ರಾಮನಗರಕ್ಕೆ ಎಚ್ಡಿಕೆ ರಾಜೀನಾಮೆ: ಮುಂದಿನ ಅಭ್ಯರ್ಥಿ ಯಾರು?
ಬೆಂಗಳೂರು, ಮೇ 19: ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರಿಸುವ ವೇಳೆ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.
ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಎರಡು ಕ್ಷೇತ್ರಗಳಲ್ಲಿ ಒಂದನ್ನು ಮಾತ್ರ ಉಳಿಸಿಕೊಂಡು, ಇನ್ನೊಂದಕ್ಕೆ ರಾಜೀನಾಮೆ ನೀಡುವ ಆಯ್ಕೆ ಕುಮಾರಸ್ವಾಮಿ ಅವರ ಮುಂದಿತ್ತು. ರಾಮನಗರದೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಕುಮಾರಸ್ವಾಮಿ ಅವರು ರಾಜಕೀಯ ಲೆಕ್ಕಾಚಾರಗಳೊಂದಿಗೆ ತಮಗೆ ಪುನರ್ಜನ್ಮ ನೀಡಿದ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ.
ಆತುರಕ್ಕೆ ಬಿದ್ದು ವಿರೋಧಿಗಳ ಎದುರಲ್ಲಿ ಕುಮಾರಣ್ಣ ಜಾರಿ ಬೀಳುವರೇ?
ರಾಮನಗರದಲ್ಲಿ ಕುಮಾರಸ್ವಾಮಿ ಪ್ರಭಾವ ದಟ್ಟವಾಗಿದೆ. ವೈಯಕ್ತಿಕವಾಗಿ ಇಲ್ಲಿ ವರ್ಚಸ್ಸು ಬೆಳೆಸಿಕೊಂಡಿರುವ ಅವರು ಕ್ಷೇತ್ರದಲ್ಲಿ ಪ್ರಚಾರ ಮಾಡದೆಯೂ ಗೆಲ್ಲುತ್ತಾರೆ. ಹೀಗಾಗಿ ಇಲ್ಲಿ ಜೆಡಿಎಸ್ ನ ಯಾವ ಅಭ್ಯರ್ಥಿಯನ್ನಾದರೂ ನಿಲ್ಲಿಸಿ ಗೆಲ್ಲಿಸುವ ಸಾಮರ್ಥ್ಯ ಅವರಿಗಿದೆ.
ಚನ್ನಪಟ್ಟಣದಲ್ಲಿ ಬಿಜೆಪಿಯ ಸಿ.ಪಿ. ಯೋಗೀಶ್ವರ್ ಅವರು ಕುಮಾರಸ್ವಾಮಿ ಅವರ ಎದುರಾಳಿಯಾಗಿದ್ದರು. ಶಾಸಕರಾಗಿ ಜನಪ್ರಿಯರಾಗಿದ್ದರೂ ಯೋಗೀಶ್ವರ್ ಸುಮಾರು 20 ಸಾವಿರ ಮತಗಳ ಅಂತರದಿಂದ ಕುಮಾರಸ್ವಾಮಿ ಅವರ ಎದುರು ಸೋಲನ್ನು ಅನುಭವಿಸಿದ್ದರು.
ಕರ್ನಾಟಕ ವಿಶ್ವಾಸಮತ LIVE: ಯಡಿಯೂರಪ್ಪ ಭಾಷಣ
ಈ ಬಾರಿ ಸೋತಿದ್ದರೂ ಯೋಗೀಶ್ವರ್ ಅವರ ವರ್ಚಸ್ಸು ಕಡಿಮೆಯಾಗಿಲ್ಲ. ಒಂದು ವೇಳೆ ಕುಮಾರಸ್ವಾಮಿ ಈ ಚನ್ನಪಟ್ಟಣಕ್ಕೆ ರಾಜೀನಾಮೆ ನೀಡಿ ರಾಮನಗರವನ್ನು ಉಳಿಸಿಕೊಂಡಿದ್ದರೆ, ಇಲ್ಲಿ ಇನ್ನೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗುತ್ತಿತ್ತು. ಆದರೂ ಜೆಡಿಎಸ್ ಗೆಲುವು ಸುಲಭವಾಗಿರಲಿಲ್ಲ.
ಈ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡೇ ಕುಮಾರಸ್ವಾಮಿ ಅವರು ಚನ್ನಪಟ್ಟಣವನ್ನು ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ರಾಮನಗರ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಗೌಡರ ಕುಟುಂಬದಿಂದಲೇ ಯಾರಾದರೂ ಸ್ಪರ್ಧೆಗೆ ಇಳಿಯಲಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಹೆಸರು ದಟ್ಟವಾಗಿ ಕೇಳಿಬರುತ್ತಿದೆ.
ಕುಟುಂಬದಿಂದ ಇಬ್ಬರನ್ನು ಹೊರತುಪಡಿಸಿ ಇನ್ಯಾರೂ ಸ್ಪರ್ಧಿಸುವುದಿಲ್ಲ ಎಂದು ಚುನಾವಣೆಗೂ ಮುನ್ನ ಎಚ್.ಡಿ. ದೇವೇಗೌಡ ಅವರು ಹೇಳಿದ್ದರು. ಅದು ಈ ಚುನಾವಣೆಗೂ ಅನ್ವಯವಾಗಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಹಾಗೊಮ್ಮೆ ದೇವೇಗೌಡರ ಕುಟುಂಬದಿಂದ ಯಾರೂ ಸ್ಪರ್ಧೆಗೆ ಇಳಿಯದಿದ್ದರೆ, ಕುಮಾರಸ್ವಾಮಿ ಅವರ ಆಪ್ತರನ್ನು ಕಣಕ್ಕಿಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.