ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ; ಕೆಲವೆಡೆ ನಾಡಧ್ವಜ ಹಾರಿಸದ ಬಗ್ಗೆ ಆಕ್ರೋಶ
ಕನ್ನಡಿಗರ ಹಬ್ಬ ಕನ್ನಡ ರಾಜ್ಯೋತ್ಸವ. ಭಾವೈಕ್ಯ ಸಾರುವ ಈ ನಾಡಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. 64ನೇ ಕನ್ನಡ ರಾಜ್ಯೋತ್ಸವ ಇದಾಗಿದ್ದು, ರಾಜ್ಯದಲ್ಲಿ ಹುಮ್ಮಸ್ಸಿನಿಂದ ಆಚರಣೆ ಸಾಗಿದೆ. ಈ ನಡುವೆ ಕನ್ನಡ ಬಾವುಟವನ್ನು ರಾಜ್ಯೋತ್ಸವದಂದು ಹಾರಿಸುವ ವಿಚಾರದ ಸಂಬಂಧ ಗೊಂದಲವೂ ಉಂಟಾಗಿದೆ. ಜಿಲ್ಲೆಗಳಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆದರೂ ಹಲವೆಡೆ ನಾಡಧ್ವಜವನ್ನು ಹಾರಿಸಲಾಗಿಲ್ಲ. ಬೀದರ್, ಬಾಗಲಕೋಟೆ, ಹಾಸನ, ರಾಯಚೂರು, ಉಡುಪಿ, ಶಿವಮೊಗ್ಗ, ರಾಮನಗರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೊಡಗು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ.
ಮೊದಲಿನಿಂದಲೂ ರಾಷ್ಟ್ರಧ್ವಜ ಹಾರಿಸುವ ಪರಿಪಾಠವಿದೆ; ಈಶ್ವರಪ್ಪ
ಕನ್ನಡ ಧ್ವಜ ಹಾರಿಸದಿರುವುದಕ್ಕೆ ಶಿವಮೊಗ್ಗದಲ್ಲಿ ಕನ್ನಡಪರ ಹೋರಾಟಗಾರರು ಸಚಿವ ಈಶ್ವರಪ್ಪ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಸುದ್ದಿಗೋಷ್ಟಿ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಕರವೇ ಕಾರ್ಯಕರ್ತರು ಸಭೆಯಲ್ಲಿಯೇ ಧಿಕ್ಕಾರ ಕೂಗಿದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, "ಕನ್ನಡ ಧ್ವಜದ ಬಗ್ಗೆ ಗೌರವ ಇದೆ. ಮುಂಚಿನಿಂದಲೂ ರಾಷ್ಟ್ರಧ್ವಜ ಹಾರಿಸಬೇಕೆಂಬ ನಿಯಮದಂತೆ, ಈ ಬಾರಿಯೂ ರಾಷ್ಟ್ರಧ್ವಜ ಹಾರಿಸಲಾಗಿದೆ. ಕರ್ನಾಟಕ ಏಕೀಕರಣದ ಹೋರಾಟ ಆರಂಭವಾದಾಗಿನಿಂದಲೂ, ಕನ್ನಡ ರಾಜ್ಯೋತ್ಸವದಂದು ಕೇವಲ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ" ಎಂದು ಉತ್ತರಿಸಿದ್ದಾರೆ.
ಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿ
ದಾವಣಗೆರೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಿರೋಧ
ದಾವಣಗೆರೆಯಲ್ಲಿ ಕನ್ನಡಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಧ್ವಜಕ್ಕೆ ತನ್ನದೆ ಆದ ಇತಿಹಾಸವಿದೆ. ಸರ್ಕಾರ ರಾಷ್ಟ್ರಧ್ವಜವನ್ನಷ್ಟೆ ಹಾರಿಸಬೇಕು ಎಂದು ಹೇಳಿರುವುದು ತಪ್ಪು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 15ರಂದು ರಾಷ್ಟ್ರಧ್ವಜ ಹಾರಿಸೋಣ, ನವೆಂಬರ್ ಒಂದರಂದು ಕನ್ನಡ ಧ್ವಜ ಹಾರಿಸೋಣ. ಕೆಲ ನಿರ್ಧಾರಗಳಿಂದ ಕನ್ನಡಿಗರಿಗೆ ನೋವುಂಟುಮಾಡುವುದು ಸರಿಯಲ್ಲ. ಕನ್ನಡಿಗರಿಂದಲೇ ರಚನೆಯಾದ ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತ್ಯೇಕ ಧ್ವಜದ ಚರ್ಚೆ ಅನಗತ್ಯ: ಹೊರಟ್ಟಿ
ರಾಜ್ಯದ ಪ್ರತ್ಯೇಕ ಧ್ವಜದ ಕುರಿತು ವಿನಾಕಾರಣ ಚರ್ಚೆ ಬೇಡ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು. ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ರಾಜ್ಯಕ್ಕೆ ಪ್ರತ್ಯೇಕ ಧ್ವಜ ವಿವಾದಕ್ಕೆ ಸಿಲುಕಬೇಡಿ ಎಂದು ಹೇಳಿದ್ದೆ. ಅಲ್ಲದೇ ಕನ್ನಡದ ಧ್ವಜದ ಬಗ್ಗೆ ಇದೀಗ ವಿನಾಕಾರಣ ಚರ್ಚೆ ಬೇಡ ಎಂದರು.
