ಬಿಜೆಪಿ, ಜೆಡಿಎಸ್ ತಂತ್ರ, ಕುರುಬ ಸಂಘದ ಭಿನ್ನಾಭಿಪ್ರಾಯ ಮೀರಿ ಸಿದ್ದರಾಮಯ್ಯಗೆ ಕೋಲಾರದಲ್ಲಿ ಗೆಲುವು ದಕ್ಕುವುದೇ?
ಬೆಂಗಳೂರು, ಜನವರಿ. 25: ಈ ಬಾರಿಯ ರಾಜ್ಯ ಚುನಾವಣೆಯಲ್ಲಿ ಹಾಟ್ ಸೀಟ್ ಆಗಿರುವುದು ಕೋಲಾರ ವಿಧಾನಸಭಾ ಕ್ಷೇತ್ರ. ಏಕೆಂದರೆ ಈ ಸ್ಥಾನದಿಂದ ಸ್ಪರ್ಧಿಸುತ್ತೇನೆ ಎಂದು ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿದರೆ ಮಾತ್ರ ಇಲ್ಲಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರೂ ಕೂಡ, ಎಲ್ಲರ ಚಿತ್ತ ಕೋಲಾರದತ್ತ ನೆಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಇಲ್ಲಿಂದ ಅವರು ನಿಂತರೆ ಕೋಲಾರದ ಜನತೆ ಕೈಹಿಡಿಯುತ್ತಾರಾ? ಬಿಜೆಪಿ, ಜೆಡಿಎಸ್ ನಾಯಕರ ರಣತಂತ್ರ ಮತ್ತು ಪಕ್ಷದ ಭಿನ್ನಾಭಿಪ್ರಾಯಗಳನ್ನು ಮೀರಿ ಗೆಲುವು ದಕ್ಕಿಸಿಕೊಳ್ಳುತ್ತಾರಾ ಎಂಬುದು ಸದ್ಯದ ಪ್ರಶ್ನೆ.
ಸಿದ್ದರಾಮಯ್ಯ ಅವರು ಕೋಲಾರದ ಜನರ ಮೇಲೆ ಭರವಸೆ ಇಟ್ಟುಕೊಂಡಿದ್ದು, ಇಲ್ಲಿಂದಲೇ ಸ್ಪರ್ಧಿಸುವ ಬಗ್ಗೆ ಹಲವು ಬಾರಿ ಹೇಳಿದ್ದಾರೆ. ಮೊನ್ನೆ ನಡೆದ ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆ, ಸಿದ್ದರಾಮಯ್ಯ ಅವರ ಚುನಾವಣಾ ಪ್ರಚಾರ ಎಂದುಕೊಳ್ಳಲಾಗಿತ್ತು. ಆದರೆ, ಸಮಾವೇಶದಲ್ಲಿ ಅಂದುಕೊಂಡಿದ್ದಕ್ಕಿಂತ ಕಡಿಮೆ ಜನಸಂಖ್ಯೆ ಭಾಗಿಯಾಗಿತ್ತು.
ಹೇಗಾದರೂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ, ಜೆಡಿಎಸ್ ಪಣ
ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ ಎಂದಿರುವ ಸಿದ್ದರಾಮಯ್ಯ ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇದನ್ನು ನಾಟಕ ಎಂದು ಕರೆದಿದ್ದಾರೆ. ‘ಸಿದ್ದರಾಮಯ್ಯ ಅವರು ಕೋಲಾರದಿಂದ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಹಳೆ ಮೈಸೂರು ಭಾಗದಿಂದ ಸ್ಪರ್ಧಿಸುತ್ತಾರೆ' ಎಂದು ರಾಜಕೀಯ ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಮಾಡಿದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೋಲಾರಕ್ಕೆ ಸತತವಾಗಿ ಭೇಟಿ ನೀಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಹಲವು ನಾಯಕರು ಕೋಲಾರಕ್ಕೆ ಭೇಟಿ ನೀಡಿ ಸಿದ್ದರಾಮಯ್ಯ ಸೋಲಿಗೆ ತಂತ್ರ ರೂಪಿಸುತ್ತಿದ್ದಾರೆ.
