ಕಾಂಗ್ರೆಸ್-ಜೆಡಿಎಸ್ ಮೈತ್ರಿ ಲೋಕಸಭೆ ಮಹಾಒಕ್ಕೂಟಕ್ಕೆ ಮುನ್ನಡಿಯೇ?
ಬೆಂಗಳೂರು, ಮೇ 19: ಉತ್ತರ ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಪ್ರಾಬಲ್ಯವನ್ನು ತಗ್ಗಿಸಲು ಮತ್ತು ಮುಂಬರುವ ಲೋಕಸಭೆ ಚುನಾವಣೆ ವೇಳೆ ಅದರ ಪ್ರಭಾವಳಿಯನ್ನು ಕುಗ್ಗಿಸಲು ಅದರ ಎಲ್ಲ ವಿರೋಧ ಪಕ್ಷಗಳಿಗೂ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಮುಖ ವೇದಿಕೆಯಾಗಿತ್ತು.
ಅದರಲ್ಲೂ ಮುಖ್ಯವಾಗಿ ಪಂಜಾಬ್ ಮತ್ತು ಮಿಜೋರಾಂ ಹೊರತುಪಡಿಸಿ ಉಳಿದೆಲ್ಲ ಕಡೆ ನೆಲೆ ಕಳೆದುಕೊಂಡಿರುವ ಅತಿ ಹಿರಿಯ ಪಕ್ಷ ಕಾಂಗ್ರೆಸ್ಗೆ ಲೋಕಸಭೆ ಚುನಾವಣೆಗೂ ಮುನ್ನ ಚೇತರಿಸಿಕೊಳ್ಳಲು ಇದ್ದ ಏಕೈಕ ಅವಕಾಶ ಕರ್ನಾಟಕದ ಚುನಾವಣೆ.
ರಾಜಕೀಯ: ಎಲ್ಲರ ಆಸೆ ತೀರಿಸಿದ ಕರ್ನಾಟಕದ ಮತದಾರ
'ಕಾಂಗ್ರೆಸ್ ಮುಕ್ತ ದೇಶ'ವನ್ನಾಗಿಸುವ ಬಿಜೆಪಿಯ ಗುರಿಗೆ ಇದ್ದ ದೊಡ್ಡ ಅಡ್ಡಿ ಕರ್ನಾಟಕವಾಗಿತ್ತು. ಕಾಂಗ್ರೆಸ್ಅನ್ನು ಸೋಲಿಸುವ ಪ್ರಯತ್ನದಲ್ಲಿ ಅದು ಯಶಸ್ವಿಯಾದರೂ, ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯುವುದು ಬಿಜೆಪಿಗೆ ಸಾಧ್ಯವಾಗಿಲ್ಲ. ಇದರಿಂದ ಕಾಂಗ್ರೆಸ್ ಮುಕ್ತ ದೇಶ ನಿರ್ಮಾಣದ ಪ್ರಯತ್ನದಲ್ಲಿ ಅದಕ್ಕೆ ಹಿನ್ನಡೆಯಾಗಿದೆ.
ನಿರ್ಲಕ್ಷಿಸಿತ್ತೇ ಕಾಂಗ್ರೆಸ್?
ಕಾಂಗ್ರೆಸ್ ಮಾತ್ರವಲ್ಲದೆ, ಬಿಜೆಪಿಯ ನಾಗಾಲೋಟದಿಂದ ದಿಕ್ಕೆಟ್ಟಿರುವ ಇತರೆ ಪಕ್ಷಗಳಿಗೂ ಕರ್ನಾಟಕದಲ್ಲಿನ ಬಿಜೆಪಿ ಸೋಲು ಅತಿ ಮಹತ್ವದ್ದಾಗಿತ್ತು. ಆದರೆ, ಕರ್ನಾಟಕದಲ್ಲಿನ ವಾತಾವರಣ ಮತ್ತು ಐದು ವರ್ಷ ಸ್ಥಿರ ಸರ್ಕಾರ ನೀಡಿದ್ದ ಕಾಂಗ್ರೆಸ್ ಮತ್ತೆ ಸುಲಭವಾಗಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಅವುಗಳ ಲೆಕ್ಕಾಚಾರಕ್ಕೆ ತುಸು ಹೊಡೆತ ನೀಡಿತು.
ಕರ್ನಾಟಕದಲ್ಲಿ ಮೋದಿ-ಅಮಿತ್ ಶಾ ಮ್ಯಾಜಿಕ್ ನಡೆಯುವುದಿಲ್ಲ ಎಂದು ಕಾಂಗ್ರೆಸ್ ಬಲವಾಗಿ ನಂಬಿತ್ತು. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅದು ಅಧಿಕಾರ ರಚಿಸುವುದನ್ನು ತಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಇದು ಕಾಂಗ್ರೆಸ್ಗೆ ದೊರೆತ ಬಹುದೊಡ್ಡ ನಿರಾಳತೆ ಎನ್ನಬಹುದು.
