ಕಾಂಗ್ರೆಸ್ ಶಾಸಕರ ಬೆಂಬಲ ಸಿಕ್ಕರೆ ಬಿಜೆಪಿ ಸರ್ಕಾರ: ಆಪರೇಷನ್ಗೆ ಅಸ್ತು?
Recommended Video
ಬೆಂಗಳೂರು, ಸೆಪ್ಟೆಂಬರ್ 11: ಜಾರಕಿಹೊಳಿ ಸಹೋದರರು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿಬಿದ್ದ ಗಳಿಗೆಯಲ್ಲಿಯೇ ಬಿಜೆಪಿಯಲ್ಲಿ ಮತ್ತೆ ಚಟುವಟಿಕೆ ಗರಿಗೆದರಿವೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಬಿಜೆಪಿ ಮುಖಂಡರು ಚರ್ಚೆ ನಡೆಸಲು ಆರಂಭಿಸಿದ್ದಾರೆ.
ಜಾರಕಿಹೊಳಿ ಸಹೋದರರ ಟಾರ್ಗೆಟ್ 14: ಯಾರು ಆ ಶಾಸಕರು?
ಅತಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದರೂ ಬಹುಮತ ಪಡೆದುಕೊಳ್ಳಲು ಸಾಧ್ಯವಾಗದೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿರುವ ಬಿಜೆಪಿಯಲ್ಲಿ ಜಾರಕಿಹೊಳಿ ಸಹೋದರರ ನಡೆ ಸಂಚಲನ ಮೂಡಿಸಿದ್ದು, ಹೊಸ ಉತ್ಸಾಹ ಮೂಡಿಸಿದೆ.
ಆಪರೇಷನ್ ಕಮಲ?
ಸತೀಶ್ ಮತ್ತು ಜಾರಕಿಹೊಳಿ ಸಹೋದರರು ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿಬಿದ್ದು, ಬಿಜೆಪಿ ನಾಯಕ ಜತೆ ಮಾತುಕತೆ ನಡೆಸಿರುವುದು ಸಮ್ಮಿಶ್ರ ಸರ್ಕಾರದಲ್ಲಿ ತಲ್ಲಣ ಮೂಡಿಸಿದೆ.
ಈ ಮಧ್ಯೆ ಕಾಂಗ್ರೆಸ್ ಮತ್ತು ಪಕ್ಷೇತರ ಶಾಸಕರನ್ನು ಬಿಜೆಪಿ ಕರೆತರುವ ಪ್ರಯತ್ನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಸಿರು ನಿಶಾನೆ ತೋರಿಸಿದ್ದಾರೆ. ಕಾಂಗ್ರೆಸ್ನಲ್ಲಿ ಉಂಟಾಗಿರುವ ಗೊಂದಲ ಪರಿಸ್ಥಿತಿಯ ಲಾಭ ಪಡೆದು ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ತಂತ್ರಕ್ಕೆ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಸಹೋದರನ ಸಿಎಂ ಮಾಡಲು ಬಿಜೆಪಿಗೆ ಹೊರಟರಾ ರಮೇಶ್ ಜಾರಕಿಹೊಳಿ?
ಪ್ರತಿಕ್ರಿಯೆ ನೀಡದ ಯಡಿಯೂರಪ್ಪ
ಯಡಿಯೂರಪ್ಪ ಅವರ ನಿವಾಸದಲ್ಲಿ ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ರವಿಕುಮಾರ್, ಶ್ರೀರಾಮುಲು ಮುಂತಾದ ನಾಯಕರು ಮಾತುಕತೆ ನಡೆಸುತ್ತಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಕೆಲವು ದಿನಗಳ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಈ ಬಗ್ಗೆ ರಮೇಶ್ ಜಾರಕಿಹೊಳಿ ಅವರನ್ನೇ ಕೇಳಿ ಎಂದು ಹೇಳಿದರು.
ಕರ್ನಾಟಕ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ, ಸೆ.17ಕ್ಕೆ ಕ್ಲೈಮ್ಯಾಕ್ಸ್?
