ಹಾಸನಾಂಬೆ, ಹಸನ್ಮುಖಿ ಮಾತೆ ಕುರಿತ ಸ್ಥಳ ಪುರಾಣ
ಹಾಸನ,ಅ.24: ಹಾಸನ ಜಿಲ್ಲೆ ಅಧಿದೇವತೆ ಪುರಾಣ ಪ್ರಸಿದ್ಧ ಹಾಸನಾಂಬೆ ದರ್ಶನ ಭಾಗ್ಯ ಭಕ್ತರಿಗೆ ಗುರುವಾರ (ಅ.24) ದಿಂದ ಆರಂಭಗೊಂಡಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಗರ್ಭಗುಡಿಯಲ್ಲಿ ಸಪ್ತಮಾತೃಕೆಯರನ್ನು ಕಾಣಬಹುದಾಗಿದೆ.
ಪ್ರತಿ ಸಂವತ್ಸರದ ಅಶ್ವಯುಜ ಮಾಸದ ಹುಣ್ಣಿಮೆಯ ನಂತರದ ಗುರುವಾರ ದೇವಿಯ ಗರ್ಭಗುಡಿಯನ್ನು ತೆರೆಯಲಾಗುತ್ತದೆ. ಈ ಬಾರಿ 13 ದಿನಗಳ ಕಾಲ ದರ್ಶನ ಭಾಗ್ಯ ದೊರೆಯಲಿದೆ. ಕಳೆದ ವರ್ಷ ಹದಿನೈದು ದಿನಗಳ ಕಾಲ ದರ್ಶನದ ಅವಕಾಶ ಸಿಕ್ಕಿತ್ತು ಎಂದು ದೇಗುಲದ ಸಮಿತಿ ಸದಸ್ಯ ಪ್ರಸನ್ನ ಕೃಷ್ಣಮೂರ್ತಿ ಹೇಳಿದ್ದಾರೆ.
ದೇವಿಯ ಮೈಮೇಲೆ ಮುಡಿಸಿದ್ದ ಹೂವು ಹಾಗೂ ಗರ್ಭಗುಡಿಯಲ್ಲಿ ಹಚ್ಚಲಾಗಿರುವ ದೀಪದ ಜ್ಯೋತಿ, ದೇವಿಗಾಗಿ ಇಟ್ಟಿರುವ ನೈವೇದ್ಯವನ್ನು ಕಾಣಲು ಭಕ್ತರು ಕಾತುರದಿಂದ ನಗರಕ್ಕೆ ಆಗಮಿಸುತ್ತಿದ್ದಾರೆ.
ಕೃಷ್ಣಪ್ಪ ನಾಯಕ ಎಂಬ ಪಾಳೇಗಾರ 12ನೇ ಶತಮಾನದಲ್ಲಿ ನಿರ್ಮಿಸಿದ ದೇವಸ್ಥಾನದ ನೂತನ ಗೋಪುರ ನಾಳೆ ಉದ್ಘಾಟನೆಯಾಗಲಿದೆ. ನಾಳೆ ಮುಂಜಾನೆ ಅರಸು ವಂಶಸ್ಥರು ಬನ್ನಿಮರ ಕಡಿಯುವ ಮೂಲಕ ಪೂಜೆ ಸಲ್ಲಿಸಿ ನಂತರ ಹಾಸನಾಂಬೆಯ ಗರ್ಭಗುಡಿಯನ್ನು ತೆರೆಯಲಾಗುತ್ತದೆ.
ನಾಳೆ ದೇವಿಯ ದರ್ಶನ ಪ್ರಾರಂಭವಾಗಿ ನ.5ರವರೆಗೆ ಬಾಗಿಲು ತೆರೆದಿರುತ್ತದೆ. ನಂತರ ದೇವಿಗೆ ಅರಿಶಿನ, ಕುಂಕುಮ, ಬಳೆ ಸೇರಿದಂತೆ ಮಂಗಳ ದ್ರವ್ಯಗಳನ್ನು ಅರ್ಪಿಸಿ ಬಲಿಪಾಡ್ಯದ 3ನೇ ದಿನ ಗರ್ಭಗುಡಿಯನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮುಚ್ಚಲಾಗುತ್ತದೆ.