ತಮ್ಮದೇ ಕ್ಷೇತ್ರದ ಬಗ್ಗೆ ಖಚಿತತೇ ಹೊಂದಿಲ್ಲ ಸಿದ್ದರಾಮಯ್ಯ
ವಿಪಕ್ಷ ಸಿದ್ದರಾಮಯ್ಯ ಪದೇ ಪದೇ ಹೇಳಿರುವುದು ಪಕ್ಷದ ಹೈಕಮಾಂಡ್ ಹೇಳಿದರೇ ಕೋಲಾರದಿಂದ ಸ್ಪರ್ಧಿಸುವುದಾಗಿ ಎಂದು. ಅಂದರೆ, ಬಿಜೆಪಿ, ಜೆಡಿಎಸ್ ನಾಯಕರು ಹೇಳುವಂತೆ ಅವರಿಗೆ ತಮ್ಮ ಕ್ಷೇತ್ರದ ಬಗ್ಗೆ ಖಚಿತತೇಯಿಲ್ಲ.
ಕೊನೆ ಕ್ಷಣದಲ್ಲಿ ಹೈಕಮಾಂಡ್ ವರುಣಾದಿಂದಲೂ, ರಾಜ್ಯದ ಬೇರೆ ಕ್ಷೇತ್ರದಿಮದಲೂ ಸ್ಪರ್ಧಿಸಲು ತಿಳಿಸಿದೆ ಎಂದು ಕ್ಷೇತ್ರ ಬದಲಾವಣೆ ಕುಡ ಆಗಬಹುದು. ಈ ವಿಷಯವೂ ಕೂಡ ಪ್ರತಿಪಕ್ಷ ನಾಯಕರಿಗೆ ಸಿದ್ದರಾಮಯ್ಯ ವಿರುದ್ಧ ಆರೋಪಗಳನ್ನು ಮಾಡಲು ಪುಷ್ಠ ನೀಡುತ್ತಿದೆ.
ಅಧಿಕೃತವಾಗಿ ಸಿದ್ದರಾಮಯ್ಯ ಅವರ ಕ್ಷೇತ್ರ ಘೋಷನೆಯಾದ ಮೇಲೆಯೇ ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಸ್ಪಷ್ಟವಾಗಲಿದೆ.
ಸಿದ್ದರಾಮಯ್ಯ ಸ್ಪರ್ಧೆಗೆ ಕಾಂಗ್ರೆಸ್ನಲ್ಲೆ ಭಿನ್ನಾಭಿಪ್ರಾಯ
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುತ್ತೇನೆ ಎನ್ನುವುದಕ್ಕೆ ಮತ್ತೊಂದು ಕಾರಣ ಕುರುಬರ ಮತಗಳು. 2011ರ ಜನಗಣತಿ ಪ್ರಕಾರ ಕೋಲಾರದಲ್ಲಿ ಸುಮಾರು 2.5 ಲಕ್ಷ ಮತದಾರರಿದ್ದಾರೆ. ಇದರಲ್ಲಿ ಸುಮಾರು 30,000 ಕುರುಬ ಮತದಾರರಿದ್ದಾರೆ. ಇದು ಸಿದ್ದರಾಮಯ್ಯನವರಿಗೆ ದೊಡ್ಡ ಮತ ಬ್ಯಾಂಕ್ ಆಗುತ್ತದೆ ಎನ್ನಲಾಗಿತ್ತು.
ಆದರೆ, ಈಗ ಕುರುಬ ಸಂಘದಲ್ಲಿಯೇ ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಭಿನ್ನಾಭಿಪ್ರಾಯವಿದೆ. ಕುಟುಬ ಸಂಘದ ಅಧ್ಯಕ್ಷ ತಂಬಹಳ್ಳಿ ಮುನಿಯಪ್ಪ ಬಿಜೆಪಿ ಟಿಕೆಟ್ ಆಕಾಂಕ್ಷಿ ವರ್ತೂರು ಪ್ರಕಾಶ್ ಅವರನ್ನು ಬೆಂಬಲಿಸಿದ್ದಾರೆ. ಈಗಾಗಲೇ ಸ್ಥಳೀಯವಾಗಿ ಕುರುಬ ನಾಯಕರಿದ್ದು, ಮತ್ತೊಬ್ಬ ಕುಟುಬ ನಾಯಕರು ಜಿಲ್ಲೆಗೆ ಬೇಡ. ಸ್ಥಳೀಯ ನಾಯಕರನ್ನೇ ಗೆಲ್ಲಿಸೋಣ ಎಂದಿದ್ದಾರೆ.
