ನೋಡೇ ಬಿಡುವಾ.. ಕೋಡಿಶ್ರೀಗಳು ನುಡಿದ ಭವಿಷ್ಯ ನಿಜವಾಗುತ್ತಾ ಎಂದು?
ಕಳೆದ ವರ್ಷ ಜುಲೈ ತಿಂಗಳ ಆದಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರು ಹಾಸನದಲ್ಲಿ ಭವಿಷ್ಯವೊಂದನ್ನು ನುಡಿದಿದ್ದರು. ಅದು ಮಾರ್ಮಿಕವಾಗಿ, ಅಸೆಂಬ್ಲಿ ಚುನಾವಣೆಯ ಬಗ್ಗೆ ನುಡಿದ ಭವಿಷ್ಯವಾಗಿತ್ತು.
ಅವರು ಹೇಳಿದ ಮೊದಲ ಭವಿಷ್ಯದ ಪ್ರಕಾರ, ಮುಂದಿನ ಚುನಾವಣೆಯವರೆಗೂ ಈಗಿನ ಅರಸರಿಗೆ ಏನೂ ತೊಂದರೆಯಿಲ್ಲ ಎಂದು, ಇನ್ನುಳಿದ ಕೆಲವು ತಿಂಗಳ ಅವಧಿಯಲ್ಲಿ ಸಿದ್ದರಾಮಯ್ಯ ಕುರ್ಚಿ ಭದ್ರ ಎಂದು ಪರೋಕ್ಷವಾಗಿ ನುಡಿದಿದ್ದರು. ಅದರಂತೇ, ಐದು ವರ್ಷ ಅಧಿಕಾರ ನಡೆಸಿದ ಎರಡನೇ ಸಿಎಂ ಎನ್ನುವ ಹೆಗ್ಗಳಿಕೆಗೂ ಸಿದ್ದರಾಮಯ್ಯ ಪಾತ್ರರಾಗಿದ್ದರು.
ಕೋಡಿಶ್ರೀಗಳು ನುಡಿದ ಭವಿಷ್ಯವೇನು: ಕುಮಾರಸ್ವಾಮಿ ಮುಂದಿನ ಸಿಎಂ?
ಕರ್ನಾಟಕ ಅಸೆಂಬ್ಲಿ ಚುನಾವಣೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕೋಡಿಶ್ರೀಗಳು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆ ಎಂದು ಹೇಳಿದ್ದರು. ಶ್ರೀಗಳ ಹೇಳಿಕೆಯಂತೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸ್ಥಿತಿ ಏನಾಗಲಿದೆ ಎನ್ನುವುದು ಇನ್ನೇನು ಕೆಲವೇ ಗಂಟೆಯಲ್ಲಿ ಗೊತ್ತಾಗಲಿದೆ.
ತಾಳೇಗರಿ ಆಧಾರಿತ ಭವಿಷ್ಯ ನುಡಿಯುವ ಕೋಡಿಶ್ರೀಗಳು, "ಬಿತ್ತಿದ ಬೆಳಸು ಪರರು ಕೊಯ್ದಾರು" ಎಂದು ಶ್ರೀಗಳು ಹೇಳಿದ್ದರು. ಅದರಂತೇ, ಬಿತ್ತಿದ ಬೀಜ, ಬೆಳೆದು ಬಂದ ಪೈರು ಇದು ಮುಂದಿನ ಅಸೆಂಬ್ಲಿ ಚುನಾವಣೆಯ ಭವಿಷ್ಯ ಎಂದು ಶ್ರೀಗಳು ಹೇಳಿದ್ದರು.
ಪ್ರಮುಖ ಪಕ್ಷದ ರಾಜಕೀಯ ನಾಯಕ ಸಿಎಂ ಆಗುವುದಿಲ್ಲ, ಅನಿರೀಕ್ಷಿತ ವ್ಯಕ್ತಿ ರಾಜ್ಯದ ಅರಸನಾಗಲಿದ್ದಾನೆಂದು ಕೋಡಿಶ್ರೀಗಳು ಹೇಳಿದ್ದರು. ಪ್ರಮುಖ ಪಕ್ಷದ ರಾಜಕೀಯ ನಾಯಕ ಅಂದರೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಎಂದು ಅರ್ಥೈಸಿಕೊಂಡರೆ, ಅನಿರೀಕ್ಷಿತ ವ್ಯಕ್ತಿ ಸಿಎಂ ಆಗುತ್ತಾರೆಂದರೆ ಅದು ಎಚ್ ಡಿ ಕುಮಾರಸ್ವಾಮಿ ಎಂದು ವ್ಯಾಖ್ಯಾನಿಸಲಾಗಿತ್ತು.
ಪಂಚ ಜ್ಯೋತಿಷಿಗಳ 'ಅತಂತ್ರ' ವಿಧಾನಸಭೆ ಭವಿಷ್ಯ ನಿಜವಾಗುವುದೆ?
ಅತಂತ್ರ ಫಲಿತಾಂಶ ಬರುತ್ತೆ ಎನ್ನುವ ಸಮೀಕ್ಷೆ, ಕುಮಾರಸ್ವಾಮಿ 'ಕಿಂಗ್ ಮೇಕರ್' ಆಗುತ್ತಾರೆ ಎನ್ನುವ ಲೆಕ್ಕಾಚಾರದ ನಡುವೆ, ಕೋಡಿಶ್ರೀಗಳು ಭವಿಷ್ಯ ನುಡಿದಂತೆ, ಕುಮಾರಸ್ವಾಮಿ ಕಿಂಗ್ ಆಗುತ್ತಾರೋ, ಕಿಂಗ್ ಮೇಕರ್ ಆಗುತ್ತಾರೋ ಎನ್ನುವುದನ್ನು ತಿಳಿದುಕೊಳ್ಳಲು ಇನ್ನು ಕೆಲವೇ ಗಂಟೆ ಕಾದರೆ ಸಾಕು..