ಗೋಮಾತೆ ಮೇಲೆ ಪ್ರಮಾಣ ಮಾಡಿ: ಯಡಿಯೂರಪ್ಪಗೆ ಸಿದ್ದರಾಮಯ್ಯ ಸವಾಲು!
ಬೆಂಗಳೂರು, ಡಿ. 09: ವಿಪಕ್ಷಗಳ ತೀವ್ರ ವಿರೋಧದ ಮಧ್ಯೆ ವಿಧಾಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ರಾಜ್ಯ ಬಿಜೆಪಿ ಸರ್ಕಾರ ಅಂಗೀಕಾರ ಪಡೆದುಕೊಂಡಿದೆ. ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಈ ವಿಧೇಯಕವನ್ನು ಮಂಡಿಸಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಜೊತೆಗೆ ಈ ಹಿಂದೆ ನಡೆದಿದ್ದ ಕಲಾಪ ಸಲಹಾ ಸಮಿತಿ ಸಭೆಯಲ್ಲಿಯೂ ಗೋ ಹತ್ಯೆ ನಿಷೇಧ ಕಾನೂನನ್ನು ಪ್ರಸಕ್ತ ಆಧಿವೇಶನದಲ್ಲಿ ಮಂಡಿಸುವುದಿಲ್ಲ ಎಂದು ಸರ್ಕಾರ ವಿಪಕ್ಷಗಳಿಗೆ ಭರವಸೆ ನೀಡಿತ್ತು ಎಂದು ಆರೋಪಿಸಿವೆ.
ಆದರೆ ಇಂದು (ಡಿ.09) ವಿಧಾನಸಭೆಯಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಏಕಾಏಕಿ ವಿಧೇಯಕ ಮಂಡನೆ ಮಾಡಿದರು. ಅದರಿಂದಾಗಿ ಸದನದಲ್ಲಿ ಗದ್ದಲ ಉಂಟಾಯ್ತು. ಕಾಂಗ್ರೆಸ್-ಜೆಡಿಎಸ್ ಸದಸ್ಯರ ತೀವ್ರ ವಿರೋಧದ ಮಧ್ಯೆ ಯಾವುದೇ ಚರ್ಚೆಯಿಲ್ಲದೆ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರವೂ ಆಯಿತು. ಕಾಂಗ್ರೆಸ್-ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡುವಾಗಲೇ ವಿಧೇಯಕಕ್ಕೆ ಸರ್ಕಾರ ಅಂಗೀಕಾರ ಪಡೆದುಕೊಂಡಿತು.
ಗೋಮಾತೆ ಮೇಲೆ ಪ್ರಮಾಣ ಮಾಡಿ
ಗೋ ಹತ್ಯೆ ನಿಷೇಧ ವಿಧೇಯಕವನ್ನು ಸಚಿವ ಪ್ರಭು ಚೌಹಾಣ್ ಅವರು ಮಂಡನೆ ಮಾಡುತ್ತಿದ್ದಂತೆಯೆ ಸದನದಲ್ಲಿ ಭಾರಿ ಗದ್ದಲ ಉಂಟಾಗಿ ಮುಂದೂಡಲಾಯ್ತು. ನಂತರ ಸದನ ಮತ್ತೆ ಸಮಾವೇಶಗೊಂಡಿತಾದರೂ ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದ್ದರು.
ಗೋ ಹತ್ಯೆ ನಿಷೇಧ: ಪ್ರಸ್ತಾವಿತ ಕಾಯ್ದೆಯಲ್ಲಿ ಏನೇನಿದೆ?
ವಿಧೇಯಕ ಮಂಡನೆ ವಿರೋಧಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ವಿಧೇಯಕವನ್ನು ಅಷ್ಟೊಂದು ರಹಸ್ಯವಾಗಿ ತಂದಿರುವುದರ ಉದ್ದೇಶ ಏನು? ಕಳ್ಳತನದಿಂದ ಕಾನೂನು ಯಾಕೆ ಮಾಡುತ್ತಿದ್ದೀರಿ? ಗೋಮಾತೆ ಮೇಲೆ ಪ್ರಮಾಣ ಮಾಡಿ ಹೇಳಿ ನೋಡೋಣ. ನಿನ್ನೆಯ ಬಿಎಸಿ ಸಭೆಯಲ್ಲಿ ಈ ಕಾಯಿದೆ ಬಗ್ಗೆ ಚರ್ಚೆ ನಡೆಯಿತಾ? ಗ್ರಾಮ ಪಂಚಾಯತಿ ಚುನಾವಣೆಗಾಗಿ ಕಾಯಿದೆ ತಂದಿದ್ದೀರಾ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಆಗ ಮಧ್ಯೆ ಪ್ರವೇಶ ಮಾಡಿದ ಕಾನೂನು ಸಚಿವ ಮಾಧುಸ್ವಾಮಿ ಅವರು, ವಿಧೇಯಕವನ್ನು ಮುಚ್ಚಿ ತಂದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಲು ಪ್ರಯತ್ನಿಸಿದರು.
