ನಗೆಪಾಟಲಿಗೀಡಾದ ಯಡಿಯೂರಪ್ಪ: ಕರವೇ ನಾರಾಯಣಗೌಡ ಟೀಕೆ
ಬೆಂಗಳೂರು, ಡಿಸೆಂಬರ್ 5: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಯ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಶನಿವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗುವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.
ಪ್ರತಿಭಟನೆಯನ್ನು ಪೊಲೀಸ್ ಬಳಸಿ ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನು ಬಿಜೆಪಿ ಸರ್ಕಾರ ನಡೆಸಿದರೂ ಕಾರ್ಯಕರ್ತರು ಅದಕ್ಕೆ ಎದೆಗುಂದದೆ ಪ್ರತಿಭಟನೆ ನಡೆಸಿದ್ದಾರೆ. ಇದು ಜನಜಾಗೃತಿ ಮೂಡಿಸುವ ಪ್ರತಿಭಟನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾಗಿ ನಡೆಯಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಜತೆಗೆ, ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನವನ್ನು ಕೇಳಿ ಪಡೆಯುವ ಶಕ್ತಿ ಇಲ್ಲದ ಯಡಿಯೂರಪ್ಪ, ಕೀಳು ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಟಿಎ ನಾರಾಯಣಗೌಡ ಕಿಡಿ
"ಮರಾಠಾ ಅಭಿವೃದ್ಧಿ ಪ್ರಾಧಿಕಾರ" ರಚನೆಯ ಹೆಸರಿನಲ್ಲಿ ಹೀನ ರೀತಿಯ ವೋಟ್ ಬ್ಯಾಂಕ್ ರಾಜಕಾರಣ ನಡೆಸಿ, ಕನ್ನಡದ ಜನತೆಯನ್ನು ಒಡೆದು ಆಳುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಪ್ರತಿಭಟನೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಟಿ.ಎ. ನಾರಾಯಣ ಗೌಡ ಅವರು ಸರಣಿ ಟ್ವೀಟ್ಗಳಲ್ಲಿ ಹೇಳಿದ್ದಾರೆ. ಮುಂದೆ ಓದಿ.
ಪೊಲೀಸರ ಬೆದರಿಕೆಗೆ ಸೊಪ್ಪುಹಾಕಿಲ್ಲ
ರಾಜ್ಯದ ನಾನಾ ಭಾಗಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟವನ್ನು ಬಿ.ಎಸ್.ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಪೊಲೀಸ್ ಬಲವನ್ನು ದುರುಪಯೋಗಪಡಿಸಿಕೊಂಡು ಹತ್ತಿಕ್ಕುವ ಪ್ರಯತ್ನ ನಡೆಸಿತು. ಆದರೂ ಸಹ ಎಲ್ಲ ಭಾಗಗಳಲ್ಲಿ ನಮ್ಮ ಕಾರ್ಯಕರ್ತರು ಪೊಲೀಸರ ಬೆದರಿಕೆಗೆ ಸೊಪ್ಪು ಹಾಕದೆ ಪ್ರತಿಭಟನೆ ದಾಖಲಿಸಿದ್ದಾರೆ.
ರಾಜ್ಯ ಸರ್ಕಾರದ ಕೀಳು ರಾಜಕಾರಣ
ಮರಾಠ ಪ್ರಾಧಿಕಾರದ ಹೆಸರಿನಲ್ಲಿ ರಾಜ್ಯ ಸರ್ಕಾರ ಮಾಡುತ್ತಿರುವ ಕೀಳು ರಾಜಕಾರಣದ ಕುರಿತು ಜನಜಾಗೃತಿ ಮೂಡಿಸುವ ಕೆಲಸ ಇಂದಿನ ಪ್ರತಿಭಟನೆಗಳಿಂದ ಆಗಿದ್ದು, ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳು ಮತ್ತು ಅವರ ಸಂಪುಟ ಸದಸ್ಯರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಲಿದ್ದೇವೆ ಎಂದಿದ್ದಾರೆ.
ಬಿಎಸ್ ಯಡಿಯೂರಪ್ಪ ಆಧುನಿಕ ಹಿಟ್ಲರ್ ಎಂದ ವಾಟಾಳ್ ನಾಗರಾಜ್
ಯಡಿಯೂರಪ್ಪ ನಗೆಪಾಟಲಿಗೆ
ಕರ್ನಾಟಕ ಸರ್ಕಾರ ನೌಕರರಿಗೆ ಸಂಬಳ ಕೊಡುವುದಕ್ಕೆ ಹಣವಿಲ್ಲದೆ ಗೋಳಾಡುತ್ತಿದೆ. ಕರ್ನಾಟಕಕ್ಕೆ ಒಕ್ಕೂಟ ಸರ್ಕಾರದಿಂದ ಬರಬೇಕಾದ ನೆರೆಪರಿಹಾರ ತರುವ ಯೋಗ್ಯತೆ ಇವರಿಗಿಲ್ಲ. ಜಿಎಸ್ ಟಿ ಬಾಕಿಹಣ ಕೊಡಿ ಎಂದು ಗಟ್ಟಿ ಧ್ವನಿಯಲ್ಲಿ ಕೇಳುವ ಶಕ್ತಿ ಇವರಿಗಿಲ್ಲ. ಪ್ರಾಧಿಕಾರಗಳ ಕೀಳು ರಾಜಕಾರಣ ನಡೆಸುತ್ತ ಯಡಿಯೂರಪ್ಪ ನಗೆಪಾಟಲಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ರಾಜೀನಾಮೆ ಕೊಟ್ಟು ಹೋಗಲಿ
ರಾಜ್ಯ ಸರ್ಕಾರ ನಿಗಮ-ಪ್ರಾಧಿಕಾರದ ಓಟ್ ಬ್ಯಾಂಕ್ ರಾಜಕಾರಣ ಕೈಬಿಟ್ಟು ಕೇಂದ್ರ ಸರ್ಕಾರದಿಂದ ಬರಬೇಕಿರುವ ಅನುದಾನಗಳನ್ನು ತರುವೆಡೆಗೆ ಗಮನ ಹರಿಸಬೇಕು. ಹೈಕಮಾಂಡ್ ಗುಲಾಮಗಿರಿ ಮಾಡದೆ ಜನರ ಪರವಾಗಿ ನಿಲ್ಲುವ ಧೈರ್ಯವಿಲ್ಲದೇ ಹೋದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಆಗ್ರಹಿಸಿದ್ದಾರೆ.