ದೇವಾಲಯದ ಸುತ್ತ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಮಾಡಿದ ಭಕ್ತರು ಸರತಿಯ ಸಾಲಿನಲ್ಲಿ ನಿಲ್ಲಲು ಬ್ಯಾರಿಕೇಡ್ ಹಾಕಲಾಗಿದೆ. ನೀರಿನ ವ್ಯವಸ್ಥೆ ರಾತ್ರಿ ಭಕ್ತರು ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಹಾಸನಾಂಬೆ ದೇಗುಲ ಸ್ಥಳ ಪುರಾಣಗಳ ಕಥೆಯನ್ನು ಮುಂದೆ ಓದಿ..
ಸಪ್ತಮಾತೃಕೆಯರ ನೆಲೆವೀಡು
ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮೀದೇವಿ, ವರಾಹಿ ಮತ್ತು ಚಾಮುಂಡಿ ವಾರಣಾಸಿ ಕಡೆಯಿಂದ ದಕ್ಷಿಣದ ಕಡೆಗೆ ವಿಹಾರಕ್ಕೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಇಲ್ಲೇ ನೆಲೆಸಲು ನಿರ್ಧರಿಸಿದರು. ಅವರುಗಳಲ್ಲಿ ವೈಷ್ಣವಿ, ಕುಮಾರಿ, ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗು ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಇನ್ನುಳಿದ ದೇವತೆಯರಾದ ಚಾಮುಂಡಿ, ವರಾಹಿ, ಇಂದ್ರಾಣಿ ನಗರ ಮಧ್ಯ ಭಾಗದ ದೇವಿಗೆರೆಯ ಬಳಿನೆಲೆಸಿದರು ಎನ್ನಲಾಗಿದೆ. ಸಪ್ತಮಾತೃಕೆಯರು ಸದಾ ನಗುವ ದೇವರೆಯರಾಗಿದ್ದಾರೆ ಹಾಗಾಗಿ ನಸುನಗುವ ದೇವತೆಗಳು ನೆಲೆಸಿರುವುದರಿಂದ ಹಸನ, ಹಾಸನವಾಗಿದೆ
ಐತಿಹಾಸಿಕ ಕಥೆ
ಮೌರ್ಯರ ನಂತರ ಚೋಳ ಅರಸರ ಅಧಿಪತಿಯಾದ ಬುಕ್ಕ ನಾಯಕ ಮತ್ತು ಅವನ ವಂಶಸ್ಥರು ಹೊಯ್ಸಳರಿಗೂ ಪೂರ್ವ ಕಾಲದಲ್ಲಿ ಇದು ಗಂಗರ ಆಡಳಿತಕ್ಕೆ ಈ ಪ್ರದೇಶ ಒಳಪಟ್ಟಿತ್ತು. ಬುಕ್ಕ ನಾಯಕನ ನಂತರ 12ನೆಯ ಶತಮಾನದಲ್ಲಿ ಕೃಷ್ಣಪ್ಪನಾಯಕ ಎಂಬ ಪಾಳೇಗಾರನಿಗೆ ಸೇರಿತ್ತು.
