ಆರು ತಿಂಗಳ ಮೊದಲೇ ಸಿಎಂ ಹೆಸರು ಪ್ರಕಟಿಸಿ: ಸಿದ್ದರಾಮಯ್ಯ ಪ್ಲಾನ್ಗೆ ಡಿಕೆ ತಂಡಾ!
ಬೆಂಗಳೂರು, ಜೂ. 28: ಕರ್ನಾಟಕ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ಅದಾಗಲೇ ಕಾದಾಟ ಶುರುವಾಗಿದೆ. ಒಮ್ಮೆಯಾದರೂ ಸಿಎಂ ಆಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾನಾ ಯಾತ್ರೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿಎಂ ಅಗಲು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಚುನಾವಣೆಗೂ ಆರು ತಿಂಗಳ ಮೊದಲೇ ಪಕ್ಷದ ಸಿಎಂ ಅಭ್ಯರ್ಥಿ ಹೆಸರು ಬಹಿರಂಗ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದೇ, ಈ ವಿಚಾರ ಇದೀಗ ಕಾಂಗ್ರೆಸ್ ಹೈ ಕಮಾಂಡ್ ಅಂಗಳ ತಲುಪಿದೆ.
ಕರ್ನಾಟಕದಲ್ಲಿ ಆಡಳಿತ ರೂಢ ಬಿಜೆಪಿ ವಿರುದ್ಧ ಅಲೆ ಭುಗಿಲೆದ್ದಿದೆ. 40 ಪರ್ಸೆಂಟ್ ಕಮೀಷನ್, ಪಠ್ಯ ಪುಸ್ತಕ ವಿವಾದ, ಹಿಜಾಬ್ ವಿವಾದಗಳು ಸರ್ಕಾರವನ್ನು ಹೈರಾಣ ಮಾಡಿವೆ. ಇದರ ಜತೆಗೆ ಕರ್ನಾಟಕ ಕಾಂಗ್ರೆಸ್ ನಡೆಸಿದ ಮೇಕೆದಾಟು ಪಾದಯಾತ್ರೆ, 40 ಪರ್ಸೆಂಟ್ ಕಮೀಷನ್ ವಿರುದ್ಧ ನಡೆಸಿದ ಹೋರಾಟಕ್ಕೆ ಅಪಾರ ಜನ ಬೆಂಬಲ ಸಿಕ್ಕಿದೆ. ಮುಂದಿನ ಆರು ತಿಂಗಳಲ್ಲಿ ಯಾವುದೇ ಕ್ಷಣ ಚುನಾವಣೆ ಘೋಷಣೆ ಮಾಡಬಹುದು.
ಅಲ್ಪ ಸಂಖ್ಯಾತ, ದಲಿತರು, ಮುಸ್ಲಿಂ ಮಾತ್ರವಲ್ಲದೇ ರಾಜ್ಯದ ಪ್ರಭಾವಿ ಜಾತಿಗಳಾದ ಲಿಂಗಾಯುತ ಮತ್ತು ಒಕ್ಕಲಿಗ ಸಮುದಾಯ ಕೂಡ ಪಠ್ಯ ಪುಸ್ತಕ ವಿವಾದದಲ್ಲಿ ಬಿಜೆಪಿ ನಡೆಗೆ ಮುನಿಸಿಕೊಂಡಿವೆ. ಈ ಪರಿಸ್ಥಿತಿಯ ಲಾಭ ಪಡೆದುಕೊಂಡು ಕಾಂಗ್ರೆಸ್ ಪಕ್ಷ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಅವಕಾಶಗಳಿವೆ. ಹೀಗಾಗಿ ಚುನಾವಣೆ ಆರು ತಿಂಗಳ ಮೊದಲೇ ಪಕ್ಷದ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುವುದು ಪಕ್ಷದ ಹಿತದೃಷ್ಟಿಯಿಂದ ಸೂಕ್ತ ಎಂಬ ಸಂಗತಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಗೆ ರವಾನಿಸಿದ್ದಾರೆ.