ಪ್ರಬಲ ವಿರೋಧಿಗಳಿಲ್ಲ
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಹೊರುತುಪಡಿಸಿ ಉಳಿದ ಯಾವ ಪಕ್ಷವೂ ಕರ್ನಾಟಕದಲ್ಲಿ ಅಂತಹ ಗಟ್ಟಿ ನೆಲೆ ಹೊಂದಿಲ್ಲ. ಸಣ್ಣಪುಟ್ಟ ಪಕ್ಷಗಳಲ್ಲಿಯೂ ಚುನಾವಣೆ ಎದುರಿಸಿ ಗೆಲ್ಲಬಲ್ಲ ಸಮರ್ಥ ನಾಯಕರಿಲ್ಲ.
ಇದು ಬಿಜೆಪಿ ವಿರುದ್ಧದ ಕಾಂಗ್ರೆಸ್ನ ರಾಷ್ಟ್ರಮಟ್ಟದ ಹೋರಾಟಕ್ಕೆ ದೊಡ್ಡ ಹಿನ್ನಡೆ. ಏಕೆಂದರೆ ಬಿಹಾರ ಚುನಾವಣೆಗೂ ಮುನ್ನ ಕಾಂಗ್ರೆಸ್, ಜೆಡಿಯು, ಆರ್ಜೆಡಿ ಪಕ್ಷಗಳು ಸೇರಿ ಮಹಾ ಘಟಬಂಧನ ರಚಿಸಿಕೊಂಡು ಬಿಜೆಪಿಯನ್ನು ಸೋಲಿಸಿದ್ದವು. ಉಳಿದ ಚುನಾವಣೆಗಳಲ್ಲಿಯೂ ವಿರೋಧಪಕ್ಷಗಳು ಬಿಜೆಪಿ ವಿರುದ್ಧ ಕೈಜೋಡಿಸಿದ್ದವು.
ಕರ್ನಾಟಕದಲ್ಲಿ ಅಂತಹ ಅವಕಾಶ ಇದ್ದದ್ದು ತೀರಾ ಕಡಿಮೆ. ಇಲ್ಲಿ ಚುನಾವಣಾಪೂರ್ವ ಮೈತ್ರಿಗೆ ಜೆಡಿಎಸ್ ಹೊರತುಪಡಿಸಿ ಬೇರೆ ಪ್ರಬಲ ಪಕ್ಷವೇ ಇರಲಿಲ್ಲ. ಮೂರೂ ಪಕ್ಷಗಳು ಪ್ರತ್ಯೇಕವಾಗಿ ಅಧಿಕಾರ ಹಿಡಿಯುವ ಗುರಿ ಹೊಂದಿದ್ದರಿಂದ ಯಾವ ಪಕ್ಷಗಳ ನಡುವೆಯೂ ಚುನಾವಣಾ ಪೂರ್ವ ಮೈತ್ರಿ ನಿರೀಕ್ಷಿಸುವಂತೆ ಇರಲಿಲ್ಲ. ಜೆಡಿಎಸ್ ಮತ್ತು ಬಿಎಸ್ಪಿ ನಡುವೆ ಮೈತ್ರಿ ನಡೆದರೂ ಅದು ಮಹತ್ವದ್ದಾಗಿರಲಿಲ್ಲ. ಆದರೆ, ಚುನಾವಣೋತ್ತರ ಮೈತ್ರಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ.
ಅಮಿತ್ ಶಾ ಮುಂದೆ 2ನೇ ಬಾರಿ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್!
ಬೆಂಬಲಕ್ಕೆ ಬಂದ ಕೆಸಿಆರ್, ನಾಯ್ಡು
ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಮುಂದಾಗುತ್ತಾರೆ ಎಂಬ ಸುಳಿವು ದೊರೆತ ಕೂಡಲೇ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮ್ಮ ಶಾಸಕರನ್ನು ಬಿಜೆಪಿಯವರಿಂದ ಉಳಿಸಿಕೊಳ್ಳು ರೆಸಾರ್ಟ್ ರಾಜಕಾರಣಕ್ಕೆ ಮುಂದಾದರು.
ಆಗ ಕೇರಳದ ಕೊಚ್ಚಿಗೆ ಶಾಸಕರು ಹೀಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಕೇರಳ ಪ್ರವಾಸೋದ್ಯಮ ಇಲಾಖೆ ರೆಸಾರ್ಟ್ಗೆ ಸ್ವಾಗತ ಕೋರುವ ಟ್ವೀಟ್ ಮಾಡಿ ಬಳಿಕ ಅದನ್ನು ಅಳಿಸಿಹಾಕಿತ್ತು. ಆದರೆ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಉಭಯ ಪಕ್ಷಗಳಿಗೆ ತಮ್ಮ ರಾಜ್ಯಕ್ಕೆ ಬರುವಂತೆ ನೇರವಾಗಿ ಆಹ್ವಾನ ನೀಡಿದ್ದವು. ಶಾಸಕರ ರೆಸಾರ್ಟ್ ರಾಜಕೀಯಕ್ಕೆ ಎಲ್ಲ ಸೌಲಭ್ಯ ಕಲ್ಪಿಸಿಕೊಡುವುದಾಗಿ ಆಹ್ವಾನ ನೀಡಿದ್ದವು.