ವಿಶೇಷ ಕನ್ನಡಿಗ: ಬಿಎಂಟಿಸಿ ನಿರ್ವಾಹಕ ಚಂದ್ರೇಗೌಡ
ಕಾರವಾರದಲ್ಲಿ ಕಂಗೊಳಿಸಿದ ಕನ್ನಡ ಧ್ವಜ
ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಿರಸಿಯಲ್ಲಿ 450 ಮೀಟರ್ ಉದ್ದದ ಕನ್ನಡ ಧ್ವಜವನ್ನು ಮೆರವಣಿಗೆ ಮಾಡಲಾಯಿತು. ಉಪವಿಭಾಗಾಧಿಕಾರಿ ಈಶ್ವರ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಶಿರಸಿಯ ರೆಡ್ ಆಂಟ್ ಸಾಂಸ್ಕೃತಿಕ ಸಂಘಟನೆಯಿಂದ ಈ ಕನ್ನಡ ಧ್ವಜ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ವಿವಿಧ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು, ಸಂಘ- ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ನಗರದ ಪ್ರಮುಖ ಬೀದಿಯಲ್ಲಿ ಧ್ವಜ ಹಿಡಿದು ಸಾಗಿ ಸಂಭ್ರಮಿಸಿದರು.
ಮುಂದಿನ ವರ್ಷ ಎರಡೂ ಬಾವುಟ ಹಾರಿಸಲು ಬೊಮ್ಮಾಯಿ ಸೂಚನೆ
ಉಡುಪಿಯಲ್ಲೂ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ನಡೆಯಿತು. ಆದರೆ ಉಡುಪಿಯಲ್ಲೂ ಕನ್ನಡ ಧ್ವಜವನ್ನು ಹಾರಿಸಲಾಗಿಲ್ಲ. ಉಡುಪಿಯಲ್ಲಿ ಈ ಕುರಿತು ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, "ಜಿಲ್ಲಾಧಿಕಾರಿಗಳಿಗೆ ಇವತ್ತೇ ಸೂಚನೆ ಕೊಟ್ಟಿದ್ದೇನೆ. ಮುಂದಿನ ವರ್ಷ ಎರಡೂ ಬಾವುಟ ಹಾರಿಸಲು ಸೂಚಿಸಲಾಗಿದೆ. ರಾಜ್ಯ ಸರಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಯಾವುದೇ ಸುತ್ತೋಲೆ ಸ್ವೀಕರಿಸಿಲ್ಲ. ಮುಂದಿನ ವರ್ಷ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸ್ತೇವೆ" ಎಂದು ಹೇಳಿದ್ದಾರೆ.
ಕನ್ನಡ ಧ್ವಜವನ್ನು ಹಿಡಿದು ಕುಣಿದಿದ್ದೇನೆ ಎಂದ ಸಿ.ಟಿ.ರವಿ
ಚಿಕ್ಕಮಗಳೂರಿನಲ್ಲಿ ಉಸ್ತುವಾರಿ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ಸಿ.ಟಿ. ರವಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಧ್ವಜದ ಕುರಿತ ಗೊಂದಲದ ಬಗ್ಗೆ ಮಾತನಾಡಿದ ಸಚಿವರು, "ಕನ್ನಡ ಬಾವುಟವನ್ನು ಕಳೆದ ಬಾರಿಯೂ ಹಾರಿಸಿಲ್ಲ, ಹಾಗಾಗಿ ಈ ಬಾರಿಯೂ ಹಾರಿಸಿಲ್ಲ. ಸರ್ಕಾರ ನಾಡಧ್ವಜ ಹಾರಿಸಬೇಡಿ ಎಂದು ಆದೇಶ ಮಾಡಿರುವುದು ನನಗೆ ಗೊತ್ತಿಲ್ಲ, ಯಾವ ಆದೇಶವೂ ನನಗೆ ಗೊತ್ತಿಲ್ಲ. ಸಾಂಸ್ಕೃತಿಕವಾಗಿ ನಾನು ಕನ್ನಡ ಧ್ವಜವನ್ನು ಒಪ್ಪಿಕೊಂಡಿದ್ದೇನೆ, ಕನ್ನಡ ಧ್ವಜವನ್ನು ಹಿಡಿದು ಕುಣಿದಿದ್ದೇನೆ" ಎಂದಿದ್ದಾರೆ.
ಕರ್ನಾಟಕ ಹೆಸರು ಬಂದಿದ್ದರ ಹಿಂದಿದೆ ರೋಚಕ ಇತಿಹಾಸ
ಬೆಳಗಾವಿಯಲ್ಲಿ ಎಂಇಎಸ್ ಪ್ರತಿಭಟನೆಗೆ ಸಿಗದ ಮರಾಠಿಗರ ಸ್ಪಂದನೆ
ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ನಡೆಸಿಕೊಟ್ಟರು. ಈ ನಡುವೆ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಬಹಿಷ್ಕರಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರಾಳ ದಿನಾಚರಣೆ ನಡೆಸಿತು. ಸಂಭಾಜಿ ಉದ್ಯಾನದಿಂದ ದ್ವಿಚಕ್ರವಾಹನಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕನ್ನಡಪರ ಸಂಘಟನೆಗಳ ವಿರೋಧದ ನಡುವೆಯೂ ಜಿಲ್ಲಾಡಳಿತದಿಂದ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ಆದರೆ ಪ್ರತಿಭಟನೆಗೆ ಮರಾಠಿಗರ ಸ್ಪಂದನೆ ದೊರೆತಿಲ್ಲ.