ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರವೇಯಿಂದ #ಸಂಸ್ಕೃತವಿವಿಬೇಡ ಟ್ವಿಟ್ಟರ್‌ ಅಭಿಯಾನ ಯಶಸ್ವಿ

|
Google Oneindia Kannada News

ಬೆಂಗಳೂರು, ಜನವರಿ 16: ಕರ್ನಾಟಕ ರಕ್ಷಣಾ ವೇದಿಕೆ ಇಂದು ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವುದರ ವಿರುದ್ಧವಾಗಿ #ಸಂಸ್ಕೃತವಿವಿಬೇಡ #SayNoToSanskrit ಎಂಬ ಟ್ವಿಟ್ಟರ್ ಅಭಿಯಾನವನ್ನು ನಡೆಸಿದೆ. ಈ ಅಭಿಯಾನದ ಬಗ್ಗೆ ನಿನ್ನೆಯೇ ಮಾಹಿತಿ ನೀಡಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಟಿಎ ನಾರಾಯಣಗೌಡ್ರು, "ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸುವುದನ್ನು ನಾವು ವಿರೋಧಿಸಿ ಟ್ವಿಟ್ಟರ್‌ ಅಭಿಯಾನ ನಡೆಸೋಣ," ಎಂದು ಕರೆ ನೀಡಿದ್ದರು.

ಈ ಕರೆಯ ಭಾಗವಾಗಿ ಇಂದು ಭಾರತದಲ್ಲಿ #ಸಂಸ್ಕೃತವಿವಿಬೇಡ #SayNoToSanskrit ಎಂಬುವುದು ಭಾರೀ ಟ್ರೆಂಡಿಂಗ್‌ ಆಗಿದೆ. ಹಲವಾರು ಕನ್ನಡಿಗರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ #ಸಂಸ್ಕೃತವಿವಿಬೇಡ #SayNoToSanskrit ಎಂಭ ಹ್ಯಾಷ್‌ಟ್ಯಾಗ್‌ ಬಳಕೆ ಮಾಡುವ ಮೂಲಕ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.

ಉಡುಪಿ; ಕನ್ನಡ ಶಾಲೆಯಲ್ಲಿ ಮಕ್ಕಳಿದ್ದರೂ ಶಿಕ್ಷಕರಿಲ್ಲ!ಉಡುಪಿ; ಕನ್ನಡ ಶಾಲೆಯಲ್ಲಿ ಮಕ್ಕಳಿದ್ದರೂ ಶಿಕ್ಷಕರಿಲ್ಲ!

"ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಬೇಕಾಗಿಲ್ಲ. ಹಿಂದೆ ಇದೇ ಸಂಸ್ಕೃತ ಹೇರಿಕೆ ವಿರುದ್ಧ ಡಾ.ರಾಜಕುಮಾರ್ ಅವರ ನೇತೃತ್ವದಲ್ಲಿ ಗೋಕಾಕ್ ಚಳವಳಿ ನಡೆದಿತ್ತು. ಈಗ ಮತ್ತೆ ಅಂಥದ್ದೇ ಕಾಲ ಬಂದಿದೆ. ನಾಳೆ ಎಲ್ಲರೂ #ಸಂಸ್ಕೃತವಿವಿಬೇಡ #SayNoToSanskrit ಹ್ಯಾಶ್ ಟ್ಯಾಗ್‌ಗಳೊಂದಿಗೆ ಟ್ವೀಟ್ ಮಾಡಲು ಕೋರುತ್ತೇನೆ," ಎಂದು ಟಿಎ ನಾರಾಯಣಗೌಡ್ರು ಹೇಳಿದ್ದರು.

ಕರವೇ ನಾಯಕರ ಸರಣಿ ಟ್ವೀಟ್‌

"ಕನ್ನಡದ ಮಕ್ಕಳಿಗೆ ಕನ್ನಡದ ಬದಲು ಸಂಸ್ಕೃತವನ್ನು ಕಲಿಸುವ ದೊಡ್ಡ ಹುನ್ನಾರ, ಪಿತೂರಿಯನ್ನು ಗಮನಿಸುತ್ತಿದ್ದೇವೆ. ಸಂಸ್ಕೃತದ ಸಂಸ್ಥೆಗಳು, ಅಧ್ಯಾಪಕರು ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯವಾಗಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿರುವುದು ಇದಕ್ಕೆ ತಾಜಾ ಉದಾಹರಣೆ. ಇವರ ಸಂಚನ್ನು ವಿಫಲಗೊಳಿಸೋಣ," ಎಂದು ಟಿಎ ನಾರಾಯಣಗೌಡ್ರು ಟ್ವೀಟ್‌ ಮಾಡಿದ್ದಾರೆ.

