ಕನ್ನಡ ಸಾಹಿತ್ಯ ಪರಿಷತ್ತು 'ನಾವಾಡುವ ನುಡಿಯೇ ಕನ್ನಡ ನುಡಿ' ವಿಶಿಷ್ಟ ಕಾರ್ಯಕ್ರಮ
ಬೆಂಗಳೂರು, ಜೂ.2: "ನಾವಾಡುವ ನುಡಿಯೇ ಕನ್ನಡ ನುಡಿ" ಎಂಬ ಶೀರ್ಷಿಕೆಯಡಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯಾದ್ಯಂತ ಭಾವಗೀತೆ, ಕವಿ-ಕಾವ್ಯ ಗೀತೆ ಹಾಗೂ ಚಲನಚಿತ್ರ ಗೀತೆಗಳ ಆಧಾರಿತ 'ಸಂಗೀತ- ನೃತ್ಯ' ಕಾರ್ಯಕ್ರಮ ನಡೆಸಲಾಗುವುದು ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿರವರು ತಿಳಿಸಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶವಾಗಿದೆ. ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಹಿನ್ನೆಲೆಯಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ್ನು "ಜನಸಾಮಾನ್ಯರ ಪರಿಷತ್ತನ್ನಾಗಿ" ರೂಪಿಸುವ ಉದ್ದೇಶದಿಂದ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇವುಗಳಲ್ಲಿ ಬಹಳ ಮುಖ್ಯವಾದದ್ದು "ನಾವಾಡುವ ನುಡಿಯೇ ಕನ್ನಡ ನುಡಿ" ಎನ್ನುವ ಕಾರ್ಯಕ್ರಮ. ಈ ಸಾಂಸ್ಕೃತಿಕ ಕಾರ್ಯಕ್ರಮವು ರಾಜ್ಯಾದ್ಯಂತ ನಡೆಯಲಿದ್ದು ಭಾವಗೀತೆ, ಕವಿ-ಕಾವ್ಯ ಗೀತೆ ಮತ್ತು ಚಲನಚಿತ್ರ ಗೀತೆಗಳನ್ನು ವಾದ್ಯಗೋಷ್ಠಿಯ ಸಹಕಾರದೊಂದಿಗೆ ಪ್ರಸ್ತುತಪಡಿಸಲಾಗುವುದು.
ಡಾ. ಮಹೇಶ ಜೋಶಿಯವರು ದೂರದರ್ಶನದ ಚುಕ್ಕಾಣಿ ಹಿಡಿದಾಗ 'ಮಧುರ ಮಧುರವೀ ಮಂಜುಳಗಾನ' ಎನ್ನುವ ಜನಪ್ರಿಯ ಕಾರ್ಯಕ್ರಮಗಳನ್ನು ಆಯೋಜಿಸಿ, ಜನಸಾಮಾನ್ಯರಿಂದ ದೂರವಾಗಿದ್ದ ದೂರದರ್ಶನವನ್ನು 'ಸಮೀಪ ದರ್ಶನ' ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ಮಾದರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮುಂಬರುವ ದಿನಗಳಲ್ಲಿ ಕನ್ನಡ ನಾಡಿನ ತೆರೆಯ ಮರೆಯಲ್ಲಿರುವ ಕಲಾವಿದರನ್ನು ಗುರುತಿಸಿ ಅಂತಹವರಿಗೆ ಸೂಕ್ತ ವೇದಿಕೆ ನೀಡಿ ಪ್ರೋತ್ಸಾಹಿಸುವುದಕ್ಕೆ ಅಧ್ಯಕ್ಷರು ಮುಂದಾಗಿದ್ದಾರೆ.
ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲೂ ಕಾರ್ಯಕ್ರಮ
ಸಂಗೀತ, ನೃತ್ಯದಲ್ಲಿ ತೊಡಗಿಸಿಕೊಂಡ ಕಲಾವಿದರು, ಅವಕಾಶ ವಂಚಿತರು, ಜೀವನದಲ್ಲೊಮ್ಮೆ ಬೃಹತ್ ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎನ್ನುವ ಕನಸು ಇಟ್ಟುಕೊಂಡಿರುವವರಿಗೆ ಸದಾವಕಾಶ ನೀಡಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ. ಕನ್ನಡದ ಚಿತ್ರಗೀತೆಗಳನ್ನು ಒಳಗೊಂಡ ಈ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುವವರಿಗೂ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕೋರಿದ್ದಾರೆ. ಈ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಗಳಲ್ಲಿಯೂ ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತದೆ.
ಹಾವೇರಿಯಲ್ಲಿ ಜರುಗಲಿರುವ 86ನೆ ಕನ್ನಡ ಸಾಹಿತ್ಯ ಸಮ್ಮೇಳನ
ಹಾವೇರಿಯಲ್ಲಿ ಜರುಗಲಿರುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ "ನಾವಾಡುವ ನುಡಿಯೇ ಕನ್ನಡ ನುಡಿ"ಯ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮವು ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡರು ರಚಿಸಿದ ಚಿತ್ರಗೀತೆಗಳನ್ನು ಆಧಾರಿಸಿ ಪ್ರಸ್ತುತಪಡಿಸಲಾಗುತ್ತದೆ.
ಸಂಗೀತ ಜ್ಞಾನವುಳ್ಳ, ನೃತ್ಯಸಂಯೋಜಕರಿಗೆ ಅವಕಾಶ
ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವ ಉದ್ದೇಶವನ್ನು ಪರಿಷತ್ತು ಹೊಂದಿದೆ. ಸಂಗೀತ ಜ್ಞಾನವುಳ್ಳ, ನೃತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಚಲನಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಬಲ್ಲ ಅಭ್ಯರ್ಥಿಗಳು ಅಥವಾ ತಂಡಗಳಿಗೆ ಅವಕಾಶ ಇರುತ್ತದೆ.
ಕಲಾವಿದ ವಿಶೇಷ ಪ್ರದರ್ಶನ ಕಸಾಪ ಯೂಟ್ಯೂಬ್ನಲ್ಲಿ ಲಭ್ಯ
ನಾವಾಡುವ ನುಡಿಯೇ ಕನ್ನಡ ನುಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂಥವರು ತಮ್ಮ ಸ್ವವಿವರದೊಂದಿಗೆ 30 ಜೂನ್ 2022 ರೊಳಗೆ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018 ಇಲ್ಲಿಗೆ ಕಳುಹಿಸಲು ತಿಳಿಸಲಾಗಿದೆ. ಇನ್ನು ಹೆಚ್ಚಿನ ಸಂಪರ್ಕಕ್ಕಾಗಿ : ಕಚೇರಿ ದೂರವಾಣಿ 080-26612991,26623584,22423867,26672992 ಇ-ಮೇಲ್ : [email protected], ವೆಬ್ಸೈಟ್ : www.kasapa.in, ಯೂಟ್ಯೂಬ್: http:www.youtube.comKannadaParishattu, ಫೇಸ್ಬುಕ್: ಕ.ಸಾ.ಪ. ಬೆಂಗಳೂರು ಇವುಗಳ ಮೂಲಕವೂ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ.