್ರಕರ್ತನಾಗಿ ಅವರನ್ನು ಸಾಕಷ್ಟು ಟೀಕಿಸಿದ್ದೇನೆ. ಆದರೆ ನಾಲ್ಕು ವರ್ಷದಿಂದ ಅವರ ಹತ್ತಿರದಲ್ಲಿದ್ದು, ಅವರನ್ನು ಅರಿತುಕೊಂಡಿದ್ದೇನೆ. ಅವರ ಒಳ್ಳೆಯತನವನ್ನು ಯಾರೋ ದುರುಪಯೋಗಪಡಿಸಿಕೊಂಡು ಕೆಲವು ತಪ್ಪುಗಳಾಗಿರಬಹುದೇ ಹೊರತು ಅವರು ಯಾರಿಗೂ ಕೆಟ್ಟದ್ದು ಮಾಡಬೇಕು ಎಂದು ಏನನ್ನೂ ಮಾಡಿಲ್ಲ.
ಕರ್ನಾಟಕಕ್ಕೆ ಒಂದು ಕನಸು ಕಂಡಿದ್ದೆ. ಅದು ನುಚ್ಚು ನೂರಾಯ್ತು ಎಂದು ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು. ಆದರೆ, 'ಡೋಂಟ್ ವರಿ. ಮುಂದೆ ಲೋಕಸಭೆ ಚುನಾವಣೆಯಲ್ಲಿ ಫೈಟ್ ಮಾಡೋಣ ಎಂದು ಹೇಳಿದರು.
ಮತ್ತೆ ಹೋರಾಟದ ಭಾವ
ಅಧಿಕಾರ ಕಳೆದುಕೊಂಡಿದ್ದೇನೆ ಎಂಬ ದುಃಖ ಅವರಲ್ಲಿ ಇರಲಿಲ್ಲ. ಜನರಿಗೆ ಒಳ್ಳೆಯದು ಮಾಡಬೇಕು. ಇದು ಒಳ್ಳೆ ಅವಕಾಶ ಎಂಬ ಭರವಸೆ ಇಟ್ಟುಕೊಂಡಿದ್ದೆ. ಆದರೆ, ಹೋರಾಟ ಮಾಡುವುದೇ ನನ್ನ ಹಣೆಯಲ್ಲಿ ಬರೆದಿದೆಯೇನೋ. ಒಳ್ಳೆಯದು ಮಾಡಬೇಕು ಎಂಬ ಕಡೆಯ ಅವಕಾಶ ಹೀಗಾಯ್ತಲ್ಲ ಎಂಬ ನೋವಿನ ಭಾವನೆ ಇತ್ತೇ ವಿನಾ ಅವರಲ್ಲಿ ಅಧಿಕಾರ ಸಿಗದ ನೋವು ಇರಲಿಲ್ಲ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಡುವೆಯೂ ಅವರು ಸಮತೋಲನ ಕಳೆದುಕೊಳ್ಳಲಿಲ್ಲ. ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿದ್ದರು. ಪುಂಡಾಟಿಕೆ ಮಾಡಿದರು. ಪಕ್ಷದ ಸೋಲಿಗೆ ಅವರ ಏಕಪಕ್ಷೀಯ ನಿರ್ಧಾರ ಸೋಲಿಗೆ ಕಾರಣ ಎಂದು ಸ್ವಪಕ್ಷೀಯರೇ ದೂರಿದಾಗ ಶಾಸಕಾಂಗ ಪಕ್ಷದಲ್ಲಿ ದುಃಖಿಸಿದರು.
104 ಸ್ಥಾನ ಪಡೆದರೂ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ಕೂಡ ಅಧಿಕಾರ ತಪ್ಪಿತು ಎಂದು ಯಡಿಯೂರಪ್ಪ ದುಃಖಿಸಲಿಲ್ಲ. ಜನರನ್ನು ಒಳ್ಳೆಯದು ಮಾಡುವ ಅವಕಾಶ ಕೈತಪ್ಪಿತ್ತಲ್ಲ ಎಂಬ ಬೇಸರವಿತ್ತು. ಆದರೆ ನನ್ನ ಕಣ್ಣಲ್ಲಿ ನೀರು ಬಂದಿದೆ.
