ವಿಧಾನಸಭೆ ಉಪಸಭಾಧ್ಯಕ್ಷ ಎಂ. ಕೃಷ್ಣಾ ರೆಡ್ಡಿ ರಾಜೀನಾಮೆ
ಬೆಂಗಳೂರು, ಮಾರ್ಚ್ 17 : ಜೆಡಿಎಸ್ ಶಾಸಕ ಮತ್ತು ಕರ್ನಾಟಕ ವಿಧಾನಸಭೆ ಉಪಸಭಾಧ್ಯಕ್ಷ ಎಂ. ಕೃಷ್ಣಾ ರೆಡ್ಡಿ ರಾಜೀನಾಮೆ ನೀಡಿದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ ಉಪಸಭಾಧ್ಯಕ್ಷರು ಬದಲಾವಣೆಯಾಗಿರಲಿಲ್ಲ.
Recommended Video
ಮಂಗಳವಾರ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ. ಕೃಷ್ಣಾ ರೆಡ್ಡಿ ತಮ್ಮ ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ಮಾಡಿ, ರಾಜೀನಾಮೆಯನ್ನು ಸಲ್ಲಿಸಿದರು. ಬಿಜೆಪಿ ಶಾಸಕ ಆನಂದ್ ಮಾಮನಿ ನೂತನ ಉಪಸಭಾಧ್ಯಕ್ಷರಾಗಲಿದ್ದಾರೆ.
ಅಂದು ಶಿಕ್ಷಣ ಸಚಿವ, ಈಗ ಸದನದ 'ಹೆಡ್ ಮಾಸ್ಟರ್'; ಕಾಗೇರಿ ಪರಿಚಯ
2018ರ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಶ್ರೀನಿವಾಸಪುರ ಶಾಸಕ ಕೆ. ಆರ್. ರಮೇಶ್ ಕುಮಾರ್ ಸ್ಪೀಕರ್ ಆಗಿ, ಜೆಡಿಎಸ್ನ ಕೃಷ್ಣಾ ರೆಡ್ಡಿ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ರಮೇಶ್ ಕುಮಾರ್ ರಾಜೀನಾಮೆ ನೀಡಿದರೂ ಕೃಷ್ಣಾ ರೆಡ್ಡಿ ಮುಂದುವರೆದಿದ್ದರು.
ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆ
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸ್ವ ಪಕ್ಷದ ಶಾಸಕರನ್ನೇ ಉಪಸಭಾಧ್ಯಕ್ಷರಾಗಿ ನೇಮಕ ಮಾಡುವ ಕುರಿತು ಚರ್ಚೆ ನಡೆದಿತ್ತು. ಕೃಷ್ಣಾ ರೆಡ್ಡಿ ಅವರು ರಾಜೀನಾಮೆ ನೀಡದಿದ್ದಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡುವ ಅವಕಾಶವೂ ಇತ್ತು.
ಸುಮಾರು ಒಂದೂವರೆ ವರ್ಷಗಳ ಕಾಲ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇತ್ತು. ರಾಜಕೀಯ ಬೆಳವಣಿಗೆ ಬಳಿಕ ಸರ್ಕಾರ ಪತನಗೊಂಡಿತ್ತು. ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ನೀಡಿದ್ದು. ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್ ಆಗಿದ್ದರು.
ವಿಧಾನಸಭೆ ನೂತನ ಉಪಸಭಾಧ್ಯಕ್ಷರಾಗಿ ಸವದತ್ತಿ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಬಿಜೆಪಿ ಶಾಸಕ ಆನಂದ ಮಾಮನಿ ಆಯ್ಕೆಯಾಗಲಿದ್ದಾರೆ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನ ಹೊಂದಿರುವ ಅವರನ್ನು ಡೆಪ್ಯೂಟಿ ಸ್ಪೀಕರ್ ಮಾಡಲು ಚಿಂತನೆ ನಡೆದಿದೆ.