ಕರ್ನಾಟಕ ರಾಜಕೀಯದ ಚಿತ್ರಣ ಬದಲಿಸಬಲ್ಲ ಆ 10 ಕ್ಷೇತ್ರಗಳು
Recommended Video
ಬೆಂಗಳೂರು, ಏಪ್ರಿಲ್ 02: ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಅಖಾಡ ಸಜ್ಜಾಗಿದೆ. ಎಲ್ಲ ರಾಜಕೀಯ ಪಕ್ಷಗಳೂ ಸೆಣಸಾಟಕ್ಕೆ ಸಿದ್ಧವಾಗಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಬಳ್ಳಾರಿ, ಚಾಮುಂಡೇಶ್ವರಿ, ಶಿಕಾರಿಪುರ, ವರುಣ, ರಾಮನಗರ ಸೇರಿದಂತೆ ಕರ್ನಾಟಕದ ಹಲವು ಕ್ಷೇತ್ರಗಳು ಎಂದಿಗೂ ಮಹತ್ವದ ಸ್ಥಾನ ಗಳಿಸಿವೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್ ಡಿ ಕುಮಾರಸ್ವಾಮಿಯವರು ಪ್ರತಿನಿಧಿಸುವ ಕ್ರಮವಾಗಿ ಶಿಕಾರಿಪುರ ಮತ್ತು ರಾಮನಗರ ಕ್ಷೇತ್ರಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಕ್ಷೇತ್ರ ಬದಲಿಸಿ ಪ್ರತಿನಿಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರ ಮುಂತಾದವುಗಳ ಮೇಲೆ ಈಗಾಗಲೇ ಎಲ್ಲರ ಚಿತ್ತ ನೆಟ್ಟಿದೆ.
2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಿಸಬಲ್ಲ 10 ಪ್ರಮುಖ ಕ್ಷೇತ್ರಗಳು ಯಾವವು? ಈ ಕುರಿತ ಕಿರು ಮಾಹಿತಿ ಇಲ್ಲಿದೆ.
ಚಾಮುಂಡೇಶ್ವರಿ
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸದ್ಯಕ್ಕೆ ಜೆಡಿಎಸ್ ನ ಜಿ ಟಿ ದೇವೇಗೌಡರು ಶಾಸಕರು. ಈ ಬಾರಿ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಖಚಿತವಾದ ನಂತರ ಜೆಡಿಎಸ್ ಗೆ ಕೊಂಚ ತಲೆನೋವಾಗಿದ್ದು ಸತ್ಯ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಎದುರಲ್ಲಿ ಬೇರೊಬ್ಬ 'ಡಮ್ಮಿ' ಅಭ್ಯರ್ಥಿಯನ್ನು ನಿಲ್ಲಿಸಿ, ಜಿ ಟಿ ದೇವೇಗೌಡರನ್ನು ಬೇರೆಡೆಗೆ ನಿಲ್ಲಿಸುವ ಕುರಿತು ಚಿಂತನೆ ನಡೆದಿತ್ತಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಸಮರ್ಥವಾಗಿ ಎದುರಿಸಬಲ್ಲೆ ಎಂದು ಜಿ ಟಿ ದೇವೇಗೌಡರೇ ಅಭಯ ನೀಡಿದ್ದರಿಂದ ಅವರೇ ಮುಖ್ಯಮಂತ್ರಿಗಳಿಗೆ ಎದುರಾಳಿಯಾಗಿ ನಿಂತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಲವು ಬಾರಿ ಸ್ಪರ್ಧಿಸಿ ಗೆದ್ದಿರುವ ಸಿದ್ದರಾಮಯ್ಯ, 2006 ರ ಉಪಚುನಾವಣೆಯಲ್ಲೂ ಇದೇ ಕ್ಷೇತ್ರದಿಂದ ಜಯಗಳಿಸಿದ್ದರು. ಆದ್ದರಿಂದ ಅವರಿಗೆ ಈ ಕ್ಷೇತ್ರ ಹಳತು. ಅದೂ ಅಲ್ಲದೆ ಮುಖ್ಯಮಂತ್ರಿಯೂ ಆಗಿರುವ ಕಾರಣಕ್ಕೆ ಅವರ ಗೆಲುವಿನ ಸಾಧ್ಯತೆ ಹೆಚ್ಚು.