ಒಕ್ಕಲಿಗ ಕೋಟಾದಲ್ಲಿ ಡಿಕೆಶಿ ಸಿಎಂ ಖುರ್ಚಿ ಮೇಲೆ ಕಣ್ಣು:
ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ಕಷ್ಟ ಕಾಲದಲ್ಲಿ ಕಾಂಗ್ರೆಸ್ ಪಕ್ಷ, ನಾಯಕರನ್ನು ಉಳಿಸಿದ್ದೇನೆ. ನನ್ನ ಮೇಲೇ ಕೇಸು ಹಾಕಿ ಜೈಲಿಗೆ ಕಳುಹಿಸಿದರೂ ನಾನು ಜಗ್ಗಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಸಿಎಂ ಪಟ್ಟ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷ ಉಳಿಯಬೇಕಾದರೆ ಈ ಬಾರಿ ಒಕ್ಕಲಿಗ ಸಮುದಾಯಕ್ಕೆ ಸಿಎಂ ಖುರ್ಚಿ ನೀಡಬೇಕು. ಅದರಲ್ಲಿ ಪಕ್ಷ ಕಟ್ಟಲು ಹಾಕಿರುವ ಪರಿಶ್ರಮ ನಿಮ್ಮೆದುರು ಇದೆ. ಹೀಗಾಗಿ ಪಕ್ಷವನ್ನು ಗೆಲ್ಲಿಸಿಕೊಂಡು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ನನ್ನ ಸಿಎಂ ಮಾಡಬೇಕು ಎಂಬುದು ಡಿಕೆ ಶಿವಕುಮಾರ್ ಅವರ ಪಟ್ಟು. ಸಿಎಂ ಖುರ್ಚಿ ಮೇಲೆ ಕಾಂಗ್ರೆಸ್ ಇಬ್ಬರು ಪ್ರಭಾವಿ ನಾಯಕರು ಅದಾಗಲೇ ಟವಲ್ ಹಾಕಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಿಎಂ ಅಭ್ಯರ್ಥಿ ಚರ್ಚೆ :
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ವಿಚಾರಣೆ ವಿರುದ್ಧ ಕರ್ನಾಟಕದಲ್ಲಿ ನಡೆಸಿದ ಯಶಸ್ವಿ ಹೋರಾಟ ಹಾಗೂ ಚುನಾವಣೆಗೂ ಆರು ತಿಂಗಳ ಮೊದಲೇ ಸಿಎಂ ಅಭ್ಯರ್ಥಿ ಘೋಷಣೆ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಇಬ್ಬರು ನಾಯಕರನ್ನು ಕರೆಸಿಕೊಂಡು ಮಂಗಳವಾರ ಚರ್ಚೆ ನಡೆಸಿದೆ. ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಾತುಕತೆ ನಡೆದಿದೆ. ಹಲವು ತಾಸು ನಡೆದಿರುವ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗಲಿದೆ ಎಂಬುದು ಇನ್ನಷ್ಟೇ ಬೆಳಕಿಗೆ ಬರಲಿದೆ. ಸಿಎಂ ಅಭ್ಯರ್ಥಿ ಘೋಷಣೆ, ಸಮಯ, ಸದ್ಯ ಬಣರಾಜಕೀಯ ಭಿನ್ನಮತ ಶಮನಗೊಳಿಸುವ ಪ್ರಯತ್ನಗಳು ಸಭೆಯಲ್ಲಿ ನಡೆಯವ ಸಾಧ್ಯತೆಯಿದೆ.
ಕಾಂಗ್ರೆಸ್ ನಲ್ಲಿ ಮೂರು ಬಣ:
