ಬೋಪಯ್ಯ ನೇಮಕ: ಕಾಂಗ್ರೆಸ್ನಿಂದ ತೀವ್ರ ಆಕ್ಷೇಪ
ಬೆಂಗಳೂರು, ಮೇ 18: ರಾಜ್ಯಪಾಲರು ವಿಧಾನಸಭೆಯಲ್ಲಿನ ಹಿರಿತನವನ್ನು ಕಡೆಗಣಿಸಿ ಕೆ.ಜಿ. ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಬೋಪಯ್ಯ ಅವರು ಹಿರಿಯ ಶಾಸಕರಲ್ಲ. ಮೂರು ಬಾರಿ ಶಾಸಕರಾಗಿದ್ದಾರಷ್ಟೇ. ಶನಿವಾರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಪಿಗೆ ನೆರವು ನೀಡುವ ಉದ್ದೇಶದಿಂದ ರಾಜ್ಯಪಾಲರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದೆ.
ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ನೇಮಕ ಪ್ರಶ್ನಿಸಿ ಸುಪ್ರೀಂಗೆ ಕಾಂಗ್ರೆಸ್
ನಿಯಮ ಮೀರಿ ಬೋಪಯ್ಯ ಅವರನ್ನು ನೇಮಕ ಮಾಡಲಾಗಿದೆ. ಬೋಪಯ್ಯ ಅವರು ಪಕ್ಷಪಾತಿ ಧೋರಣೆ ಅನುಸರಿಸುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದೆ.
ರಾಜ್ಯಪಾಲರ ನಿರ್ಧಾರದ ಕುರಿತು ಟ್ವಿಟ್ಟರ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ದಿನೇಶ್ ಗುಂಡೂರಾವ್, ಇದು ಗೌರವಾನ್ವಿತ ರಾಜ್ಯಪಾಲರ ಆಘಾತಕಾರಿ ನಿರ್ಧಾರವಾಗಿದೆ. ಅತಿ ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಅದರ ಪ್ರಕಾರ ಆರ್.ವಿ. ದೇಶಪಾಂಡೆ ಅವರನ್ನು ನೇಮಿಸಬೇಕಿತ್ತು.
ರಾಜ್ಯಪಾಲ ವಜೂಭಾಯಿ ವಾಲಾ ಅವರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವುದು ಖೇದಕರ ಸಂಗತಿ ಎಂದು ಗುಂಡೂರಾವ್ ಹೇಳಿದ್ದಾರೆ.