ಸಹಾಯಧನ, ನಿವೇಶನ, ಬಂದರು ಅಭಿವೃದ್ಧಿ.. ಮೀನುಗಾರರಿಗೆ ಬಂಪರ್ ಬಜೆಟ್
ತಮ್ಮ 12ನೇ ಬಜೆಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿ ಜಿಲ್ಲೆಗಳ ಮೀನುಗಾರರಿಗೆ ಸಹಾಯಧನ, ನಿವೇಶನಗಳ ಜತೆಗೆ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ.
ಬೆಂಗಳೂರು, ಮಾರ್ಚ್ 15: ತಮ್ಮ 12ನೇ ಬಜೆಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿ ಜಿಲ್ಲೆಗಳ ಮೀನುಗಾರರಿಗೆ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮೀನುಗಾರರಿಗೆ ಸಹಾಯಧನ, ನಿವೇಶನಗಳನ್ನು ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜತೆಗೆ ಮಂಗಳೂರಿನಲ್ಲಿ ಮತ್ತು ಮಲ್ಪೆಯಲ್ಲಿ ಮೀನುಗಾರಿಗಾ ದೋಣಿಗಳ ನಿಲುಗಡೆಗೆ ಜಟ್ಟಿ ನಿರ್ಮಾಣ ಹಾಗೂ ಕಾರವಾರದಲ್ಲಿ ಬಂದರು ನಿರ್ಮಾಣ ಮಾಡಲಾಗುವುದಾಗಿಯೂ ಬಜೆಟಿನಲ್ಲಿ ಹೇಳಿದ್ದಾರೆ.[ಮಾಂಸದಂಗಡಿಗೆ ಸಹಾಯಧನ, ಕುತೂಹಲ ಹುಟ್ಟಿಸಿದ ಸಿದ್ದರಾಮಯ್ಯ ನಡೆ]
ಜಟ್ಟಿ ನಿರ್ಮಾಣ
ಮಲ್ಪೆ ಮತ್ತು ಮಂಗಳೂರು ಮೀನುಗಾರಿಕೆ ಬಂದರುಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕಾಗಿ 75 ಮೀ. ಉದ್ದದವರೆಗೆ ಜಟ್ಟಿ ವಿಸ್ತರಣೆ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮೀನುಗಾರಿಕಾ ದೋಣಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದ ಮೀನುಗಾರರಿಗೆ ಉಪಯೋಗವಾಗಲಿದೆ.
'ಮತ್ಸ್ಯ ಕೃಷಿ ಆಶಾ ಕಿರಣ'
ಮತ್ಸ್ಯ ಕೃಷಿ ಆಶಾ ಕಿರಣ ಯೋಜನೆಯಡಿ ಪ್ರಮುಖ ಕೆರೆಗಳ 2500 ಹೆಕ್ಟೇರ್ ಪ್ರದೇಶದಲ್ಲಿ ಹೆಕ್ಟೇರ್ಗೆ 4,000 ಬಲಿತ ಮೀನುಮರಿ ಸಾಕಣೆಗೆ ಹಾಗೂ 2 ಟನ್ ಕೃತಕ ಆಹಾರ ಖರೀದಿಗೆ ಘಟಕ ವೆಚ್ಚದ ಶೇ.50ರಷ್ಟು ಅಥವಾ ಗರಿಷ್ಟ 27, 0000 ರೂ. ಸಹಾಯಧನ. ಇದಕ್ಕಾಗಿ ಬಜೆಟಿನಲ್ಲಿ 6.75 ಕೋಟಿ ರೂಪಾಯಿ ಎತ್ತಿಡಲಾಗಿದೆ.[ಬಜೆಟ್: ಸಾಲ ಮನ್ನಾ ಇಲ್ಲ, ನೀರಾಕ್ಕೆ ಲೈಸನ್ಸ್, ಕೃಷಿಗೆ ಸಿದ್ದು ನೀಡಿದ್ದೇನು?]
