ಸಂಭಾವನೆಯಲ್ಲಿ ಒಂದು ಭಾಗ ಅನಾಥಾಶ್ರಮಗಳಿಗೆ ನೀಡುತ್ತಿದ್ದ ಪುನೀತ್!
ಬೆಂಗಳೂರು,ಅ. 29 : ವೃದ್ಧ ಜೀವಗಳನ್ನು ಕಾಪಾಡುವ ಅನಾಥಾಶ್ರಮ ರಕ್ಷಿಸುವ ರಾಜಕುಮಾರನಾಗಿ ನಟ ಪುನೀತ್ ನಟನೆಗೆ ಸೀಮಿತವಾಗಲಿಲ್ಲ. ನಿಜ ಜೀವನದಲ್ಲಿ ಪುನೀತ್ ರಾಜ್ ಕುಮಾರ್ ರಾಜಕುಮಾರನಾಗಿಯೇ ಮೆರೆದರು. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ಧರ ಮತ್ತು ಅನಾಥರ ಪೋಷಣೆ ಜತೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಧಾರೆ ಎರೆದಿದ್ದರು. ತಾನು ಸಮಾಜಕ್ಕೆ ಈ ಕೊಡುಗೆ ಕೊಟ್ಟಿದ್ದೇನೆ ಎಂದು ಎಲ್ಲೂ ಬಹಿರಂಗಪಡಿಸದೇ ಸಮಾಜ ಸೇವೆ ಮಾಡುತ್ತಿದ್ದರು!
ನಟ ಪುನೀತ್ ರಾಜ್ ಕುಮಾರ್ ಇನ್ನಿಲ್ಲ. ಆದರೆ, ಪುನೀತ್ ವೃದ್ಧರಿಗೆ ಅನಾಥಶಾಶ್ರಮಗಳಿಗೆ ಹಾಗೂ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ದೊಡ್ಡ ಕೊಡುಗೆ ನೀಡಿದ್ದರು. ಪುನೀತ್ ರಾಜ್ ಕುಮಾರ್ ನಟನೆ ಮಾಡಿದ್ದ ರಾಜಕುಮಾರ ಸಿನಿಮಾ ಹಿಟ್ ಆಗಿತ್ತು. ಹೆತ್ತವರನ್ನು ಪ್ರೀತಿಸಬೇಕು. ವೃದ್ಧಾಶ್ರಮಗಳಗೆ ಕಳಿಸಬಾರದು ಎಂಬ ಸಂದೇಶ ಸಾರುವ ಪುನೀತ್ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ, ಪುನೀತ್ ಹೀರೋಹಿಸಂ ಕೇವಲ ತೆರೆಯ ಮೇಲಿನ ನಟನೆಗೆ ಸೀಮಿತ ಮಾಡಿಕೊಂಡಿರಲಿಲ್ಲ. ಬದಲಿಗೆ ನಿಜ ಜೀವನದಲ್ಲಿಯೂ ರಾಜಕುಮಾರನಾಗಿ ಅನೇಕ ಅನಾಥ ಮಕ್ಕಳನ್ನು ಪೋಷಣೆ ಮಾಡುತ್ತಿದ್ದರು. ಅನೇಕ ವೃದ್ಧಾಶ್ರಮಗಳನ್ನು , ಗೋ ಶಾಲೆಗಳನ್ನು ಪೋಷಣೆ ಮಾಡುತ್ತಿದ್ದರು. ಎಲ್ಲಿಯೂ ನಾನು ಸಮಾಜ ಸೇವಕ ಎಂದು ಬಿಂಬಿಸಿಕೊಂಡಿರಲಿಲ್ಲ.ಈ ಮೂಲಕ ದೊಡ್ಡಮನೆಯ ದೊಡ್ಡತನ ಮೆರೆದಿದ್ದರು. ಪುನೀತ್ ಪೋಷಣೆ ಮಾಡುತ್ತಿದ್ದ ಅನಾಥಾಶ್ರಮಗಳೇ ಇದೀಗ ಅನಾಥ ಆಗಿವೆ.
ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅಭಿಮಾನಿಗಳ ನೆಚ್ಚಿನ ಅಪ್ಪು
ಪುನೀತ್ ರಾಜ್ ಕುಮಾರ್ ಸುಮಾರು 26 ಕ್ಕಿಂತಲೂ ಹೆಚ್ಚು ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮಗಳನ್ನು ಪೋಷಣೆ ಮಾಡುತ್ತಿದ್ದರು. ಮಾತ್ರವಲ್ಲದೇ ಸುಮಾರು 45 ಕ್ಕೂ ಹೆಚ್ಚು ಹೆಚ್ಚು ಶಾಲಾ ಮಕ್ಕಳನ್ನು ಓದಿಸುತ್ತಿದ್ದರು. ಮಿಗಿಲಾಗಿ ಶಕ್ತಿಧಾಮ ಮೂಲಕ ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಪುನೀತ್ ಮಾಡಿರುವ ಸೇವೆ, ಮೆರೆರೆಯುತ್ತಿದ್ದ ಹೃದಯ ಶ್ರೀಮಂತಿಕೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯ ವೈರಲ್ ಆಗಿದೆ. ರಾಜಕುಮಾರ ಸಿನಿಮಾದಿಂದ ಪಡೆದ ಸಂಭಾವನೆಯ ಒಂದು ಭಾಗವನ್ನು ವೃದ್ಧಾಶ್ರಮಗಳಿಗೆ ವಿನಿಯೋಗಿಸಿದ್ದರು ಎನ್ನಲಾಗಿದೆ.
ಪುನೀತ್ ಮಾಡುತ್ತಿದ್ದ ಸೇವೆಯನ್ನು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ ಎಂಬುದು ವಿಶೇಷ. ಪುನೀತ್ ಸಮಾಜದ ಬಗ್ಗೆ, ಬಡವರ ಬಗ್ಗೆ ಹೊಂದಿದ್ದ ಕಾಳಜಿ, ಮಾಡುತ್ತಿದ್ದ ಸೇವೆ ಇಂದಿಗೆ ಅಂತ್ಯವಾಗಿದೆ. ಪುನೀತ್ ಮಾಡುತ್ತಿದ್ದ ಸಮಾಜ ಸೇವೆಯನ್ನು ವಿಧಿಯಾಟ ನಿಲ್ಲಿಸಿದೆ. ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ ಸಿನಿಮಾ ನೋಡಿ ವೃದ್ಧರು ಕಣ್ಣೀರು ಹಾಕುತ್ತಿದ್ದರು. ಸಿನಿಮಾ ಹಿಟ್ ಬಳಿಕ ವೃದ್ಧಾಶ್ರಮಗಳನ್ನು ದತ್ತು ಪಡೆದು ಪೋಷಣೆ ಮಾಡಿದರು. ಹೃದಯಾಘಾತದಿಂದ ಪುನೀತ್ ನಿಧನ ಹೊಂದಿದ್ದು ಇದೀಗ ಪುನೀತ್ ನೆರಳಿನಲ್ಲಿ ಬದುಕುತ್ತಿದ್ದ ವೃದ್ಧರು, ಅನಾಥ ಮಕ್ಕಳು, ಬಡ ವಿದ್ಯಾರ್ಥಿಗಳು ಅನಾಥವಾಗಿದ್ದಾರೆ.