ಕಾಂಗ್ರೆಸ್ಸಿನ ಜನಸ್ನೇಹಿ, ಪ್ರದೇಶವಾರು ಪ್ರಣಾಳಿಕೆ ಹಿಂದಿನ ಗುಟ್ಟು
ಬೆಂಗಳೂರು, ಏಪ್ರಿಲ್ 23: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿರುವ ಕಾಂಗ್ರೆಸ್ ಈಗ ಪ್ರಣಾಳಿಕೆ ರಚನೆ, ಪ್ರಚಾರದತ್ತ ಗಮನ ಹರಿಸಿದೆ. ಕಳೆದ ನಾಲ್ಕು ತಿಂಗಳುಗಳಿಂದ ಪ್ರಣಾಳಿಕೆ ತಯಾರಿ ಭರ್ಜರಿಯಾಗಿ ಸಾಗಿದೆ. ಏಪ್ರಿಲ್ 27ರಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮೇ 12 ರಂದು ನಡೆಯಲಿದ್ದು, ಮೇ 15 ರಂದು ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಹೊರಬರಲಿರುವ ಕಾಂಗ್ರೆಸ್ ಪ್ರಣಾಳಿಕೆ ನಿಸ್ಸಂದೇಹವಾಗಿ ಜನಸ್ನೇಹಿಯಾಗಿದೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೋಯ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ
ಸಂಸದ ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಯು ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಸುಮಾರು 200 ಕ್ಕೂ ಹೆಚ್ಚು ಭರವಸೆಗಳಿರಲಿದೆ. ನಿರೀಕ್ಷೆಯಂತೆ ಸಿದ್ದರಾಮಯ್ಯ ಅವರ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಉಲ್ಲೇಖಿಸಿ, ಹೊಸ ಯೋಜನೆಗಳನ್ನು ಕೂಡಾ ಸೇರಿಸಲಾಗಿದೆ.
ಪ್ರಣಾಳಿಕೆಯನ್ನು ರಾಜ್ಯದ ನಾಲ್ಕು ಸ್ಥಳಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಅದರಂತೆ ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಣಾಳಿಕೆ ಬಿಡುಗಡೆ ಮಾಡಿದರೆ. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಬೆಂಗಳೂರಿನಲ್ಲಿ ಸ್ಯಾಂ ಪಿತ್ರೋಡಾ ಹಾಗೂ ಬೆಳಗಾವಿಯಲ್ಲಿ ಶಶಿ ತರೂರ್ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.ಈ ಬಾರಿ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು ಚಿಂತಿಸಿದ್ದು, ಜಿಲ್ಲೆಗೊಂದರಂತೆ ಪ್ರತ್ಯೇಕ ಪ್ರಣಾಳಿಕೆಯನ್ನುನೀಡಲಾಗಿದೆ. ಏನಿದರ ಉದ್ದೇಶ ಮುಂದೆ ಓದಿ...
ಪ್ರತ್ಯೇಕ ಪ್ರಣಾಳಿಕೆ ಏಕೆ?
ಒಂದು ಸಮಗ್ರ ಪ್ರಣಾಳಿಕೆಯಿಂದ ರಾಜ್ಯದ ಒಟ್ಟಾರೆ ಸಮಸ್ಯೆಗಳು ಮತ್ತು ಅದರ ಅಭಿವೃದ್ಧಿಗೆ ಪಕ್ಷ ಬದ್ಧವಾಗಿದೆ ಎಂಬುದನ್ನು ಅರ್ಥಮಾಡಿಸುವುದು ಕಷ್ಟ. ಕರ್ನಾಟಕದ ಮೂವತ್ತು ಜಿಲ್ಲೆಗಳೂ ಬೇರೆ ಬೇರೆಯದೇ ರೀತಿಯ ಸಮಸ್ಯೆ ಎದುರಿಸುತ್ತಿವೆ. ಅವುಗಳ ಅಭಿವೃದ್ಧಿಯ ಮಾನದಂಡಗಳೂ ಬೇರೆ ಬೇರೆ. ಆದ್ದರಿಂದ ಆಯಾ ಜಿಲ್ಲೆಗಳಿಗೆ ಹೊಂದುವ, ಆಯಾ ಜಿಲ್ಲೆಗೆ ಅಗತ್ಯವಾದ ಪ್ರಣಾಳಿಕೆಗಳನ್ನು ರಚಿಸುವುದು ತಮ್ಮ ಉದ್ದೇಶ ಎಂಬುದು ಕಾಂಗ್ರೆಸ್ ಹೇಳಿದೆ.
