ಸಂಸತ್ತಿನಲ್ಲಿ ಐದು ವರ್ಷ ಕನ್ನಡದಲ್ಲೇ ಮಾತನಾಡಿ ಅಭಿಮಾನ ಮೆರೆದಿದ್ದ ಜೆ.ಎಚ್. ಪಟೇಲರು!
ಬೆಂಗಳೂರು,ನ.01: ಇವತ್ತು ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮದ ಹಬ್ಬ. ಕರ್ನಾಟಕ, ಕನ್ನಡವನ್ನೇ ಉಸಿರಾಡದ ಕನ್ನಡದ ಕಣ್ಮಣಿಗಳು ಅನೇಕರಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರ ಸೇನಾನಿಗಳಂತೆ ಕನ್ನಡ, ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ ಕನ್ನಡದ ಕಣ್ಮಣಿಗಳೂ ನಮ್ಮ ನಡುವೆ ಇದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಯಾವತ್ತಿಗೂ ಮರೆಯಾಗದಂತೆ ದಂತಕಥೆಗಳಾಗಿಯೇ ಕನ್ನಡದ ಕಟ್ಟಾಳುಗಳ ಕಿರುಪರಿಚಯ ಇಲ್ಲಿ ವಿವರಿಸಲಾಗಿದೆ.
ಕನ್ನಡಕ್ಕಾಗಿ ಹೋರಾಟ ಮಾಡಿದವರು, ಕನ್ನಡದ ಕಿಚ್ಚು ಹಚ್ಚಿದವರು ಕನ್ನಡವೆಂದರೆ ಸ್ವಾಭಿಮಾನ ಎಂದು ತೋರಿಸಿಕೊಟ್ಟವರು, ಕನ್ನಡವೆಂದರೆ, ಎಂದರೆ ಪ್ರೀತಿ ಎಂದು ತೋರಿಸಿಕೊಟ್ಟ ಅನೇಕ ಮಹನೀಯರು ಕರ್ನಾಟಕದಲ್ಲಿದ್ದಾರೆ. ಕನ್ನಡವನ್ನೇ ಉಸಿರಾಡಿದ್ದಾರೆ. ಕನ್ನಡ ವೆಂದರೆ ಪ್ರೀತಿ ಎಂದು ತೋರಿಸಿಕೊಟ್ಟ ನಾಯಕರು ಇದ್ದಾರೆ. ರಾಜ್ಯದ ಮುಖ್ಯಮಂತ್ರಿಯಗಿದ್ದ ಜೆ.ಎಚ್. ಪಟೇಲರ ಕನ್ನಡಾಭಿಮಾನ ಕನ್ನಡ ನಾಡು ಇರುವ ವರೆಗೂ ದಂತಕಥೆಯಾಗಿಯೇ ಉಳಿಯಲಿದೆ.
ಜೆ.ಎಚ್. ಪಟೇಲರ ಕನ್ನಡ ಪ್ರೀತಿ: ಕರ್ನಾಟಕವನ್ನು ಪ್ರತಿನಿಧಿಸುವ 28 ಸಂಸದರು ಇದ್ದಾರೆ. ಸಂಸತ್ ಕಲಾಪಗಳಲ್ಲಿ ಯಾರೋ ಒಬ್ಬ ಸಂಸದರು ಅಪರೂಪಕ್ಕೆ ಕನ್ನಡದಲ್ಲಿ ಮಾತನಾಡಿರಬಹುದು. ಉಳಿದಂತೆ ಬಹುತೇಕರು ಕನ್ನಡವನ್ನು ಬಳಸಿಯೇ ಇಲ್ಲ ಎಂದು ಹೇಳಬಹುದು. ಇನ್ನೂ ಕೆಲವರು ಆಂಗ್ಲ ಭಾಷೆಯಲ್ಲಿಯೇ ತಮ್ಮ ಪಾಂಡಿತ್ಯ ತೋರಿಸಿದ್ದನ್ನು ನೋಡಿರುತ್ತೀರಿ. ಸಂಸತ್ತಿನಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಮಾತನಾಡಿದ ಸಂಸದರೊಬ್ಬರು ಇದ್ದರು ಎಂದರೆ ಅದು ಜೆ.ಎಚ್. ಪಟೇಲರು ಮಾತ್ರ! ಅದಕ್ಕಾಗಿಯೇ ಆಡಳಿತ ನಡೆಸುವರಲ್ಲಿ ಕನ್ನಡ ಪ್ರೀತಿ ಅಭಿಮಾನ ಅಂದರೆ ಜೆ.ಎಚ್. ಪಟೇಲರ ಪ್ರೀತಿ ಅಭಿಮಾನದಂತೆ ಇರಬೇಕು ಎಂಬ ಮಾತು ಇದೆ.