ಹಾಲಪ್ಪ ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎಂದ ಸಿದ್ದರಾಮಯ್ಯ
ಶಿಕಾರಿಪುರ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕರ್ನಾಟಕದ ರಾಜಕಾರಣದಲ್ಲೇ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಈ ಕ್ಷೇತ್ರದಲ್ಲಿ ಇದುವರೆಗೂ 8 ಬಾರಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಸ್ ಯಡಿಯೂರಪ್ಪ, ಒಂದೇ ಒಂದು ಬಾರಿ ಸೋತಿದ್ದಾರೆ. 2013 ರಲ್ಲಿ ಅವರು ಬಿಜೆಪಿಯಿಂದ ಹೊರಬಿದ್ದು, ಕೆಜೆಪಿ ಕಟ್ಟಿಕೊಂಡಿದ್ದರೂ, 24,000 ಮತಗಳ ಭಾರೀ ಅಂತರದಿಂದ ಜಯಗಳಿಸಿ ದಾಖಲೆ ಬರೆದಿದ್ದರು. ಶಿಕಾರಿಪುರ ಎಂದರೆ ಯಡಿಯೂರಪ್ಪ ಎಂಬಷ್ಟರ ಮಟ್ಟಿಗೆ ಇಲ್ಲಿನ ಜನರ ವಿಶ್ವಾಸ ಗಳಿಸಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ. ರಾಜಕೀಯ ತಜ್ಞರ ಪ್ರಕಾರ ಈ ಕ್ಷೇತ್ರದಲ್ಲಿ ಬಿಎಸ್ ವೈ ಅವರನ್ನು ಸೋಲಿಸುವುದು ಸುಲಭವಲ್ಲ.
ಕ್ಷೇತ್ರ ಪರಿಚಯ : ಶಿಕಾರಿಪುರದಲ್ಲಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಯಾರು?
ರಾಮನಗರ
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ಕ್ಷೇತ್ರ ಇದು. 2013 ರ ಚುನಾವಣೆಯಲ್ಲಿ ಅವರು ಈ ಕ್ಷೇತ್ರದಿಂದ ಸುಮಾರು 25,000 ಮತಗಳ ಅಂತರದಿಂದ ಜಯಗಳಿಸಿ ದಾಖಲೆ ಬರೆದಿದ್ದರು. ರಾಮನಗರ ಜೆಡಿಎಸ್ ನ ಭದ್ರಕೋಟೆಯೂ ಹೌದು. ಈ ಬಾರಿ ಚುನಾವಣೆಯ ನಂತರ ಅತಂತ್ರ ವಿಧಾನಸಭೆಯೇ ಆಗಬಹುದು ಎಂಬ ಲೆಕ್ಕಾಚಾರ ಇರುವುದರಿಂದ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಿದರೆ ಅಚ್ಚರಿಯಿಲ್ಲ. ಅಲ್ಲದೆ ಎಚ್ಡಿಕೆ ಜೆಡಿಎಸ್ ನ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವುದರಿಂದ ಈ ಬಾರಿಯೂ ಅವರೇ ಗೆಲ್ಲುವ ಸಾಧ್ಯತೆಗಳು ಹೆಚ್ಚು. ಕುಮಾರಸ್ವಾಮಿ ಈ ಬಾರಿ ಚನ್ನಪಟ್ಟಣ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆ ಎಂಬ ವದಂತಿಗಳಿವೆ.