"ಭಾರತ ಒಕ್ಕೂಟದಲ್ಲಿ ಎಲ್ಲ ರಾಜ್ಯಗಳೂ ತಮ್ಮ ನುಡಿಗಳನ್ನು ಪೊರೆಯುವ, ಬೆಳೆಸುವ ಹೊಣೆಗಾರಿಕೆಯನ್ನು ಹೊಂದಿವೆ. ಇದಕ್ಕೆ ಅಡ್ಡ ಬರುವವರು ಭಾರತದ ನುಡಿ ವೈವಿಧ್ಯದ ವಿರೋಧಿಗಳು. ಒಂದೆರಡು ನುಡಿಗಳಿಗೆ ಹೊರತಾಗಿ ಎಲ್ಲ ನುಡಿಗಳೂ ನಾಶವಾಗಬೇಕೆಂದು ಬಯಸುವವರು. ಇಂಥವರ ವಿರುದ್ಧ ನಾವು ಒಗ್ಗಟ್ಟಾಗಬೇಕಿದೆ," ಎಂದು ಕೂಡಾ ಹೇಳಿದ್ದಾರೆ.

"ಸಂಸ್ಕೃತ ಅಧ್ಯಾಪಕರುಗಳಿಗೆ ಕನ್ನಡ ನುಡಿಯ ಮೇಲೆ ಯಾಕಿಷ್ಟು ದ್ವೇಷ? ಯಾಕೆ ಇವರು ಕನ್ನಡ ನುಡಿಯನ್ನು ಕನ್ನಡದ ಮಕ್ಕಳಿಗೆ ಕಲಿಸಬಾರದು ಎಂದು ಹಠ ಹಿಡಿದಿದ್ದಾರೆ? ಇದು ದೊಡ್ಡ ಸಂಚಿನ ಭಾಗ. ಕನ್ನಡದ ಜಾಗದಲ್ಲಿ ಸಂಸ್ಕೃತವನ್ನು ತಂದು ತುರುಕುವ ಪಿತೂರಿ. ಕನ್ನಡಿಗರು ಈಗ ಎದ್ದು ನಿಲ್ಲಲೇಬೇಕಾದ ಕಾಲ," ಎಂದು ಕರೆ ನೀಡಿದ್ದಾರೆ.

KaRaVe successfully Holds #SayNoToSanskrit Campaign in Twitter

"ಕನ್ನಡದ ವಿರುದ್ಧ ಕೋರ್ಟಿಗೆ ಹೋದವರನ್ನು ಸರ್ಕಾರದ ಮುಖ್ಯಸ್ಥರು ಕರೆದು ಮಾತನಾಡಿ, ಸಮಸ್ಯೆ ಬಗೆಹರಿಸಬಹುದಿತ್ತು. ಕೋರ್ಟಿಗೆ ಹೋದವರೆಲ್ಲ ಸರ್ಕಾರ ನಡೆಸುತ್ತಿರುವ ಪಕ್ಷದ ಜತೆ ಕರುಳುಬಳ್ಳಿ ನಂಟು ಹೊಂದಿದವರು. ಹೀಗಾಗಿ ಸರ್ಕಾರವೇ ಈ ಪಿತೂರಿಯ ಭಾಗವಾಗಿದೆ ಎಂಬ ಅನುಮಾನ ನಮ್ಮದು," ಸಂದೇಹ ವ್ಯಕ್ತಪಡಿಸಿದ್ದಾರೆ.

ಕನ್ನಡದ ವಿರುದ್ಧ ಇದ್ದೇವೆ ಎಂದು ಸರ್ಕಾರವೇ ಘೋಷಿಸಲಿ

"ಒಂದು ಕಡೆ ಹೊಸ ಶಿಕ್ಷಣ ನೀತಿ ಅನ್ವಯ ಪದವಿ ಹಂತದಲ್ಲಿ ಕನ್ನಡ ಕಡ್ಡಾಯ ಮಾಡುವುದು. ಇನ್ನೊಂದೆಡೆ ತಮ್ಮ ಕರುಳುಬಳ್ಳಿ ಸಂಘಟನೆಗಳಿಂದ ಕೋರ್ಟಿಗೆ ಅರ್ಜಿ ಹಾಕಿಸುವುದು. ಈ ಕಳ್ಳಾಟಗಳು ಏಕೆ‌? ನಾವು ಕನ್ನಡದ ವಿರುದ್ಧ ಇದ್ದೇವೆ ಎಂದು ಸರ್ಕಾರವೇ ಘೋಷಿಸಿಕೊಂಡುಬಿಡಲಿ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸ್ಕೃತ ಅಧಿಕೃತ ಭಾಷೆ ಎಂದು ಪ್ರಸ್ತಾವನೆ ಸಲ್ಲಿಸಿದ್ದ ಅಂಬೇಡ್ಕರ್: ಸಿಜೆಐ ಬೋಬ್ಡೆಸಂಸ್ಕೃತ ಅಧಿಕೃತ ಭಾಷೆ ಎಂದು ಪ್ರಸ್ತಾವನೆ ಸಲ್ಲಿಸಿದ್ದ ಅಂಬೇಡ್ಕರ್: ಸಿಜೆಐ ಬೋಬ್ಡೆ

