ಕನ್ನಡಿಗರ ಕೈಯಲ್ಲಿ ಕನ್ನಡ ಸುರಕ್ಷಿತವಾಗಿದೆಯಾ?
ಪ್ರ : ಕರ್ನಾಟಕದಲ್ಲಿ ಕನ್ನಡಿಗರ ಕೈಯಲ್ಲಿ ಕನ್ನಡ ಇಂದು ಸುರಕ್ಷಿತವಾಗಿದೆಯೆ?
ನಾ. ಗೌಡ : ಒಳ್ಳೆ ಪ್ರಶ್ನೆ ಕೇಳಿದ್ದೀರಿ. ಕನ್ನಡಿಗರು ಕನ್ನಡ ಬಳಸದೆ ಹೋದರೆ, ನಾವು ಇತರರಿಗೆ ಕನ್ನಡ ಬಳಸಿ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಕನ್ನಡ ಬಳಕೆ ನಾವು ಮಾಡೇ ತೀರ್ತೀವಿ, ಕನ್ನಡದ ಬಳಕೆ ಮಾಡದಿದ್ದರೆ ಇರಲು ಸಾಧ್ಯವೇ ಇಲ್ಲ ಎನ್ನುವ ವಾತಾರವಣ ಸೃಷ್ಟಿಯಾದರೆ, ಕನ್ನಡಿಗರೇ ಹೆಚ್ಚು ಕನ್ನಡ ಬಳಸಿದರೆ ಕನ್ನಡ ಖಂಡಿತ ಉದ್ಧಾರವಾಗುತ್ತದೆ. ಕನ್ನಡಕ್ಕೆ ಇಂದು ಕುತ್ತು ಬಂದಿದೆ ಎನ್ನುವುದಾಗರೆ, ಅದು ಹೊರಗಡೆಯವರಿಂದ ಎಷ್ಟು ಬಂದಿದೆಯೋ, ಅದಕ್ಕಿಂತ ಎರಡರಷ್ಟು ಕನ್ನಡಿಗರಿಂದಲೂ ಬಂದಿದೆ ಎಂದು ಹೇಳಲು ಇಷ್ಟಪಡುತ್ತೇನೆ.
ಸರಕಾರವೂ ಅಷ್ಟೇ ಕನ್ನಡ ಓದುವ ಬರೆಯುವ ಕನ್ನಡಿಗರಿಗೆ ಬದುಕನ್ನು ಕಟ್ಟಿಕೊಡುವಂಥ ಶಕ್ತಿ, ತಾಕತ್ತು ಸರಕಾರಕ್ಕೆ ಬಂದರೆ ಕನ್ನಡ ಉದ್ಧಾರವಾಗತ್ತೆ. ಸರಕಾರ ಇಂದು ಜಾತಿ ಆಧಾರದ ಮೇಲೆ ಮೀಸಲಾತಿ ಕೊಡುತ್ತಿದೆ. ಆದರೆ, ಕನ್ನಡದಲ್ಲಿ ಪರೀಕ್ಷೆ ಬರೆದು ಪಾಸಾದ ಮಕ್ಕಳಿಗೆ, ಕನ್ನಡವನ್ನು ಹೆಚ್ಚು ಪ್ರೀತಿಸುವ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತದೆ ಎನ್ನುವುದಾಗಿಬಿಟ್ಟರೆ ಬಹುಶಃ ಕರ್ನಾಟಕದಲ್ಲಿ ಕನ್ನಡಿಗರು ಇನ್ನಷ್ಟು ಬಲಿಷ್ಠರಾಗುತ್ತಾರೆ ಎನ್ನುವುದು ನನ್ನ ಅಭಿಪ್ರಾಯ.
ಪ್ರ : ಈ ನಿಟ್ಟಿನಲ್ಲಿ ಕರವೇ ಹೋರಾಟ ಯಾವ ದಿಕ್ಕಿನಲ್ಲಿ ಸಾಗಿದೆ, ಎಷ್ಟು ಯಶಸ್ಸು ಲಭಿಸಿದೆ?