ಕ್ಷೇತ್ರ ಪರಿಚಯ: ರಾಮನಗರದಲ್ಲಿ ಕುಮಾರಸ್ವಾಮಿ ಸೋಲಿಸುವುದು ಸುಲಭವಲ್ಲ
ವರುಣ
ವರುಣ ಕ್ಷೇತ್ರದಲ್ಲಿ ಏಳು ಬಾರಿ ಸ್ಪರ್ಧಿಸಿ, ಏಳು ಬಾರಿಯೂ ಗೆದ್ದು ದಾಖಲೆ ಬರೆದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಆದರೆ ಈ ಬಾರಿ ಈ ಕ್ಷೇತ್ರವನ್ನು ಅವರು ತಮ್ಮ ಮಗನಿಗೆ ಬಿಟ್ಟುಕೊಡುತ್ತಾರೆ ಎಂಬ ವದಂತಿ ಇದೆ. ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ ಸಹ ಈಗಾಗಲೇ ಈ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಹಲವು ತಿಂಗಳುಗಳಿಂದ ಓಡಾಡುತ್ತ ಜನಸಂಪರ್ಕ ಸಂಪಾದಿಸಿದ್ದಾರೆ, ಜನರ ವಿಶ್ವಾಸ ಗಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜೇಂದ್ರ ಸ್ಪರ್ಧಿಸುತ್ತಾರೆ ಎಂಬ ವದಂತಿಯೂ ಹರಿದಾಡುತ್ತಿದೆ.
ಬಳ್ಳಾರಿ
ಕರ್ನಾಟಕ ರಾಜಕೀಯದ ಅತ್ಯಂತ ರೋಚಕ ಕ್ಷೇತ್ರವೆಂದರೆ ಅದು ಬಳ್ಳಾರಿ. ಈ ಕ್ಷೇತ್ರದಿಂದ ಸದಾ ಸದ್ದು ಮಾಡುವುದು ಗಣ ದಣಿಗಳೇ. ಗಣಿ ಧೂಳಿನಿಂದಾಗಿ ಪ್ರತಿ ಬಾರಿಯ ಚುನಾವಣೆಯಲ್ಲೂ ಒಂದಿಲ್ಲೊಂದು ರೋಚಕ ಘಟ್ಟ ತಲುಪುವ ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅನಿಲ್ ಲಾಡ್ ಸದ್ಯದ ಶಾಸಕ. 2008 ರ ಚುನಾವಣೆಯಲ್ಲಿ ಬಿಜೆಪಿಯಿಂದ ಗಾಲಿ ಸೋಮಶೇಖರ ರೆಡ್ಡಿ ಗೆದಿದ್ದರು.
ಕ್ಷೇತ್ರ ಪರಿಚಯ : ಬಳ್ಳಾರಿ ನಗರದಲ್ಲಿ ಲಾಡ್ ವಿರುದ್ಧ ರೆಡ್ಡಿ ಹಣಾಹಣಿ
ಬಂಟ್ವಾಳ
ಕರಾವಳಿಯಲ್ಲಿ ಅದರಲ್ಲೂ ಬಂಟ್ವಾಳ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಅತ್ಯಂತ ಕುತೂಹಲ ಹುಟ್ಟಿಸಿದೆ. ಮಾಜಿ ಗೃಹ ಸಚಿವ, ಕಾಂಗ್ರೆಸ್ ಶಾಸಕ ರಮಾನಾಥ್ ರೈ ಅವರ ಈ ಕ್ಷೇತ್ರ ಈ ವರ್ಷವೂ ಅವರಿಗೇ ಒಲಿಯುತ್ತದಾ ಎಂಬುದು ಕುತೂಹಲದ ವಿಷಯ. 2013 ರಲ್ಲಿ 17,850 ಮತಗಳ ಅಂತರದಿಂದ ಅವರು ಗೆದ್ದಿದ್ದರು. ಆದರೆ ಈ ವರ್ಷವೂ ಇದೇ ಪರಿಸ್ಥಿತಿ ಮರುಕಳಿಸುತ್ತದೆ ಎಂದಿಲ್ಲ. ಕರಾವಳಿಯಲ್ಲಿ ನಡೆದ ಹಿಂದುಪರ ಸಂಘಟನೆಯ ಕಾರ್ಯಕರ್ತರ ಹತ್ಯೆ ಮತ್ತು ರೈ ಗೃಹಸಚಿವರಾಗಿದ್ದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕದಡುವಂಥ ಹಲವು ಘಟನೆಗಳು ನಡೆದಿದ್ದು, ರೈ ಅವರ ರಾಜಕೀಯ ಬದುಕಿಗೆ ಹಿನ್ನಡೆ ತಂದೊಡ್ಡಿದ್ದರೆ ಅಚ್ಚರಿಯೇನಿಲ್ಲ. ಈ ಅವಕಾಶವನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸಫಲವಾದರೆ ರೈ ಸೋತರೂ ಅಚ್ಚರಿಯಿಲ್ಲ. ಈ ಎಲ್ಲ ಕಾರಣಗಳಿಂದ ಬಂಟ್ವಾಳ ಕ್ಷೇತ್ರ ಮಹತ್ವ ಪಡೆದಿದೆ.
