ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಿಳು ಸಂಘಟನೆ ಅಡ್ಡಿ
ಕೊಯಮತ್ತೂರು, ಸೆಪ್ಟೆಂಬರ್ 12: ಇಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳಕ್ಕೆ ತಂದೈ ಪೆರಿಯಾರ್ ದ್ರಾವಿಡರ್ ಕಳಗಂ (ಟಿಪಿಡಿಕೆ) ಕಾರ್ಯಕರ್ತರು ಪ್ರವೇಶಿಸಿ, ಘೋಷಣೆಗಳನ್ನು ಕೂಗಿದ್ದು, ಸಮ್ಮೇಳನವನ್ನು ರದ್ದುಗೊಳಿಸಲಾಗಿದೆ. ಹುಜೂರು ರಸ್ತೆಯಲ್ಲಿನ ಸ್ಥಳಕ್ಕೆ ಟಿಪಿಡಿಕೆ ಕಾರ್ಯಕರ್ತರು ನುಗ್ಗಿದ್ದರಿಂದ 'ಸಮಕಳ ಕನ್ನಡ ಇಳಕ್ಕಿಯಂ' ಆಯೋಜಕರು ಆತಂಕಕ್ಕೀಡಾದರು.
ಕಾವೇರಿ ವಿಚಾರವಾಗಿ ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ನಾವು ಕಾರ್ಯಕ್ರಮಕ್ಕೆ ತೊಂದರೆ ಮಾಡಿದೆವು ಎಂದು ತಮಿಳು ಸಂಘಟನೆಯ ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದಾರೆ. ಕಾರ್ಯಕ್ರಮದ ಸಲುವಾಗಿ ಹಾಕಿದ್ದ ಬ್ಯಾನರ್ ಕೂಡ ಹರಿಯಲಾಗಿದೆ. 'ಕರ್ನಾಟಕದಲ್ಲಿ ತಮಿಳರನ್ನು ಗುರಿ ಮಾಡಿಕೊಂಡು ದಾಳಿ ಮಾಡುತ್ತಿರುವಾಗ ಈ ರೀತಿ ಕಾರ್ಯಕ್ರಮಗಳನ್ನು ನಡೆಯುವುದಕ್ಕೆ ಬಿಡುವುದಕ್ಕೆ ಸಾಧ್ಯವಾ?' ಎಂದು ಟಿಪಿಡಿಕೆ ಸದಸ್ಯನೊಬ್ಬ ಪ್ರಶ್ನಿಸಿದ್ದಾನೆ.[ಕನ್ನಡಿಗರ ಮೇಲೆ ಹಲ್ಲೆ, ಜಯಲಲಿತಾಗೆ ಸಿದ್ದರಾಮಯ್ಯ ಪತ್ರ]
ತಕ್ಷಣಾವೇ ಪೊಲೀಸರು ಸ್ಥಳಕ್ಕೆ ಬಂದು, ಕಾರ್ಯಕರ್ತರನ್ನು ಹೊರಗೆ ಕಳುಹಿಸಿದ್ದಾರೆ. ಆದರೆ ಆಯೋಜಕರು ಸಮ್ಮೇಳನವನ್ನು ರದ್ದು ಮಾಡಲು ನಿರ್ಧರಿಸಿದ್ದಾರೆ. ಆಯೋಜಕ ಸಂಘಟನೆ ಸದಸ್ಯರೊಬ್ಬರು ಮಾತನಾಡಿ, ಐದು ವರ್ಷದಿಂದ ಇಂಥ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಈ ಕಾರ್ಯಕ್ರಮ ಐದು ತಿಂಗಳ ಹಿಂದೆಯೇ ನಿಗದಿಯಾಗಿತ್ತು. ಆಗಿನ್ನೂ ಕಾವೇರಿ ವಿಚಾರ ಇಷ್ಟು ಚರ್ಚೆಯಲ್ಲಿರಲಿಲ್ಲ ಎಂದಿದ್ದಾರೆ.[ಬೆಂಗಳೂರಿನಲ್ಲಿರುವ ತಮಿಳರ ಪ್ರದೇಶಕ್ಕೆ ಬಿಗಿ ಭದ್ರತೆ]
ತಮಿಳುನಾಡಿನಲ್ಲಿ ವಾಸವಿರುವ ಐವತ್ತಕ್ಕೂ ಹೆಚ್ಚು ಬರಹಗಾರರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ತಮಿಳು ಲೇಖಕ ಪಾವನ್ನನ್ ಮಾತನಾಡುವಾಗ ಅಡ್ಡಿಪಡಿಸಿದ್ದಾರೆ. "ಕರ್ನಾಟಕದಲ್ಲಿ ತಮಿಳು ಭಾಷಿಕನ ಮೇಲೆ ಹಲ್ಲೆ ನಡೆದಿದ್ದರಿಂದ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿಪಡಿಸಲಾಗಿದೆ' ಎಂದು ಪೊಲೀಸರು ಹೇಳಿದ್ದಾರೆ. ಈ ಮುಂಚೆಯೇ ತಿಳಿಸಿದ್ದರೆ ಸಮ್ಮೇಳನಕ್ಕೆ ರಕ್ಷಣೆ ನೀಡಿರುತ್ತೆದ್ದೆವು ಎಂದೂ ಸೇರಿಸಿದ್ದಾರೆ.