ಕಾಂಗ್ರೆಸ್ ನಿಂದ 35 ಪ್ರತ್ಯೇಕ ಪ್ರಣಾಳಿಕೆ ಏಕೆ? ಇಲ್ಲಿದೆ ಉತ್ತರ
ಬೆಂಗಳೂರು, ಏಪ್ರಿಲ್ 05: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಬಿರುಸಿನ ಚಟುವಟಿಗೆ ಮನೆಮಾಡಿದೆ. ಒಂದೆಡೆ ಅಭ್ಯರ್ಥಿಗಳ ಆಯ್ಕೆಯ ತಲೆನೋವಾದರೆ, ಇನ್ನೊಂದೆಡೆ ಪ್ರಣಾಳಿಕೆ ತಯಾರಿಸುವ ಚಿಂತೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ರಾಜಕೀಯ ಪಕ್ಷಗಳು ಆಯಾ ರಾಜ್ಯದ ಸಮಸ್ಯೆಗಳು, ಅಗತ್ಯಗಳನ್ನು ಅರಿತುಕೊಂಡು ಪ್ರಣಾಳಿಕೆ ಸಿದ್ಧಪಡಿಸುತ್ತವೆ. ಸಾಮಾನ್ಯವಾಗಿ ರಾಜ್ಯದ ಒಟ್ಟಾರೆ ಅಭಿವೃದ್ಧಿಯನ್ನು ಮನಗಂಡು ಒಂದು ಪಕ್ಷ ಒಂದು ಪ್ರಣಾಳಿಕೆಯನ್ನಷ್ಟೇ ಬಿಡುಗಡೆ ಮಾಡುತ್ತಿದ್ದುದು ರೂಢಿ. ಆದರೆ ಈ ಬಾರಿ ಕಾಂಗ್ರೆಸ್ ಬರೋಬ್ಬರಿ 35 ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು ಚಿಂತಿಸಿದ್ದು, ಪ್ರಣಾಳಿಕೆ ಕೆಲವೇ ದಿನಗಳಲ್ಲಿ ಮತದಾರರನ್ನು ತಲುಪಲಿದೆ.
ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ ನಿಂದ ಬಿಡುಗಡೆಯಾಗಲಿದೆ ವಿಶಿಷ್ಟ ಪ್ರಣಾಳಿಕೆ
ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12 ರಂದು ನಡೆಯಲಿದ್ದು, ಮೇ 15 ರಂದು ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಹೊರಬರಲಿರುವ ಕಾಂಗ್ರೆಸ್ ಪ್ರಣಾಳಿಕೆ ನಿಸ್ಸಂದೇಹವಾಗಿ ಜನಸ್ನೇಹಿಯಾಗಿರಲಿದೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೋಯ್ಲಿ ಹೇಳಿದ್ದಾರೆ.
ನವಕರ್ನಾಟಕ ನಿರ್ಮಾಣಕ್ಕೆ ಬಿಜೆಪಿಯಿಂದ ಅಭಿಪ್ರಾಯ ಸಂಗ್ರಹಣೆ
ಪ್ರತ್ಯೇಕ ಪ್ರಣಾಳಿಕೆಯ ಹಿಂದಿನ ಗುಟ್ಟು
ಹೀಗೆ ಒಂದೇ ಚುನಾವಣೆಯಲ್ಲಿ ಬೇರೆ ಬೇರೆ ಪ್ರಣಾಳಿಕೆ ಬಿಡುಗಡೆ ಮಾಡುವ ಯೋಜನೆಗೆ ಮೊದಲು ನಾಂದಿ ಹಾಡಿದ್ದು ಆಮ್ ಆದ್ಮಿ ಪಕ್ಷ. ದೆಹಲಿಯಲ್ಲಿ 2015 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೂ ಎಎಪಿ ಪ್ರತ್ಯೇಕ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿತ್ತು. ಇದು ಜನರನ್ನೂ ಸೆಳೆದಿತ್ತು ಕೂಡ. ಆಪ್ ಯಶಸ್ಸನ್ನೇ ಮನಸ್ಸಿನಲ್ಲಿಟ್ಟುಕೊಂಡ ಕಾಂಗ್ರೆಸ್ ಕರ್ನಾಟಕದಲ್ಲೂ ಅದೇ ಪ್ರಯೋಗಕ್ಕೆ ಮುಂದಾಗಿದೆ. ಒಟ್ಟು 30 ಜಿಲ್ಲೆಗಳಿಗೂ ಪ್ರತ್ಯೇಕ ಪ್ರಣಾಳಿಕೆಗಳು ಮಾತ್ರವಲ್ಲದೆ, ಇಡೀ ರಾಜ್ಯಕ್ಕಾಗಿ ಒಂದು ಸಮಗ್ರ ಪ್ರಣಾಳಿಕೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡಲಿದೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಮೋಯ್ಲಿ ಹೇಳಿದ್ದಾರೆ.
