ಕನ್ನಡಿಗರಿಗೆ ಅನ್ಯಾಯ : ಮೋದಿಗೆ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಡಿಸೆಂಬರ್ 15 : ಸಿಬ್ಬಂದಿ ನೇಮಕಾತಿ ಆಯೋಗದ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಇರುತ್ತವೆ. ಕನ್ನಡಿಗರಿಗೆ ಇದರಿಂದ ಅನ್ಯಾಯವಾಗುತ್ತಿದೆ, ಅವರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ ಅಭಿಯಾನವನ್ನು ಆರಂಭಿಸಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಸಂದರ್ಶನ
ಇದಕ್ಕೆ ಪ್ರತಿಕ್ರಿಯೆಯಾಗಿ ಕನ್ನಡ ಅಭಿವೃದ್ದಿ ಪ್ರಾಧಿಕರದ ಅಧ್ಯಕ್ಷರಾದ ಪ್ರೊ. ಎಸ್ ಜಿ ಸಿದ್ದರಾಮಯ್ಯನವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕನ್ನಡದಲ್ಲೂ ಪರೀಕ್ಷೆ ನಡೆಸಲು ಒತ್ತಾಯಿಸಿದ್ದಾರೆ. ಕನ್ನಡಿಗರಿಗೆ ಮತ್ತು ದಕ್ಷಿಣ ಭಾರತೀಯರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಕೋರಿದ್ದಾರೆ. ಪತ್ರದ ಸಾರಾಂಶ ಕೆಳಗಿನಂತಿದೆ.
ಸರಕಾರಿ ಜಾಲತಾಣಗಳಲ್ಲಿ ಕನ್ನಡದ ಕಂಪು : ಸಿದ್ದು ಪಣ
ಗೌರವಾನ್ವಿತ ಸರ್,
ಕೇಂದ್ರ ಸರಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುತ್ತಿರುವ ಉದ್ಯೋಗ ನೇಮಕಾತಿಯಲ್ಲಿ (ಕನ್ನಡಿಗರಿಗೆ) ಆಗುತ್ತಿರುವ ಅನ್ಯಾಯವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಕರ್ನಾಟಕ ಮತ್ತು ಕೇರಳದಲ್ಲಿ ಕಾರಕೂನರು, ಅಸಿಸ್ಟಂಟ್ಸ್, ಡೇಟಾ ಎಂಟ್ರಿ ಆಪರೇಟರುಗಳು ಮುಂದಾದ ಹುದ್ದೆಗಳಿಗಾಗಿ 3,000ಕ್ಕೂ ಹೆಚ್ಚು ಹುದ್ದೆಗಳಿಗಾಗಿ ನೇಮಕಾತಿ ಮಾಡಿಕೊಳ್ಳುವುದಾಗಿ ಸ್ಟಾಫ್ ಸೆಲೆಕ್ಷನ್ ಕಮಿಷನ್ ಘೋಷಣೆ ಮಾಡಿದೆ. ಇದು ಕನ್ನಡಿಗರಲ್ಲಿ ಉತ್ಸಾಹ ತರುವ ಬದಲು ವಿಷಾದ ತುಂಬುವುದಕ್ಕೆ ಕಾರಣವಾಗಿದೆ.
ಇದಕ್ಕೆ ಕಾರಣವೇನೆಂದರೆ, ಸ್ಥಳೀಯರು ಯಾರೂ ಈ ಪರೀಕ್ಷೆಯನ್ನು ತಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಬರೆಯಬೇಕಾದ ಅನಿವಾರ್ಯತೆ ಕನ್ನಡಿಗರಿಗೆ ಎದುರಾಗಿದೆ. ಹೀಗಾಗೆ, ನೈಪುಣ್ಯತೆ ಇರುವ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಆತ ಕಳೆದುಕೊಳ್ಳುತ್ತಿದ್ದಾನೆ.
