ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಬ್ರೇಕ್; ಬಿಜೆಪಿ ಮೇಲೆ ಎಚ್ಡಿಕೆ ಕಿಡಿ ಕಿಡಿ
ಬೆಂಗಳೂರು, ಡಿಸೆಂಬರ್ 18 : ಕಳಸಾ ಬಂಡೂರಿ ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ಯೋಜನೆಗೆ ನೀಡಿದ್ದ ಒಪ್ಪಿಗೆಯನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ತಡೆ ಹಿಡಿದಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಯೋಜನೆ ತಡೆ ಹಿಡಿದಿರುವ ಬಗ್ಗೆ ಆದೇಶ ಹೊರಡಿಸಿತ್ತು. ಗೋವಾ ರಾಜ್ಯದ ಒತ್ತಾಯದ ಹಿನ್ನಲೆಯಲ್ಲಿ ಸಚಿವಾಲಯ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಕರ್ನಾಟಕದ ಸುಮಾರು 814 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಮೊದಲು ಒಪ್ಪಿಗೆ ನೀಡಿತ್ತು. ಈಗ ಮಹದಾಯಿ ಯೋಜನೆಗೆ ನೀಡಿದ್ದ ಒಪ್ಪಿಗೆಗೆ ತಡೆ ನೀಡಿದೆ.
ಕುಮಾರಸ್ವಾಮಿ ಕಿಡಿ ಕಿಡಿ
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಯೋಜನೆಯನ್ನು ತಡೆಹಿಡಿದಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಚುನಾವಣೆ ವೇಳೆ ಕಳಸಾ ಬಂಡೂರಿ ಮಹದಾಯಿ ಯೋಜನೆ ಬಗೆಹರಿಸುವುದಾಗಿ ವೋಟು ಹಾಕಿಸಿಕೊಂಡ ರಾಜ್ಯ ಬಿಜೆಪಿ ನಾಯಕರು ಇದೀಗ ಮೋದಿಗೆ ಹೆದರಿ ತಮ್ಮ ಧ್ವನಿಯನ್ನೇ ಕಳೆದುಕೊಂಡಿದ್ದಾರೆ. ಕರ್ನಾಟಕದ ಬಿಜೆಪಿ ಸಂಸದರು, ನಾಯಕರು ಕನ್ನಡಿಗರನ್ನು ದಾಸ್ಯಕ್ಕೆ ಈಡು ಮಾಡುವ ದಲ್ಲಾಳಿಗಳಾಗಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕಕ್ಕೆ ಹಿನ್ನಡೆ; ಮಹದಾಯಿ ಯೋಜನೆಗೆ ನೀಡಿದ್ದ ಒಪ್ಪಿಗೆ ವಾಪಸ್
ಶೋಷಿಸುವುದು ಬಿಜೆಪಿ ಚಾಳಿಯಾಗಿದೆ
ಮತ್ತೊಂದು ಟ್ವೀಟ್ ಮಾಡಿರುವ ಎಚ್ ಡಿ ಕುಮಾರಸ್ವಾಮಿ ಅವರು, ಕನ್ನಡಿಗರನ್ನು ರಾಜಕೀಯಕ್ಕೆ ದುಡಿಸಿಕೊಳ್ಳುವುದು, ಯೋಜನೆ, ಕಾರ್ಯಕ್ರಮಗಳ ಅನುದಾನದ ವಿಷಯದಲ್ಲಿ ಶೋಷಿಸುವುದು ಬಿಜೆಪಿ ಚಾಳಿಯಾಗಿದೆ. ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರದ ನಡೆಯನ್ನು ಕನ್ನಡಿಗರಾಗಿ ಟೀಕಿಸಬೇಕೋ, ಬೆಂಬಲಿಸಬೇಕೋ? ಕನ್ನಡಿಗರ ಆತ್ಮಾಭಿಮಾನ ಕೇಣಕುವುದರಲ್ಲಿ ನಿಮಗೆಂತ ಸಂತೋಷ ಬಿಜೆಪಿ ನಾಯಕರೇ ಎಂದು ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಅಕ್ಟೋಬರ್ 17ರಂದು ಒಪ್ಪಿಗೆ ನೀಡಿತ್ತು
ಕಳಸಾ ಬಂಡೂರಿ ಯೋಜನೆ ಕೆಲವು ಷರತ್ತುಗಳೊಂದಿಗೆ ಪುನಾರಂಭಿಸಬಹುದು ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ 2019ರ ಅಕ್ಟೋಬರ್ 17ರಂದು ಒಪ್ಪಿಗೆ ನೀಡಿತ್ತು. ಆದರೆ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಹದಾಯಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಗೋವಾ ಕಾಂಗ್ರೆಸ್ ಸಹ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಇದರಿಂದಾಗಿ ಸಚಿವಾಲಯ ಯೋಜನೆ ಪುನಾರಂಭಕ್ಕೆ ತಡೆ ನೀಡಿದೆ. ಈ ವಿವಾದ ಬಗೆಹರಿಯುವ ತನಕ ನೀಡಿರುವ ಒಪ್ಪಿಗೆಯನ್ನು ತಡೆ ಹಿಡಿದಿರುವುದಾಗಿ ಕೇಂದ್ರ ಅರಣ್ಯ ಸಚಿವಾಲಯ ಹೇಳಿದೆ. ಯೋಜನೆಗೆ ನೀಡಿರುವ ಒಪ್ಪಿಗೆಯನ್ನು ಅಮಾತನುಗೊಳಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮಕ್ಕೆ ಮಾಹಿತಿ ನೀಡಲಾಗಿದೆ.
ಮಹದಾಯಿ ವಿವಾದ; ಮತ್ತೆ ಕ್ಯಾತೆ ತೆಗೆದ ಗೋವಾ ಕಾಂಗ್ರೆಸ್
ಆಕ್ರೋಶಗೊಳ್ಳುವ ಸಾಧ್ಯತೆ
2019ರ ಅಕ್ಟೋಬರ್ 17ರಂದು ಯೋಜನೆಗೆ ಸಚಿವಾಲಯದ ಒಪ್ಪಿಗೆ ಸಿಕ್ಕ ಬಳಿಕ ಕರ್ನಾಟಕದ ಜನರು ಸಂತಸ ಪಟ್ಟಿದ್ದರು. ಈಗ ಜನರು ಆಕ್ರೋಶಗೊಳ್ಳುವ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರ ಮಹದಾಯಿ ನದಿಯಿಂದ 5.5 ಟಿಎಂಸಿ ನೀರನ್ನು ಬಳಸಿಕೊಂಡು ಕಳಸಾ-ಬಂಡೂರಿ ನಾಲೆಗಳ ಮೂಲಕ ಮಲಪ್ರಭಾ ನದಿಗೆ ಹರಿಸಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದೆ.