ಮಾರ್ಚ್ 19ರಿಂದ 'ಕರವೇ' ಸುದ್ದಿ ವಾಹಿನಿ ಆರಂಭ
ಕರ್ನಾಟಕ ರಕ್ಷಣಾ ವೇದಿಕೆಯನ್ನು ಸಾಮಾನ್ಯವಾಗಿ ಕರವೇ ಎಂದು ಸಂಕ್ಷಿಪ್ತವಾಗಿ ಕರೆಯುತ್ತಾರೆ. ಇದೀಗ 'ಕರವೇ' ಹೆಸರಿನಲ್ಲಿ ಸುದ್ದಿ ವಾಹಿನಿಯೊಂದು ಕರ್ನಾಟಕದಲ್ಲಿ ಆರಂಭವಾಗುತ್ತಿದ್ದು ಮಾರ್ಚ್ 19ರಂದು ಉದ್ಘಾಟನೆಯಾಗಲಿದೆ.
ಬೆಂಗಳೂರು, ಮಾರ್ಚ್ 16: ಕರವೇ ಅಂದ್ರೆ ಸಾಕು ಎಲ್ಲರಿಗೂ ಥಟ್ಟನೆ ನೆನಪಾಗುವುದು ಕರ್ನಾಟಕ ರಕ್ಷಣಾ ವೇದಿಕೆ. ಕನ್ನಡ ನಾಡಿನ ಪರವಾಗಿ, ಕನ್ನಡಿಗರ ಪರವಾಗಿ ಧ್ವನಿಯೆತ್ತುವ ಕರ್ನಾಟಕ ರಕ್ಷಣಾ ವೇದಿಕೆಯು ಕರವೇ ಅಂತಲೇ ಹೆಚ್ಚು ಜನಪ್ರಿಯ.
ವಾಟ್ಸಾಪ್ ಬಳಸುವ ಕನ್ನಡಿಗರಿಗೆ ಗುರುವಾರ ಬೆಳಗ್ಗೆ ಒಂದು ಅಚ್ಚರಿ ಮೂಡಿಸುವ ಸಂದೇಶವೊಂದು ಹರಿದಾಡತೊಡಗಿತು. ಅದೇನೆಂದರೆ, ಕರವೇ ಹೆಸರಿನ ಟಿವಿ ವಾಹಿನಿಯೊಂದು ಶೀಘ್ರದಲ್ಲೇ ಬರಲಿದೆ ಎಂಬ ಸಂದೇಶ. ಅದಕ್ಕೆ ಬೆಂಬಲವಾಗಿ ಟಿವಿ ವಾಹಿನಿಯು ಮಾರ್ಚ್ 19ರಂದು ಉದ್ಘಾಟನೆಗೊಳ್ಳಲಿದೆ ಎಂಬ ಮಾಹಿತಿ, ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯ ಫೋಟೋದೊಂದಿಗೆ ಎಲ್ಲೆಡೆ ಹರಿದಾಡುತ್ತಿತ್ತು.
ಇನ್ನು, ವಾಹಿನಿಯ ಧ್ಯೇಯವಾಕ್ಯವಾಗಿ 'ಕ್ರಾಂತಿಯ ನಡೆ' ಎಂಬ ಸಾಲುಗಳನ್ನೇ ಆಯ್ಕೆ ಮಾಡಲಾಗಿದೆ.
ಈ ಕುರಿತು ಮಾಹಿತಿಗಾಗಿ ಕರವೇ ಸಂಘಟನೆ ಕಡೆಯವರನ್ನು 'ಒನ್ ಇಂಡಿಯಾ' ಸಂಪರ್ಕಿಸಿತು. "ಮಾರ್ಚ್ 19ರಂದು ಚಾನಲ್ ಉದ್ಘಾಟನೆಯಾಗಲಿದೆ. ಇದೊಂದು ರಾಜ್ಯ ಮಟ್ಟದ ವಾಹಿನಿಯಾಗಲಿದ್ದು 13-15 ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಲಿದೆ. ಮಾಜಿ ಪ್ರಧಾನಿಗಳಾದ ದೇವೇಗೌಡರು ವಾಹಿನಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣ ಗೌಡರು ವಾಹಿನಿಯ ಲಾಂಛನವನ್ನು ಬಿಡುಗಡೆ ಮಾಡಲಿದ್ದಾರೆ," ಎಂದು ಕರವೇಯ ವೀರೇಶ್ ಮಾಹಿತಿ ನೀಡಿದ್ದಾರೆ.
ಇನ್ನು ಜಗದೀಶ್ ನಾಗರಾಜ್ ಮತ್ತು ಅವರ ಜತೆಗಿರುವವರು ಈ ವಾಹಿನಿ ಆರಂಭಿಸುತ್ತಿದ್ದಾರೆ. ಇದಕ್ಕೂ ಕರ್ನಾಟಕ ರಕ್ಷಣಾ ವೇದಿಕೆಗೂ ಸಂಬಂಧವಿಲ್ಲ. ನಮ್ಮ ಸಂಘಟನೆಯ ಹಿತೈಷಿಗಳಾಗಿರುವುದರಿಂದ ನಾರಾಯಣ ಗೌಡರ ಅನುಮತಿ ಪಡೆದು ಚಾನಲ್ ಆರಂಭಿಸುತ್ತಿದ್ದಾರೆ ಎಂದು ವೀರೇಶ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸಿತ್ತಿರುವಂತೆ ಹೊಸ ಹೊಸ ಸುದ್ದಿ ವಾಹಿನಿಗಳು ಆರಂಭವಾಗುತ್ತಿದ್ದು ಇದೇ ಸಾಲಿಗೆ ಕರವೇಯೂ ಸೇರ್ಪಡೆಯಾಗಲಿದೆ.