ಮತ ಚಲಾವಣೆ ಮಾಡಿದ ಪ್ರಮುಖ ನಾಯಕರು
ಬೆಂಗಳೂರು, ಮೇ 12: ತಮ್ಮ ಮುಂದಿನ ಐದು ವರ್ಷದ ಭವಿಷ್ಯ ನಿರ್ಧಾರದ ಗಳಿಗೆಗಾಗಿ ಸುಮಾರು ನಾಲ್ಕೈದು ತಿಂಗಳಿಂದ ಕಸರತ್ತು ನಡೆಸುತ್ತಿರುವ ರಾಜಕಾರಣಿಗಳಲ್ಲಿನ ಉದ್ವೇಗ, ಕಾತರ ದ್ವಿಗುಣಗೊಂಡಿದೆ.
ನಿರಂತರ ಪ್ರಚಾರ ಮಾಡಿ ತಮಗೆ ಮತಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಶನಿವಾರ ಮತದಾರರಾಗಿ ಎಲ್ಲರಂತೆ ಸರತಿಯಲ್ಲಿ ನಿಂತು ಮತಚಲಾಯಿಸುವ ಕರ್ತವ್ಯ ಪೂರೈಸಿದರು.
LIVE:5 ಗಂಟೆ ಹೊತ್ತಿಗೆ ರಾಜ್ಯದ ಒಟ್ಟು ಶೇಕಡವಾರು ಮತದಾನ ಪ್ರಮಾಣ 64%
ಗುರುವಾರ ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ಒಂದು ದಿನ ವಿರಾಮದ ಮೂಡ್ನಲ್ಲಿದ್ದ ಅಭ್ಯರ್ಥಿಗಳು ಶನಿವಾರ ಮತ್ತೆ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದರು. ಅನೇಕ ಅಭ್ಯರ್ಥಿಗಳು ಬೆಳಿಗ್ಗೆಯೇ ದೇವರ ಪೂಜೆ ಸಲ್ಲಿಸಿ ಬಳಿಕ ಮತಗಟ್ಟೆಗೆ ತೆರಳಿದರು.
ಬೇರೆ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ ಸಿದ್ದರಾಮಯ್ಯ,ರಾಮುಲು,ಎಚ್ಡಿಕೆ!
ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಮತದಾರರಲ್ಲಿ ಉತ್ಸಾಹ ತುಂಬಲು ಮುಂದಾದ ಅಭ್ಯರ್ಥಿಗಳು ಮತ ಚಲಾವಣೆ ಮಾಡಿ ಅದರ ಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವಂತೆ ನೋಡಿಕೊಂಡರು. ಕೆಲವು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ಕ್ಷೇತ್ರ ಒಂದೆಡೆಯಿದ್ದರೆ, ಮತದಾನದ ಹಕ್ಕು ಇರುವ ಕ್ಷೇತ್ರ ಬೇರೆಡೆ ಇದೆ. ಹೀಗಾಗಿ ರಾಜಕೀಯದ ಒತ್ತಡ, ಟೆನ್ಷನ್ಗಳ ಮಧ್ಯೆಯೇ ತಮ್ಮ ಮತಗಟ್ಟೆಗೆ ತೆರಳಿ ಮತ ಹಾಕಿದರು.
In Pics: ಕರ್ನಾಟಕದ ಭವ್ಯ ಭವಿತವ್ಯಕ್ಕಾಗಿ ಮತದಾನದ ಯಜ್ಞ
ಸ್ಪರ್ಧೆ ಎರಡು ಕಡೆ: ಮತದಾನ ಬೇರೆಡೆ
ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾಗಲಕೋಟೆಯ ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧೆಗೆ ಇಳಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಎರಡೂ ಕ್ಷೇತ್ರಗಳಲ್ಲಿ ಮತ ಚಲಾಯಿಸುವ ಹಕ್ಕಿಲ್ಲ. ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ವರುಣಾ ಕ್ಷೇತ್ರದಲ್ಲಿ. ಸಿದ್ದರಾಮಯ್ಯ ಅವರು ಈ ಬಾರಿ ವರುಣಾ ಕ್ಷೇತ್ರವನ್ನು ತಮ್ಮ ಮಗನಿಗೆ ಬಿಟ್ಟುಕೊಟ್ಟಿದ್ದಾರೆ.
ಮಗ ಯತೀಂದ್ರ ಅಭ್ಯರ್ಥಿಯಾಗಿರುವ ವರುಣಾ ಕ್ಷೇತ್ರದ ಸಿದ್ದರಾಮನ ಹುಂಡಿಯಲ್ಲಿ ಸಿದ್ದರಾಮಯ್ಯ ಅವರು ಮಗನೊಂದಿಗೆ ತೆರಳಿ ಮತದಾನ ಮಾಡಿದರು.
ಶಿಕಾರಿಪುರದಲ್ಲಿ ಬಿಎಸ್ವೈ ಪೋಸ್!
ಸದ್ಯ ಶಿವಮೊಗ್ಗ ಜಿಲ್ಲೆಯಿಂದ ಲೋಕಸಭೆಯನ್ನು ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುವ ಹುಮ್ಮಸ್ಸಿನಿಂದ ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ. ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು, ಶಿಕಾರಿಪುರದ ದೇವಸ್ಥಾನವೊಂದಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಕುಟುಂಬದವರೊಂದಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ತೋರು ಬೆರಳಿನ ಮೇಲಿನ ಶಾಯಿಯನ್ನು ಪ್ರದರ್ಶಿಸಿ ಫೋಟೊಗೆ ಪೋಸ್ ನೀಡಿದ ಅವರು ಬಳಿಕ ಮತ್ತೆ ರಾಜಕೀಯ ಲೆಕ್ಕಾಚಾರದ ಚರ್ಚೆಗೆ ಮರಳಿದರು.