ನಾಯಕ ಒಮ್ಮೆ ಪ್ರಯಾಣ ಹೊರಟಾಗ ಒಂದು ಮೊಲ ಅಡ್ಡ ಬಂದು ಪಟ್ಟಣವನ್ನು ಪ್ರವೇಶಿಸಿತು. ಈ ಅಪಶಕುನದಿಂದ ನಾಯಕ ನೋಂದುಕೊಂಡನಂತೆ. ಆಗ ಅವನಿಗೆ ಹಾಸನಾಂಬೆ ಪ್ರತ್ಯಕ್ಷಳಾಗಿ, 'ಮಗು ಖಿನ್ನ ಮನಸ್ಸು ತೋರೆದು ಈ ಸ್ಥಳದಲ್ಲಿ ಒಂದು ಕೋಟೆಯನ್ನು ಕಟ್ಟು' ಎಂದು ಹೇಳಿದಳಂತೆ. ಹಾಗೇ ಒಂದು ಕೋಟೆಯನ್ನು ಕಟ್ಟಿ ಅದಕ್ಕೆ ಹಾಸನಾಂಬೆ ಎಂಬ ಹೆಸರಿಟ್ಟನೆಂದು ಹಾಸನ ತಾಲ್ಲೂಕಿನ ಕುದುರುಗುಂಡಿ ಗ್ರಾಮದಲ್ಲಿರುವ ಕ್ರಿ.ಶ.1140ರ ವೀರಗಲ್ಲಿನ ಶಿಲಾ ಶಾಸನದಿಂದ ತಿಳಿದು ಬರುತ್ತದೆ.
ದಂತ ಕಥೆಗಳು
ಚನ್ನಪಟ್ಟಣದಲ್ಲಿ ಮೇಯುತ್ತಿದ್ದ ಹಸುಗಳಲ್ಲಿ ಒಂದು ಪ್ರತಿ ದಿನ ಸಂಜೆಯ ಸಮಯದಲ್ಲಿ ಈ ಕಾಡಿನ ಒಂದು ಹುತ್ತದ ಮೇಲೆ ಹಾಲು ಸುರಿಸುತ್ತಿತ್ತಂತೆ. ಮನೆಯಲ್ಲಿ ಕರೆದರೆ ಹಾಲಿನ ಬದಲು ಬರೀ ರಕ್ತ ಬರುತ್ತಿತ್ತಂತೆ ಪ್ರತಿ ದಿನ ಯಾರು ಹಾಲನ್ನು ಕರೆದುಕೊಳ್ಳುತ್ತಿದ್ದಾರೆಂಬ ಅನುಮಾನದಿಂದ ಗಮನಿಸಿದಾಗ ವಾಸ್ತವದ ಸಂಗತಿ ತಿಳಿದು, ಆ ವಿಷಯವನ್ನು ಪಾಳೇಗಾರ ಕೃಷ್ಣಪ್ಪ ನಾಯಕನಿಗೆ ತಿಳಿಸಿದರಂತೆ. ಆಗ ಇದೇನು ಆಶುಭ ಎಂದು ಚಿಂತೆಯಲ್ಲಿರುವಾಗ ದೇವಿಯು ಆತನ ಕನಸಿನಲ್ಲಿ ಬಂದು, ಇಲ್ಲಿ ಒಂದು ಕೋಟೆಯನ್ನು ಕಟ್ಟುವಂತೆ ಹೇಳಿದಾಗ, ಆತ ಒಂದು ಕೋಟೆಯನ್ನು ಕಟ್ಟಿಸಿದನು. ಹಸುವು ಹಾಲು ಸೂಸುತ್ತಿದ್ದುದರಿಂದ ಈ ಸ್ಥಳಕ್ಕೆ ಹಸುವಿನ ಕೋಟೆ > ಹಸನ ಕೋಟೆ > ಹಾಸನ ಕೋಟೆ > ಹಾಸನ ಎಂಬ ಹೆಸರು ಬಂದಿದೆ ಎನ್ನಲಾಗಿದೆ.
ಕುತೂಹಲಕಾರಿ ಕಥೆ
ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ವಾಸವಿದ್ದರು. ಇಲ್ಲಿನ ದೇವತೆಯನ್ನು 'ಹಸನ್ ಬೀ' ಎಂದು ಕರೆಯುತ್ತಿದ್ದರು. ಇದು ಮುಸ್ಲಿಂ ದೇವತೆಯೂ ಹೌದು. ಇವರು ಹೇಳುವಂತೆ ಸೂಸೆಗೆ ಕಿರುಕುಳ ಕೊಡುತ್ತಿದ್ದ ಅತ್ತೆಯ ಕಾಟವನ್ನು ತಡೆಯುವುದಕ್ಕೆ ಆಗದೆ ದೇವಾಲಯದೊಳಗೆ ಹೋಗಿ ಬಾಗಿಲು ಮುಚ್ಚಿಕೊಂಡು ಅಲ್ಲೇ ಲೀನವಾಗಿ ಹೋದಳು.