ದಿವಂಗತ ಜೆ.ಎಚ್. ಪಟೇಲರು 1967 ರಲ್ಲಿ ಸಂಸದರಾಗಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಕಾನೂನು ಪದವಿ ಪಡೆದವರು. ಆಂಗ್ಲ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ್ದವರು. ದಿವಂಗತ ಜೆ.ಎಚ್. ಪಟೇಲರು ಸಂಸತ್ ಪ್ರವೇಶಿಸಿದಾಗ ಅಲ್ಲಿ ಪ್ರಧಾನ ಭಾಷೆ ಹಿಂದಿ ಮತ್ತು ಇಂಗ್ಲಿಷ್. ಮಾತ್ರ. ಕನ್ನಡ ಮಾತ್ರವಲ್ಲ ಪ್ರಾದೇಶಿಕ ಭಾಷೆ ಒಂದು ಪದ ಆಡುವರೂ ಅಲ್ಲಿರಲಿಲ್ಲ. ಜೆ.ಎಚ್. ಪಟೇಲರದ್ದು, ತನ್ನ ತಾಯ್ನಾಡು ಭಾಷೆಯಲ್ಲಿಯೇ ವ್ಯವಹರಿಸಬೇಕೆಂಬ ಮನಸು. ಇನ್ನು ಸಂಸತ್ ಪ್ರವೇಶಿಸಿದ ಕೂಡಲೇ ಕನ್ನಡದಲ್ಲಿ ಸಂಸತ್ತಿನಲ್ಲಿ ಮಾತನಾಡಿ ಜಯಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಸಂಸದರಾಗಿ ಜೆ.ಎಚ್. ಪಟೇಲರು ಸಂಸತ್ ನಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಅದು ಒಮ್ಮೆ ನಿಂತರೆ ಐದಾರು ತಾಸು ಕನ್ನಡದಲ್ಲಿ ಮಾತನಾಡುತ್ತಿದ್ದರು. ಈ ಮೂಲಕ ಆಡಳಿತ ನಡೆಸುವರಲ್ಲಿ ಕನ್ನಡ ಪ್ರೀತಿ ಎಂದರೆ ಹೇಗಿರಬೇಕು ಎಂದು ತೋರಿಸಿಕೊಟ್ಟಿದ್ದರು.
ಐದು ವರ್ಷ ಜೆ.ಎಚ್. ಪಟೇಲರು ಸಂಸತ್ ನಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಈ ಮೂಲಕ ಸಂಸತ್ತಿನಲ್ಲಿ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಮಾತೃ ಭಾಷೆ ಪ್ರೀತಿ ಮೆರೆದಿದ್ದರು. ಪಟೇಲರ ಈ ಪ್ರಯತ್ನದಿಂದಲೇ ಸಂಸತ್ತಿನಲ್ಲಿ ಪ್ರಾದೇಶಿಕ ಭಾಷೆಗಳ ಅನುವಾದಕರನ್ನು ನೇಮಿಸಲಾಯಿತು ಎನ್ನುತ್ತದೆ ಇತಿಹಾಸ. ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುವ ಸಂಸತ್ತಿಗೆ ದಿವಂಗತ ಜೆ. ಎಚ್. ಪಟೇಲರು ಸ್ಫೂರ್ತಿ, ಐಕಾನ್ ಆಗಿದ್ದರಂತೆ. ಹೀಗಾಗಿಯೇ ಆಡಳಿತ ನಡೆಸುವರಲ್ಲಿ ಕನ್ನಡದ ಅಭಿಮಾನ ಅಂದರೆ ಜೆ.ಎಚ್. ಪಟೇಲರ ತರ ಇರಬೇಕು ಎಂದೇ ಹೇಳುತ್ತಾರೆ.