ಆಶೀರ್ವಾದ ಪಡೆದು ಮತ ಹಾಕಿದ ಎಚ್ಡಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆಯೇ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಂಡಿರುವ ಕುಮಾರಸ್ವಾಮಿ, ಕಳೆದ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರ ಮತದಾನದ ಹಕ್ಕು ರಾಮನಗರ ಕ್ಷೇತ್ರದಲ್ಲಿದೆ. ರಾಮನಗರದ ಕೇತನಾಗನಹಳ್ಳಿಯ ಮತಗಟ್ಟೆ ಸಂಖ್ಯೆ 232ರಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಅವರು ಮತ ಚಲಾಯಿಸಿದರು. ಅದಕ್ಕೂ ಮೊದಲು ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ತೆರಳಿದ ಕುಮಾರಸ್ವಾಮಿ ದಂಪತಿ, ಸ್ವಾಮೀಜಿಗಳ ಆಶೀರ್ವಾದ ಪಡೆದು ಬಳಿಕ ರಾಮನಗರಕ್ಕೆ ಪ್ರಯಾಣ ಬೆಳೆಸಿದರು.
ಪತ್ನಿ, ಮಗಳೊಂದಿಗೆ ಡಿಕೆಶಿ ಮತ
ಸಚಿವ ಮತ್ತು ಕಾಂಗ್ರೆಸ್ನ ಪ್ರಭಾವಿ ಮುಖಂಡ ಡಿ.ಕೆ. ಶಿವಕುಮಾರ್, ತಮ್ಮ ಸ್ವಗ್ರಾಮವಾದ ದೊಡ್ಡ ಆಲಹಳ್ಳಿಯಲ್ಲಿ ಮತ ಚಲಾವಣೆ ಮಾಡಿದರು. ಈ ಸಂದರ್ಭದಲ್ಲಿ ಡಿಕೆಶಿ ಅವರ ಪತ್ನಿ ಉಷಾ ಮತ್ತು ಮಗಳು ಐಶ್ವರ್ಯಾ ಕೂಡ ಹಾಜರಿದ್ದರು.
ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರು.
ದೇವೇಗೌಡರ ಕುಟುಂಬದಿಂದ ಹಕ್ಕು ಚಲಾವಣೆ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕುಟುಂಬ ಸಮೇತ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು. ಪತ್ನಿ ಚೆನ್ನಮ್ಮ, ಮಗ ಎಚ್.ಡಿ. ರೇವಣ್ಣ, ಮೊಮ್ಮಗ ಪ್ರಜ್ವಲ್ ರೇವಣ್ಣ ಸೇರಿದಂತೆ ಇತರರೊಂದಿಗೆ ಹಾಸನ ಜಿಲ್ಲೆಯ ಹೊಳೆನರಸೀಪುರದ ಮತಗಟ್ಟೆ 224ರಲ್ಲಿ ದೇವೇಗೌಡ ಅವರು ಮತಚಲಾಯಿಸಿದರು.
ದೇವೇಗೌಡ ಅವರ ಇನ್ನೊಬ್ಬ ಮಗ ಕುಮಾರಸ್ವಾಮಿ ಮತ್ತು ಸೊಸೆ ಅನಿತಾ ಕುಮಾರಸ್ವಾಮಿ ಅವರ ಹೆಸರು ರಾಮನಗರದ ಮತದಾರರ ಪಟ್ಟಿಯಲ್ಲಿದೆ. ಉಳಿದಂತೆ ಅವರ ಕುಟುಂಬದ ಸದಸ್ಯರು ಹೊಳೆನರಸೀಪುರದಲ್ಲಿಯೇ ಮತ ಚಲಾವಣೆ ಮಾಡಿದರು.
ಕುಟುಂಬದ ಸದಸ್ಯರ ಜತೆ ಅನಂತಕುಮಾರ್ ಮತದಾನ
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅವರು ಶನಿವಾರ ಮತದಾನದ ಹಕ್ಕು ಚಲಾಯಿಸಿದರು.
ಪತ್ನಿ ತೇಜಸ್ವಿನಿ ಅನಂತಕುಮಾರ್, ಮಗಳು ಐಶ್ವರ್ಯಾ ಅವರೊಂದಿಗೆ ಜಯನಗರದ ಮತಗಟ್ಟೆಯಲ್ಲಿ ಅನಂತಕುಮಾರ್ ಅವರು ಮತಚಲಾವಣೆ ಮಾಡಿದರು. ಬಳಿಕ ಎಲ್ಲರೂ ಮತಚಲಾವಣೆ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಶಾಯಿ ಗುರುತು ತೋರಿಸಿದ ನಾಯಕರು
ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎಚ್. ವಿಶ್ವನಾಥ್, ಸಂಸದೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಎಂ.ಬಿ. ಪಾಟೀಲ್, ಆರ್ವಿ ದೇಶಪಾಂಡೆ, ಬಾಲಚಂದ್ರ ಜಾರಕಿಹೊಳಿ, ಸಂಸದ ಶ್ರೀರಾಮುಲು ಮುಂತಾದವರು ಮತ ಚಲಾಯಿಸಿದರು.