ಇನ್ನು, ಕುರುಬ ಸಂಘದ ಕಾರ್ಯಾಧ್ಯಕ್ಷ ಜೆ.ಕೆ.ಜಯರಾಂ ಕಾಂಗ್ರೆಸ್ಗೂ, ಮಾಜಿ ನಿರ್ದೇಶಕ ಕೆ.ಟಿ.ಅಶೋಕ್ ಜೆಡಿಎಸ್ಗೂ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ. ಈ ಭಿನ್ನಾಭಿಪ್ರಾಯಗಳನ್ನು ದಾಟುವುದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಗೆ ಭಾರಿ ಸವಾಲ್ ಆಗಿದೆ.
ಹಾಲಿ ಶಾಸಕ ಶ್ರೀನಿವಾಸ್ಗೌಡ ಕೂಡ ಸಿದ್ದರಾಮಯ್ಯಗಾಗಿ ಖುಷಿಯಿಂದ ಸ್ಥಾನ ಬಿಟ್ಟಿಲ್ಲ!
ಇತ್ತೀಚೆಗಷ್ಟೇ ಜೆಡಿಎಸ್ನಿಂದ ಕಾಂಗ್ರೆಸ್ಗೆ ಸೇರ್ಪಡೆಯಾಗಿರುವ ಕೋಲಾರದ ಹಾಲಿ ಶಾಸಕ ಶ್ರೀನಿವಾಸ್ಗೌಡ ಅವರು ತಮ್ಮ ಸ್ಥಾನವನ್ನು ಮನಃಪೂರ್ವಕವಾಗಿ ಬಿಟ್ಟುಕೊಟ್ಟಿಲ್ಲ. ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸ್ಥಾನವನ್ನು ಮಾರಾಟ ಮಾಡಲಾಗಿತ್ತು. ಸಿದ್ದರಾಮಯ್ಯ ಅವರು ಅದನ್ನು ಖರೀದಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಆದರೆ ಕಾಂಗ್ರೆಸ್ ಮಾತ್ರ ಕುರುಬ ಮತಗಳ ಜೊತೆಗೆ ಹಾಲಿ ಶಾಸಕ ಶ್ರೀನಿವಾಸ್ಗೌಡ ಅವರ ಗೌಡರ ಮತಗಳು ಕೂಡ ತಮ್ಮ ಕಡೆಗೆ ಬರುವ ಕಾರಣ ಸಿದ್ದರಾಮಯ್ಯ ವಾರ ಗೆಲುವು ಖಚಿತ ಎಂದು ಭಾವಿಸಿದೆ.
2011ರ ಜನಗಣತಿ ಪ್ರಕಾರ ಕೋಲಾರದಲ್ಲಿ ಸುಮಾರು 2.5 ಲಕ್ಷ ಮತದಾರರಿದ್ದಾರೆ. ಈ ಪ್ರದೇಶದಲ್ಲಿ, ಒಕ್ಕಲಿಗರು 40% ರಷ್ಟು, ಸುಮಾರು 35% ಹಿಂದುಳಿದ ವರ್ಗಗಳು ಮತ್ತು ದಲಿತರು, ಮುಸ್ಲಿಮರು ಸಹ 14% ಇದ್ದು, ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಅಂಶವಾಗಿದ್ದಾರೆ. ಇನ್ನು ಕಾಂಗ್ರೆಸ್ನ ಆಂತರಿಕ ಸಮೀಕ್ಷೆಗಳ ಪ್ರಕಾರ, ಕೋಲಾರದಲ್ಲಿ ಸುಮಾರು 30,000 ಕುರುಬ ಮತದಾರರಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ವಾಸಕ್ಕೆ ಮನೆಯೊಂದನ್ನು ಹುಡುಕಿರುವ ಸುದ್ದಿಯಿದೆ. ಕಳೆದ 10 ದಿನಗಳಿಂದ ಮನೆಗಾಗಿ ಕಾಂಗ್ರೆಸ್ ನಾಯಕರು ಹುಡುಕಾಟ ನಡೆಸಿದ್ದರು. ಈಗ ಕೋಲಾರ ನಗರಸಭೆ ವ್ಯಾಪ್ತಿಯ 6ನೇ ವಾರ್ಡ್ನಲ್ಲಿ ಮನೆ ಸಿಕ್ಕಿದೆ. ಇಲ್ಲಿಂದಲೇ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಾರೆ ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿಯ ಬಿ ಶ್ರೀರಾಮುಲು ವಿರುದ್ಧ 1,696 ಮತಗಳ ಕಡಿಮೆ ಅಂತರದಿಂದ ಗೆಲುವು ದಾಖಲಿಸಿದ್ದರು.