ಕನ್ನಡದ ಶಕ್ತಿ ಜಗತ್ತಿಗೆ ಗೊತ್ತಾಗಬೇಕು ಎಂಬುದು ಅವರ ಅಭಿಲಾಷೆ ಮತ್ತು ವಾದ ಆಗಿತ್ತು. ನಮ್ಮ ಭಾಷೆ ಬಗ್ಗೆ ಸ್ವಾಭಿಮಾನ, ಪ್ರೀತಿ ಇಲ್ಲ ಎಂದರೆ ಕನ್ನಡ ಬೆಳೆಯುವುದಿಲ್ಲ ಎಂದು ಹೇಳುತ್ತಿದ್ದರಂತೆ. ಕನ್ನಡ ನಾಡಿನಲ್ಲಿ ಕನ್ನಡವೇ ಆಡಳಿತ ಭಾಷೆ, ವ್ಯಾವಹಾರಿಕ ಭಾಷೆ ಆಗಬೇಕು ಎಂಬ ಆಸೆ ಅವರದ್ದು. ಹೀಗಾಗಿಯೇ ನಾಯಕರಲ್ಲಿ ಕನ್ನಡದ ಅಭಿಮಾನ ಎಂದರೆ ಜೆ.ಎಚ್. ಪಟೇಲರ ತರ ಇರಬೇಕು ಎಂದು ಈಗಲೂ ಮಾತನಾಡುತ್ತಾರೆ.
ಪಟೇಲರ ಸ್ವಾರಸ್ಯ: ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದ ವೇಳೆ, ಸಚಿವರೊಬ್ಬರು 'ನೋ ಕಾನ್ಫಿಡೆನ್ಸ್ ಮೋಷನ್' , ಎಂಬ ಪದ ಬಳಕೆ ಮಾಡಿ ಮಾತನಾಡಿದ್ದರಂತೆ. ಕನ್ನಡ ಭಾಷೆಯ ಪದ "ನಿಲುವಳಿ ಸೂಚನೆ" ಎಂಬುದನ್ನು ಬಳಸಲಿಲ್ಲ ಎಂಬ ಸಿಟ್ಟಿಗೆ ಯಾರಿಗೆ "ರೀ ಲೂಸ್ ಮೋಷನ್" ಎಂದು ಕಾಳೆಲೆದಿದ್ದರಂತೆ. ಜೆ.ಎಚ್. ಪಟೇಲರ ಬಗ್ಗೆ ಇರುವ ಸಾಹಿತ್ಯದಲ್ಲಿ ಇಂತಹ ಸ್ವಾರಸ್ಯಕರ ಸಂಗತಿಯೂ ಇದೆ.
ಬೆಳಗಾವಿಯಲ್ಲಿ ಪಟೇಲರು ಮಾಡಿದ್ದ ಕೆಲಸ: ಬೆಳಗಾವಿಯಲ್ಲಿ ಈಗಲೂ ಮರಾಠಿಗರನ್ನು ಕಂಡರೆ ಕನ್ನಡಿಗರಿಗೆ ಅಗಲ್ಲ, ಕನ್ನಡಿಗರನ್ನು ಕಂಡರೆ ಮರಾಠಿಗರಿಗೆ ಆಗಲ್ಲ. ಒಮ್ಮೆ ಬೆಳಗಾವಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಜೆ.ಎಚ್. ಪಟೇಲರು ಮುಖ್ಯ ಅತಿಥಿಯಾಗಿ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರಂತೆ. ಇನ್ನೇನು ಪಟೇಲರು ಭಾಷಣ ಮಾಡಬೇಕು. ಕವಿಯೊಬ್ಬರ ಮಾತೃಭಾಷೆ ಕನ್ನಡ ಆಗಿದ್ದರೂ ಮರಾಠಿ ಸಾಹಿತ್ಯದಲ್ಲಿ ಸಾಧನೆ ಮಾಡಿದ್ದರಂತೆ. ಮತ್ತೊಬ್ಬ ಕವಿಯ ಮಾತೃ ಭಾಷೆ ಮರಾಠಿಯಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಕೀರ್ತಿ ಗಳಿಸಿದ್ದರು. ಈ ವಿಚಾರವನ್ನು ಉಲ್ಲೇಖಿಸಿ ಮಾತನಾಡಿದ್ದ ಜೆ.ಎಚ್. ಪಟೇಲರು, ಭಾಷಾ ಅಭಿಮಾನ ಅಂದರೆ ಗಡಿಗಳು ಇರಬಾರದು ಎಂಬುದನ್ನು ಉಲ್ಲೇಖಿಸಿ ಮಾಡಿದ್ದ ಭಾಷಣ ಕೇಳಿ ಇಡೀ ಬೆಳಗಾವಿಯೇ ದಂಗಾಗಿತ್ತಂತೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯವರಾದ ಜೆ.ಎಚ್. ಪಟೇಲರ ಕನ್ನಡ ಮೇಲಿನ ಅದಮ್ಯ ಪ್ರೀತಿ ಮಾದರಿ ಅಲ್ಲವೇ ?