ಇನ್ನು ಕನ್ನಡದಲ್ಲಿಯೂ ವಿಜ್ಞಾನ ಕಲಿಕೆ: ಕನ್ನಡ ಭಾಷೆಯಲ್ಲಿ ಪಿಸಿಎಂಬಿ ಪುಸ್ತಕ
ಬೆಂಗಳೂರು, ಆಗಸ್ಟ್ 20: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ಸಿಬಿಎಸ್ಇ ಪಠ್ಯಕ್ರಮದ ಪಿಸಿಎಂಬಿ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪಿಯು ಇಲಾಖೆಯ ಸಭಾಂಗಣದಲ್ಲಿ ಗುರುವಾರ ಪಿಯುಸಿಯ ಎನ್ಇಎಸ್ಆರ್ಟಿಸಿಯ ದ್ವಿತೀಯ ಪಿಯುಸಿ ತರಗತಿಯ ಪಿಸಿಎಂಬಿ ಪಠ್ಯಗಳ ಕನ್ನಡ ಅವತರಣಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅ.4 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿ ಉತ್ತೀರ್ಣರಾಗಿ ಪಿಯುಸಿಯಲ್ಲಿ ವಿಜ್ಞಾನ ಸಂಯೋಜನೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡ ಅವತರಣಿಕೆಗಳನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಇಲಾಖೆಯಲ್ಲಿ ಅತ್ಯಂತ ಪ್ರಮುಖ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. ಮುಂದೆ ಓದಿ...
ಇಂಗ್ಲಿಷ್ನಲ್ಲಿಯೇ ಬರೆಯಬೇಕಾಗಿತ್ತು
ಕಲಾ ವಿಭಾಗದ ಅಭ್ಯರ್ಥಿಗಳು ಮಾತ್ರವೇ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಆದರೆ ಪಿಸಿಎಂಬಿ ಸಂಯೋಜನೆಯ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದ ಪುಸ್ತಕಗಳು ಇಲ್ಲದೆ ಇರುವುದರಿಂದ ಅವರು ಇಷ್ಟವಿಲ್ಲದಿದ್ದರೂ ಇಂಗ್ಲಿಷ್ನಲ್ಲೇ ಬರೆಯಬೇಕಿತ್ತು. ಈಗ ಪುಸ್ತಕಗಳು ಕನ್ನಡ ಮಾಧ್ಯಮದಲ್ಲಿ ದೊರೆಯುವ ಅವಕಾಶವಾಗಿರುವುದರಿಂದ ಪಿಸಿಎಂಬಿ ವಿದ್ಯಾರ್ಥಿಗಳು ಸಹ ಇನ್ನು ಮುಂದೆ ಕನ್ನಡದಲ್ಲಿ ಬರೆಯಬಹುದಾಗಿದೆ. ಉಪನ್ಯಾಸಕರೂ ಸಹ ಕನ್ನಡದಲ್ಲಿ ಬೋಧಿಸಲು ಸಹಾಯಕವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗೂ ಅನುಕೂಲ
