ತಮಿಳುನಾಡು ಬಂದ್ಗೆ ಪ್ರತ್ಯುತ್ತರ ನೀಡಲು ಸಂಘಟನೆಗಳ ನಿರ್ಧಾರ
ಬೆಂಗಳೂರು ಏಪ್ರಿಲ್ 4: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನೆರೆರಾಜ್ಯ ತಮಿಳುನಾಡಿನಲ್ಲಿ ಕರೆ ನೀಡಲಾಗಿರುವ ಏಪ್ರಿಲ್ 5ರ ಬಂದ್ಗೆ ತೀಕ್ಷ್ಣ ಪ್ರತ್ಯುತ್ತರ ನೀಡಲು ಕನ್ನಡಪರ ಸಂಘಟನೆಗಳು ಸಿದ್ಧತೆ ನಡೆಸಿವೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಧರಣಿ ನಡೆಸಿದ ವಿವಿಧ ಸಂಘಟನೆಗಳ ಸದಸ್ಯರು, ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಕರೆ ನೀಡಿರುವ ಬಂದ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಏ.5ಕ್ಕೆ ತ.ನಾಡು ಬಂದ್, ತಮಿಳುನಾಡಿಗೆ ಕೆಎಸ್ಸಾರ್ಟೀಸಿ ಬಸ್ ಇಲ್ಲ
ಕಾವೇರಿ ನಿರ್ವಹಣಾ ಮಂಡಳಿ ರಚನೆಯು ಕರ್ನಾಟಕದ ಹಿತಾಸಕ್ತಿ ಮತ್ತು ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ಮಂಡಳಿ ರಚಿಸದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಮಂಡಳಿ ರಚನೆಯ ಪರವಾಗಿ ತಮಿಳು ಚಿತ್ರರಂಗದ ಖ್ಯಾತ ನಟರಾದ ರಜನಿಕಾಂತ್ ಮತ್ತು ಕಮಲ ಹಾಸನ್ ಧ್ವನಿ ಎತ್ತಿದ್ದಾರೆ. ಅವರ ಸಿನಿಮಾಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರವು ಕಾವೇರಿ ನಿರ್ವಹಣಾ ಮಂಡಳಿ (ಸಿಎಂಬಿ) ರಚಿಸಬೇಕು ಎಂದು ಆಗ್ರಹಿಸಿ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದಲ್ಲಿ ವಿರೋಧ ಪಕ್ಷಗಳು ಏಪ್ರಿಲ್ 5ರಂದು ರಾಜ್ಯವ್ಯಾಪಿ ಬಂದ್ಗೆ ಭಾನುವಾರ ಕರೆ ನೀಡಿವೆ.
ಕಾವೇರಿಗಾಗಿ ತಮಿಳುನಾಡು ಸಿಎಂ, ಡಿಸಿಎಂ ಉಪವಾಸ ಸತ್ಯಾಗ್ರಹ!
ಮಿತ್ರ ವಿರೋಧಪಕ್ಷಗಳೊಂದಿಗೆ ಸಭೆ ನಡೆಸಿದ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್, ರೈತರು, ವ್ಯಾಪಾರಿಗಳು ಸೇರಿದಂತೆ ಎಲ್ಲ ವರ್ಗದ ಜನರಿಂದ ಬಂದ್ಗೆ ಬೆಂಬಲ ಕೋರಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಸು, ತಿರುನವುಕ್ಕರಸರ್, ವಿಎಸ್ಕೆ ಮುಖ್ಯಸ್ಥ ತಿರುಮವಳವನ್, ಸಿಪಿಐ (ಎಂ) ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿಗಳಾದ ಕೆ. ಬಾಲಕೃಷ್ಣನ್ ಮತ್ತು ಆರ್. ಮುತ್ತರಸನ್ ಮುಂತಾದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.