ರಾಷ್ಟ್ರೀಕೃತ ಬ್ಯಾಂಕುಗಳ ಎಲ್ಲಾ ಶಾಖೆಗಳಿಗೆ ಕರವೇ ನೀಡಿದ ಎಚ್ಚರಿಕೆ
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳ ಎಲ್ಲಾ ಶಾಖೆಗಳಿಗೆ ಹಿಂದಿ ಭಾಷೆ ಬಳಕೆಯ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಪತ್ರಿಕಾ ಹೇಳಿಕೆಯಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ.
ಬೆಂಗಳೂರು, ಏ 26: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳ ಎಲ್ಲಾ ಶಾಖೆಗಳಿಗೆ ಹಿಂದಿ ಭಾಷೆ ಬಳಕೆಯ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಕನ್ನಡ ಇಲ್ಲಿನ ಆಡಳಿತ ಭಾಷೆ ಎಂಬುದನ್ನು ಮರೆತು ವ್ಯವಹರಿಸುತ್ತಿವೆ. ಪದೇ ಪದೇ ನಾವು ಬ್ಯಾಂಕುಗಳಿಗೆ ನೀಡಿದ ಮನವಿಗಳು, ಎಚ್ಚರಿಕೆಗಳು ವಿಫಲವಾಗಿವೆ. [ಕ್ಯಾಂಟೀನ್ಗೆ ಇಂದಿರಾ ಹೆಸರು, ಕರವೇ ತೀವ್ರ ಆಕ್ಷೇಪ]
ಇತ್ತೀಚಿಗೆ ಎಲ್ಲಾ ಬ್ಯಾಂಕುಗಳು ಹಿಂದಿ ಭಾಷೆಯನ್ನು ಅನಗತ್ಯವಾಗಿ ಮೆರೆಸುತ್ತ, ಕನ್ನಡವನ್ನು ಕಡೆಗಣಿಸುತ್ತಿವೆ. ಬ್ಯಾಂಕ್ ಚಲನ್ ಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಉಳಿದುಕೊಂಡಿವೆ. ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರವನ್ನು ಪಾಲಿಸುವುದಾಗಿ ಹೇಳುವ ಬ್ಯಾಂಕುಗಳು ಹಿಂದಿಯನ್ನೇ ಪ್ರಧಾನವಾಗಿ ಬಳಸುತ್ತ, ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿವೆ ಎಂದು ನಾರಾಯಣ ಗೌಡ್ರು ಹೇಳಿದ್ದಾರೆ.
ಕೆಲವು ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಬರೆದ ಚೆಕ್ಗಳನ್ನು ಸ್ವೀಕರಿಸಲಾಗುತ್ತಿಲ್ಲ. ಕನ್ನಡದಲ್ಲಿ ಚಲನ್ ತುಂಬಿದರೆ ಅದನ್ನು ಸ್ವೀಕರಿಸುತ್ತಿಲ್ಲ. ಕೆಲವು ಬ್ಯಾಂಕುಗಳಲ್ಲಿ ಉತ್ತರ ಭಾರತೀಯ ಸಿಬ್ಬಂದಿಯೇ ತುಂಬಿಕೊಂಡಿದ್ದು, ಅವರು ಹಿಂದಿಯಲ್ಲೇ ಕನ್ನಡಿಗರೊಂದಿಗೆ ವ್ಯವಹಾರ ನಡೆಸುತ್ತಿದ್ದಾರೆ.
ಹಿಂದಿ ಬಾರದ ಗ್ರಾಹಕರು ಇದರಿಂದಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕನ್ನಡ ಬಾರದ ಸಿಬ್ಬಂದಿಯನ್ನೇ ನೇಮಿಸಿಕೊಳ್ಳುತ್ತಿರುವುದರಿಂದ ಎಲ್ಲೆಡೆ ಗ್ರಾಹಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೆಲ್ಲದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಆಗಾಗ ಧ್ವನಿ ಎತ್ತುತ್ತಲೇ ಬಂದಿದೆ ಎಂದು ಗೌಡರು ಹೇಳಿದ್ದಾರೆ.