ಸಿಎಂ ಯಡಿಯೂರಪ್ಪ ಮನವಿ
ವಿರೋಧ ಪಕ್ಷಗಳ ನಾಯಕರನ್ನು, ಸದಸ್ಯರನ್ನು ಸಮಾಧಾನ ಮಾಡಲು ಸಿಎಂ ಯಡಿಯೂರಪ್ಪ ಅವರು ವಿಫಲ ಯತ್ನ ನಡೆಸಿದರು. ಇವತ್ತು ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರವಾಗಿ ಪರಿಷತ್ಗೆ ಹೋಗಿ ಬರಬೇಕು. ನಾಳೆ ಸದನ ಮುಕ್ತಾಯ ಆಗುತ್ತದೆ. ಹೀಗಾಗಿ ಸಹಕರಿಸಿ ಎಂದು ಮನವಿ ಮಾಡಿಕೊಂಡರು. ಆದರೆ ಸಿಎಂ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ನಾಳೆ ಚರ್ಚೆ ಆದರೆ ಏನು ಪ್ರಳಯ ಆಗಿ ಬಿಡುತ್ತಾ? ಎಂದು ಸಿಎಂ ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡಿದರು.
ಝಗಮಗಿಸಿದ ಕೇಸರಿ ಶಾಲುಗಳು
ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಮಂಡನೆ ಸಂದರ್ಭದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಕೇಸರಿ ಶಾಲು ಹಾಕಿಕೊಂಡಿದ್ದರು. ಅವರಷ್ಟೇ ಅಲ್ಲ ಬಹಳಷ್ಟು ಸಚಿವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಸರಿ ಶಾಲು ಹಾಕಿಕೊಂಡು ವಿಧಾನಸಭೆಯಲ್ಲಿ ಹಾಜರಿದ್ದರು. ವಿಧಾನಸಭೆಯ ಹೊರಗೂ ಕೇಸರಿ ಶಾಲುಗಳನ್ನು ಹಾಕಿಕೊಂಡಿದ್ದ ಬಿಜೆಪಿ ನಾಯಕರಿಗೆ ಕೊರತೆ ಇರಲಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಎಚ್.ಕೆ. ಪಾಟೀಲ್ ಅವರು ಸ್ಪೀಕರ್ ಕಚೇರಿ ನಡೆಯನ್ನು ಪ್ರಶ್ನೆ ಮಾಡಿದರು.
ಸ್ಪೀಕರ್ ಕಚೇರಿಯಿಂದ ಕ್ರೀಯಾಲೋಪ
ನಿನ್ನೆ ನಮಗೆ ಕಪ್ಪು ಪಟ್ಟಿ ಧರಿಸಿ, ಸದನದ ಒಳಗೆ ಬರಲು ಮಾರ್ಷಲ್ಗಳು ಬಿಡಲಿಲ್ಲ. ಇವಾಗ ನೀವು ಸಚಿವರಿಗೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕೇಸರಿ ಬಣ್ಣ ಧರಿಸಲು ಹೇಗೆ ಅನುಮತಿ ಕೊಟ್ಟಿದ್ದೀರಿ? ಇದು ನಿಮ್ಮ ಕ್ರಿಯಾಲೋಪ ಅಲ್ಲವೇ? ಎಂದು ಸ್ಪೀಕರ್ ಕಾಗೇರಿ ಅವರನ್ನು ಎಚ್ ಕೆ ಪಾಟೀಲ್ ಪ್ರಶ್ನೆ ಮಾಡಿದರು. ಜೊತೆಗೆ ಕ್ರಿಯಾಲೋಪವಾಗಿದೆ ಎಂದು ಎಚ್.ಕೆ. ಪಾಟೀಲ್ ಆರೋಪಿಸಿದರು. ಆದರೆ ಆ ಆರೋಪವನ್ನು ಸ್ಪೀಕರ್ ನಿರಾಕರಿಸಿದರು.
ಸದನ ಬಹಿಷ್ಕರಿಸಿದ ಜೆಡಿಎಸ್-ಕಾಂಗ್ರೆಸ್
ಏಕಪಕ್ಷೀಯವಾಗಿ ಗೋ ಹತ್ಯೆ ವಿಧೇಯಕ ಮಂಡನೆ ಮಾಡಿದ್ದು ಸರಿಯಲ್ಲ ಎಂದು ಜೆಡಿಎಸ್ ಶಾಸಕ ಹೆಚ್ ಕೆ ಕುಮಾರಸ್ವಾಮಿ ಆರೋಪ ಮಾಡಿದರು. ಸದನ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿದಂತೆ ನಡೆದುಕೊಳ್ಳಬೇಕು. ಅಲ್ಲೊಂದು ಮಾತನಾಡುತ್ತೀರಿ, ಈಗ ಮತ್ತೊಂದು ರೀತಿಯಲ್ಲಿ ನಡೆದುಕೊಳ್ಳುತ್ತೀರಿ ಎಂದು ಹೆಚ್ ಕೆ ಕುಮಾರಸ್ವಾಮಿ ದೂರಿಸದರು. ಬಳಿಕ ಸ್ಪೀಕರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್
ವಿಧೇಯಕ ವಿರೋಧಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರ ಸಭಾತ್ಯಾಗದಿಂದ ಎಚ್ಚೆತ್ತ ಸ್ಪೀಕರ್ ಕಾಗೇರಿ ಅವರು, ಸದನಕ್ಕೆ ಬಹಿಷ್ಕಾರ ಹಾಕಬಾರದು, ಅಭಿಪ್ರಾಯಗಳಲ್ಲಿ ಭಿನ್ನತೆ ಇರಬಹುದು. ಆದರೆ ಸದನ ಬಹಿಷ್ಕಾರ ಸರಿಯಾದ ಕ್ರಮ ಅಲ್ಲ ಎಂದು ಸ್ಪೀಕರ್ ಕಾಗೇರಿ ಅವರು ಸದಸ್ಯರಲ್ಲಿ ಮನವಿ ಮಾಡಿದರು.
Recommended Video