ಎಸ್ಎಸ್ಎಲ್ಸಿ ಪರೀಕ್ಷೆ ಕುರಿತ ಶಿಕ್ಷಣ ಸಚಿವರ ತೀರ್ಮಾನ ಯಾವಾಗ?
ಬೆಂಗಳೂರು, ಮೇ. 04: ರೂಪಾಂತರಿ ಕೊರೊನಾ ವೈರಸ್ಗೆ ರಾಜ್ಯ ತತ್ತರಿಸಿದ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಿ ಶಿಕ್ಷಣ ಸಚಿವರು ತೀರ್ಮಾನ ಪ್ರಕಟಿಸಿದ್ದಾರೆ. ಜೂನ್ ತಿಂಗಳಲ್ಲಿ ನಡೆಯಲಿರುವ ಎಸ್ಎಸ್ಎಲ್ ಸಿ ಪರೀಕ್ಷೆ ವಿಚಾರವಾಗಿಯೂ ಶಿಕ್ಷಣ ಮಂತ್ರಿ ಎಸ್. ಸುರೇಶ್ ಕುಮಾರ್ ಈ ಕೂಡಲೇ ಮಹತ್ವದ ನಿರ್ಧಾರ ಪ್ರಕಟಿಸಬೇಕು ಎಂದು ಕ್ಯಾಮ್ಸ್ ಆಗ್ರಹಿಸಿದೆ.
Recommended Video
ಕೊರೊನಾದಿಂದ ರಾಜ್ಯದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಜೂ. 21 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಬಹುತೇಕ ಶಿಕ್ಷಣ ಸಂಸ್ಥೆಗಳು ನಾನಾ ಮಾರ್ಗಗಳ ಮೂಲಕ ಪಾಠ ಮಾಡುತ್ತಿದ್ದು, ವಿದ್ಯಾರ್ಥಿಗಳು ಓದಿನಲ್ಲಿ ಮಗ್ನರಾಗಿದ್ದಾರೆ. ಕೊರೊನಾ ಸೋಂಕು ಕಡಿಮೆಯಾಗದೇ ಏಕಾಏಕಿ ಪರೀಕ್ಷೆ ಮುಂದೂಡಿದರೆ ವಿದ್ಯಾರ್ಥಿಗಳ ಓದಿನ ಮೇಲೆ ನಕಾರಾತ್ಮಕ ಭಾವನೆ ಬೆಳೆಯಲಿದೆ.
ಓದು ಹಾಗೂ ಪರೀಕ್ಷೆ ಬಗ್ಗೆ ನಿರಾಸಕ್ತಿ ತಾಳುತ್ತಾರೆ. ಮಾತ್ರವಲ್ಲ, ಶಿಕ್ಷಣ ಸಂಸ್ಥೆಗಳು ಕೂಡ ಪೂರ್ವ ತಯಾರಿ ನಡೆಸಿ ಪಾಠ ಪ್ರವಚನ ಮಾಡಲು ಅನುಕೂಲವಾಗಲಿದೆ. ಪಿಯುಸಿ ಪರೀಕ್ಷೆ ಕುರಿತು ಕೈಗೊಂಡ ತೀರ್ಮಾನದ ಬಗ್ಗೆ ಶಿಕ್ಷಣ ಸಚಿವರು ಎಸ್ಎಸ್ಎಲ್ ಸಿ ಪರೀಕ್ಷೆ ವಿಚಾರದಲ್ಲೂ ತ್ವರಿತ ನಿರ್ಧಾರ ಪ್ರಕಟಿಸಬೇಕು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲೂ SSLC ಮತ್ತು PUC ಪರೀಕ್ಷೆ ರದ್ದು ಆಗಲಿದೆಯೇ ?
ಗೊಂದಲದಲ್ಲಿ ವಿದ್ಯಾರ್ಥಿಗಳು: ನೆರೆ ರಾಜ್ಯಗಳಾದ ತಮಿಳುನಾಡು , ಮಹಾರಾಷ್ಟ್ರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ರದ್ದು ಪಡಿಸಲಾಗಿದೆ. ಸಿಬಿಎಸ್ಸಿ ಬೋರ್ಡ್ ಕೂಡ ರದ್ದು ಪಡಿಸಿದೆ. ಕಳೆದ ವರ್ಷವೂ ನೆರೆ ರಾಜ್ಯ ತಮಿಳುನಾಡು, ತೆಲಂಗಾಣ ರಾಜ್ಯಗಳು ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ರದ್ದು ಮಾಡಿತ್ತು. ಆದರೆ ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಮೂಲಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಯಾಗಿದ್ದರು.