ನಂತರ ಒಂದು ವರ್ಷದ ಬಳಿಕ ಬಾಗಿಲು ತೆರೆದರೆ ಅವಳ ಸುತ್ತಲೂ ಹುತ್ತ ಬೆಳೆದಿತ್ತು. ಜೋತೆಗೆ ಒಂದು ದೀಪ ಸಹ ಉರಿಯುತ್ತಿತ್ತು. ಹೀಗೆ ದೇವತೆಯಾದಳು. ಅವಳೇ ಹಸನ್ ಬೀ. ಈ ಹಸನ್ ಬೀಯ ಸಮಾಧಿ ಒಳಗಡೆ ಇದೆ ಎಂಬ ನಂಬಿಕೆಯಿದೆ. ಈ ಹಾಸನ್ ಬೀ ಎಂಬ ಪದ ಕಾಲದ ರಭಸಕ್ಕೆ ಸಿಲುಕಿ ಹಾಸನ್ ಬೀ > ಹಾಸನ ಬೀ > ಹಸನಬಿ > ಹಾಸನಾಂಬೆ > ಹಾಸನ ದು ಆಗಿರಬಹುದು ಎನ್ನಲಾಗುತ್ತದೆ.
ದೃಷ್ಟಿ ನಿವಾರಣೆ
ಹಾಸನಾಂಬೆಯ ಬಾಗಿಲನ್ನು ತೆರೆಯುವ ದಿವಸ ಎಲ್ಲಾ ತಳವಾರ ಮನೆತನದವರು ಹಾಜರಿದ್ದು ದೇವಿಯ ಗರ್ಭಗುಡಿಯ ಮುಂದೆ ಬಾಳೆ ಕಂದನ್ನು ಅರಸು ಮನೆತನದವರಿಂದ ನೆಟ್ಟು ದೇವಿಯನ್ನು ಭಜಿಸುತ್ತ ಅರಸು ಮನೆತನದವರಾದ ನರಸಿಂಹರಾಜು ಅರಸು ಬಾಳೆ ಕಂದನ್ನು ಕತ್ತರಿಸಿದ ನಂತರವೇ ದೇವಾಲಯದ ಬಾಗಿಲನ್ನು ತೆರೆಯುವುದು ಮೊದಲಿನಿಂದಲೂ ರೂಢಿ.
ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ಭಕ್ತರು ಹಾಸನಾಂಬೆಯ ದರ್ಶನ ಮಾಡಬಾರದು ಅದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಜನರ ನಂಬಿಕೆ. ಈ ಕಾರಣಕ್ಕೆ ದೃಷ್ಟಿ ನಿವಾರಣೆಗೆ ಬಾಳೆ ಮರವನ್ನು ಕಡಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡುವುದು ಸಂಪ್ರದಾಯ.
ಮೊದಲನೆಯ ದಿನ ಅಮ್ಮನವರಿಗೆ ಯಾವುದೇ ರೀತಿಯ ಆಭರಣ, ವಸ್ತ್ರಗಳ ವಿನ್ಯಾಸವಿರುವುದಿಲ್ಲ. ಭಕ್ತರಿಗೆ ಮುಕ್ತ ದರ್ಮ ದರ್ಶನಕ್ಕೆ ಅವಕಾಶವಿರುತ್ತದೆ. ಎರಡನೆಯ ದಿನದಿಂದ ದೇವಿಯ ಆಭರಣ ವಸ್ತಗಳನ್ನು ಜಿಲ್ಲಾ ಖಜಾನೆ(ಟ್ರೆಜರಿ)ಯಿಂದ ಪಲ್ಲಕ್ಕಿಯೊಂದಿಗೆ ದೇವಾಲಯಕ್ಕೆ ತಂದು ನಂತರ ವಿಜೃಂಭಣೆಯಿಂದ ಪೂಜೆ ಹಾಗೂ ನೈವೇದ್ಯ ಅರ್ಪಿಸಲಾಗುವುದು. ದೇವಿಯ ವಸ್ತ್ರಗಳನ್ನು ಹುಣಸಿನ ಕೆರೆಯಲ್ಲಿರುವ ಮಡಿವಾಳರು ಒಗೆದ ನಂತರ ಪುರೋಹಿತರು ಮಡಿಯಿಂದ ಅಮ್ಮನವರ ಮೀಸಲು ಮನೆಯಲ್ಲಿ ನಮಸ್ಕರಿಸಿ ಇಡುವರು.
