2nd PUC ವಿದ್ಯಾರ್ಥಿಗಳ ಕೊರೊನಾ ಪ್ಯಾಕೇಜ್ ಫಲಿತಾಂಶ ಪ್ರಕಟ
ಬೆಂಗಳೂರು, ಜು. 20: ಕರ್ನಾಟಕ ರಾಜ್ಯದ ಪರೀಕ್ಷಾ ಇತಿಹಾಸದಲ್ಲಿ ಪರಿಕ್ಷೆ ಇಲ್ಲದೇ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಕಟಿಸಿದೆ. ಕೋವಿಡ್19 ಹಿನ್ನೆಲೆಯಲ್ಲಿ ಎಲ್ಲರನ್ನು ತೇರ್ಗಡೆ ಮಾಡಿರುವ ಶಿಕ್ಷಣ ಇಲಾಖೆ ಕ್ರಮದಿಂದ ವಿದ್ಯಾರ್ಥಿಗಳು ಸಂತಸದಲ್ಲಿ ತೇಲಾಡುತ್ತಿದ್ದಾರೆ.
ಮಂಗಳವಾರ ಸಂಜೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ 2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದರು. ಪ್ರಸಕ್ತ ಸಾಲಿನ ಪಿಯುಸಿ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ಒಟ್ಟು 6,65,497 ವಿದ್ಯಾರ್ಥಿಗಳು ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದಾರೆ. ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪುನರಾವರ್ತಿತ ಅಭ್ಯರ್ಥಿಗಳಿಗೂ ಉತ್ತೀರ್ಣ ಭಾಗ್ಯ ಸಿಕ್ಕಿದೆ.
Breaking: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಇನ್ನು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸ್ಯಾಟ್ಸ್ ನೋಂದಾಯಿತ ಮೊಬೈಲ್ ನಂಬರ್ಗೆ ಫಲಿತಾಂಶದ ವಿವರ ಹೋಗಲಿದೆ. ತುಂಬಾ ಪ್ರಾಮಾಣಿಕತೆಯಿಂದ ಈ ಫಲಿತಾಂಶ ಪ್ರಕಟ ಮಾಡುತ್ತಿದ್ದೇವೆ. ಪ್ರತಿಭೆಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
4,50,706 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
ಪ್ರಥಮ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಯಲ್ಲಿ ಗಳಿಸಿದ್ದ ಅಂಕ ಶೇ. 10 ರಷ್ಟು ಕಾಲೇಜಿನ ಚಟುವಟಿಕೆ ಆಧರಿಸಿ ನೀಡಿದ ಫಲಿತಾಂಶದಲ್ಲಿ 1,95,650 ವಿದ್ಯಾರ್ಥಿ ಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. 4,50,706 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 68,729 ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದಾರೆ. 1,47 055 ವಿದ್ಯಾರ್ಥಿಗಳು ಎರಡನೇ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಶಿಕ್ಷಣ ಸಚಿವರು ತಿಳಿಸಿದರು. ಪುನರಾವರ್ತಿತ 76 306 ವಿದ್ಯರ್ಥಿಗಳು ಕೂಡ ಪಾಸ್ ಆಗಿದ್ದಾರೆ.
ಪರೀಕ್ಷೆ ಬರೆಯಬೇಕಿದ್ದ ಒಟ್ಟು ವಿದ್ಯಾರ್ಥಿಗಳು
ಒಟ್ಟು ವಿದ್ಯಾರ್ಥಿಗಳು -6,66,497
ಬಾಲಕರು - 3,35,138
ಬಾಲಕಿಯರು- 3,31,359 ಬಾಲಕಿಯರು
ಡಿಸ್ಟಿಂಕ್ಷನ್ ಮತ್ತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಆದವರು - 4,50,706
ಪ್ರಥಮ ದರ್ಜೆ ಗಳಿಸಿದ ವಿದ್ಯಾರ್ಥಿಗಳು 1,95,650
ವಿದ್ಯಾರ್ಥಿನಿಯರು 2, 52, 056
ವಾಣಿಜ್ಯ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು
ರಾಜ್ಯದಲ್ಲಿ ಈ ಭಾರಿ ವಿಜ್ಞಾನ ಹಾಗೂ ಕಲಾ ವಿಭಾಗಕ್ಕಿಂತಲೂ ವಾಣಿಜ್ಯ ವಿದ್ಯಾರ್ಥಿಗಳೇ ಹೆಚ್ಚು ಮಂದಿ ಪಿಯುಸಿ ಪರೀಕ್ಷೆ ತೆಗೆದುಕೊಂಡಿದ್ದರು. ಶಿಕ್ಷಣ ಸಚಿವರು ನೀಡಿದ ಮಾಹಿತಿ ಪ್ರಕಾರ ವಾಣಿಜ್ಯ ವಿಭಾಗದಲ್ಲಿ 2,51, 686 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2, 19, 777 ಹಾಗೂ ಕಲಾ ವಿಭಾಗದಲ್ಲಿ 1,95, 304 ವ್ಯಾಸಂಗ ಮಾಡುತ್ತಿದ್ದರು. ಅದರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಂಖ್ಯೆ - 1,47, 594 ಆಗಿದ್ದು, ನಗರ, ಮಹಾನಗರ ಪ್ರದೇಶದಲ್ಲಿ ನೆಲೆಸಿರುವ 5,18,903 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಫಲಿತಾಂಶದ ಮಾನದಂಡ
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿತ್ತು. ಪರೀಕ್ಷೆ ಇಲ್ಲದೇ ಕಾರಣ ಎಸ್ಎಸ್ಎಲ್ ಸಿ ಹಾಗೂ ಪ್ರಥಮ ಪಿಯುಸಿಯಲ್ಲಿ ಗಳಿಸಿದ ಅಂಕ ಹಾಗೂ ಕಾಲೇಜು ಚಟುವಟಿಕೆಯ ಅಂಕವನ್ನು ಮಾನದಂಡವನ್ನಾಗಿ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಹತ್ತನೇ ತರಗತಿಯಲ್ಲಿ ವಿಷಯವಾರು ಪಡೆದಿದ್ದ ಅಂಕಗಳ ಶೇ. 45 ರಷ್ಟು ಅಂಕ, ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕದಲ್ಲಿ ಶೇ . 45 ಅಂಕ ಹಾಗೂ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಚಟುವಟಿಕೆಗೆ ಶೇ. 10 ರಷ್ಟು ಅಂಕ ಪರಿಗಣಿಸಿ ಫಲಿತಾಂಶ ನೀಡಲಾಗಿದೆ ಎಂದು ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆಚ್ಚು ಅಂಕ ಬೇಕೆಂದರೆ ಪರೀಕ್ಷೆ ಬರೆಯಿರಿ
ವೈಜ್ಞಾನಿಕ ಮಾನದಂಡ ಆಧರಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ನೀಡಲಾಗಿದೆ. ಗಳಿಸಿರುವ ಅಂಕದ ಬಗ್ಗೆ ಯಾವುದೇ ವಿದ್ಯಾರ್ಥಿಗೆ ಭಿನ್ನಾಭಿಪ್ರಾಯವಿದ್ದರೆ ಮರು ಪರೀಕ್ಷೆ ಬರೆಯಬಹುದು. ದ್ವಿತೀಯ ಪಿಯುಸಿಗೆ ಮರು ಪರೀಕ್ಷೆ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ಅಸಮಾಧಾನಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಆಯ್ಕೆಯನ್ನು ನೀಡಿದ್ದಾರೆ.