ಮಾ.17ರ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಮಾ. 17 : ಕರ್ನಾಟಕದಲ್ಲಿ ಇಂದು ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮಾರ್ಚ್ 28ಕ್ಕೆ ಮುಂದೂಡಲಾಗಿದೆ. ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಾ.17ರ ಮಂಗಳವಾರ ಗಣಿತ ಮತ್ತು ಭೂಗೋಳ ಶಾಸ್ತ್ರ ಪರೀಕ್ಷೆಗಳು ನಡೆಯಬೇಕಾಗಿತ್ತು. ಈ ಪರೀಕ್ಷೆಗಳನ್ನು ಮಾ.28ಕ್ಕೆ ಮುಂದೂಡಲಾಗಿದೆ ಎಂದು ಪದವಿ ಪೂರ್ವ ಪರೀಕ್ಷಾ ಮಂಡಳಿ ನಿರ್ದೇಶಕಿ ಸುಷಮಾ ಗೋಡಬೋಲೆ ತಿಳಿಸಿದ್ದಾರೆ. [ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ]
ಡಿಕೆ ರವಿ ಅವರ ಸಾವಿನ ನಂತರ ವಿವಿಧ ಸಂಘಟನೆಗಳು ಮಂಗಳವಾರ ಕೋಲಾರ ಬಂದ್ಗೆ ಕರೆ ನೀಡಿವೆ. ಇದರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು ಎಂಬ ಕಾರಣಕ್ಕಾಗಿ ರಾಜ್ಯಾದ್ಯಂತ ಇಂದು ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. [ಐಎಎಸ್ ಅಧಿಕಾರಿ ರವಿ ನಿಗೂಢ ಸಾವು]
ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 12, ಗುರುವಾರದಿಂದ ಆರಂಭವಾಗಿದ್ದು ನಿಗದಿತ ವೇಳಾಪಟ್ಟಿಯಂತೆ ಮಾ. 27ಕ್ಕೆ ಕೊನೆಗೊಳ್ಳಬೇಕಿತ್ತು. ರಾಜ್ಯದಲ್ಲಿ ಒಟ್ಟು 1,017 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, 6, 10, 939 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯತ್ತಿದ್ದಾರೆ. 82,067 ಪುನರಾವರ್ತಿತ ವಿದ್ಯಾರ್ಥಿಗಳು, 4,96,900 ಹೊಸ ವಿದ್ಯಾರ್ಥಿಗಳಿದ್ದಾರೆ.