ನಾಲ್ಕು ಹಂತದಲ್ಲಿ ಆಪರೇಷನ್
ಸತೀಶ್ ಮತ್ತು ಜಾರಕಿಹೊಳಿ ಸಹೋದರರು ಸೇರಿದಂತೆ ಕಾಂಗ್ರೆಸ್ನ 13 ಮತ್ತು ಪಕ್ಷೇತರ ಶಾಸಕ ನಾಗೇಶ್ ಅವರನ್ನು ಬಿಜೆಪಿಗೆ ಕರೆತರುವ ಚಟುವಟಿಕೆಗಳು ಆರಂಭವಾಗಿವೆ. ಈ ಎಲ್ಲ ಶಾಸಕರನ್ನೂ ಒಂದೇ ಹಂತದಲ್ಲಿ ಬಿಜೆಪಿಗೆ ಕರೆತರುವುದು ಬೇಡ ಎಂದು ಅಮಿತ್ ಶಾ ಸೂಚಿಸಿದ್ದಾರೆ.
ಒಟ್ಟು ನಾಲ್ಕು ಹಂತಗಳಲ್ಲಿ ಕಾರ್ಯಾಚರಣೆ ನಡೆಸುವುದು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ. ಈ ಆಪರೇಷನ್ ಕಮಲದ ಕಾರ್ಯದ ಹೊಣೆಗಾರಿಕೆಯನ್ನು ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಬಿ.ವೈ. ರಾಘವೇಂದ್ರ, ಮುರುಗೇಶ್ ನಿರಾಣಿ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಲಾಗಿದೆ.
ಕಾಂಗ್ರೆಸ್ ಸಚಿವರಿಗೆ ಪರಮೇಶ್ವರ್ ಉಪಹಾರ ಕೂಟ: ಏನಿದರ ಮರ್ಮ?
ಬಿಜೆಪಿಯ ಸಿಗಲಿದೆ ಬಹುಮತ
222 ಸದಸ್ಯರಿರುವ ವಿಧಾನಸಭೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 79 ಮತ್ತು ಜೆಡಿಎಸ್ 36 ಶಾಸಕರ ಬಲ ಹೊಂದಿದೆ. ಜತೆಗೆ ಕೆಪಿಜೆಪಿ, ಪಕ್ಷೇತರ ಮತ್ತು ಬಿಎಸ್ಪಿ ತಲಾ 1 ಸ್ಥಾನಗಳಿವೆ.
ಒಂದು ವೇಳೆ 14 ಮಂದಿ ಸಮ್ಮಿಶ್ರ ಸರ್ಕಾರದಿಂದ ಹೊರ ನಡೆದರೆ ಸಮ್ಮಿಶ್ರ ಸರ್ಕಾರದ ಬಲ 104ಕ್ಕೆ ಇಳಿಯಲಿದೆ. 104 ಶಾಸಕರ ಬಲ ಹೊಂದಿರುವ ಬಿಜೆಪಿಗೆ ಪಕ್ಷೇತರ ಶಾಸಕ ನಾಗೇಶ್ ಬೆಂಬಲ ಸಿಕ್ಕರೆ 105ಕ್ಕೆ ಬಲ ಏರಲಿದೆ. ಮ್ಯಾಜಿಕ್ ಸಂಖ್ಯೆ 111ಅನ್ನು ದಾಟಬೇಕಾದ ಬಿಜೆಪಿಗೆ ಇನ್ನು 13 ಶಾಸಕರನ್ನು ಕಾಂಗ್ರೆಸ್ನಿಂದ ಕರೆತರಬೇಕಾಗುತ್ತದೆ.