ಬಿಜೆಪಿ ಆಡಳಿತ ವಿರುದ್ಧ ರಾಜ್ಯದಲ್ಲಿ ಮಹತ್ವದ ಹೋರಾಟಗಳನ್ನು ರೂಪಿಸಿ ಯಶಸ್ಸು ಗಳಿಸುವಲ್ಲಿ ಸಫಲವಾಗಿರುವ ಕರ್ನಾಟಕ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ. ರಾಜ್ಯದ ಬಿಜೆಪಿ ವಿರೋಧಿ ಅಲೆ ಬಳಿಸಿಕೊಂಡು ಪಕ್ಷ ಅಧಿಕಾರಕ್ಕೆ ಬಂದರೆ ಸಿಎಂ ಆಗಬೇಕು ಎಂಬ ಪಣ ತೊಟ್ಟಿರುವ ಹಲವು ಬಣ ಹುಟ್ಟಿಕೊಂಡಿವೆ. ದಲಿತರ ಕೋಟಾದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ. ಪರಮೇಶ್ವರ್ ಸಿಎಂ ಆಗಲು ಕಾರ್ಯತಂತ್ರ ರೂಪಿಸಿದ್ದಾರೆ. ಇನ್ನು ಲಿಂಗಾಯುತ ಸಮುದಾಯ ಪ್ರತಿನಿಧಿ ಎಂ.ಬಿ. ಪಾಟೀಲ್ ಒಮ್ಮೆಯಾದರೂ ಸಿಎಂ ಅಗಬೇಕೆಂದು ಆಸೆ ಹೊತ್ತು ಕಾಂಗ್ರೆಸ್ ನ ಪ್ರಭಾವಿ ಶಾಸಕರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಪಾಟೀಲ್ ಬಣದಲ್ಲಿ ಕೃಷ್ಣಬೈರೇಗೌಡ ಮತ್ತು ದಿನೇಶ್ ಗುಂಡೂರಾವ್ ಕೂಡ ಗುರುತಿಸಿಕೊಂಡಿದ್ದಾರೆ. ಹೈಕಮಾಂಡ್ ಜತೆ ಅತಿ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ಬಿ.ಕೆ. ಹರಿಪ್ರಸಾದ್ ಹೆಸರು ಕೂಡ ಇದೀಗ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಸಿದ್ದು ವರ್ಚಸ್ಸಿನ ಲೆಕ್ಕಾಚಾರವೇ ಬೇರೆ :
ಭ್ರಷ್ಟ ರಹಿತ ಅಡಳಿತ ನೀಡಿ "ಮಿ ಕ್ಲೀನ್" ಇಮೇಜ್ ಹೊಂದಿರುವ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಲ್ಲಿ ಎದುರು ಹೇಳುವರೇ ಇಲ್ಲ. ಮಿಗಿಲಾಗಿ ಅವರ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲ. ಇನ್ನು ಜೆಡಿಎಸ್ ಹಾಗೂ ಬಿಜೆಪಿಯ ಅತೃಪ್ತ ಶಾಸಕರು ಕೈ ಪಡೆ ಸೇರುವ ಸಂದರ್ಭ ಬಂದರೆ ಅವರೆಲ್ಲರೂ ಸಿದ್ದು ಪರ ನಿಲ್ಲಲಿದ್ದಾರೆ. ಇನ್ನು ಹಿಜಾಬ್, ಪಠ್ಯ ಪುಸ್ತಕ ವಿವಾದ, 40 ಪರ್ಸೆಂಟ್ ಕಮೀಷನ್ ದಂಧೆ ಸೇರಿದಂತೆ ಬಿಜೆಪಿ ಆಡಳಿತದ ವೈಫಲ್ಯಗಳನ್ನು ತಮ್ಮದೇ ಶೈಲಿಯಲ್ಲಿ ಟೀಕಿಸುವ ಮೂಲಕ ಮನೆ ಮಾತಾಗಿದ್ದಾರೆ. ಅಡಳಿತದ ಮೇಲೆ ನಿಯಂತ್ರಣ ಸಾಧಿಸಿ ಉತ್ತಮ ಆಡಳಿತ ನೀಡುವ ಶಕ್ತಿ ಸಿದ್ದು ಕೈಯಲ್ಲಿದೆ. ಚುನಾವಣೆಗೆ ಅರು ತಿಂಗಳ ಮೊದಲೇ ಸಿಎಂ ಅಭ್ಯರ್ಥಿ ಘೋಷಣೆಯಾದಲ್ಲಿ, ಅದು ಸಿದ್ದು ಹೆಸರು ಬಿಟ್ಟರೆ ಹೈಕಮಾಂಡ್ ಗೆ ಉಳಿದ ಆಯ್ಕೆ ಇಲ್ಲ. ಆಯ್ಕೆ ಮಾಡಿದ್ರೂ ಚುನಾವಣೆಯಲ್ಲಿ ಪಕ್ಷ ಗೆಲ್ಲುವುದು ಭಾರೀ ಕಷ್ಟವಾಗಬಹದು. ಹೀಗಾಗಿ ಕಾಂಗ್ರೆಸ್ ನಲ್ಲಿ ಚುನಾವಣೆಗೂ ಅರು ತಿಂಗಳು ಮೊದಲೇ ಸಿಎಂ ಅಭ್ಯರ್ಥಿ ಘೋಷಣೆಯಾದ್ರೆ ಅದು ನನ್ನ ಹೆಸರೇ ಆಗಿರಬೇಕು ಎಂಬ ಸ್ಮಾರ್ಟ್ ತಂತ್ರ ಸಿದ್ದು ಅವರದ್ದು ಆಗಿರಬಹುದಲ್ಲವೇ ?