ಕ್ಯಾತ್ಸಂದ್ರ ಪೊಲೀಸರಿಂದ ಎಫ್ಐಆರ್; ರದ್ದುಗೊಳಿಸಲು ಕಂಗನಾ ಮನವಿ
ಬೆಂಗಳೂರು, ಮಾರ್ಚ್ 2: ದೆಹಲಿ ಸೇರಿದಂತೆ ದೇಶದ ವಿವಿಧೆಡೆ ರೈತರ ಪ್ರತಿಭಟನೆ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿರುವ ಆರೋಪ ಹೊತ್ತುಕೊಂಡಿರುವ ಕಂಗನಾ ಈಗ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 9 ರಂದು ತುಮಕೂರಿನ ಜೆಎಂಎಫ್ಸಿ ನ್ಯಾಯಾಲಯವು ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶಿಸಿತ್ತು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದರು.
ನಟಿ ಕಂಗನಾ ರನೌತ್ ವಿರುದ್ಧ ವಾರೆಂಟ್ ಹೊರಡಿಸಿದ ಕೋರ್ಟ್
ಈಗ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದೇ ವಾರ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಈ ಪ್ರಕರಣದಲ್ಲಿ ''ಸಿಆರ್ಪಿಸಿ ಯು ಸೆಕ್ಷನ್ 156 (3)ರ ಅಡಿಯಲ್ಲಿ ದೂರು ಸಲ್ಲಿಸಲಾಗಿದೆ. ವರದಿಗಾಗಿ ದೂರಿನ ಪ್ರತಿಯೊಂದಿಗೆ ದೂರು ದಾಖಲಾಗಿರುವ ಮಾಹಿತಿಯನ್ನು ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಿಪಿಐ ಅವರಿಗೆ ನೀಡುವಂತೆ ನಿರ್ದೇಶಿಸಲಾಗಿದೆ" ಎಂದು ನ್ಯಾಯಾಧೀಶ ವಿನೋದ್ ಬಾಲನಾಯಕ್ ಹೇಳಿದ್ದರು. ವಕೀಲ ರಮೇಶ್ ನಾಯಕ್ ಅವರು ಸಲ್ಲಿಸಿದ ದೂರಿನ ಮೇರೆಗೆ ಈ ಆದೇಶ ಜಾರಿಗೊಳಿಸಲಾಗಿತ್ತು.
ಏನಿದು ವಿವಾದ?: ''ಕೃಷಿ ಕಾಯಿದೆಗಳ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವ ಜನರೇ ಈ ಹಿಂದೆ ಸಿಎಎ ಬಗ್ಗೆಯೂ ತಪ್ಪು ಮಾಹಿತಿ ನೀಡಿ ಗಲಭೆಗೆ ಕಾರಣರಾಗಿದ್ದರು. ಇವರು ದೇಶದಲ್ಲಿ ಭಯದ ಸ್ಥಿತಿಯನ್ನು ಉಂಟು ಮಾಡುತ್ತಿದ್ದು ಭಯೋತ್ಪಾದಕರಾಗಿದ್ದಾರೆ'' ಎಂದು ಸೆಪ್ಟೆಂಬರ್ 21ರಂದು ಕಂಗನಾ ಟ್ವೀಟ್ ಮಾಡಿದ್ದರು.
Recommended Video
''ಆರೋಪಿ (ಕಂಗನಾ) ಟ್ವಿಟರ್ ಖಾತೆಯ ಪೋಸ್ಟ್ ನಿಂದಾಗಿ ವಿಭಿನ್ನ ಸೈದ್ಧಾಂತಿಕ ನಿಲುವು ಹೊಂದಿರುವ ಭಿನ್ನ ಗುಂಪುಗಳ ನಡುವೆ ಗಲಭೆ ಸಂಭವಿಸುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಸರ್ಕಾರಿ ವ್ಯವಸ್ಥೆಯು ಕುರುಡುಗಣ್ಣಾಗಿದೆ. ಇದನ್ನು ನಿಯಂತ್ರಿಸಲು ಯಾವುದೇ ಮಾರ್ಗಸೂಚಿಗಳಿಲ್ಲ. ಇದರಿಂದ ಖಾತರಿಯಾಗುವುದೇನೆಂದರೆ ಸರ್ಕಾರ ಕ್ರಮಕೈಗೊಳ್ಳುವುದಕ್ಕೂ ಮುನ್ನ ಒಂದಷ್ಟು ಕೆಡುಕಾಗುವುದನ್ನು ಬಯಸುತ್ತಿರುವಂತಿದೆ'' ಎಂದು ರಮೇಶ್ ನಾಯಕ್ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.