ಕನ್ನಡ ದಿನಪತ್ರಿಕೆಗಳು ಕಂಡಂತೆ ಕರ್ನಾಟಕ ಬಜೆಟ್ 2018
Recommended Video
ಬೆಂಗಳೂರು, ಜುಲೈ 06: 'ಹೊರೆ ಹೊತ್ತ ಕರ್ನಾಟಕ', ಕೃಷಿಖುಷಿ ಕಿಸೆಬಿಸಿ, 'ತೆನೆಗಟ್ಟಿದ ಬಜೆಟ್' ಇತ್ಯಾದಿ ಆಕರ್ಷಕ ಶೀರ್ಷಿಕೆಗಳು ಇಂದಿನ ಕನ್ನಡ ದಿನಪತ್ರಿಕೆಗಳಲ್ಲಿ ರಾರಾಜಿಸುತ್ತಿವೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಿನ್ನೆ(ಜು.05)ಮಂಡಿಸಿದ ಕರ್ನಾಟಕ ಬಜೆಟ್ ಹಲವು ಕಾರಣಗಳಿಂದ ಮಹತ್ವದ್ದೆನ್ನಿಸಿದೆ.
ಕುಮಾರಸ್ವಾಮಿ ಆವರಿಗೆ ಇದು ಚೊಚ್ಚಲ ಬಜೆಟ್ ಸಹ ಹೌದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರಕ ಬಜೆಟ್ ಮಂಡಿಸುವಂತೆ ಒತ್ತಾಯಿಸಿದ್ದರೂ ಅವರ ಮಾತನ್ನು ಕೇಳದೆ ಕೊನೆಗೂ ಪೂರ್ಣ ಪ್ರಮಾಣದ ಬಜೆಟ್ ಅನ್ನು ಕುಮಾಸರ್ವಾಮಿ ಮಂಡಿಸಿದ್ದಾರೆ. ಸಾಲಮನ್ನಾದ ಬಂಪರ್ ಕೊಡುಗೆ ನೀಡಿದ್ದಾರೆ.
ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights
ಎಚ್ಡಿಕೆ ಮಂಡಿಸಿದ 2,18,488 ಕೋಟಿ ರೂ. ಗಾತ್ರದ ಬಜೆಟ್ ಅನ್ನು ಇಂದಿನ ಕನ್ನಡ ದಿನಪತ್ರಿಕೆಗಳು ಹೇಗೆ ಕಂಡಿವೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಉದಯವಾಣಿ
'ಕೃಷಿ ಖುಷಿ ಕಿಸೆ ಬಿಸಿ' ಎಂಬುದು ಉದಯವಾಣಿ ನೀಡಿದ ಆಕರ್ಷಕ ಮತ್ತು ಅರ್ಥಪೂರ್ಣ ಶೀರ್ಷಿಕೆ. ಇಂದಿನ ಹೆಡ್ ಲೈನ್ ಆಫ್ ದಿ ಡೇ ಉದಯವಾಣಿಗೆ! ಮುಖಪುಟದ ಕಾರ್ಟೂನ್ ಸಹ ಗಮನ ಸೆಳೆಯುತ್ತದೆ. ಒಟ್ಟು ಏಳು ಪುಟಗಳನ್ನು ಉದಯವಾಣಿ ಬಜೆಟ್ ಗಾಗಿಯೇ ಮೀಸಲಿಟ್ಟಿದ್ದು ವಿಶೇಷ.
ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?
ಕನ್ನಡ ಪ್ರಭ
'ಹೊರೆ ಹೊತ್ತ ಕರ್ನಾಟಕ' ಎಂಬುದು ಕನ್ನಡ ಪ್ರಭದ ಶೀರ್ಷಿಕೆ. ಜೊತೆಗೆ ರೈತರಿಗೆ ಸಾಲ ಮನ್ನಾ, ಉಳಿದವರಿಗೆ ತೆರಿಗೆ ಗುನ್ನಾ ಎಂಬ ಕಿಕ್ಕರ್ ಗಮನ ಸೆಳೆಯುತ್ತದೆ. ಇದರೊಟ್ಟಿಗೆ ಇಡಿ ಬಜೆಟ್ ನ ಸಾರವನ್ನು ಚಿಕ್ಕದಾಗಿ ಮುಖಪುಟದಲ್ಲಿ ತೋರಿಸುವ ಪ್ರಯತ್ನವನ್ನು ಕನ್ನಡ ಪ್ರಭ ಮಾಡಿದೆ.
ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ
ವಿಶ್ವವಾಣಿ
ತೆನೆಗಟ್ತಿದ ಬಜೆಟ್ ಎಂಬ ಶೀರ್ಷಿಕೆಯೊಂದಿಗೆ ವಿಶ್ವವಾಣಿ ಗಮನಸೆಳೆಯುತ್ತದೆ. ಮುಖಪುಟದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಚಿತ್ರ ಹಸಿರಿನಿಂದಲೇ ತುಂಬಿಸಿ, ರೈತರಿಗೆ ನೀಡಿದ ಕೊಡುಗೆಯನ್ನು ಈ ಮೂಲಕ ವಿವರಿಸಿದೆ. ವಿಶ್ವವಾಣಿಯ ಮುಖಪುಟದ ವಿನ್ಯಾಸ ಗಮನ ಸೆಳೆಯುತ್ತದೆ.
ವಿಜಯಕರ್ನಾಟಕ
'ಸಾಲಮನ್ನಾ ಸರ್ವರಿಗೂ ಗುನ್ನಾ' ಎಂಬ ತಲೆಬರಹ ನೀಡಿ ಬಜೆಟ್ ಅನ್ನು ವಿಶ್ಲೇಷಿಸಿದೆ ವಿಜಯ ಕರ್ನಾಟಕ. 'ರೈತರ ಸುಸ್ತಿ ಸಾಲದ ಹೊರೆ ಇಳಿಸಿದ್ದೊಂದೇ ಮ್ಯಾಜಿಕ್; ಎಲ್ಲರಿಗೂ ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆ ಶಾಕ್; ಹಿರಿಯ ನಾಗರಿಕರು, ತಾಯಂದಿರಿಗೆ ಸುರಕ್ಷೆ; ಕೌಶಲಾಭಿವೃದ್ಧಿಗೆ ಹೊಸ ಶಕೆ, ಇಂಗ್ಲಿಷ್ ಮಾಧ್ಯಮ ತರಗತಿ ಭರವಸೆ ಎಂದು ಇಡೀ ಬಜೆಟ್ ಅನ್ನು ಕೆಲವೇ ವಾಕ್ಯಗಳಲ್ಲಿ ವಿವರಿಸಿದೆ.
ವಿಜಯವಾಣಿ
'ಹೊರೆ ಇಟ್ಟು ತೆನೆ ಹೊತ್ತ ಕುಮಾರ' ಎಂಬ ಶೀರ್ಷಿಕೆಯೊಂದಿಗೆ ಕುಮಾರಸ್ವಾಮಿ ಬಜೆಟ್ ಅನ್ನು ವಿಜಯವಾಣಿ ವಿವರಿಸಿದೆ. 'ಅನ್ನದಾತರ ಸಾಲ ಭಾರ ಹಗುರ, ಜನತೆಗೆ ಬೆಲೆ ಏರಿಕೆ ಗರ, ದಳ ಕೋಟೆಗೆ ಘೋಷಣೆಗಳ ಸಾಗರ, ಹಳೇ ಮೈಸೂರು ಪ್ರಾಂತ್ಯಕ್ಕೆ ಭರ್ಜರಿ ಕೊಡುಗೆ, ಕರಾವಳಿ, ಮಲೆನಾಡು ಉತ್ತರ ಕರ್ನಾಟಕಕಕ್ಕೆ ನಿರಾಸೆ, ಸಿದ್ದು ಭಾಗ್ಯಗಳು ಸುರಕ್ಶಶಿತ, ತೈಲ ಜತೆ ಕರೆಂಟ್ ಶಾಕ್, ಹಿರಿಯರು ಗರ್ಭಿಣಿಯರಿಗೆ ಆರ್ಥಿಕ ನೆರವು' ಎಂಬ ಕೆಲವೇ ಸಾಲುಗಳಲ್ಲಿ ಸಂಪೂರ್ಣ ಬಜೆಟ್ ಅನ್ನು ಹಿಡಿದಿಟ್ಟಿದೆ.
