ಕರ್ನಾಟಕ-ಗೋವಾ ನಡುವೆ ಸಾರಿಗೆ ವ್ಯವಸ್ಥೆ ಸ್ಥಗಿತಗೊಳ್ಳುತ್ತಾ?
ಹುಬ್ಬಳ್ಳಿ, ಅಕ್ಟೋಬರ್, 29 : ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಹೋರಾಟ ಈಗ ಉಭಯ ರಾಜ್ಯಗಳ ಸಾರಿಗೆ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿದ್ದು, ಈ ಹೋರಾಟಕ್ಕೆ ಅಕ್ಕ ಬಳಗ ಸದಸ್ಯರು ಕೈ ಜೋಡಿಸಿದ್ದಾರೆ. ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಹೊರಡುವ ಬಸ್ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು. ಜೊತೆಗೆ ಜಲ ಸಾರಿಗೆ, ರೈಲು ಮತ್ತು ಸರಕು ಸಾಗಾಣೆಯನ್ನು ನಿಲ್ಲಿಸಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ನಾವೇ ಸ್ವತಃ ಬಸ್ ಬಂದ್ ಮಾಡಿ ಅಸಹಕಾರ ಚಳವಳಿ ಆರಂಭಿಸುತ್ತೇವೆ ಎಂದು ಕಳಸಾ-ಬಂಡೂರಿ ಯೋಜನಾ ಹೋರಾಟಗಾರರು ಹಾಗೂ ಅಕ್ಕ ಬಳಗ ಸದಸ್ಯರು ಎಚ್ಚರಿಸಿದ್ದಾರೆ.[ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]
ಅಕ್ಕ ಬಳಗದ ಸದಸ್ಯರು ಭಾಗಿ :
ಕಳಸಾ-ಬಂಡೂರಿ ಹೋರಾಟಗಾರರನ್ನು ಭೇಟಿಯಾದ ನಗರದ ಅಕ್ಕನ ಬಳಗದ ಸದಸ್ಯರು ಈ ಯೋಜನೆಯ ಅನುಷ್ಠಾನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ವಿಳಂಬ ಧೋರಣೆ ಖಂಡಿಸಿದ್ದು, 'ರೈತರ ಹೋರಾಟ 100 ನೇ ದಿನಕ್ಕೆ ಕಾಲಿರಿಸಿದೆ. ಆದರೂ ಉತ್ತರ ಕರ್ನಾಟಕದ ಏಳಿಗೆಯ ಬಗ್ಗೆ ರಾಜಕಾರಣಿಗಳು ಕಿಂಚಿತ್ತು ಗಮನ ಹರಿಸುತ್ತಿಲ್ಲ' ಎಂದು ದೂರಿದರು.
ನವೆಂಬರ್ 2 ಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಾವುಟ :
ಕಳಸಾ ಯೋಜನೆಗಾಗಿ ನಡೆಯುತ್ತಿರುವ ಹೋರಾಟ ನರಗುಂದ ಪಟ್ಟಣದಲ್ಲಿ 105 ನೇ ದಿನಕ್ಕೆ ಮುಟ್ಟಿದೆ. ಬುಧವಾರ ಪಟ್ಟಣದಲ್ಲಿ ರೈತ ಹೋರಾಟಗಾರರು ರಕ್ತದಲ್ಲಿ ಮನವಿ ಪತ್ರ ಬರೆದರು.[ಪ್ರತ್ಯೇಕ ರಾಜ್ಯ ಕೂಗಿಗೆ ಸೇರಿಕೊಂಡ ಕಳಸಾ ಬಂಡೂರಿ ಹೋರಾಟ]
ಈ ಸಂದರ್ಭದಲ್ಲಿ ನವೆಂಬರ್ 1 ರ ಕರ್ನಾಟಕ ರಾಜ್ಯೋತ್ಸವದಂದು ರಾಜ್ಯ ಮತ್ತು ಕೇಂದ್ರ ಸರ್ಕಾರ ಸೂಕ್ತವಾದ ಸಂದೇಶ ರೈತರಿಗೆ ರವಾನಿಸದೆ ಇದ್ದಲ್ಲಿ ನವೆಂಬರ್ 2 ರ ಸೋಮವಾರದಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಾವುಟ ಹಾರಿಸುತ್ತೇವೆ ಎಂದು ರೈತ ಹೋರಾಟಗಾರರು ಎಚ್ಚರಿಸಿದ್ದಾರೆ.