ಪ್ರತ್ಯೇಕ ಪ್ರಣಾಳಿಕೆಯ ಹಿಂದಿನ ಗುಟ್ಟು
ಹೀಗೆ ಒಂದೇ ಚುನಾವಣೆಯಲ್ಲಿ ಬೇರೆ ಬೇರೆ ಪ್ರಣಾಳಿಕೆ ಬಿಡುಗಡೆ ಮಾಡುವ ಯೋಜನೆಗೆ ಮೊದಲು ನಾಂದಿ ಹಾಡಿದ್ದು ಆಮ್ ಆದ್ಮಿ ಪಕ್ಷ. ದೆಹಲಿಯಲ್ಲಿ 2015 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೂ ಎಎಪಿ ಪ್ರತ್ಯೇಕ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿತ್ತು. ಇದು ಜನರನ್ನೂ ಸೆಳೆದಿತ್ತು ಕೂಡ. ಆಪ್ ಯಶಸ್ಸನ್ನೇ ಮನಸ್ಸಿನಲ್ಲಿಟ್ಟುಕೊಂಡ ಕಾಂಗ್ರೆಸ್ ಕರ್ನಾಟಕದಲ್ಲೂ ಅದೇ ಪ್ರಯೋಗಕ್ಕೆ ಮುಂದಾಗಿದೆ. ಒಟ್ಟು 30 ಜಿಲ್ಲೆಗಳಿಗೂ ಪ್ರತ್ಯೇಕ ಪ್ರಣಾಳಿಕೆಗಳು ಮಾತ್ರವಲ್ಲದೆ, ಇಡೀ ರಾಜ್ಯಕ್ಕಾಗಿ ಒಂದು ಸಮಗ್ರ ಪ್ರಣಾಳಿಕೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡಲಿದೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಮೊಯ್ಲಿ ಹೇಳಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಒಂದೇ ಪ್ರಣಾಳಿಕೆ
ಕಳೆದ ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸಮಗ್ರ ಪ್ರಣಾಳಿಕೆಯನ್ನಷ್ಟೇ ಬಿಡುಗಡೆ ಮಾಡಿತ್ತು. ಆದರೆ ಅದಕ್ಕೂ ಮುನ್ನ ಅಲ್ಲಿನ ಪ್ರಣಾಳಿಕೆ ಸಮಿತಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳು, ರೈತರು, ಕಾರ್ಯಕರ್ತರು, ಎನ್ ಜಿಒಗಳು, ಬುಡಕಟ್ಟು ಮತ್ತು ದಲಿತ ಸಂಘಟನೆಗಳು, ಮಹಿಳಾ ಸ್ವಸಹಾಯ ಸಂಘಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿ, ಪ್ರಣಾಳಿಕೆ ಸಿದ್ಧಪಡಿಸಿತ್ತು. ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದ್ದರೆ ಅದಕ್ಕೆ ಪ್ರಣಾಳಿಕೆಯೂ ಒಂದು ಕಾರಣ ಎನ್ನಲಾಗಿದೆ.
ಕರ್ನಾಟಕ ಪ್ರಣಾಳಿಕೆಯೇ ಮಾದರಿ
ಕಾಂಗ್ರೆಸ್ ನ ಪ್ರತ್ಯೇಕ ಪ್ರಣಾಳಿಕೆಯ ಪ್ರಯೋಗ ಕರ್ನಾಟಕದಲ್ಲಿ ಯಶಸ್ವಿಯಾದರೆ ಅದನ್ನು ಮುಂಬರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಚುನಾವಣೆಯಲ್ಲೂ ಅಳವಡಿಸಿಕೊಳ್ಳಲು ಕಾಂಗ್ರೆಸ್ ಯೊಜನೆ ಹಾಕಿದೆ. ಆಯಾ ರಾಜ್ಯಗಳ ವಿವಿಧ ಸಮುದಾಯದ, ಸಂಘಟನೆಯ ಜನರ ಸಲಹೆ-ಸೂಚನೆಗಳನ್ನೊಳಗೊಂಡ ಪ್ರಣಾಳಿಕೆ ಜನಸ್ನೇಹಿಯಾಗಿದ್ದು, ಕರ್ನಾಟಕದಲ್ಲೂ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಈ ಪ್ರಣಾಳಿಕೆ ನೆರವಾಗಲಿದೆ ಎಂಬುದು ಕಾಂಗ್ರೆಸ್ ವಿಶ್ವಾಸ.