ಪ್ರಜಾವಾಣಿ
'ಸರ್ವರಿಗೂ ಸಮ್ಮಿಶ್ರ ಬರೆ' ಎಂಬುದು ಪ್ರಜಾವಾಣಿಯ ತಲೆಬರಹ. ಎಂದಿಗಿಂತ ಕೊಂಚ ಭಿನ್ನವಾಗಿ, ಮುಖಪುಟ ಗಮನ ಸೆಳೆಯುತ್ತದೆ. ಯಾವೆಲ್ಲಲ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬುದನ್ನು ಮುಖಪುಟದಲ್ಲಿ 'ಏರಿಕೆ' ಚಿಹ್ನೆಯೊಳಗೇ ವಿವರಿಸುವ ಪ್ರಯತ್ನ ಮಾಡಿದೆ. ಇದರೊಂದಿಗೆ ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಅಂಧಿ ಅವರ ಪ್ರತಿಕ್ರಿಯೆಯನ್ನೂ ನೀಡಿದೆ.
ಹೊಸ ದಿಗಂತ
ಸಾಲಮನ್ನಾ ಜೇಬಿಗೆ ಕನ್ನ ಎಂಬುದು ಹೊಸ ದಿಗಂತ ಪತ್ರಿಕೆ ನೀಡಿದ ಶೀರ್ಷಿಕೆ. ತೆರಿಗೆ ಏರಿಕೆಯ ಬಿಸಿಯನ್ನು ಹೊಸ ದಿಗಂತ ಈ ರೀತಿ ವಿವರಿಸಿದೆ. ಉಳಿದಂತೆ ಬಜೆಟ್ ನ ಹೈಲೈಟ್ಸ್ ಗಳನ್ನು ಮುಖಪುಟದಲ್ಲೇ ಹಿಡಿದಿಡುವ ಪ್ರಯತ್ನ ಮಾಡಿದೆ.
ಸಂಯುಕ್ತ ಕರ್ನಾಟಕ
'ರೈತರಿಗೆ ಪರಮಾನ್ನ, ಉಳಿದವರಿಗೆ ಚಿತ್ರಾನ್ನ' ಎಂಬುದು ಸಂಯುಕ್ತ ಕರ್ನಾಟಕ ನೀಡಿದ ತಲೆಬರಹ. ಇದರೊಟ್ಟಿಗೆ ಬಜೆಟ್ ನ ಮುಖ್ಯಾಂಶಗಳನ್ನು ಕೆಲವೇ ಸಾಲುಗಳಲ್ಲಿ ವಿವರಿಸುವ ಪ್ರಯತ್ನವನ್ನು ಸಂಯುಕ್ತ ಕರ್ನಾಟಕ ಮಾಡಿದೆ.
ವಾರ್ತಾ ಭಾರತಿ
ರೈತರ ಬೆಳೆಸಾಲಮನ್ನಾವನ್ನೇ ಹೈ ಲೈಟ್ ಮಾಡಿ ಅದನ್ನೇ ಶೀರ್ಷಿಕೆಯನ್ನಾಗಿ ನೀಡಿದೆ ವಾರ್ತಾಭಾರತಿ. ಆಯವ್ಯವಯ ಪತ್ರವುಳ್ಳ ಸೂಟ್ ಕೇಸು ಹಿಡಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಚಿತ್ರದೊಂದಿಗೆ, ಬಜೆಟ್ ನ ಮುಖ್ಯಾಂಶಗಳನ್ನು ಕೆಲವೇ ಸಾಲುಗಳಲ್ಲಿ ವಿವರಿಸಿದೆ.