ಪ್ರತ್ಯೇಕ ಪ್ರಣಾಳಿಕೆ ಏಕೆ?
ಪ್ರತ್ಯೇಕ ಪ್ರಣಾಳಿಕೆಯನ್ನು ರಚಿಸುತ್ತಿರುವ ಉದ್ದೇಶ ಒಂದೇ. ಒಂದು ಸಮಗ್ರ ಪ್ರಣಾಳಿಕೆಯಿಂದ ರಾಜ್ಯದ ಒಟ್ಟಾರೆ ಸಮಸ್ಯೆಗಳು ಮತ್ತು ಅದರ ಅಭಿವರದ್ಧಿಗೆ ಪಕ್ಷ ಬದ್ಧವಾಗಿದೆ ಎಂಬುದನ್ನು ಅರ್ಥಮಾಡಿಸುವುದು ಕಷ್ಟ. ಕರ್ನಾಟಕದ ಮೂವತ್ತು ಜಿಲ್ಲೆಗಳೂ ಬೇರೆ ಬೇರೆಯದೇ ರೀತಿಯ ಸಮಸ್ಯೆ ಎದುರಿಸುತ್ತಿವೆ. ಅವುಗಳ ಅಭಿವೃದ್ಧಿಯ ಮಾನದಂಡಗಳೂ ಬೇರೆ ಬೇರೆ. ಆದ್ದರಿಂದ ಆಯಾ ಜಿಲ್ಲೆಗಳಿಗೆ ಹೊಂದುವ, ಆಯಾ ಜಿಲ್ಲೆಗೆ ಅಗತ್ಯವಾದ ಪ್ರಣಾಳಿಕೆಗಳನ್ನು ರಚಿಸುವುದು ತಮ್ಮ ಉದ್ದೇಶ ಎಂಬುದು ಕಾಂಗ್ರೆಸ್ ಹೇಳಿಕೆ.
ಗುಜರಾತ್ ಚುನಾವಣೆಯಲ್ಲಿ ಒಂದೇ ಪ್ರಣಾಳಿಕೆ
ಕಳೆದ ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸಮಗ್ರ ಪ್ರಣಾಳಿಕೆಯನ್ನಷ್ಟೇ ಬಿಡುಗಡೆ ಮಾಡಿತ್ತು. ಆದರೆ ಅದಕ್ಕೂ ಮುನ್ನ ಅಲ್ಲಿನ ಪ್ರಣಾಳಿಕೆ ಸಮಿತಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳು, ರೈತರು, ಕಾರ್ಯಕರ್ತರು, ಎನ್ ಜಿಒಗಳು, ಬುಡಕಟ್ಟು ಮತ್ತು ದಲಿತ ಸಂಘಟನೆಗಳು, ಮಹಿಳಾ ಸ್ವಸಹಾಯ ಸಂಘಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿ, ಪ್ರಣಾಳಿಕೆ ಸಿದ್ಧಪಡಿಸಿತ್ತು. ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದ್ದರೆ ಅದಕ್ಕೆ ಪ್ರಣಾಳಿಕೆಯೂ ಒಂದು ಕಾರಣ ಎಂದರೆ ನಂಬಲೇಬೇಕು!
ರಾಜಸ್ಥಾನ, ಮಧ್ಯಪ್ರದೇಶಕ್ಕೂ ಅನ್ವಯ?
ಕಾಂಗ್ರೆಸ್ ನ ಪ್ರತ್ಯೇಕ ಪ್ರಣಾಳಿಕೆಯ ಪ್ರಯೋಗ ಕರ್ನಾಟಕದಲ್ಲಿ ಯಶಸ್ವಿಯಾದರೆ ಅದನ್ನು ಮುಂಬರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಚುನಾವಣೆಯಲ್ಲೂ ಅಳವಡಿಸಿಕೊಳ್ಳಲು ಕಾಂಗ್ರೆಸ್ ಯೊಜನೆ ಹಾಕಿದೆ. ಆಯಾ ರಾಜ್ಯಗಳ ವಿವಿಧ ಸಮುದಾಯದ, ಸಂಘಟನೆಯ ಜನರ ಸಲಹೆ-ಸೂಚನೆಗಳನ್ನೊಳಗೊಂಡ ಪ್ರಣಾಳಿಕೆ ಜನಸ್ನೇಹಿಯಾಗಿದ್ದು, ಕರ್ನಾಟಕದಲ್ಲೂ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಈ ಪ್ರಣಾಳಿಕೆ ನೆರವಾಗಲಿದೆ ಎಂಬುದುದ ಕಾಂಗ್ರೆಸ್ ವಿಶ್ವಾಸ.