'ಕನ್ನಡ ನಾಮಫಲಕ ಹಾಕಿ, ಇಲ್ಲದಿದ್ದರೆ ದಂಡ ಕಟ್ಟಿ'
ಹಲವಾರು ದಶಕಗಳಿಂದ ಸ್ಟಾಫ್ ಸೆಲೆಕ್ಷನ್ ಕಮಿಷನ್, ಸ್ಥಳೀಯರಿಗೆ ಮಲತಾಯಿ ಧೋರಣೆ ತೋರುವ ಕಳಂಕವನ್ನು ಹೊತ್ತುಕೊಂಡಿದೆ. ಅದರಲ್ಲೂ ಕನ್ನಡಿಗರಿಗೆ ಮತ್ತು ದಕ್ಷಿಣ ಭಾರತದ ರಾಜ್ಯಗಳ (ಕರ್ನಾಟಕ ಮತ್ತು ಕೇರಳ) ಯುವಕರಿಗೆ ಉದ್ಯೋಗ ದೊರಕಿಸುವಾಗ ಸಮಾನ ಅವಕಾಶ ನೀಡುವಲ್ಲಿ ತಾರತಮ್ಯ ತೋರಿದೆ. ಉತ್ತರ ಭಾರತೀಯರಿಗೆ ಹೆಚ್ಚಿನ ಅವಕಾಶಗಳು ದೊರಕಿದರೆ, ದಕ್ಷಿಣ ಭಾರತೀಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ.
6 ತಿಂಗಳೊಳಗೆ ಕನ್ನಡ ಕಲಿಯದಿದ್ದರೆ ಕರ್ತವ್ಯದಿಂದ ಬಿಡುಗಡೆ
ಈ ಬಗೆಯ ಸಾಂಸ್ಕೃತಿಕ ದಬ್ಬಾಳಿಕೆ ರಾಷ್ಟ್ರೀಯ ಐಕ್ಯತೆಯನ್ನು ಛಿದ್ರ ಮಾಡುತ್ತಿದೆ. ನಮ್ಮ ದೇಶದ ಮೇಲೆ ಇದು ದುಷ್ಪರಿಣಾಮ ಬೀರಬಹುದು. ಬಲಿಷ್ಠ ಭಾರದ ಸಾಂವಿಧಾನಿಕ ನೀತಿಯನ್ನು ಎತ್ತಿಹಿಡಿಯಬೇಕಾದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ಸಮತೋಲನವನ್ನು ಸಾಧಿಸಬೇಕು.
ಕನ್ನಡಿಗರಿಗೆ ನ್ಯಾಯ ದೊರಕಬೇಕಾದರೆ, ಸಮಾನ ಅವಕಾಶ ಸಿಗಬೇಕಾದರೆ, ಈ ಪರೀಕ್ಷೆ ಕುರಿತು ಹೊರಡಿಸಲಾಗಿರುವ ನೋಟಿಫಿಕೇಷನ್ ಅನ್ನು ಮತ್ತು ಇತ್ತೀಚಿನ ನೇಮಕಾತಿಗಳನ್ನು ರದ್ದುಪಡಿಸಬೇಕೆಂದು ಮತ್ತು ಗ್ರ್ಯಾಜುವೇಟ್ ಲೇವೆಲ್ ಪರೀಕ್ಷೆಯನ್ನು ಅಸಿಂಧುವೆಂದು ಘೋಷಿಸಬೇಕೆಂದು ಸಂಬಂಧಿತ ಸಂಸ್ಥೆಗೆ ನಿರ್ದೇಶನ ನೀಡಬೇಕೆಂದು ತಮ್ಮ ಆಗ್ರಹಿಸುತ್ತೇನೆ.
ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.
ತಮ್ಮ ವಿಶ್ವಾಸಿ,
ಪ್ರೊ. ಎಸ್ ಜಿ ಸಿದ್ದರಾಮಯ್ಯ