ಸಪ್ತಮಾತೃಕೆ ಹಾಸನಾಂಬೆ
ದೀಪಾವಳಿ ಬೆಳಕಿನ ಹಬ್ಬದ ಹಿನ್ನೆಲೆಯಲ್ಲಿ ಸಪ್ತಮಾತೃಕೆಯರ ಹುಟ್ಟಿನ ಗುಟ್ಟು ಇದೆ. ದೇವತೆಗಳ ಪ್ರಾರ್ಥನೆಯನ್ನು ಮನ್ನಿಸಿದ ಶಿವ ಬ್ರಹ್ಮನ ವರದಿಂದ ಉನ್ಮತ್ತನಾದ ಅಂಧಕಾಸುರನ ವಧೆಗೆ ಸಿದ್ಧನಾಗುತ್ತಾನೆ. ನೆಲಕ್ಕೆ ಬೀಳುವ ಅಂಧಕಾಸುರನ ರಕ್ತದ ಪ್ರತಿ ಹನಿಯಿಂದಲೂ ಇನ್ನೊಬ್ಬ ಅಂಧಕಾಸುರನು ಹುಟ್ಟುತ್ತಿರಲು, ಅವನ ರಕ್ತ ನೆಲಕ್ಕೆ ಬೀಳುವುದನ್ನು ತಡೆಯುವ ಸಲುವಾಗಿ ತನ್ನ ಬಾಯಿಯಿಂದ ಶಿವನು ಒಬ್ಬ ಶಕ್ತಿಯನ್ನು (ಯೋಗೇಶ್ವರಿ) ಸೃಷ್ಟಿಸಿದ. ತರ ದೇವತೆಗಳು ಶಿವನ ಸಹಾಯಕ ತಮ್ಮ ಶಕ್ತಿಯನ್ನು ಕಳುಹಿಸಿದರು. ಹೀಗೆ ಜನ್ಮತಾಳಿದವರೇ ಸಪ್ತಮಾತೃಕೆಯರು . ಈ ಸಪ್ತಮಾತೃಕೆಯರಲ್ಲಿ ಹಾಸನಾಂಬ ದೇವಿಯೂ ಒಬ್ಬಳಾಗಿದ್ದಾಳೆ. ಸುದ್ದಿ ಮೂಲ: ದ್ಯಾವನೂರು ಮಂಜುನಾಥ್
ವಿಶಿಷ್ಟವಾದ ರಾವಣದ ಪ್ರತಿಮೆ
ದೇವಸ್ತಾನದ ಆವರಣದಲ್ಲಿ ರಾವಣನ ಪ್ರತಿಮೆ ಇದೆ. ಆಶ್ಚರ್ಯಕಾರಿಯಾದ ಸಂಗತಿ ಎಂದರೆ ಹತ್ತು ತಲೆಯ ಬದಲು ಒಂಬತ್ತು ತಲೆಗಳು ಇವೆ. ರಾವಣನ ರುಂದ್ರ ವೀಣಾ ನುಡಿಸುವ ಭಂಗಿ ಸೊಗಸಾಗಿ ಮೂಡಿಬಂದಿದೆ. ಚಿತ್ರಕೃಪೆ: ಶ್ರೀಕಾಂತ್ ಮಂಜುನಾಥ್