ಕರ್ನಾಟಕದಲ್ಲಿ ಹಿಂದಿ ತಲೆಯೆತ್ತಲು ಬಿಡಬಾರದು
ಪ್ರ : ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಿದರೆ ಕನ್ನಡಿಗರ ದನಿ ಕೇಂದ್ರ ಸರಕಾರಕ್ಕೆ ಬೇಗನೆ ತಲುಪುವಂತಾಗುತ್ತದಲ್ಲ?
ನಾ. ಗೌಡ : ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಇದನ್ನು ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಚಂದ್ರು ಅವರು ಬಿಜೆಪಿಯ ಸ್ಟಾಂಪ್ ಆಗಿದ್ದರು, ಈಗ ಕಾಂಗ್ರೆಸ್ ಸ್ಟಾಂಪ್ ಆಗಿದ್ದಾರೆ. ಅವರು ಎಲ್ಲವೂ ಗೊತ್ತಿತ್ತೂ ಗೊತ್ತಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ, ಕರವೇ ಕನ್ನಡಿಗರಲ್ಲಿ ಇದರ ಬಗ್ಗ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಶಿಕ್ಷಕರೂ ಸಹ ವಿದ್ಯಾರ್ಥಿಗಳಿಗೆ ಹಿಂದಿ ರಾಷ್ಟ್ರ ಭಾಷೆ ಎಂಬಂತೆ ಪಾಠ ಮಾಡುತ್ತದೆ. ಕಳೆದ ಶಿಕ್ಷಕರ ದಿನಾಚರಣೆಯಂದು ನಾನು ನನ್ನ ಭಾಷಣದಲ್ಲಿ, ಹಿಂದಿ ರಾಷ್ಟ್ರಭಾಷೆ ಅಂತ ದಾರಿ ತಪ್ಪಿಸಿದರೆ ಕನ್ನಡಕ್ಕೆ ದ್ರೋಹ ಮಾಡಿದಂತಾಗುತ್ತದೆ ಎಂದು ಸಾರಿದ್ದೇನೆ. ಹಿಂದಿ ಒಂದು ಸಂಪರ್ಕ ಭಾಷೆಯಷ್ಟೆ.
ಹಿಂದಿ ಧಿಕ್ಕರಿಸಿ ನಿಲ್ಲುವಂಥ ದಿಕ್ಕಿನಲ್ಲಿ ನಾವು ದಿಟ್ಟವಾಗಿ ನಿಲ್ಲಬೇಕು. ಹಿಂದಿ ತಲೆಯೆತ್ತಲು ಬಿಡಬಾರದು. ಹಿಂದಿ ಮಾತಾಡುವುದು, ಕಲಿಯಲು ಹೆಚ್ಚು ಆದ್ಯತೆ, ಹೆಚ್ಚು ಸಂಬಳ, ಬೋನಸ್ ನೀಡುವ ತಾರತಮ್ಯ ಮಾಡುವುದಾದರೆ ದೇಶ ಒಕ್ಕೂಟವಾಗಿ ಎಲ್ಲಿ ಉಳಿಯುತ್ತದೆ? ಕೇಂದ್ರ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕು.
ಪ್ರ : ಕರ್ನಾಟಕದಲ್ಲಿ ಎಷ್ಟೊಂದು ಕನ್ನಡಪರ ಸಂಘಟನೆಗಳಿವೆಯಲ್ಲ. ಅವುಗಳೊಂದಿಗೆ ಕರವೇ ಸಂಬಂಧ ಹೇಗಿದೆ? ಯಾವ ರೀತಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೀರಿ?
ನಾ. ಗೌಡ : ಕನ್ನಡದ ನಿಜವಾದ ಕಳಕಳಿ ಇಟ್ಟುಕೊಂಡವರು, ಕನ್ನಡದ ನುಡಿ, ನೆಲ, ಜಲ, ಸಂಸ್ಕಾರದ ರಕ್ಷಣೆಗಾಗಿ ಕಳಕಳಿ ಇಟ್ಟುಕೊಂಡಿರುವ ಸಂಘ ಸಂಸ್ಥೆಗಳೊಂದಿಗೆ ನಾವು ಕೈಜೊಡಿಸುತ್ತೇವೆ. ಆದರೆ, ವೈಯಕ್ತಿಕ ಕಾರಣಕ್ಕಾಗಿ, ಸ್ವಾರ್ಥಕ್ಕಾಗಿ, ಲಾಭಕ್ಕಾಗಿ, ದೌರ್ಜನ್ಯಕ್ಕಾಗಿ ಕನ್ನಡ ಸಂಘ ಕಟ್ಟಿಕೊಂಡಿರುವವರ ಜೊತೆ ಕೆಲಸ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಖಂಡಿತ ಸಿದ್ಧವಿಲ್ಲ.
ಪ್ರ : ಕನ್ನಡ ಚಿತ್ರಪ್ರದರ್ಶನದ ಸಮಸ್ಯೆ ಇನ್ನೂ ಹಾಗೇ ಇದೆಯಲ್ಲ?
ನಾ. ಗೌಡ : ಅದಕ್ಕೆ ಕನ್ನಡ ಚಿತ್ರರಂಗವೇ ಹೊಣೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಪರಭಾಷಾ ಚಿತ್ರಗಳನ್ನು ಧಿಕ್ಕರಿಸಿ ನಿಲ್ಲಬೇಕಾದ ಸಂಸ್ಥೆಯಾಗಿದ್ದರೂ, ಪರಭಾಷೆಗಳಿಗೆ ಮಾನ್ಯತೆ ಕೊಡುತ್ತಿದ್ದರೆ ನಾವೇನು ಮಾಡಬೇಕಾಗುತ್ತದೆ. ರಾಜ್ ಕುಮಾರ್ ಅವರ ಕೊನೆಯ ಹೋರಾಟದಲ್ಲಿ, ಯಾವುದೇ ಪರಭಾಷೆ ಚಿತ್ರ ಅನ್ಯರಾಜ್ಯದಲ್ಲಿ ಏಳು ವಾರ ಪ್ರದರ್ಶನ ಕಂಡನಂತರ ಇಲ್ಲಿ ಬಿಡುಗಡೆಯಾಗಬೇಕು ಎಂಬ ಕೂಗು ಎಬ್ಬಿಸಿದ್ದರು. ನಾವೂ ಹೋರಾಟ ನಡೆಸಿದೆವು.
ಮಾಗಡಿ ರಸ್ತೆಯ ಅಂಜನ್, ಕಿನೋ, ಅಜಂತಾ, ನಟರಾಜ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶನವಾಗುತ್ತಲೇ ಇರಲಿಲ್ಲ. ಅಂಥ ಚಿತ್ರಮಂದಿರಗಳು ಮತ್ತು ಮಲ್ಟಿಪೆಕ್ಸ್ ಗಳಲ್ಲಿ ಇಂದು ಕನ್ನಡ ಚಿತ್ರಗಳು ಪ್ರದರ್ಶನವಾಗುತ್ತಿವೆ. ಇದು ಕರವೇ ಹೋರಾಟದ ಫಲ. ನಾವು ಪರಭಾಷಾ ಚಿತ್ರಗಳನ್ನು ತಡೆದರೂ ವಾಣಿಜ್ಯ ಮಂಡಳಿ ಅವುಗಳಿಗೆ ಅನುಮತಿ ಕೊಡುತ್ತಿದ್ದಾರೆ.