ಮೀನು ಕೃಷಿಗೆ ಉತ್ತೇಜನ
ಕೃಷಿಕರಿಗೆ ಅವರ ಜಮೀನುಗಳಲ್ಲಿ ಕೊಳ ನಿರ್ಮಿಸಿ ಸಾಂದ್ರೀಕೃತ ಮೀನು ಕೃಷಿ ಕೈಗೊಳ್ಳಲು ಉತ್ತೇಜನ. ಹೂಡಿಕೆ ವೆಚ್ಚ ಸೇರಿದಂತೆ ಮೀನು ಕೊಳ ನಿರ್ಮಾಣದ ಘಟಕ ವೆಚ್ಚ 8.5 ಲಕ್ಷ ರೂ. ಹಾಗೂ ಗರಿಷ್ಠ 4.25 ಲಕ್ಷ ರೂ.ಗೆ ಒಳಪಟ್ಟು ಶೇ.50ರಷ್ಟು ಸಹಾಯಧನ.
ಸಂಗ್ರಹಣೆ ಮತ್ತು ಮಾರುಕಟ್ಟೆಗೆ ಪ್ರೋತ್ಸಾಹ ಧನ
ಮೀನುಗಾರರ ಸಹಕಾರ ಸಂಘಗಳಿಗೆ ತಮ್ಮ ಸ್ವಂತ ನಿವೇಶನದಲ್ಲಿ ಕನಿಷ್ಟ 500 ಚದರಡಿಯ ಮೀನು ಸಂಗ್ರಹಣೆ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಿಸಲು ಶೇ. 75 ರಷ್ಟು ಸಹಾಯಧನ; ಗರಿಷ್ಠ ಘಟಕ ವೆಚ್ಚ 10 ಲಕ್ಷ ರೂ. ಪ್ರಸಕ್ತ ಸಾಲಿನಲ್ಲಿ 20 ಕಟ್ಟಡಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಮಂಜುಗಡ್ಡೆ ಸ್ಥಾವರಗಳಿಗೆ ಸಹಾಯಧನ
ಕಡಲ ತೀರದ 3 ಜಿಲ್ಲೆಗಳಲ್ಲಿ200 ಮಂಜುಗಡ್ಡೆ ಸ್ಥಾವರಗಳಿಗೆ ಹಾಗೂ 35 ಶೈತ್ಯಾಗಾರಗಳಿಗೆ ವಿದ್ಯುಚ್ಛಕ್ತಿ ಮೇಲೆ ನೀಡುವ ಸಹಾಯಧನ ಪ್ರತಿ ಯುನಿಟ್ಗೆ 1.75ರೂ. ಗಳಿಗೆ ಹೆಚ್ಚಳ ಹಾಗೂ ಪ್ರತಿ ವರ್ಷ ಪ್ರತಿ ಸ್ಥಾವರಕ್ಕೆ ಇರುವ ಮಿತಿ 3.5 ಲಕ್ಷ ರೂ.ಗಳಿಗೆ ಹೆಚ್ಚಳ. ಇದಕ್ಕಾಗಿ ಬಜೆಟಿನಲ್ಲಿ 6 ಕೋಟಿ ರೂ. ಮೀಸಲು
3,000 ಜನರಿಗೆ ನಿವೇಶನ
ಮತ್ಸ್ಯಾಶ್ರಯ ಯೋಜನೆ ಅಡಿ 3,000 ಫಲಾನುಭವಿಗಳ ಆಯ್ಕೆ. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆಗಳ ಅನುಷ್ಠಾನ.
ಕಾರವಾರ ಬಂದರು ಅಭಿವೃದ್ಧಿ
ಕಾರವಾರ ಬಂದರಿನಲ್ಲಿ ಆಮದು / ರಫ್ತು ಚಟುವಟಿಕೆಗಳ ಉತ್ತೇಜನಕ್ಕೆ ಹೆಚ್ಚುವರಿಯಾಗಿ 14 ಮೀ. ಆಳದ 5 ಹಡಗುಗಳ ನಿಲುಗಡೆಗೆ 1508 ಮೀ. ಉದ್ದದ ದಕ್ಕೆಯನ್ನು ನಿರ್ಮಿಸಲು ವಿಸ್ತೃತ ಯೋಜನಾ ವರದಿ ತಯಾರಿಕೆ.