ಕಲಬುರ್ಗಿ, ಬಳ್ಳಾರಿ ಮೇಯರ್- ಉಪಮೇಯರ್ ಚುನಾವಣೆ ಮುಂದೂಡಿಕೆ
ಬೆಂಗಳೂರು: ರಾಜ್ಯದಲ್ಲಿ 25 ವಿಧಾನ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿರುವುದರಿಂದ ಕಲಬುರ್ಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆಗಳ ಮೇಯರ್ ಚುನಾವಣೆಯನ್ನು ಮುಂದೂಡಲಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಗೆ ನ.18ರಂದು ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗೆ ನ.20ರಂದು ಮೇಯರ್, ಉಪಮೇಯರ್ ಚುನಾವಣೆ ಘೋಷಣೆಯಾಗಿತ್ತು. ಆದರೆ, ಡಿ.10 ರಂದು ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಡಳಿತಗಳು ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ ಮೇಯರ್, ಉಪಮೇಯರ್ ಚುನಾವಣೆ ಮುಂದೂಡಲಾಗಿದೆ.
ಈ ಕುರಿತು ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿರುವ ಕಲಬುರ್ಗಿ ಪ್ರಾದೇಶಿ ಆಯುಕ್ತರು, "ಕಲಬುರ್ಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆಗಳ 23ನೇ ಅವಧಿಯ ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿಗಳ ಚುನಾವಣೆ ನಿಗದಿಪಡಿಸಿ ನೋಟಿಸ್ ಜಾರಿಗೊಳಿಸಲಾಗಿತ್ತು. ಚುನಾವಣಾ ಆಯೋಗವು ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಅಧಿಸೂಚನೆ ಹೊರಡಿಸಿದೆ. ಜಿಲ್ಲಾಡಳಿತಗಳು ಪ್ರಸ್ತುತ ವಿಧಾನ ಪರಿಷತ್ ಚುನಾವಣೆಗೆ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್, ಸ್ಥಾಯಿ ಸಮಿತಿಗಳಿಗೆ ನಡೆಸಬೇಕಿದ್ದ ಚುನಾವಣೆಯನ್ನೂ ಮುಂದೂಡಲಾಗಿದೆ" ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಡಿ.16ರ ಬಳಿಕ ಚುನಾವಣೆ ಸಾಧ್ಯತೆ:
ರಾಜ್ಯದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಡಿ.10ರಂದು ಮತದಾನ ನಡೆಯಲಿದ್ದು, ಡಿ.14ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ. ಹೀಗಾಗಿ ಡಿ.16ರಂದು ಮತ್ತೊಮ್ಮೆ ಕಲಬುರ್ಗಿ ಮತ್ತು ಬಳ್ಳಾರಿ ಮೇಯರ್, ಉಪಮೇಯರ್ ಚುನಾವಣಾ ದಿನಾಂಕಗಳು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಲಬುರ್ಗಿಯಲ್ಲಿ ಕಸರತ್ತು
ಕಲಬುರ್ಗಿಯ 55 ವಾರ್ಡ್ಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಕಾಂಗ್ರೆಸ್ 27, ಬಿಜೆಪಿ 24 ಮತ್ತು ಜೆಡಿಎಸ್ 4 ಸ್ಥಾನಗಳನ್ನು ಗಳಿಸಿವೆ. ಹೀಗಾಗಿ ಯಾರೇ ಮೇಯರ್ ಸ್ಥಾನ ಅಲಂಕರಿಸಬೇಕೆಂದರೂ ಜೆಡಿಎಸ್ ಬೆಂಬಲ ಅನಿವಾರ್ಯವಾಗಿದೆ. ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಮೇಯರ್ ಸ್ಥಾನ ಒಬಿಸಿಗೆ ಮೀಸಲಾಗಿದೆ. ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಮೇಯರ್ ಆಗಬೇಕೆಂದರೂ ಜೆಡಿಎಸ್ ಸಹಯೋಗ ಅನಿವಾರ್ಯವಾದ್ದರಿಂದ ಮೇಯರ್ ಸ್ಥಾನವನ್ನು ತನಗೇ ಬಿಟ್ಟುಕೊಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಆದರೆ, ಇದಕ್ಕೆ ರಾಷ್ಟ್ರೀಯ ಪಕ್ಷಗಳು ಒಪ್ಪಿಗೆ ನೀಡಿಲ್ಲ.