"ಗೋಕಾಕ್ ಚಳವಳಿ ಯಾಕೆ ನಡೆಯಿತೆಂಬುದನ್ನು ಒಮ್ಮೆ ನೆನಪಿಸಿಕೊಳ್ಳೋಣ. ಆಗಲೂ ಕೂಡಾ ಇದೇ ಸಂಸ್ಕೃತದ ಯಜಮಾನಿಕೆ ಮಾಡಲು ಬಯಸುವವರು ಕನ್ನಡದ ಬದಲು ಸಂಸ್ಕೃತ ಕಲಿಕೆಯ ಪಿತೂರಿ ನಡೆಸಿದ್ದರು. ಇಡೀ ರಾಜ್ಯವೇ ಆಗ ಒಂದಾಗಿ ಹೋರಾಡಿತ್ತು. ಈಗ ಅಂಥದ್ದೇ ಕಾಲ ಬಂದಿದೆ," ಎಂದು ತಿಳಿಸಿದ್ದಾರೆ.

"ಅಂದು ಗೋಕಾಕ್ ಚಳವಳಿಯಲ್ಲಿ ವರನಟ ಡಾ.ರಾಜಕುಮಾರ್ ಅವರು ಭಾಗವಹಿಸಿ ದೊಡ್ಡ ಸಂಚಲನ ಮೂಡಿಸಿದ್ದರು. ಈಗಲೂ ಅಂಥದ್ದೇ ಆಪತ್ತು ಎದುರಾಗಿರುವುದರಿಂದ ಕನ್ನಡದ ಸಾಹಿತಿ, ಕಲಾವಿದರು, ಚಿಂತಕರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಎಚ್ಚೆತ್ತುಕೊಂಡು ಈ ಪಿತೂರಿಗಳ ವಿರುದ್ಧ ನಿಲ್ಲಬೇಕಿದೆ," ಎಂದು ಕೂಡಾ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಟಿಎ ನಾರಾಯಣಗೌಡ್ರು ಹೇಳಿದ್ದಾರೆ.

"ದೇಶದಲ್ಲಿ ಒಟ್ಟು ಹದಿನಾರು ಸಂಸ್ಕೃತ ವಿಶ್ವವಿದ್ಯಾಲಯಗಳಿವೆ. ಸಂಸ್ಕೃತ ನುಡಿ ಆಡುವವರ ಸಂಖ್ಯೆ ಜಗತ್ತಲ್ಲಿ ಕೇವಲ 24,000. ಇಷ್ಟು ಜನರ ನುಡಿಗೆ ಹದಿನಾರು ವಿಶ್ವವಿದ್ಯಾಲಯಗಳ ಅಗತ್ಯವಾದರೂ ಏನಿತ್ತು. ನೆನಪಿಟ್ಟುಕೊಳ್ಳಿ, ಏಳು ಕೋಟಿ ಜನರು ಮಾತನಾಡುವ ಕನ್ನಡ ನುಡಿಗೆಂದು ಇರುವುದು ಒಂದೇ ವಿಶ್ವವಿದ್ಯಾಲಯ," ಎಂದು ಸರಣಿ ಟ್ವೀಟ್‌ನಲ್ಲಿ ಉಲ್ಲೇಖ ಮಾಡಿರುವ ಟಿಎ ನಾರಾಯಣಗೌಡ್ರು, "ಜಗತ್ತಿನ ಒಂದೇ ಕನ್ನಡ ವಿವಿಯಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಸಿಬ್ಬಂದಿಗೆ ಸಂಬಳ ಕೊಡಲೂ ಹಣವಿಲ್ಲ. ಕರವೇ ದೊಡ್ಡ ಅಭಿಯಾನ ನಡೆಸಿ, ಅನುದಾನ ಕೊಡುವಂತೆ ಒತ್ತಾಯಿಸಿದ ಮೇಲೆ ಒಂದಷ್ಟು ದುಡ್ಡು ಕೊಡಲಾಯಿತು. ಇದು ಸರ್ಕಾರಕ್ಕೆ ಕನ್ನಡದ ಮೇಲಿರುವ ಕಾಳಜಿ," ಎಂದಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ನೂರು ಎಕರೆ ಅರಣ್ಯ ಪ್ರದೇಶವನ್ನೇ ಸಂಸ್ಕೃತ ವಿವಿಗೆ ಕೊಡಲಾಗಿದೆ. ಇರುವ ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಓದಲು ವಿದ್ಯಾರ್ಥಿಗಳು ಬರುತ್ತಿಲ್ಲ. ಹೀಗಿರುವಾಗ ಇಷ್ಟು ದೊಡ್ಡ ಜಾಗವನ್ನು ಯಾಕೆ ಕೊಡಲಾಗಿದೆ? ಇದೇ ಜಾಗದಲ್ಲಿ ಇನ್ನೊಂದು ಕನ್ನಡ ವಿವಿ ತೆರೆಯಬಹುದಿತ್ತಲ್ಲವೇ?.