ಹಿಂದಿ ಹೇರಿಕೆಯನ್ನು ತಡೆಯಲು ಕರವೇ ಮನವಿ ಮಾಡುತ್ತಲೇ ಬಂದಿದೆ. ಆದರೆ ಇತ್ತೀಚಿಗೆ ಇದೆಲ್ಲವೂ ಹೆಚ್ಚಾಗುತ್ತಲೇ ಇದೆ. ಅನಿವಾರ್ಯವಾಗಿ ಈಗ ರಾಜ್ಯದ ಎಲ್ಲ ಬ್ಯಾಂಕುಗಳ ವ್ಯವಸ್ಥಾಪಕರಿಗೂ ಈ ನೋಟೀಸನ್ನು ನೀಡುತ್ತಿದ್ದೇವೆ. ನಮ್ಮ ಕೆಲವು ಹಕ್ಕೊತ್ತಾಯಗಳು, ಮುಂದೆ ಓದಿ..
ಹಿಂದಿಯನ್ನು ಬಳಸಬಾರದು
1.ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಬ್ಯಾಂಕುಗಳು ಹಿಂದಿಯನ್ನು ಬಳಸಬಾರದು, ಕನ್ನಡ ಮತ್ತು ಇಂಗ್ಲಿಷ್ ಎರಡೇ ಭಾಷೆಯಲ್ಲಿ ವ್ಯವಹರಿಸಬೇಕು. ಆಡಳಿತ ಭಾಷೆ ಮತ್ತು ನಾಡಭಾಷೆಯಾಗಿ ಕನ್ನಡವಿರುತ್ತದೆ, ಕನ್ನಡ ಬಾರದವರಿಗೆ ಇಂಗ್ಲಿಷ್ ಇರುತ್ತದೆ. ಮೂರನೇ ಭಾಷೆಯ ಅವಶ್ಯಕತೆ ನಮಗೆ ಇರುವುದಿಲ್ಲ.
ಬ್ಯಾಂಕ್ ಸಿಬ್ಬಂದಿ ಕರ್ನಾಟಕದವರೇ ಆಗಿರಬೇಕು
2.ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕುಗಳ ಸಿಬ್ಬಂದಿ ಕರ್ನಾಟಕದವರೇ ಆಗಿರಬೇಕು. ಹೊರರಾಜ್ಯದ, ಕನ್ನಡ ಬಾರದ ಸಿಬ್ಬಂದಿ ನಿಮ್ಮಲ್ಲಿ ಇದ್ದರೆ ಅವರನ್ನು ಕೂಡಲೇ ತವರು ರಾಜ್ಯಗಳಿಗೆ ವರ್ಗಾಯಿಸಬೇಕು. ಮುಂದೆಯೂ ಸಹ ಕನ್ನಡಿಗರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು. ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಸಹ ಡಾ.ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ವರದಿಯ ಶಿಫಾರಸಿನಂತೆ ಶೇ. ನೂರಕ್ಕೆ ನೂರು ಕನ್ನಡಿಗರಿಗೇ ನೀಡಬೇಕು.
ಕನ್ನಡದಲ್ಲಿ ಮಾತ್ರ ವ್ಯವಹಾರ ನಡೆಯಬೇಕು
3.ಬ್ಯಾಂಕುಗಳನ್ನು ಇನ್ನು ಮುಂದೆ ಕನ್ನಡದಲ್ಲಿ ಮಾತ್ರ ವ್ಯವಹಾರ ನಡೆಯಬೇಕು. ಯಾರೇ ಸಿಬ್ಬಂದಿಯೂ ಹಿಂದಿಯಲ್ಲಿ ಗ್ರಾಹಕರೊಂದಿಗೆ ಮಾತನಾಡಕೂಡದು. ಒಂದು ವೇಳೆ ಗ್ರಾಹಕರಿಗೆ ಕನ್ನಡ ಬಾರದೇ ಇದ್ದ ಪಕ್ಷದಲ್ಲಿ ಮಾತ್ರ ಅವರೊಂದಿಗೆ ಇಂಗ್ಲಿಷ್ ನಲ್ಲಿ ವ್ಯವಹರಿಸಬೇಕು.