ನಾ. ಗೌಡ : ಬೀದಿಯಲ್ಲಿ ನಿಂತು ಹೋರಾಟ ಮಾಡುವುದರ ಜೊತೆಗೆ, ಕನ್ನಡ ಪ್ರೇಮ ಬೆಳೆಸುವಂಥ ಕಾರ್ಯಕ್ಕೆ ಕರವೇ ಬೃಹತ್ ಪ್ರಮಾಣದಲ್ಲಿ ಮುಂದಾಗಿದೆ. ರಾಜ್ಯದಲ್ಲಿರುವ ಎಲ್ಲ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ, ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿ, ರಾಜಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ 100 ಜನರ ಸಾಧಕರ ಬಗ್ಗೆ ತಿಳಿಸುವ 100 ಪುಟಗಳ ಪುಸ್ತಕಗಳನ್ನು 23 ಸಾವಿರ ಶಾಲೆಗಳ ಗ್ರಂಥಾಲಯಗಳಿಗೆ ತಲುಪಿಸುವ ಕೆಲಸಕ್ಕೆ ಕರವೇ ಮುಂದಾಗಲಿದೆ. ನಮ್ಮ ಮಕ್ಕಳಿಗೆ ನಮ್ಮ ಇತಿಹಾಸ, ನಮ್ಮತನ, ನಮ್ಮ ಸಂಸ್ಕಾರ, ಸಂಸ್ಕೃತಿ, ಆಚಾರವಿಚಾರ ತಿಳಿಸುವ ಕಾರ್ಯಕ್ರಮ ನ.10ರಂದು ನಡೆಸಲಾಗುತ್ತಿದೆ.
ಪ್ರ : ಕನ್ನಡ ಶಾಲೆ ಮುಚ್ಚುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ
ನಾ. ಗೌಡ : ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಇದರ ಬಗ್ಗೆ ಸರಕಾರ ದೊಡ್ಡ ಚಿಂತನೆ ಮಾಡಬೇಕಾಗಿದೆ. ಗಡಿಭಾಗಗಳಲ್ಲಿ ಇಂದು ಶಾಲೆಗಳಿಗೆ ಸರಿಯಾದ ಕಟ್ಟಡಗಳಿಲ್ಲ, ಶಿಕ್ಷಕರಿಲ್ಲ, ಶೌಚಾಲಯಗಳಿಲ್ಲ. ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿರುವುದರಿಂದ ಮಕ್ಕಳನ್ನು ಪಾಲಕರು ಶಾಲೆಗೆ ಕಳಿಸುತ್ತಿಲ್ಲ. ಕೆಲ ಶಿಕ್ಷಕರು ರಾಜಕಾರಣಿಗಳ ಸುತ್ತ ಸುತ್ತುತ್ತಿರುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ. ಸರಿಯಾಗಿ ಅಧ್ಯಯನ ಮಾಡಿ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಯಾವುದೇ ಕೊರತೆ ಇಲ್ಲ ಎನ್ನುವಂತೆ ಮಾಡಿದಾಗ ಮಕ್ಕಳು ಮತ್ತೆ ಕನ್ನಡ ಶಾಲೆಗೆ ಬರುವ ಪ್ರಯತ್ನ ಮಾಡುತ್ತಾರೆ.
ಕನ್ನಡ ವ್ಯಾಸಂಗ ಮಾಡುವುದರಿಂದ ಇಲ್ಲಿ ಉದ್ಯೋಗ ಸಿಗುತ್ತೆ. ಇಲ್ಲಿ ಓದಿ ಇನ್ನೆಲ್ಲೋ ಬದುಕಿ ಕಟ್ಟಿಕೊಳ್ಳುವುದು ಸಾಧ್ಯವಿಲ್ಲ. ಎಲ್ಲಿ ಕಳಕೊಳ್ಳಿಕ್ಕೆ ಸಾಧ್ಯವೋ ಅಲ್ಲೇ ಹುಡುಕಿಕೊಳ್ಳಬೇಕೇ ಹೊರತು, ಕಳಕೊಳ್ಳುವುದೊಂದು ಕಡೆ ಹುಡುಕುವುದ ಇನ್ನೊಂದು ಕಡೆ ಆಗಬಾರದು. ಇದಕ್ಕಾಗಿ ಕನ್ನಡಿಗರಿಗೆ ಉದ್ಯೋಗದಲ್ಲಿ ಸರಕಾರ ಮೀಸಲಾತಿ ಕೊಡಿಸಿಕೊಡಬೇಕು. ಕರವೇ ಕೂಡ ಇಂದು ಕೃಷ್ಣಯ್ಯ ಶೆಟ್ಟಿ ಪ್ರೌಢ ಶಾಲೆಯನ್ನು 5 ಲಕ್ಷ ರು. ಖರ್ಚು ಮಾಡಿ, ದತ್ತು ತೆಗೆದುಕೊಂಡು ಅಲ್ಲಿ ಎಲ್ಲ ಸವಲತ್ತುಗಳನ್ನು ಒದಗಿಸುವ ಕೆಲಸಕ್ಕೆ ಮುಂದಾಗಿದೆ. ಇದನ್ನು ರಾಜ್ಯದ ಗಡಿಭಾಗದ ಹಳ್ಳಿಗಳಲ್ಲಿ ವಿಸ್ತರಿಸುವ ಯೋಚನೆಯೂ ಇದೆ.