ಇದು ಸ್ಪರ್ಧಾತ್ಮಕ ಜಗತ್ತು. ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ದೇಶದ ಎಲ್ಲ ಭಾಗದ ಮಕ್ಕಳೊಂದಿಗೆ ನಮ್ಮ ಮಕ್ಕಳೂ ಸ್ಪರ್ಧಿಸಬೇಕಾಗಿದೆ. ನಮ್ಮ ಸಿಇಟಿ ಅಷ್ಟೇ ಅಲ್ಲ, ಜೆಇಇ, ನೀಟ್ ನಂತಹ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸ್ಪರ್ಧಿಸಲು ಅನುವಾಗುವಂತೆ 2013-14ರಿಂದ ನಮ್ಮ ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಪಠ್ಯಕ್ರಮಗಳನ್ನು ಕೇಂದ್ರೀಯ ಶಾಲಾ ಕಾಲೇಜುಗಳಲ್ಲಿ ಪ್ರಚಲಿತವಿರುವ ಪಠ್ಯಕ್ರಮಕ್ಕೆ ಬದಲಿಸಲಾಗಿದೆ. ನಮ್ಮ ರಾಜ್ಯದ ಬುದ್ಧಿವಂತ ಮಕ್ಕಳು ಯಾವುದೇ ರಾಜ್ಯದ ವಿದ್ಯಾರ್ಥಿಗಳೊಂದಿಗೆ ಸಮಬಲರಾಗಿ ಸ್ಪರ್ಧಿಸುವ ಉತ್ತಮ ಅವಕಾಶ ಇರುವುದರಿಂದ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಪಿಸಿಎಂಬಿ ಸಂಯೋಜನೆಯಲ್ಲಿ ಸಿಬಿಎಸ್ಇ ಪಠ್ಯಕ್ರಮ ಅಳವಡಿಸಿಕೊಂಡಿದ್ದು, ಎನ್ಸಿಇಆರ್ಟಿ ಪಠ್ಯಪುಸ್ತಕಗಳನ್ನು ನಮ್ಮ ಮಕ್ಕಳು ಓದಬೇಕಾಗಿತ್ತು ಎಂದು ಸಚಿವರು ಹೇಳಿದರು.
ಇಂಜಿನಿಯರಿಂಗ್ ಶುಲ್ಕ, ಕೌನ್ಸಲಿಂಗ್ ಬಗ್ಗೆ ಡಿಸಿಎಂ ಮಹತ್ವದ ಆದೇಶ
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿತ್ತು
ಸಿಬಿಎಸ್ಇ ಪಠ್ಯ ಅಳವಡಿಸಿಕೊಂಡಿದ್ದರಿಂದ ಇಂಗ್ಲಿಷ್ನಲ್ಲೇ ಪುಸ್ತಕಗಳಿದ್ದುದರಿಂದ ಕನ್ನಡ ಮಾಧ್ಯಮದಲ್ಲಿ ಎಸ್ಎಸ್ಎಲ್ಸಿ ಓದಿ ಪಿಯುಸಿ ಸೇರಿದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಅದನ್ನು ಮನಗಂಡು ಕನ್ನಡ ಮಾಧ್ಯಮದಲ್ಲಿ ಉತ್ತೀರ್ಣರಾಗಿ ಪಿಯುಸಿಯಲ್ಲಿ ವಿಜ್ಞಾನ ಸಂಯೋಜನೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 2015ರಿಂದಲೇ ಕನ್ನಡ ಮಾಧ್ಯಮಕ್ಕೆ ಪಠ್ಯಪುಸ್ತಕಗಳ ಅನುವಾದ ಒಂದು ಪ್ರಯತ್ನವಾಗಿತ್ತಾದರೂ ಅದು ಕೈಗೂಡಿರಲಿಲ್ಲ ಎಂದು ಸುರೇಶ್ ಕುಮಾರ್ ಹೇಳಿದರು.
ನಾಲ್ಕು ಸಮಿತಿಗಳಿಂದ ಕಾರ್ಯ
ಈ ಕಾರ್ಯವನ್ನು ಚುರುಕುಗೊಳಿಸಲು ಅನುವಾಗುವಂತೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಒಂದೊಂದರಂತೆ 4 ವಿವಿಧ ಸಮಿತಿಗಳನ್ನು ರಚಿಸಿ ಪಠ್ಯವನ್ನು ಪೂರ್ಣವಾಗಿ ಕನ್ನಡಕ್ಕೆ ಭಾಷಾಂತರಿಸಿ ಪುನರ್ ಪರಿಶೀಲಿಸಿ ಮುದ್ರಣ ಕಾರ್ಯವನ್ನು ಪೂರ್ಣಗೊಳಿಸಿದೆ.
