ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ವೇಳಾಪಟ್ಟಿ
ಬೆಂಗಳೂರು, ನವೆಂಬರ್ 30 : ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡಿದೆ. 2016ರ ಫೆಬ್ರವರಿ 28ರಂದು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. 30 ಜಿಲ್ಲಾಧ್ಯಕ್ಷರು ಮತ್ತು 4 ಗಡಿ ರಾಜ್ಯಗಳ ಅಧ್ಯಕ್ಷ ಆಯ್ಕೆಗೂ ಚುನಾವಣೆ ನಡೆಯಲಿದೆ.
ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಪುಂಡಲೀಕ ಹಾಲಂಬಿ ಅವರ ಅಧಿಕಾರಾವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಅವರನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ. ಹೊಸ ಅಧ್ಯಕ್ಷರ ಆಯ್ಕೆಯಾಗಿ ನಡೆಯುವ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. [ಸ್ಮಾರ್ಟ್ ಸಿಟಿಗೆ ಕನ್ನಡದ ಹೆಸರು ಸಮರ್ಥ ನಗರ]
ಕೇಂದ್ರ ಚುನಾವಣಾಧಿಕಾರಿ ಎ.ನಾಗರಾಜ್ ಅವರು ಸಾಹಿತ್ಯ ಪರಿಷತ್ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಚುನಾವಣಾ ನೀತಿ ಸಂಹಿತೆಯೂ ಜಾರಿಗೆ ಬಂದಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ. [ಮೆಟ್ರೋದಲ್ಲಿ ಹಿಂದಿ : ಪ್ರತಿಭಟನೆಯ ದನಿಗೆ ಕಿವಿಯಾಗಬನ್ನಿ]
ಚುನಾವಣಾ ವೇಳಾಪಟ್ಟಿ : 2015ರ ಜನವರಿ 18 ರಿಂದ ಚುನಾವಣೆಗಾಗಿ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಜನವರಿ 18 ರಿಂದ 25ರ ತನಕ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ಜನವರಿ 28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಫೆಬ್ರವರಿ 1ರಂದು ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅಂದೇ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಫೆಬ್ರವರಿ 12ರೊಳಗೆ ಗಡಿನಾಡ, ಹೊರನಾಡ ಮತದಾರರಿಗೆ ಅಂಚೆ ಮೂಲಕ ಮತಪತ್ರಗಳನ್ನು ರವಾನಿಸಲಾಗುತ್ತದೆ.
ಫೆಬ್ರವರಿ 28ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನದ ಬಳಿಕ ಮತ ಎಣಿಕೆ ಆರಂಭವಾಗಲಿದೆ. ಮಾರ್ಚ್ 1ರಂದು ಅಂಚೆ ಮತ ಪತ್ರಗಳನ್ನು ಸ್ವೀಕರಿಸಲು ಕಡೆಯ ದಿನವಾಗಿದೆ. ಮಾರ್ಚ್ 2ರಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಫಲಿತಾಂಶ ಘೋಷಣೆ ಮಾಡಲಾಗುತ್ತದೆ.