ಶಾಲೆಗಳಲ್ಲಿ ಸಂಸ್ಕೃತ ಶ್ಲೋಕ ಧಾರ್ಮಿಕ ಹಕ್ಕಿನ ಉಲ್ಲಂಘನೆಯೇ?ಶಾಲೆಗಳಲ್ಲಿ ಸಂಸ್ಕೃತ ಶ್ಲೋಕ ಧಾರ್ಮಿಕ ಹಕ್ಕಿನ ಉಲ್ಲಂಘನೆಯೇ?

Recommended Video

Virat Kohli ನಿರ್ಧಾರದಿಂದ ಆಘಾತಗೊಂಡ Rohit Sharma ಹೇಳಿದ್ದೇನು? | Oneindia Kannada

ಸಂಸ್ಕೃತ ವಿವಿಗೆಂದು ರಾಜ್ಯ ಸರ್ಕಾರ 359 ಕೋಟಿ ರುಪಾಯಿಗಳನ್ನು ಕೊಟ್ಟಿದೆ. ಕನ್ನಡ ವಿವಿಗೆ ಎರಡು ಕೋಟಿ ರುಪಾಯಿ ಕೊಡಲು ಹಿಂದೆಮುಂದೆ ನೋಡುವ ಸರ್ಕಾರ ಇಷ್ಟೊಂದು ಹಣವನ್ನು ಯಾರೂ ಕೇಳದೇ, ಯಾವ ಹೋರಾಟವೂ ನಡೆಯದೆ ಹೇಗೆ ನೀಡಿತು?," ಎಂದು ಟಿಎ ನಾರಾಯಣಗೌಡ್ರು ಪ್ರಶ್ನಿಸಿದ್ದಾರೆ.

"ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿವಿ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಜಾಗವನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಅನುದಾನವನ್ನೂ ಸಹ ಹಿಂದಕ್ಕೆ ಪಡೆಯಬೇಕು. ಕನ್ನಡಿಗರಿಗೆ ಸಂಸ್ಕೃತ ವಿವಿ ಬೇಕಾಗಿಲ್ಲ. ಸರ್ಕಾರ ಹಠಮಾರಿತನ ತೋರಿದರೆ ಕರ್ನಾಟಕ ರಕ್ಷಣಾ ವೇದಿಕೆ ಇಡೀ ರಾಜ್ಯದಾದ್ಯಂತ ಆಂದೋಲನ ಆರಂಭಿಸುತ್ತದೆ. ಇದರ ಪರಿಣಾಮವನ್ನು ಆಳುವ ಬಿಜೆಪಿ ಸರ್ಕಾರವೇ ಎದುರಿಸಬೇಕಾಗುತ್ತದೆ. ಸರ್ಕಾರ ಕನ್ನಡ ನುಡಿಯನ್ನು ಬದಿಗೆ ಸರಿಸಿ, ಸಂಸ್ಕೃತವನ್ನು ಹೇರುತ್ತಿರುವ ಕುರಿತು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ," ಎಂದು ಕೂಡಾ ಟ್ವೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.

"ಕರ್ನಾಟಕ ರಕ್ಷಣಾ ವೇದಿಕೆ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತದೆ. ಒಂದೊಮ್ಮೆ ಸರ್ಕಾರ ನಮ್ಮ ಹಕ್ಕೊತ್ತಾಯವನ್ನು ಈಡೇರಿಸದೇಹೋದಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಕೈಹಾಕಬೇಕಾಗುತ್ತದೆ. ನಂತರ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ," ಎಂದು ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Karnataka Rakshana Vedike(KaRaVe) successfully held #SayNoToSanskrit Campaign on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X