ನೀಟ್, ಜೆಇಇ ಪರೀಕ್ಷೆ ಮುಂದೂಡಿಕೆ ಅರ್ಜಿ ತಿರಸ್ಕರಿಸಿದ ಸುಪ್ರೀಂ
ವಿಜ್ಞಾನ ಸಂಯೋಜನೆ ಹೊಂದಿರುವ ರಾಜ್ಯದ 650 ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಗ್ರಂಥಾಲಯಗಳಿಗೆ ಒಂದು ಸೆಟ್ ಪುಸ್ತಕಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳ ಗ್ರಂಥಾಲಯಗಳಿಗೆ ಹಾಗೂ ಆಸಕ್ತರಿಗೆ ಈ ಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಯದಲ್ಲಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ನೀಟ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಆಂಗ್ಲ ಮಾಧ್ಯಮದೊಂದಿಗೆ ಕನ್ನಡ ಮಾಧ್ಯಮದಲ್ಲೂ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ಅನುಕೂಲ
ಇಂಗ್ಲಿಷ್ನಲ್ಲಿ ಪಾಠ ಕೇಳಿ ಕನ್ನಡದಲ್ಲಿ ಪರೀಕ್ಷೆ ಬರೆಯುತ್ತಿದ್ದುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದುದನ್ನು ಮನಗಂಡು ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಮತ್ತು ಕಲಿಯಲು ಇಚ್ಛಿಸುವ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಇದು ಹೆಚ್ಚಿನ ಪ್ರೇರೇಪಣೆ ನೀಡಲಿದೆ. ಪಿಸಿಎಂಬಿ ಸಂಯೋಜನೆಯಲ್ಲಿ ಬೋಧನೆ ಇಂಗ್ಲಿಷ್ನಲ್ಲೇ ಇರುತ್ತದೆ. ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯಲು ಅವಕಾಶಗಳಿವೆ. ಈಗ ಪುಸ್ತಕಗಳು ಕನ್ನಡ ಮಾಧ್ಯಮದಲ್ಲಿ ದೊರೆಯುವುದರಿಂದ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಸರ್ಕಾರದ ಕನ್ನಡ ಬದ್ಧತೆ ಪ್ರಶ್ನಾತೀತ
ನಮ್ಮ ಸರ್ಕಾರದ ಕನ್ನಡ ಕುರಿತ ಬದ್ಧತೆಯು ಪ್ರಶ್ನಾತೀತವಾಗಿದ್ದು, ಕನ್ನಡ ಉಳಿವು ಮತ್ತು ಬೆಳವಣಿಗೆಗೆ ತನ್ನದೇ ಆದ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬಂದಿದೆ. ಇದೇ ಮೊದಲಬಾರಿಗೆ ಎನ್ಸಿಇಆರ್ಟಿ ಪುಸ್ತಕಗಳು ಕನ್ನಡ ಅವತರಣಿಕೆಯಲ್ಲಿ ದೊರೆಯುವಂತಾಗಿದೆ. ಈ ಮೂಲಕ ನಮ್ಮ ಸರ್ಕಾರದ ಕನ್ನಡಪರ ಕಾಳಜಿ ಮತ್ತೆ ವ್ಯಕ್ತವಾಗಿದೆ ಎಂದರು.
ಯಾವುದೇ ಪಠ್ಯಕ್ರಮದ ಕುರಿತು ವಿದ್ಯಾರ್ಥಿಗಳಿಗೆ ಆತಂಕವಿರುವುದು ಸಹಜ. ಅದರಲ್ಲೂ ಹೊಸ ಪಠ್ಯಕ್ರಮವು ಉಪನ್ಯಾಸಕರಾಗಲಿ ಇಲ್ಲವೇ ವಿದ್ಯಾರ್ಥಿಗಳಿಗಾಗಲೀ ತನ್ನದೇ ಆದ ಸವಾಲುಗಳನ್ನು ಮುಂದೊಡ್ಡುತ್ತದೆ ಎಂಬುದು ಸುಳ್ಳಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಇಂತಹ ಉಪಕ್ರಮಕ್ಕೆ ಮುಂದಾಗಿರುವುದು ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಎಲ್ಲರಿಗೂ ಅನುಕೂಲವಾಗಿದೆ ಎಂದರು.