ಬಿಜೆಪಿಯೊಂದಿಗೆ ಹಿಂದೆ ಸಖ್ಯ ಹೊಂದಿದ್ದರೂ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡದ ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ವಿರುದ್ಧದ ತಮ್ಮ ಸಿಟ್ಟು ಪ್ರದರ್ಶಿಸಲು ರೆಸಾರ್ಟ್ ರಾಜಕಾರಣ ನೆರವಾಯಿತು.
ಸೋತರೂ ಮೈತ್ರಿಯನ್ನು ಬೆಂಬಲಿಸಿದರು
ಉತ್ತರ ಭಾರತದ ರಾಜಕೀಯ ವಾತಾವರಣಕ್ಕೂ ದಕ್ಷಿಣ ಭಾರತದ ವಾತಾವರಣಕ್ಕೂ ಅಗಾಧ ವ್ಯತ್ಯಾಸವಿದೆ. ಹಾಗೆ ನೋಡಿದರೆ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರವೇ ಬಿಜೆಪಿ ಪರ ಹೆಚ್ಚಿನ ಒಲವಿರುವುದು. ಉಳಿದೆಲ್ಲ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಅಸ್ತಿತ್ವದಲ್ಲಿವೆ.
ಕಾಂಗ್ರೆಸ್ ಎರಡನೆಯ ಸ್ಥಾನ ಪಡೆದರೂ, ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಲು ಅದು ಜೆಡಿಎಸ್ ಜತೆ ಮೈತ್ರಿ ಹೊಂದಬೇಕು ಎನ್ನುವುದು ಬಿಜೆಪಿ ವಿರೋಧಿಗಳ ಬಯಕೆಯಾಗಿತ್ತು. ಚುನಾವಣಾ ಪೂರ್ವದಲ್ಲಿ ಕುಮಾರಸ್ವಾಮಿ ಅವರನ್ನು ಟೀಕಿಸಿದವರೂ, ಬಿಜೆಪಿಯನ್ನು ಸರ್ಕಾರ ರಚನೆಯಿಂದ ದೂರವಿರಿಸಲು ಕಾಂಗ್ರೆಸ್ ಬೆಂಬಲದೊಂದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ಸ್ವಾಗತಿಸಿದ್ದರು.
ಸರ್ಕಾರ ರಚನೆಗೆ ಬಿಜೆಪಿ ಏನೆಲ್ಲಾ ಮಾಡಿತು, ಸೋತಿತು!
ಲೋಕಸಭೆ ಚುನಾವಣೆಗೆ ಮೈತ್ರಿ?
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಎಷ್ಟು ಕಾಲ ಉಳಿಯಲಿದೆ ಎಂಬುದು ಈಗ ಮುಂದಿರುವ ಪ್ರಶ್ನೆ. ಮುಂದಿನ ಲೋಕಸಭೆ ಚುನಾವಣೆವರೆಗೂ ಇದೇ ಮೈತ್ರಿ ಮುಂದುವರಿದರೆ ಅದು ಒಟ್ಟಾರೆ ದೇಶದ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.
ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚನೆಯ ಪ್ರಯತ್ನಗಳು ಸಾಕಷ್ಟು ಬಾರಿ ನಡೆದಿದೆ. ಬಿಹಾರ ಚುನಾವಣೆಯಲ್ಲಿ ತೃತೀಯ ರಂಗದ ಜತೆ ಕಾಂಗ್ರೆಸ್ ಕೂಡ ಕೈಜೋಡಿಸಿತ್ತು. ಇವೆಲ್ಲವೂ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ನಡೆಸಿದ ಪ್ರಯತ್ನದ ಹೋರಾಟಗಳು.
ಆದರೂ ಬಿಜೆಪಿ ಈ ಎಲ್ಲ ಪಕ್ಷಗಳ ಶಕ್ತಿಯನ್ನು ಎದುರಿಸಿ ಅಧಿಕಾರ ಹಿಡಿಯುವಲ್ಲಿ ಸಫಲವಾಗುತ್ತಿದೆ. ಕರ್ನಾಟಕದಲ್ಲಿ ನಡೆದಿರುವ ಮೈತ್ರಿ ತೃತೀಯ ರಂಗದಾಚೆ, ಬಿಜೆಪಿ ವಿರುದ್ಧದ ಎಲ್ಲ ಪಕ್ಷಗಳನ್ನೂ ಒಟ್ಟುಗೂಡಿಸುವ ಉದ್ದೇಶಕ್ಕೆ ಭೂಮಿಕೆ ಒದಗಿಸಿದೆ.