ಕ್ಷೇತ್ರ ಪರಿಚಯ: ಬಂಟ್ವಾಳದಲ್ಲಿ ರಮಾನಾಥ ರೈಗೆ ಸಿಗುವುದೇ 7ನೇ ಗೆಲುವು?
ನಂಜನಗೂಡು
ನಂಜನಗೂಡು ಕ್ಷೇತ್ರದ ಅನಿರೀಕ್ಷಿತ ಫಲಿತಾಂಶ ಜನಮಾನಸದಲ್ಲಿ ಇನ್ನೂ ನೆನಪಿನಲ್ಲುಳಿದಿದೆ. ಕಾಂಗ್ರೆಸ್ ಶಾಸಕರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ನಂತರ ತೆರವಾದ ಸ್ಥಾನಕ್ಕಾಗಿ 2017ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಕಳಲೆ ಕೇಶವಮೂರ್ತಿ ಜಯ ದಾಖಲಿಸಿದ್ದರು. ಈ ಮೂಲಕ ಬಿಜೆಪಿ ಮತ್ತು ವಿ.ಶ್ರೀನಿವಾಸ ಪ್ರಸಾದ್ ಮುಖಭಂಗ ಅನುಭವಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿರಂತರ ಪ್ರಚಾರ ನಡೆಸಿದ್ದರೂ ಬಿಜೆಪಿ ಸೋತಿದ್ದರ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಉಪಚುನಾವೆ ನಡೆದ ಒಮದು ವರ್ಷದ ತರುವಾಯ ಈ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದೆಯೇ ಎಂಬುದು ಫಲಿತಾಂಶದ ದಿನ ತಿಳಿಯಲಿದೆ.
ಯಾರಿಗೆ ಸಿಗಲಿದೆ ನಂಜನಗೂಡು ಶ್ರೀಕಂಠೇಶ್ವರನ ಕೃಪೆ?
ಹೆಬ್ಬಾಳ
2016 ರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ್ದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ವೈ ನಾರಾಯಣಸ್ವಾಮಿ ಜಯಗಳಿಸಿದ್ದರು. ಬಿಜೆಪಿ ಶಾಸಕ ಆರ್. ಜಗದೀಶ್ ಕುಮಾರ್ ಅವರ ನಿಧನದ ನಂತರ ತೆರವಾಗಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಟಿಕೇಟ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ನಡೆದಿತ್ತು. ಪಕ್ಷೇತರ ಶಾಸಕ ಬೈರತಿ ಸುರೇಶ್ ಅವರಿಗೆ ಟಿಕೇಟ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸುಕರಾಗಿದ್ದರು. ಆದರೆ ಕೊನೆಗೆ ಕಾಂಗ್ರೆಸ್ ಮುಖಂಡ ಜಾಫರ್ ಶರೀಫ್ ಅವರ ಮೊಮ್ಮಗ ಅಬ್ದುಲ್ ರಹಮಾನ್ ಶರೀಫ್ ಅವರಿಗೆ ಟಿಕೇಟ್ ಸಿಕ್ಕಿತ್ತು. ಇಲ್ಲಿ ಬಿಜೆಪಿಯ ವೈ ನಾರಾಯಣಸ್ವಾಮಿ ಜಯಗಳಿಸಿದ್ದರು.