ಪರಂ ಜತೆ ರಮೇಶ್ ಮಾತುಕತೆ
ರಮೇಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ನಿವಾಸದಲ್ಲಿ ಮಂಗಳವಾರ ಮಾತುಕತೆ ನಡೆಸಿದರು. ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಬಿ.ಸಿ. ಪಾಟೀಲ್ ಅವರೂ ಉಪಸ್ಥಿತರಿದ್ದರು. ಮಾತುಕತೆ ಬಳಿಕ ಹೊರಬಂದ ರಮೇಶ್, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಪಕ್ಷ ತೊರೆಯುವುದು ಸುಳ್ಳು
ಬಳಿಕ ಮಾತನಾಡಿದ ಪರಮೇಶ್ವರ್, ರಮೇಶ್ ಜಾರಕಿಹೊಳಿ ಅವರನ್ನು ಪ್ರಶ್ನಿಸಿದ್ದೇನೆ. ಕಾಂಗ್ರೆಸ್ಅನ್ನು ಯಾವ ಕಾರಣಕ್ಕೂ ತೊರೆಯುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.
ಸರ್ಕಾರ ಬೀಳಲಿದೆ ಎನ್ನುವುದು ಬಿಜೆಪಿಯವರು ಹರಡಿಸಿದ ಊಹಾಪೋಹ. ಬಿಜೆಪಿ ಪ್ರಯತ್ನ ಸಫಲವಾಗುವುದಿಲ್ಲ. 20 ಶಾಸಕರು ಪಕ್ಷ ಬಿಡುವ ಸುದ್ದಿ ಸುಳ್ಳು ಎಂದರು.
ಕಾಂಗ್ರೆಸ್ನಲ್ಲೇ ಇರುತ್ತೇನೆ
ತಾನು ಪಕ್ಷ ತೊರೆದು ಬಿಜೆಪಿ ಸೇರುತ್ತೇನೆ ಎಂಬ ವರದಿಗಳು ಸುಳ್ಳು ಎಂಬುದಾಗಿ ಕುಷ್ಟಗಿಯ ಕಾಂಗ್ರೆಸ್ ಶಾಸಕ ಅಮರೇಗೌಡ ಭಯ್ಯಾಪುರ ಸ್ಪಷ್ಟಪಡಿಸಿದ್ದಾರೆ.
'ಸಚಿವ ಸ್ಥಾನ ಸಿಗಲಿ, ಬಿಡಲಿ ಕಾಂಗ್ರೆಸ್ನಲ್ಲಿಯೇ ಇರುತ್ತೇನೆ. ಸಚಿವ ಸ್ಥಾನ ಕೊಡದ ಕಾರಣಕ್ಕೆ ಪಕ್ಷ ತೊರೆಯುವುದಿಲ್ಲ. ಐದು ವರ್ಷ ಕೆಲಸ ಮಾಡಲು ಜನರು ಅವಕಾಶ ನೀಡಿದ್ದಾರೆ. ಅವರ ಋಣ ತೀರಿಸುತ್ತೇನೆ' ಎಂದು ಅವರು ಹೇಳಿದ್ದಾರೆ.
ಬೆಳಗಾವಿ ಕಾಂಗ್ರೆಸ್ ನಾಯಕರ ಮಾತುಕತೆ
ಈ ನಡುವೆ ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಯಾವುದೇ ಚಟುವಟಿಕೆ ಇದ್ದರೂ, ಬೆಳಗಾವಿ ಕಾಂಗ್ರೆಸ್ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟವಾಗಿ ತಿಳಿಸುವಂತೆ ಅಲ್ಲಿನ ಮುಖಂಡರು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಇಲ್ಲಿನ ವಿಚಾರದಲ್ಲಿ ಅವರು ತಲೆಹಾಕದೆ ಇದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಇದರಿಂದ ಸರ್ಕಾರ ಆತಂಕ ಪಡುವ ಅಗತ್ಯ ಇರುವುದಿಲ್ಲ. ಹೈಕಮಾಂಡ್ ಜತೆ ನಾವು ಮಾತುಕತೆ ನಡೆಸುತ್ತೇವೆ. ಆದರೆ, ರಾಜ್ಯದ ನಾಯಕರಿಗೆ ನೀವು ಮನವರಿಕೆ ಮಾಡಿಕೊಡಿ ಎಂದು ಕಾಂಗ್ರೆಸ್ ಮುಖಂಡರು ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.