ಶ್ರೀರಾಮಸೇನೆ ಉಲ್ಲೇಖ ಸರಿ ಅಲ್ಲ: ಚೆನ್ನವೀರ ಕಣವಿ ಸ್ಪಷ್ಟನೆ
ಧಾರವಾಡ, ಸೆಪ್ಟೆಂಬರ್. 21: ಪ್ರೋ. ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ ವೇಳೆ ಸಲ್ಲಿಸಿದ ಮನವಿಯಲ್ಲಿ ಶ್ರೀರಾಮ ಸೇನೆಯ ಹೆಸರು ಉಲ್ಲೇಖವಾಗಿದ್ದರೆ ಅದು ಸರಿಯಲ್ಲ ಎಂದು ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಮತ್ತು ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಾಹಿತಿಗಳು, ಡಾ. ಕಲಬುರ್ಗಿ ಅವರ ಹತ್ಯೆ ಖಂಡಿಸಿ ಧಾರವಾಡದಲ್ಲಿ ಸಾಹಿತಿಗಳು, ಕಲಾವಿದರು, ಸಾಹಿತ್ಯಾಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಸೆಪ್ಟೆಂಬರ್ 14 ರಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯನ್ನು ಮೊದಲೇ ಓದಿ ನೋಡುವ ಅವಕಾಶವನ್ನು ಸಂಘಟಕರು ನಮಗೆ ನೀಡಿರಲಿಲ್ಲ. ಮನವಿ ಪತ್ರವನ್ನು ಓದಲು ಅವಕಾಶ ನೀಡದೆ, ಸಂಘಟಕರೊಬ್ಬರು ನಮ್ಮ ಸಹಿ ಪಡೆದಿದ್ದು ಪ್ರಮಾದವಾಗಿರಬೇಕು ಎಂದು ತಿಳಿಸಿದ್ದಾರೆ.[ಕಲಬುರ್ಗಿ ಹತ್ಯೆಯ ಸಂಚು ರೂಪಿಸಿದ್ದು ರುದ್ರ ಪಾಟೀಲ್?]
ಒಂದು ವೇಳೆ ಮನವಿ ಪತ್ರದಲ್ಲಿ ಶ್ರೀರಾಮ ಸೇನೆಯ ಹೆಸರು ಉಲ್ಲೇಖಿಸಿದ್ದರೆ ಅದು ತಪ್ಪ. ನಾವು ಯಾವ ಸಂಘಟನೆ ವಿರುದ್ಧ ದೂರು ಸಲ್ಲಿಕೆ ಮಾಡುತ್ತಿಲ್ಲ. ಹತ್ಯೆ ತನಿಖೆ ಸಮಗ್ರವಾಗಿ ನಡೆಯುಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.[ಕಲಬುರ್ಗಿ ಹತ್ಯೆ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ]
ಪ್ರತಿಭಟನೆ ನಡೆಸಿ, ತಮ್ಮ ವಿರುದ್ಧ ಮಾನಹಾನಿಕರ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರ ವಿರುದ್ಧ ನೋಟಿಸ್ ನೀಡುವುದಾಗಿ ಹೇಳಿದ್ದರು. ಆದರೆ ಈಗ, ಡಾ. ಗಿರಡ್ಡಿ ಗೋವಿಂದರಾಜ ಹಾಗೂ ಚೆನ್ನವೀರ ಕಣವಿ ಸ್ಪಷ್ಟನೆ ನೀಡಿರುವುದರಿಂದ ಅವರ ವಿರುದ್ಧ ನೋಟಿಸ್ ನೀಡದಿರಲು ನಿರ್ಧರಿಸಿದ್ದಾರೆ.