ಅವರಂತಹ ನಾಯಕ ಇಲ್ಲ
ಅಪ್ಪನಾಣೆ ಅಮ್ಮನಾಣೆ, ಅಧಿಕಾರ ನೀಡದೆ ಇದ್ದರೆ ಸಾಯುತ್ತೇನೆ ಎಂದು ಸಾರ್ವಜನಿಕವಾಗಿ ಕಣ್ಣೀರು ಹಾಕುವವರನ್ನು ಇತ್ತೀಚೆಗೆ ಸಾಕಷ್ಟು ನೋಡಿದ್ದೇವೆ. ನನ್ನ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸದೆ ಇದ್ದರೆ ವಿಷ ಕೊಡಿ ಎಂದು ಕೇಳಿದ್ದವರನ್ನೂ ನೋಡಿದ್ದೇವೆ.
ಈಗಿನ ಪೀಳಿಗೆಯವರು ಅರ್ಥಮಾಡಿಕೊಳ್ಳಬೇಕು. ಯಡಿಯೂರಪ್ಪ ಅವರಂತಹ ನಾಯಕರು ಬೇರೆ ಇಲ್ಲ. ರೈತರ ಬಗ್ಗೆ ಇಷ್ಟು ಪ್ರೀತಿ ಇಟ್ಟುಕೊಂಡಿರುವ ಇನ್ನೊಬ್ಬ ನಾಯಕನ್ನು ಸೃಷ್ಟಿ ಮಾಡಲು ಆಗುವುದಿಲ್ಲ. ಅಷ್ಟು ರೈತರ ಬಗ್ಗೆ ಯೋಚನೆ ಮಾಡ್ತಾರೆ. .
ಕೆಲವರು ಅಧಿಕಾರ ಸಿಗದೆ ಇದ್ದಾಗ ಅಳುತ್ತಾರೆ. ಆದರೆ ಸೋತಾಗಲೂ ಹೋರಾಟ ಮಾಡುತ್ತೇನೆ. ಮೋದಿ ಅವರಿಗೆ ಎಲ್ಲ 28 ಸೀಟುಗಳನ್ನು ಕೊಡುತ್ತೇನೆ. ರೈತರ ಪರ ಹೋರಾಟ ಮುಂದುವರಿಸುತ್ತೇನೆ ಎನ್ನುತ್ತಾರಲ್ಲ, ಅಂತಹ ಹೃದಯ ವೈಶಾಲ್ಯ ಯಾರಿಗೆ ಬರಲು ಸಾಧ್ಯ?
ಕೊನೆಯ ಅವಕಾಶ
ಇದು ಯಡಿಯೂರಪ್ಪ ಅವರಿಗೆ ಇದ್ದ ಕಡೆಯ ಅವಕಾಶ. ಆ ಅವಕಾಶವನ್ನು ಕಳೆದುಕೊಳ್ಳುವ ಸಂದರ್ಭದಲ್ಲಿಯೂ ಅವರು ಮನಸ್ಸಿಗೆ ಮುಟ್ಟಿದರು. ಅವರ ಕುರಿತ ಗೌರವ ನೂರುಪಟ್ಟು ಹೆಚ್ಚಾಯಿತು.
ಈ ಸರ್ಕಾರ ಹೆಚ್ಚು ಕಾಲ ಬಾಳುವುದಿಲ್ಲ. ಆರೇಳು ತಿಂಗಳಲ್ಲಿ ಸರ್ಕಾರ ಪತನಗೊಳ್ಳುತ್ತದೆ. ಆಗ ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತದೆ. ಆ ಖಚಿತ ವಿಶ್ವಾಸ ನನಗಿದೆ.