ಹೆಬ್ಬಾಳ ಕಾಂಗ್ರೆಸ್ ಟಿಕೆಟ್ : ಭೈರತಿ ಸುರೇಶ್ v/s ರೆಹಮಾನ್ ಷರೀಫ್
ಬೀದರ್
ಪ್ರತ್ಯೇಕ ಲಿಂಯಾತ ಧರ್ಮದ ಕೂಗು ಹುಟ್ಟಿದ್ದೇ ಈ ಕ್ಷೇತ್ರದಿಂದ. ಆದ್ದರಿಂದ ಈ ಕ್ಷೇತ್ರ, ಈ ಬಾರಿಯ ಚುನಾವಣೆಯಲ್ಲಿ ಯಾವ ಪಾತ್ರ ವಹಿಸಲಿದೆ ಎಂಬುದು ಈಗಿರುವ ಕುತೂಹಲದ ಪ್ರಶ್ನೆ. 2013 ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರ ನಿಧನದ ನಂತರ ತೆರವಾಗಿದ್ದ ಈ ಕ್ಷೇತ್ರಕ್ಕೆ 2016 ರಲ್ಲಿ ಉಪಚುನಾವಣೆ ನಡೆದಿತ್ತು. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ರಹಿಮ್ ಖಾನ್ ಜಯಗಳಿಸಿದ್ದರು. ಇದೀಗ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಹೊತ್ತಲ್ಲಿ ಈ ವರ್ಷ ಈ ಕ್ಷೇತ್ರದಲ್ಲಿ ಯಾರು ಜಯಗಳಿಸಲಿದ್ದಾರೆ ಎಂಬುದು ಕುತೂಹಲದ ಸಂಗತಿಯಾಗಿದೆ.
ಕ್ಷೇತ್ರ ಪರಿಚಯ : ಬೀದರ್ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ?
ಮಂಡ್ಯ
ಕನ್ನಡ ನಟ, ರೆಬೆಲ್ ಸ್ಟಾರ್ ಅಂಬರೀಶ್ ಪ್ರತಿನಿಧಿಸುತ್ತಿದ್ದ ಮಂಡ್ಯ ಕ್ಷೇತ್ರ ಸಹ ಕುತೂಹಲದ ಕಣವಾಗುವುದು ಖಚಿತ. ಈ ವರ್ಷ ಮಂಡ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಒಕ್ಕಲಿಗ ಸಮುದಾಯದ ಜನರೇ ಹೆಚ್ಚಿರುವ ಮಂಡ್ಯದಲ್ಲಿ ಜೆಡಿಎಸ್ ತನ್ನ್ ಹಿಡಿತ ಸಾಧಿಸಿದೆ. ಈ ಭಾಗದಲ್ಲಿ ಕಾವೇರಿ ನದಿ ನೀರಿಗೆ ಸಂಬಂಧಿಸಿದ ವಿವಾದಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಸಂದರ್ಭದಲ್ಲಿ ಸರ್ಕಾರ ವರ್ತಿಸಿದ ರೀತಿಯನ್ನೇ ಜನರು ಮತದಾನಕ್ಕೆ ಮಾನದಂಡವನ್ನಾಗಿ ನೋಡಿದರೆ ಅಚ್ಚರಿಯೇನಿಲ್ಲ. ಅಂಬರೀಶ್ ಮತ್ತೆ ಈ ಕ್ಷೇತ್ರದ ಟಿಕೇಟ್ ಪಡೆಯುತ್ತಾರಾ ಎಂಬುದು ಈಗಿರುವ ಪ್ರಶ್ನೆ. ಆದರೆ ಕಾವೇರಿ ವಿವಾದದ ಸಂದರ್ಭದಲ್ಲಿ ಮಾತನ್ನೇ ಆಡದ ಅಂಬರೀಶ್ ಕುರಿತು ಈ ಭಾಗದ ಜನರಲ್ಲಿ ಉತ್ತಮ ಅಭಿಪ್ರಾಯ ಇದ್ದಂತಿಲ್ಲ. ಕೆಲವು ಮೂಲಗಳ ಪ್ರಕಾರ ಕಾಗ್ರೆಸ್ ತನ್ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಅವರನ್ನೇ ಈ ಭಾಗದ ಅಭ್ಯರ್ಥಿಯನ್ನಾಗಿ ನಿಲ್ಲಿಸುತ್ತದೆ ಎಂಬುದು. ಹೈಕಮಾಂಡ್ ನಿರ್ಧಾರವೇನು ಎಂಬುದನ್ನು ಕಾದುನೋಡಬೇಕು.