ಇದೀಗ ಕೊರೊನಾ ಸೋಂಕು ಸಮುದಾಯದ ಹಂತಕ್ಕೆ ತಲುಪಿದೆ. ಹಳ್ಳಿಗಳಲ್ಲಿ ಕೊರೊನಾ ಸಾವುಗಳು ಸಂಭವಿಸುತ್ತಿವೆ. ಹೀಗಾಗಿ ಹತ್ತನೇ ತರಗತಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರೌಢ ಶಿಕ್ಷಣ ಇಲಾಖೆ ತ್ವರಿತ ತೀರ್ಮಾನ ಕೈಗೊಂಡು ಪ್ರಕಟಿಸಬೇಕಿದೆ.
ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಜೂನ್ನಲ್ಲಿ ಪರೀಕ್ಷೆ ಮಾಡುವುದಾದರೆ ಅದನ್ನು ಸ್ಪಷ್ಟಪಡಿಸಬೇಕು. ಇಲ್ಲವೇ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮುಂದೂಡುವಂತಿದ್ದರೆ ಈಗಲೇ ನಿರ್ಧಾರ ಪ್ರಕಟಿಸಬೇಕು. ಪರೀಕ್ಷೆ ದಿನಾಂಕ ಸಮೀಪಿಸಿದ ಸಂದರ್ಭದಲ್ಲಿ ಪರೀಕ್ಷೆಯನ್ನು ಮುಂದೂಡಿ ತೀರ್ಮಾನ ಕೈಗೊಂಡರೆ ವಿದ್ಯಾರ್ಥಿಗಳ ಮನಸಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?
ಈಗಾಗಲೇ ತರಗತಿಗಳು ಇಲ್ಲದ ಕಾರಣ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ಪರೀಕ್ಷೆ ಮುಂದೂಡುವಂತಿದ್ದರೆ ಮೊದಲೇ ತೀರ್ಮಾನ ಪ್ರಕಟಿಸುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸಾಧ್ಯ. ಪರೀಕ್ಷೆ ರದ್ದು ಮಾಡುವಂತಿದ್ದರೆ, ತೀರ್ಮಾನ ಯಾವುದೇ ಆಗಿರಲಿ ಮೊದಲು ಪ್ರಕಟಿಸಬೇಕು ಎಂದು ಶಿಕ್ಷಣ ಸಂಸ್ಥೆಗಳು ಕೂಡ ಒತ್ತಾಯಿಸಿವೆ.
ಒಂದು ವರ್ಗ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಬೇಕು. ಕೊರೊನಾ ಸೋಂಕು ಹಳ್ಳಿಗಳಿಗೆ ಹರಡಿದೆ. ಪರೀಕ್ಷೆಯಿಂದ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದರೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ. ನೆರೆ ರಾಜ್ಯಗಳು ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ರದ್ದು ಮಾಡಿವೆ. ಅಲ್ಲಿ ಪರಿಸ್ಥಿತಿ ಏನಾಗಿದೆ. ಎಲ್ಲವೂ ಸರಾಗವಾಗಿಯೇ ನಡೆಯುತ್ತಿದೆ. ಅದೇ ರೀತಿ ರಾಜ್ಯದಲ್ಲಿ ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡುವುದರಲ್ಲಿ ತಪ್ಪೇನಿದೆ ಎಂಬುದು ಒಂದು ವರ್ಗದ ವಾದ.
ಇನ್ನೊಂದಡೆ, ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡುವುದಕ್ಕಿಂತ ಮುಂದೂಡುವುದು ಒಳಿತು. ಎಲ್ಲಾ ಮಕ್ಕಳನ್ನು ಪಾಸು ಮಾಡಿಬಿಟ್ಟರೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ವ್ಯವಸ್ಥೆಯೇ ಹಾಳಾಗುತ್ತದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸುವುದು ಸೂಕ್ತ.
ಆದರೆ, ಈಗಿನ ಪರಿಸ್ಥಿತಿ ಅವಲೋಕಿಸಿದರೆ ಜೂನ್ನಲ್ಲಿ ಪರೀಕ್ಷೆ ನಡೆಯುದು ಅನುಮಾನ. ಇದನ್ನು ಸರ್ಕಾರ ಮೊದಲೇ ಸ್ಪಷ್ಟಪಡಿಸಬೇಕು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.