ಚಲನ್ಗಳು, ಚೆಕ್ ಪುಸ್ತಕಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮುದ್ರಣವಾಗಬೇಕು
4. ಚಲನ್ಗಳು, ಚೆಕ್ ಪುಸ್ತಕಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮುದ್ರಣವಾಗಬೇಕು. ಕನ್ನಡದಲ್ಲಿ ತುಂಬಿದ ಅರ್ಜಿಗಳು, ಚಲನ್ಗಳು, ಚೆಕ್ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಕೂಡದು. ಗ್ರಾಹಕರಿಗೆ ನೀಡುವ ದಾಖಲೆ, ಮಾಹಿತಿ ಎಲ್ಲವೂ ಕನ್ನಡ ಮತ್ತು ಇಂಗ್ಲಿಷ್ನಲ್ಲಿರಬೇಕು. ಹಿಂದಿಯಲ್ಲಿ ಯಾವುದೇ ದಾಖಲೆಗಳನ್ನು ನೀಡಕೂಡದು.
ನಾಮ, ಸೂಚನಾಫಲಕಗಳು ಕನ್ನಡದಲ್ಲೇ ಇರಬೇಕು
5.ರಾಷ್ಟ್ರೀಕೃತ ಬ್ಯಾಂಕುಗಳು ಸಂಪೂರ್ಣ ಕನ್ನಡಮಯವಾಗಬೇಕು ಮತ್ತು ಎಲ್ಲ ನಾಮಫಲಕಗಳು, ಸೂಚನಾಫಲಕಗಳು ಕನ್ನಡದಲ್ಲೇ ಇರಬೇಕು. ಕನ್ನಡದ ವಾತಾವರಣವನ್ನು ಸಿಬ್ಬಂದಿ ನಿರ್ಮಿಸಬೇಕು. ಈ ಎಲ್ಲ ಹಕ್ಕೊತ್ತಾಯಗಳನ್ನು ಒಂದು ವಾರದ ಒಳಗೆ ಎಲ್ಲ ಬ್ಯಾಂಕುಗಳು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾಡದ್ರೋಹಿ, ಕನ್ನಡದ್ರೋಹಿ ಬ್ಯಾಂಕುಗಳ ಎದುರು ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ.
ಬ್ಯಾಂಕ್ ಮ್ಯಾನೇಜರುಗಳೇ ಹೊಣೆ
ಆ ನಂತರದ ಬೆಳವಣಿಗೆಗಳಿಗೆ ಬ್ಯಾಂಕ್ ಮ್ಯಾನೇಜರುಗಳೇ ಹೊಣೆಯಾಗಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಇದಲ್ಲದೆ, ಬೆಂಗಳೂರಿನಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದೆಯೂ ತೀವ್ರ ಪ್ರತಿಭಟನೆ ಮಾಡಲಿದ್ದೇವೆ ಎಂದು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಪ್ರತಿಭಟನೆಗಳಿಗೆ ಅವಕಾಶವಾಗದಂತೆ ಈಗಲೇ ನಮ್ಮ ಎಲ್ಲ ಹಕ್ಕೊತ್ತಾಯಗಳನ್ನು ಜಾರಿಗೊಳಿಸಬೇಕೆಂದು ಮತ್ತೊಮ್ಮೆ ಆಗ್ರಹಿಸುತ್ತೇನೆ ಎಂದು ರಾಷ್ಟ್ರೀಕತ ಬ್ಯಾಂಕುಗಳಿಗೆ ನಾರಾಯಣ ಗೌಡರು ಎಚ್ಚರಿಕೆ ನೀಡಿದ್ದಾರೆ.