ಅಡಿಕೆ ಧಾರಣೆ ಕುಸಿತ: 13 ಜಿಲ್ಲೆಗಳ ಬಂದ್ಗೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು, ಜೂನ್ 27: ಕೇಂದ್ರ ಸರ್ಕಾರದ ಅಡಿಕೆ ಆಮದು ನೀತಿ ಖಂಡಿಸಿ ರೈತ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಡಿಕೆ ಆಮದು ನಿಷೇಧ, ಧಾರಣೆ ಸ್ಥಿರತೆ ಕಾಪಾಡಿಕೊಳ್ಳುವಿಕೆ, ತೆಂಗು ಬೆಳಗಾರರ ಹಿತರಕ್ಷಣೆ ಸೇರಿದಂತೆ ವಿವಿಧ ಬೇಡಿಕೆ ಇಟ್ಟುಕೊಂಡು ಬಂದ್ ಗೆ ಕರೆ ನೀಡಲಾಗಿದೆ.
ಸ್ಥಳೀಯ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಗ್ರಾಮಾಂತರ ಸೇರಿದಂತೆ 13 ಜಿಲ್ಲೆಗಳಲ್ಲಿ ಬಂದ್ ಆಚರಿಸಲಾಗುತ್ತಿದೆ.[ಅಡಿಕೆ ಧಾರಣೆ ಪಾತಾಳಕ್ಕೆ, ಕಂಗೆಟ್ಟ ಬೆಳೆಗಾರ]
ದಾವಣಗೆರೆಯಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ತುಮಕೂರು, ಚಿತ್ರದುರ್ಗದಲ್ಲಿಯೂ ಸಹ ವ್ಯಾಪಾರ ವಹಿವಾಟು ಬಂದ್ ಆಗಿದೆ. ಶಿರಸಿ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜನಸಂಚಾರ ಎಂದಿನಂತೆ ಇದೆ.[ಅರೇಕಾ ಟೀ ಮಾರುಕಟ್ಟೆಗೆ, ನೀವು ಸ್ವಾದ ನೀಡಿದ್ರಾ!]
ಬಂದ್ ಬಗ್ಗೆ ಒನ್ ಇಂಡಿಯಾದೊಂದಿಗೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬಂದ್ ಗೆ ಜನ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಿದ್ದಾರೆ. ರೈತರ ನೋವನ್ನು ಇನ್ನಾದರೂ ಅರಿತುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಿಗೆ ಧಾವಿಸಬೇಕು ಎಂದು ಹೇಳಿದರು.