ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಿಜಯೋತ್ಸವ ಆಚರಿಸಲಿದೆ: ಡಿ.ಕೆ. ಶಿವಕುಮಾರ್!
ಬೆಂಗಳೂರು, ಜೂ. 08: ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಈಗಿನಿಂದಲೇ ತಯಾರಿ ಆರಂಭಿಸಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಡಳಿತ ಪಕ್ಷ ಬಿಜೆಪಿಯ ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿ ಕೊಟ್ಟಿದ್ದರು. ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಸವನಗೌಡ ತುರುವಿಹಾಳ ಅವರು ಭರ್ಜರಿ ಗೆಲವು ಸಾಧಿಸಿದ್ದರು. ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿ ಪ್ರಯಾಸದ ಗೆಲವು ಸಾಧಿಸಿದ್ದರು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ತೀವ್ರ ಪೈಪೋಟಿ ಕೊಟ್ಟಿತ್ತು.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದ ಬಸವನಗೌಡ ತುರವಿಹಾಳ ಅವರನ್ನು ಕೆಪಿಸಿಸಿ ವತಿಯಿಂದ ಅಭಿನಂದಿಸಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, "2023ರ ವಿಧಾನಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಲು ಪಕ್ಷದ ಪ್ರತಿಯೊಬ್ಬರೂ ಅವಿರತವಾಗಿ ಶ್ರಮಿಸುತ್ತಿದ್ದು, ಪಕ್ಷ ಗೆಲುವು ಸಾಧಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ನನ್ನ ಬೆಂಬಲವಿದೆ. ಈ ಕಷ್ಟದ ಸಮಯದಲ್ಲಿ ಯಾರೂ ಕೂಡ ಒಬ್ಬಂಟಿ ಎಂದು ಭಾವಿಸಬಾರದು" ಎಂದು ಶಿವಕುಮಾರ್ ಅವರು ತಿಳಿಸಿದರು.
ಬೆಳಗಾವಿಯಲ್ಲಿ ಸ್ವಲ್ಪದರಲ್ಲಿ ಎಡವಿದ್ದೇವೆ. ಹೀಗಾಗಿ ಕಡಿಮೆ ಅಂತರದಲ್ಲಿ ಸೋತಿದ್ದೇವೆ. ಆದರೆ ರಾಷ್ಟ್ರಕ್ಕೆ ಒಂದು ದೊಡ್ಡ ಸಂದೇಶ ಹೋಗಿದೆ. ನಮ್ಮ ಶಕ್ತಿ ಏನೆಂದು ತೋರಿಸಿ ಕೊಟ್ಟಿದ್ದೇವೆ. ಬಸವಕಲ್ಯಾಣದಲ್ಲೂ ನಮಗೆ ಗೆಲ್ಲುವ ಅವಕಾಶವಿತ್ತು. ಅಲ್ಲಿ ನಮ್ಮ ನಾಯಕರು ಆಸ್ಪತ್ರೆ ಸೇರಿಬಿಟ್ಟರು. ಹೀಗಾಗಿ ಅಲ್ಲಿ ಸೋಲ ಬೇಕಾಯ್ತು. ಸೋಲಿನ ಬಗ್ಗೆ ಒಂದು ತಂಡ ಕಳಿಸಿ ಮಾಹಿತಿಯನ್ನು ಪಡೆಯಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
'224 ವಿಧಾನಸಭಾ ಕ್ಷೇತ್ರದಲ್ಲಿ ಲಸಿಕಾ ಶಿಬಿರಗಳನ್ನು ನಡೆಸಲು ಮತ್ತು ಕೋವಿಡ್ನಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಸಹಾಯ ಮಾಡಲು ಎಲ್ಲ 31 ಜಿಲ್ಲೆಗಳಲ್ಲಿ ಕಾರ್ಯಕರ್ತರು ಸಿದ್ಧವಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.
Recommended Video
ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ: ಡಿ.ಕೆ. ಶಿವಕುಮಾರ್ ಅವರು ಇಂದು ಮುಂಜಾನೆ ಆಸ್ಪತ್ರೆಯಿಂದ ಗುಣಮುಖರಾಗಿ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದರು. "ಆಸ್ಪತ್ರೆಯಿಂದ ಗುಣಮುಖರಾಗಿ ಆಗಮಿಸಿದ ನನ್ನ ಆತ್ಮೀಯರಾದ ಸಿದ್ದರಾಮಯ್ಯ ಅವರು ರಾಜ್ಯದ ಜನರ ಸೇವೆಗೆ ಸಿದ್ಧರಾಗಿದ್ದಾರೆ. ಆರ್ಥಿಕ ಹಿಂಜರಿತದ ನಡುವೆಯೂ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಆಶಾದಾಯಕ ಮಾತುಕತೆ ನಡೆಸಿದ್ದೇವೆ" ಎಂದು ಟ್ವೀಟ್ ಮೂಲಕ ಡಿಕೆಶಿ ತಿಳಿಸಿದ್ದಾರೆ.