ಸಾರಾಂಶ : ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಕಲಿಕೆ ವಿಧೇಯಕ
ಬೆಂಗಳೂರು, ಏ. 1 : 1 ರಿಂದ 5ನೇ ತರಗತಿವರೆಗೆ ಮಾತೃಭಾಷೆ ಇಲ್ಲವೇ ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸುವುದು ಹಾಗೂ 1 ರಿಂದ 10ನೇ ತರಗತಿವರೆಗೆ ಒಂದು ಭಾಷೆಯಾಗಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವ ಎರಡು ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ.
ಮಂಗಳವಾರ ವಿಧಾನ ಸಭೆ ಮತ್ತು ವಿಧಾನಪರಿಷತ್ತಿನಲ್ಲಿ ವಿಧೇಯಕವನ್ನು ಮಂಡನೆ ಮಾಡಲಾಗಿತ್ತು. ಉಭಯ ಸದನಗಳು ಇದಕ್ಕೆ ಒಪ್ಪಿಗೆ ನೀಡಿವೆ. 1 ರಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಕಾನೂನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. [ಕನ್ನಡ ಕಡ್ಡಾಯ ಕಲಿಕೆ ಕೈ ಹಿಡಿದ ರಾಜ್ಯ ಸರ್ಕಾರ]
ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು, ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ಒಕ್ಕೂಟ ವ್ಯವಸ್ಥೆ ರಚನೆಯಾಗಿದೆ. ಇದರ ಅನ್ವಯ ರಾಜ್ಯಗಳ ಭಾಷೆಗೆ ಮಾನ್ಯತೆ ನೀಡಲಾಗಿದೆ. ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ಸಿಗುವ ವಿಶ್ವಾಸದ ಮೇಲೆ ಆರ್ಟಿಇ ಕಾಯ್ದೆಗೆ ತಿದ್ದುಪಡಿ ತಂದು ವಿಧೇಯಕ ರೂಪಿಸಲಾಗಿದೆ ಎಂದರು. [ಕಡ್ಡಾಯ ಕನ್ನಡ ಶಿಕ್ಷಣ ಹೋರಾಟಕ್ಕೆ ಮತ್ತೆ ಹಿನ್ನಡೆ]
ರಾಷ್ಟ್ರಪತಿಗಳಿಗೆ ರವಾನೆ : 1 ರಿಂದ 5ನೇ ತರಗತಿವರೆಗೆ ಮಾತೃಭಾಷೆ ಇಲ್ಲವೇ ಕನ್ನಡದಲ್ಲಿ ಕಡ್ಡಾಯವಾಗಿ ಶಿಕ್ಷಣ ನೀಡಲು ಆರ್ಟಿಇ ಕಾಯ್ದೆ 2009ರ ಸೆಕ್ಷನ್ 29 (ಎಫ್)ಗೆ ತಿದ್ದುಪಡಿ ತರಲಾಗಿದೆ. ಈ ವಿಧೇಯಕ ಜಾರಿಗೆ ರಾಷ್ಟ್ರಪತಿಗಳ ಒಪ್ಪಿಗೆ ಬೇಕಾಗಿದೆ. ಇದನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಕಳಿಸಲಾಗುತ್ತದೆ. [ಕನ್ನಡ ಮಾಧ್ಯಮ ಮಸೂದೆಗೆ ರಾಜ್ಯ ಕ್ಯಾಬಿನೆಟ್ ಒಪ್ಪಿಗೆ]
ಈ ವರ್ಷವೇ ಜಾರಿ : ರಾಜ್ಯದ ಎಲ್ಲಾ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಒಂದು ಭಾಷೆಯಾಗಿ ಕನ್ನಡ ಕಲಿಕೆ ಕಾನೂನು ಈ ವರ್ಷದಿಂದಲೇ ಜಾರಿಗೆ ಬರಲಿದೆ. ಕನ್ನಡ ಭಾಷಾ ಕಲಿಕೆ ವಿಧೇಯಕ 2015ಕ್ಕೆ ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿದ್ದು, ಇದಕ್ಕೆ ರಾಜ್ಯಪಾಲರ ಒಪ್ಪಿಗೆ ಸಾಕು ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಅನುದಾನ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಈ ಕಾನೂನು 2015-16ನೇ ಸಾಲಿನಿಂದಲೇ ಜಾರಿಗೆ ಬರಲಿದೆ. ತ್ರಿಭಾಷಾ ಸೂತ್ರದಡಿ ಪ್ರಥಮ ಭಾಷೆ ಸೇರಿದಂತೆ ಎರಡು ಭಾಷೆಗಳನ್ನು ವಿದ್ಯಾರ್ಥಿಯ ಆಯ್ಕೆಗೆ ಬಿಡಲಾಗಿದೆ. ಇಲ್ಲಿ ಪ್ರಥಮ ಭಾಷೆಯಾಗಿಯೂ ಕನ್ನಡ ಕಲಿಯಬಹುದು. ಇಲ್ಲವೇ ತೃತೀಯ ಭಾಷೆಯಾಗಿ ಕಲಿಯಬಹುದು.
ಎಲ್ಲಾ ವಿದ್ಯಾರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕಾಗಿದೆ. ಆದರೆ, ಸಿಬಿಎಸ್ಸಿ ಹಾಗೂ ಐಸಿಎಸ್ಸಿ ಪಠ್ಯಕ್ರಮ ಇರುವ ಶಾಲೆಗಳು ಇದರ ವ್ಯಾಪ್ತಿಗೆ ಒಳಪಡುವುದಿಲ್ಲ. ಮುಂದಿನ ದಿನಗಳಲ್ಲಿ ಈ ಶಾಲೆಗಳಲ್ಲೂ ಕನ್ನಡ ಕಡ್ಡಾಯಗೊಳಿಸಲಾಗುತ್ತದೆ ಎಂದು ಸಚಿವರು ಸದನಕ್ಕೆ ವಿವರಣೆ ನೀಡಿದರು.