ಆರು ತಿಂಗಳ ನಂತರ ಚುನಾವಣೆ ಘೋಷಣೆ, ಮುಂದೂಡಿಕೆ
ಇನ್ನು ಬಳ್ಳಾರಿ ಮಹಾನಗರ ಪಾಲಿಕೆಗೆ ಮೇಯರ್, ಉಪಮೇಯರ್ ಭಾಗ್ಯ ಮತ್ತೊಮ್ಮೆ ಮುಂದೆ ಹೋಗಿದೆ. ಕಳೆದ ಏಪ್ರಿಲ್ನಲ್ಲಿ ಚುನಾವಣೆ ನಡೆದು, ಫಲಿತಾಂಶ ಘೋಷಣೆಯಾಗಿತ್ತು. ಹೀಗೆ ಕಾರಣಾಂತರಗಳಿಂದ ಮೇಯರ್, ಉಪಮೇಯರ್ ಚುನಾವಣೆಯನ್ನು ಮುಂದೂಡುತ್ತಲೇ ಬರಲಾಗಿತ್ತು. ಈ ಮಧ್ಯೆ ಅಂತಿಮವಾಗಿ ನ.18ರಂದು ಚುನಾವಣೆ ಘೋಷಣೆಯಾಗಿತ್ತಾದರೂ ಈಗ ವಿಧಾನ ಪರಿಷತ್ ಚುನಾವಣೆಯಿಂದಾಗಿ ಮತ್ತೊಮ್ಮೆ ಮುಂದೆ ಹೋಗಿದ್ದು, ಬಳ್ಳಾರಿಯ ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಇಲ್ಲಿನ 39 ವಾರ್ಡ್ಗಳ ಪೈಕಿ 21 ಕಾಂಗ್ರೆಸ್, 13 ಬಿಜೆಪಿ ಮತ್ತು ಐವರು ಪಕ್ಷೇತರರು ಜಯಗಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಇದ್ದರೂ, ಏಪ್ರಿಲ್-ಮೇ ನಲ್ಲಿ ಕೋವಿಡ್ ತೀವ್ರವಾಗಿ ಇದ್ದರಿಂದ ಮೇಯರ್, ಉಪಮೇಯರ್ ಚುನಾವಣೆ ನಡೆಸದೆ ವಿವಿಧ ಕಾರಣಗಳನ್ನು ನೀಡಿ ಮುಂದೂಡುತ್ತಾ ಬರಲಾಗಿತ್ತು. ಈ ಮಧ್ಯೆ ಆಪರೇಷನ್ ಕಮಲಕ್ಕೆ ಅನುಕೂಲ ಮಾಡಿಕೊಡಲು ಚುನಾವಣೆ ಮುಂದೂಡಲಾಗುತ್ತಿದೆ ಎಂಬ ಆರೋಪವೂ ಕಾಂಗ್ರೆಸ್ನಿಂದ ಕೇಳಿಬಂದಿತ್ತು.
ಅಂತಿಮವಾಗಿ ನ.18ರಂದು ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆಯಾಗಿದ್ದರಿಂದ ಆಕಾಂಕ್ಷಿಗಳೆಲ್ಲರೂ ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಿನಲ್ಲಿಯೇ ಬೀಡುಬಿಟ್ಟಿದ್ದರು. ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಮೇಯರ್ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೇಯರ್, ಉಪಮೇಯರ್ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದರು. ಈಗ ಮತ್ತೆ ಬಹುತೇಕ ಒಂದು ತಿಂಗಳು ಚುನಾವಣೆ ಮುಂದೆ ಹೋಗಿದ್ದರಿಂದ ಅವರೆಲ್ಲರೂ ನಿರಾಸೆಯಿಂದ ವಾಪಸಾಗಿದ್ದಾರೆ.
Recommended Video